ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ತರೂರ್‌ ಪ್ರಶ್ನೆಯಲ್ಲಿ ಹುರುಳಿದೆ; ಕಾಂಗ್ರೆಸ್‌ ಕಿವಿಗೊಡುತ್ತಾ ?

ದೇಶದ ಅತ್ಯಂತ ಪುರಾತನ ರಾಜಕೀಯ ಪಕ್ಷವೆಂಬ ಹೆಗ್ಗಳಿಕೆ ಗಳಿಸಿರುವ ಕಾಂಗ್ರೆಸ್‌ ನ ಸ್ಥಿತಿ ಎಲ್ಲಿಗೆ ಬಂತು? ಪಕ್ಷದ ಲಕ್ಷಾಂತರ ಕಾರ್ಯಕರ್ತರು ಕೂಡ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಸದ್ಯಕ್ಕೆ ಶಶಿ ತರೂರ್ ಇತ್ತೀಚೆಗೆ ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್ ಓದಿ ಸುಮ್ಮನಾಗೋಣ. ‘ಎಲ್ಲಿ ಅಜ್ಞಾನ ವೇ ಪರಮಾನಂದವೋ ಅಲ್ಲಿ ಜಾಣನಾಗಿರು ವುದು ಅಪರಾಧ’.

ತರೂರ್‌ ಪ್ರಶ್ನೆಯಲ್ಲಿ ಹುರುಳಿದೆ; ಕಾಂಗ್ರೆಸ್‌ ಕಿವಿಗೊಡುತ್ತಾ ?

ಹಿರಿಯ ಪತ್ರಕರ್ತ, ಅಂಕಣಕಾರ ಡಾ.ವಿಜಯ್‌ ದರಡಾ

ಸಂಗತ

ದೇಶದ ಅತ್ಯಂತ ಪುರಾತನ ರಾಜಕೀಯ ಪಕ್ಷವೆಂಬ ಹೆಗ್ಗಳಿಕೆ ಗಳಿಸಿರುವ ಕಾಂಗ್ರೆಸ್‌ ನ ಸ್ಥಿತಿ ಎಲ್ಲಿಗೆ ಬಂತು? ಪಕ್ಷದ ಲಕ್ಷಾಂತರ ಕಾರ್ಯಕರ್ತರು ಕೂಡ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಸದ್ಯಕ್ಕೆ ಶಶಿ ತರೂರ್ ಇತ್ತೀಚೆಗೆ ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್ ಓದಿ ಸುಮ್ಮನಾಗೋಣ. ‘ಎಲ್ಲಿ ಅಜ್ಞಾನವೇ ಪರಮಾನಂದವೋ ಅಲ್ಲಿ ಜಾಣನಾಗಿರು ವುದು ಅಪರಾಧ’. ಕಾಂಗ್ರೆಸ್ ಪಕ್ಷದಲ್ಲಿ ಶಶಿ ತರೂರ್‌ಗೆ ಇರುವ ಚರಿಷ್ಮಾವೇ ಬೇರೆ. 68 ವರ್ಷದ ಈ ಹಿರಿಯ ಕಾಂಗ್ರೆಸಿಗ ಇವತ್ತಿಗೂ ದೇಶದ ಯುವಕರ ಹೃದಯವನ್ನು ಆಳುತ್ತಿ ದ್ದಾನೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಯುವಕರಿಗೆ ಶಶಿ ತರೂರ್ ದೊಡ್ಡ ಸೂರ್ತಿಯ ಸೆಲೆ. ಇಂತಹ ತರೂರ್ ಇತ್ತೀಚೆಗೆ ತಮ್ಮ ಪಕ್ಷದ ವಿರುದ್ಧ ಬಂಡೇಳುವ ಸೂಚನೆ ನೀಡುತ್ತಿದ್ದಾ ರೆಯೇ? ಎಲ್ಲರೂ ಹಾಗೆ ಹೇಳುತ್ತಿದ್ದಾರಾದರೂ ನನಗೆ ಹಾಗನ್ನಿಸುತ್ತಿಲ್ಲ.

ತರೂರ್ ನನಗೆ ಸಾಕಷ್ಟು ವರ್ಷಗಳಿಂದ ಒಳ್ಳೆಯ ಸ್ನೇಹಿತ. ಅವರ ಸ್ವಭಾವ ಏನೆಂಬುದು ನನಗೆ ಚೆನ್ನಾಗಿ ಗೊತ್ತು. ತರೂರ್ ಸತ್ಯ ಹೇಳಲು ಹಿಂಜರಿಯುವ ವ್ಯಕ್ತಿಯಲ್ಲ. ತನಗೆ ಏನನ್ನಿಸುತ್ತದೆಯೋ ಅದನ್ನು ಖುಲ್ಲಂಖುಲ್ಲಾ ಹೇಳಿಬಿಡುತ್ತಾರೆ. ಅವರ ವ್ಯಕ್ತಿತ್ವದಲ್ಲಿ ಎಂತಹ ಆಕರ್ಷಣೆಯಿದೆ ಅಂದರೆ, ಯಾವುದೇ ರಾಜಕೀಯ ಪಕ್ಷವಾದರೂ ಅವರನ್ನು ತನ್ನೊಂದಿಗೆ ಇರಿಸಿಕೊಳ್ಳಲು ಬಯಸುತ್ತದೆ.

ಇದನ್ನೂ ಓದಿ: Dr Vijay Darda Column: ಅನಂತ್‌ ಅಂಬಾನಿ ಮತ್ತು ಒಂದು ಗಿಳಿಯ ಕತೆ

ಅವರಿಗೆ ಪಕ್ಷಾತೀತ ಜನಪ್ರಿಯತೆ ಇದೆ. ಆದರೂ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ ಅಂದರೆ ಅವರಿಗೆ ಆ ಪಕ್ಷದ ಮೂಲಭೂತ ಸಿದ್ಧಾಂತಗಳ ಬಗ್ಗೆ ಇರುವ ಬದ್ಧತೆಯನ್ನು ಅದು ತೋರುತ್ತದೆ. ಇಷ್ಟಕ್ಕೂ ಸತ್ಯ ಹೇಳುವುದು ಬಂಡಾಯ ಅಲ್ಲವಲ್ಲ!

ಶಶಿ ತರೂರ್ ಈ ಹಿಂದೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರ ಉದ್ದೇಶ ಯುವಕರನ್ನು ಪಕ್ಷದ ಕೆಲಸ ಮಾಡುವಂತೆ ಪ್ರೇರೇಪಿಸಿ ಪಕ್ಷಕ್ಕೆ ಹೊಸ ಶಕ್ತಿ ಮತ್ತು ಚೈತನ್ಯ ತುಂಬುವುದಾಗಿತ್ತು. ಶಶಿ ತರೂರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರೆ ಅದರ ಗತ್ತೇ ಬೇರೆ ಇರುತ್ತಿತ್ತು ಎಂದು ಈಗಲೂ ಅನೇಕ ಕಾಂಗ್ರೆಸಿಗರು ಹೇಳುತ್ತಾರೆ.

ತರೂರ್ ಬಹುಮಖ ಪ್ರತಿಭೆ. ಅವರು ಗುಂಪಿನಲ್ಲಿ ಗೋವಿಂದ ಅಲ್ಲ. ಸಾವಿರಾರು ಜನರ ನಡುವೆಯೂ ವಿಶಿಷ್ಟವಾಗಿ ಎದ್ದು ಕಾಣಿಸುವ ವ್ಯಕ್ತಿ. ಹಿಂದೆ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಚುನಾವಣೆಗೆ ಸ್ಪರ್ಧಿಸುವವರೆಗೂ ಹೋಗಿದ್ದರು. ಅವರಿಗೆ ಕಾಂಗ್ರೆಸ್ ಪಕ್ಷ ತನ್ನನ್ನು ಮೂಲೆ ಗುಂಪು ಮಾಡುತ್ತಿದೆ ಮತ್ತು ತನ್ನ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಕೊರಗಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿಬಿಟ್ಟರು ಎಂಬ ಏಕೈಕ ಕಾರಣಕ್ಕೆ ಪಕ್ಷ ಅವರನ್ನು ದೂರ ಇರಿಸುತ್ತಿದೆ. ವಾಸ್ತವವಾಗಿ ಇದು ಆ ಪಕ್ಷಕ್ಕೇ ಆಗುತ್ತಿರುವ ನಷ್ಟವೇ ಹೊರತು, ವೈಯಕ್ತಿಕ ವಾಗಿ ತರೂರ್‌ಗೆ ಇದರಿಂದ ನಷ್ಟವಿಲ್ಲ. ತರೂರ್‌ರಂತಹ ಘನ ವ್ಯಕ್ತಿತ್ವದ ನಾಯಕರ ಕೊರತೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ನಾನು ಎಲ್ಲಿ ನಿಂತು ಬೇಕಾದರೂ ಹೇಳಬಲ್ಲೆ.

ಅವರಿಗೆ ದೇಶದ ನಾಡಿಮಿಡಿತ ಗೊತ್ತು. ಅದೇ ವೇಳೆ, ಜಾಗತಿಕ ವಿದ್ಯಮಾನಗಳ ಬಗ್ಗೆಯೂ ಚೆನ್ನಾಗಿ ಅರಿವಿದೆ. ಇಂತಹ ಬುದ್ಧಿವಂತರು ಎಷ್ಟು ಜನರಿದ್ದಾರೆ? ತರೂರ್‌ಗಿರುವ ಇನ್ನೊಂದು ಬಹಳ ವಿಶಿಷ್ಟವಾದ ಗುಣವೇನೆಂದರೆ, ಅಷ್ಟೊಂದು ಜ್ಞಾನವಂತನಾಗಿದ್ದರೂ ಅವರು ತನ್ನ ಅಭಿಪ್ರಾಯವನ್ನಾಗಲೀ ಬುದ್ಧಿವಂತಿಕೆಯನ್ನಾಗಲೀ ಬೇರೆಯವರ ಮೇಲೆ ಹೇರಲು ಹೋಗುವುದಿಲ್ಲ.

ಅವರ ನಡೆ ತುಂಬಾ ಸರಳ. ಎಲ್ಲರೊಂದಿಗೆ ವಿನಯದಿಂದ ನಡೆದುಕೊಳ್ಳುತ್ತಾರೆ. ಶಶಿ ತರೂರ್ ಅವರನ್ನು ರಾಜಕೀಯಕ್ಕೆ ತರಬೇಕು ಎಂಬ ಯೋಚನೆ ಮೊದಲು ಬಂದಿದ್ದು ಡಾ.ಮನಮೋಹನ ಸಿಂಗ್ ಅವರಿಗೆ. 2009ರಿಂದ ಅವರು ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ನಿರಂತರವಾಗಿ ಗೆಲ್ಲುತ್ತಾ ಬಂದಿದ್ದಾರೆ.

ಮನಮೋಹನ ಸಿಂಗ್ ರ ಸಂಪುಟದಲ್ಲಿ ಅವರು ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿ ದ್ದರು. ಬಳಿಕ ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವರೂ ಆಗಿದ್ದರು. ಅವರಿ ಗಿರುವ ಸಾಮರ್ಥ್ಯಕ್ಕೆ ಸಂಪುಟ ದರ್ಜೆಯ ಸಚಿವ ಸ್ಥಾನವನ್ನೇ ಕೇಳಬಹುದಿತ್ತು. ಆದರೆ ಅಂತಹ ಬೇಡಿಕೆಯನ್ನು ಅವರು ಯಾವತ್ತೂ ಮುಂದಿಡಲಿಲ್ಲ. ಕಾಂಗ್ರೆಸ್ ಪಕ್ಷ ದಲ್ಲಿನ ಒಂದು ಬಣ ಡಾ.ಮನಮೋಹನ ಸಿಂಗ್ ಅವರನ್ನು ನಿರಂತರವಾಗಿ ಹತ್ತಿಕ್ಕಲು ಯತ್ನಿಸುತ್ತಿ ತ್ತು ಎಂಬುದು ತರೂರ್ ಚಿಂತೆಗೆ ಕಾರಣವಾಗಿತ್ತು.

ಆ ಬಣ ಶಶಿ ತರೂರ್ ಉನ್ನತ ಸ್ಥಾನಕ್ಕೇರಿದ್ದರೆ ಅದನ್ನೂ ಸಹಿಸಿಕೊಳ್ಳುತ್ತಿರಲಿಲ್ಲ. ತರೂರ್ ಈ ಹಿಂದೆ ಗುಲಾಂ ನಬಿ ಆಜಾದ್ ನೇತೃತ್ವದ ಜಿ-23 ಭಿನ್ನಮತೀಯರ ಗುಂಪಿನಲ್ಲೂ ಕಾಣಿಸಿಕೊಂಡಿದ್ದರು. ಅಲ್ಲಿ ಪಕ್ಷದ ನಾಯಕತ್ವದ ಬಗ್ಗೆ ಅವರೂ ಪ್ರಶ್ನೆಗಳನ್ನು ಎತ್ತಿದ್ದರು. ಸಹಜವಾಗಿಯೇ ಆ ಗುಂಪಿನಲ್ಲಿದ್ದವರ ಬಗ್ಗೆ ಕಾಂಗ್ರೆಸ್ ನಾಯಕತ್ವಕ್ಕೆ ಇಂದಿಗೂ ಅಸಮಾ ಧಾನವಿದೆ.

ಕಾಂಗ್ರೆಸ್‌ನ ನಾಯಕತ್ವದ ಬಗ್ಗೆ ಜಿ-23 ಗುಂಪಿನಲ್ಲಿ ಇದ್ದವರಿಗೂ ಬೇಸರವಿದೆ. ಎರಡು ವಾರಗಳ ಹಿಂದೆ ಶಶಿ ತರೂರ್ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು. ಆಗ, ಸಂಸತ್ತಿ ನಲ್ಲಿ ಮಹತ್ವದ ಚರ್ಚೆಗಳು ನಡೆದಾಗ ತನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಬೇಸರ ತೋಡಿಕೊಂಡಿದ್ದರು.

ಮಾತನಾಡಲು ತರೂರ್ ಸಾಕಷ್ಟು ಪ್ರಯತ್ನಿಸಿದರೂ ನಿರಂತರವಾಗಿ ಅವರನ್ನು ಹತ್ತಿಕ್ಕ ಲಾಗಿತ್ತು. ಅದಕ್ಕೆ ರಾಹುಲ್ ಗಾಂಧಿ ಏನು ಪ್ರತಿಕ್ರಿಯೆ ನೀಡಿದರು ಎಂಬುದು ಗೊತ್ತಿಲ್ಲ. ಆದರೆ ಶಶಿ ತರೂರ್‌ರಂತಹ ಪ್ರಭಾವಿ ಮಾತುಗಾರರನ್ನು ಯಾವುದಾದರೂ ರಾಜಕೀಯ ಪಕ್ಷ ಯಾಕಾದರೂ ಮೂಲೆಗುಂಪು ಮಾಡಬೇಕು? ತರೂರ್ ಯಾವುದೇ ವೇದಿಕೆಯಲ್ಲಿ ನಿಂತು ಮಾತನಾಡಿದರೂ ಬಹಳ ಪರಿಣಾಮಕಾರಿಯಾಗಿ ಮಾತನಾಡುತ್ತಾರೆ.

2014ರಿಂದ 2019ರವರೆಗೆ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಗಿದ್ದರು. 2019ರಿಂದ 2024ರವರೆಗೆ ಅಧೀರ್ ರಂಜನ್ ಚೌಧುರಿಗೆ ಆ ಸ್ಥಾನ ಲಭಿಸಿತ್ತು. ತರೂರ್‌ರಂತಹ ಪ್ರಚಂಡ ವಾಗ್ಮಿ ಕಾಂಗ್ರೆಸ್‌ನಲ್ಲಿದ್ದರೂ ಅವರಿಗೆ ಈ ಸ್ಥಾನ ಸಿಗಲಿಲ್ಲ! ಆಕ್ಸಫರ್ಡ್ ಹಾಲ್‌ನಲ್ಲಿ ನಡೆದ ಚರ್ಚೆಯಲ್ಲಿ ಬ್ರಿಟಿಷರು ಹೇಗೆ ಭಾರತವನ್ನು ಶೋಷಣೆ ಮಾಡಿದರು ಎಂಬ ಬಗ್ಗೆ ಶಶಿ ತರೂರ್ ಮಾಡಿದ ಭಾಷಣ ನಿಮಗೆ ನೆನಪಿದೆಯಾ? ಭಾರತ ದಿಂದ ಮಾಡಿದ ಲೂಟಿಗೆ ಬ್ರಿಟನ್ ಇಂದು ಎಷ್ಟು ಮೊತ್ತವನ್ನು ಪರಿಹಾರವಾಗಿ ನೀಡಬೇಕು ಎಂದೂ ಲೆಕ್ಕ ಹಾಕಿ ತರೂರ್ ಹೇಳಿದ್ದರು. ಇಡೀ ದೇಶ ಅದನ್ನು ಮೆಚ್ಚಿಕೊಂಡಿತ್ತು. ಏಕೆಂ ದರೆ ಶಶಿ ತರೂರ್ ಬಹಳ ಗಟ್ಟಿಯಾದ ವಾಸ್ತವಾಂಶಗಳನ್ನಿಟ್ಟುಕೊಂಡು ವಾದ ಮಂಡಿಸು ತ್ತಾರೆ.

ಕಳೆದ ಕೆಲ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಆಂತರಿಕ ಬದಲಾವಣೆಗಳನ್ನು ಮಾಡಿ ಕೊಂಡಿದೆ. ತೀರಾ ಇತ್ತೀಚೆಗೆ ಇಬ್ಬರು ಹೊಸ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿದೆ ಮತ್ತು ಅನೇಕ ರಾಜ್ಯಗಳ ಎಐಸಿಸಿ ಉಸ್ತುವಾರಿಗಳನ್ನು ಬದಲಾಯಿಸಿದೆ. ಆದರೆ ಅಲ್ಲೆಲ್ಲೂ ಶಶಿ ತರೂರ್‌ಗೆ ಸ್ಥಾನ ಮಾಡಿಕೊಟ್ಟಿಲ್ಲ. ಅವರನ್ನು ನೇಮಕ ಮಾಡುವ ಬಗ್ಗೆ ಚರ್ಚೆಯೂ ನಡೆದಿರಲಿಲ್ಲ. ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್ (ಎಐಪಿಸಿ) ಎಂಬ ಸ್ವತಃ ತರೂರ್ ಹುಟ್ಟುಹಾಕಿದ ಘಟಕದಿಂದಲೂ ಅವರನ್ನು ಹೊರಹಾಕಲಾಗಿದೆ!

ಇತ್ತೀಚೆಗೆ ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸವನ್ನು ಹೊಗ ಳಿದ್ದರು. ಅದೊಂದು ಯಶಸ್ವಿ ಪ್ರವಾಸ ಎಂದು ಬಣ್ಣಿಸಿದ್ದರು. ‘ಪ್ರಧಾನಿ ನರೇಂದ್ರ ಮೋದಿ ಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ನಡೆಸಿದ ಸಭೆಗಳಿಂದ ನಮ್ಮ ದೇಶದ ಜನರಿಗೆ ಅನುಕೂಲವಾಗುವಂತಹ ಅನೇಕ ನಿರ್ಧಾರಗಳು ಹೊರಬಿದ್ದಿವೆ. ನನ್ನ ಪ್ರಕಾರ ಏನೋ ಒಂದಷ್ಟು ಧನಾತ್ಮಕ ಬೆಳವಣಿಗೆಗಳಾಗಿವೆ.

ಒಬ್ಬ ಭಾರತೀಯನಾಗಿ ನಾನದನ್ನು ಸ್ವಾಗತಿಸುತ್ತೇನೆ. ಈ ವಿಷಯದಲ್ಲಿ ನಾನು ಕೇವಲ ರಾಷ್ಟ್ರೀಯ ಹಿತಾಸಕ್ತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಾತನಾಡಿದ್ದೇನೆ’ ಎಂದು ತರೂರ್ ಹೇಳಿದ್ದರು. ಈ ಹಿಂದೆ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ರನ್ನೂ ಹೊಗಳಿದ್ದರು. ಒಂದು ಲೇಖನದಲ್ಲಿ ಕೇರಳದ ಎಡರಂಗದ ಸರ್ಕಾರವನ್ನು ಮೆಚ್ಚಿ ಕೊಳ್ಳುತ್ತಾ, ಭಾರತದ ತಾಂತ್ರಿಕ ಮತ್ತು ಔದ್ಯೋಗಿಕ ರೂಪಾಂತರದ ನೇತೃತ್ವ ವಹಿಸಿ ಕೊಳ್ಳುವ ಮಟ್ಟಕ್ಕೆ ಕೇರಳ ಬೆಳೆದಿದೆ ಎಂದು ಹೇಳಿದ್ದರು.

ಈ ಹೇಳಿಕೆ ಕಾಂಗ್ರೆಸ್ ಪಕ್ಷದೊಳಗೆ ಆಕ್ರೋಶಕ್ಕೆ ಕಾರಣವಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ತರೂರ್, ‘ನಾನು ಕಾಂಗ್ರೆಸ್‌ನಲ್ಲಿದ್ದೇನೆ. ಆದರೆ, ಪಕ್ಷಕ್ಕೆ ನಾನು ಬೇಡವಾದರೆ ನನಗೆ ಬೇರೆ ಆಯ್ಕೆಗಳಿವೆ ಎಂದು ಹೇಳಿದ್ದರು. ತರೂರ್ ಇಷ್ಟೊಂದು ಆತ್ಮವಿಶ್ವಾಸದಿಂದ ಮಾತನಾಡು ವುದಕ್ಕೆ ಮುಖ್ಯ ಕಾರಣವೆಂದರೆ ಅವರಿಗೆ ತಳಮಟ್ಟದಲ್ಲಿ ಇರುವ ಅಪಾರ ಬೆಂಬಲ.

ದೇಶಾದ್ಯಂತ ಭರ್ಜರಿ ಮೋದಿ ಅಲೆ ಇದ್ದಾಗಲೂ ಅವರು ತಿರುವನಂತಪುರಂನಲ್ಲಿ ಸುಲಭ ವಾಗಿ ಗೆದ್ದಿದ್ದಾರೆ ಅಂದರೆ ಅವರಲ್ಲಿ ಮತದಾರರು ಎಷ್ಟು ನಂಬಿಕೆ ಇರಿಸಿದ್ದಾರೆ ಮತ್ತು ಮತದಾರರ ಜೊತೆಗೆ ತರೂರ್ ಎಂತಹ ಸಂಬಂಧ ಹೊಂದಿದ್ದಾರೆ ಎಂಬುದು ತಿಳಿಯುತ್ತದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಅಂದರೆ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ನೇತೃತ್ವವನ್ನು ತನಗೆ ನೀಡಬೇಕು ಎಂದು ತರೂರ್ ಬಯಸು ತ್ತಿದ್ದಾರೆ.

ಅವರ ಅಭಿಪ್ರಾಯವನ್ನು ಪಕ್ಷ ಕೇಳಿಸಿಕೊಳ್ಳುತ್ತದೆಯೇ? ನನಗೆ ಒಂದು ವಿಷಯ ಅರ್ಥ ವಾಗುವುದಿಲ್ಲ. ಹಿಂದೊಂದು ಕಾಲದಲ್ಲಿ ದೇಶದ ಜನರ ಹೃದಯದ ಬಡಿತವೇ ಆಗಿದ್ದ ಕಾಂಗ್ರೆಸ್ ಪಕ್ಷ ತಮಿಳುನಾಡಿನಲ್ಲಿ ಕಳೆದ 58 ವರ್ಷಗಳಿಂದ, ಪಶ್ಚಿಮ ಬಂಗಾಳದಲ್ಲಿ 48 ವರ್ಷಗಳಿಂದ, ಕೇರಳದಲ್ಲಿ 41 ವರ್ಷಗಳಿಂದ, ಉತ್ತರ ಪ್ರದೇಶದಲ್ಲಿ 36 ವರ್ಷಗಳಿಂದ, ಬಿಹಾರದಲ್ಲಿ 35 ವರ್ಷಗಳಿಂದ, ಗುಜರಾತ್ ನಲ್ಲಿ 30 ವರ್ಷಗಳಿಂದ ಮತ್ತು ಒಡಿಶಾದಲ್ಲಿ 25 ವರ್ಷಗಳಿಂದ ಏಕೆ ಅಧಿಕಾರಕ್ಕೆ ಬಂದಿಲ್ಲ? ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟ ವಾಗಿದೆ.

ಮಹಾರಾಷ್ಟ್ರದಲ್ಲಿ ಪಕ್ಷದ ಸ್ಥಿತಿ ಗಂಭೀರವಾಗಿದೆ. ಪಂಜಾಬ್‌ನಲ್ಲೂ ಅಧಿಕಾರದಿಂದ ದೂರವಿದೆ. ಹಾಗಿದ್ದರೆ ದೇಶದ ಅತ್ಯಂತ ಪುರಾತನ ರಾಜಕೀಯ ಪಕ್ಷವೆಂಬ ಹೆಗ್ಗಳಿಕೆ ಗಳಿಸಿ ರುವ ಕಾಂಗ್ರೆಸ್‌ನ ಸ್ಥಿತಿ ಎಲ್ಲಿಗೆ ಬಂತು? ಪಕ್ಷದ ಲಕ್ಷಾಂತರ ಕಾರ್ಯಕರ್ತರು ಕೂಡ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಪಕ್ಷದ ನಾಯಕರು ಇದಕ್ಕೆ ಉತ್ತರ ನೀಡುತ್ತಾರಾ? ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ !

ಸದ್ಯಕ್ಕೆ ಶಶಿ ತರೂರ್ ಇತ್ತೀಚೆಗೆ ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್ ಓದಿ ಸುಮ್ಮನಾಗೋಣ. ‘ಎಲ್ಲಿ ಅಜ್ಞಾನವೇ ಪರಮಾನಂದವೋ ಅಲ್ಲಿ ಜಾಣನಾಗಿರುವುದು ಅಪರಾಧ’.