Breaking Newsದೇಶಪ್ರಚಲಿತ
ನ್ಯಾಯಾಂಗ ನಿಂದನೆ: ನಿರ್ದೇಶಕ ನಾಗೇಶ್ವರ ರಾವ್ಗೆ ಕಲಾಪ ಮುಗಿಯುವವರೆಗೂ ಕೋರ್ಟ್ನ ಮೂಲೆಯಲ್ಲಿ ಕೂತಿರಿ ಎಂದ ಸುಪ್ರೀಂ
ನಾಗೇಶ್ವರ ರಾವ್, ಸಿಬಿಐನ ಕಾನೂನು ಸಲಹೆಗಾರರಿಗೆ ತಲಾ 1 ಲಕ್ಷ ರೂಪಾಯಿ ದಂಡ

ದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಿಬಿಐನ ಮಾಜಿ ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್ ಮತ್ತು ಸಿಬಿಐನ ಕಾನೂನು ಸಲಹೆಗಾರರಿಗೆ ಸುಪ್ರೀಂಕೋರ್ಟ್ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಲ್ಲದೇ, ಕಲಾಪ ಮುಗಿಯುವವರೆಗೂ ಕೋರ್ಟ್ ಹಾಲ್ನ ಒಂದು ಮೂಲೆಯಲ್ಲಿ ಕುಳಿತು ಕೋರ್ಟ್ ಕಲಾಪ ವೀಕ್ಷಿಸುವ ಶಿಕ್ಷೆಯನ್ನೂ ವಿಧಿಸಿತು.
ಮುಜಾಫರ್ಪುರ ಶೆಲ್ಟರ್ ಹೋಂ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐನ ಜಂಟಿ ನಿರ್ದೇಶಕ ಆಗಿದ್ದ ಅರುಣ್ ಕುಮಾರ್ ಶರ್ಮ ಅವರನ್ನು ತನಿಖೆ ಮುಗಿಯುವವರೆಗೂ ವರ್ಗಾವಣೆ ಮಾಡದಂತೆ ಆದೇಶಿಸಿತ್ತು. ಆದರೆ, ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಅರುಣ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ನಾಗೇಶ್ವರ್ ರಾವ್, ತಕ್ಷಣವೇ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ 1 ಲಕ್ಷ ಜುಲ್ಮಾನೆ ವಿಧಿಸಿದೆ.
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಅವರೆಲ್ಲರಿಗೂ ದಿನದ ಕಲಾಪ ಮುಗಿಯುವವರೆಗೂ ಕೋರ್ಟ್ ಹಾಲ್ನ ಒಂದು ಮೂಲೆಯಲ್ಲಿ ಕುಳಿತು ಕೋರ್ಟ್ ಕಲಾಪ ವೀಕ್ಷಿಸುವ ಅಪರೂಪದ ಶಿಕ್ಷೆಯನ್ನೂ ವಿಧಿಸಿತು.
ಅರುಣ್ ಕುಮಾರ್ ಶರ್ಮ ಅವರನ್ನು ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ನ ಆದೇಶಕ್ಕೆ ವಿರುದ್ಧವಾಗಿ ವರ್ಗಾವಣೆ ಮಾಡಿದ್ದಕ್ಕಾಗಿ ಕ್ಷಮಾಪಣೆ ಕೋರಿ ನಾಗೇಶ್ವರ್ ರಾವ್ ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ನ್ಯಾಯಪೀಠ ಇದನ್ನು ಪರಿಗಣಿಸಲು ನಿರಾಕರಿಸಿತ್ತು.