Krishna Chaitanya: ಕನ್ನಡ ಚಿತ್ರ ನಿರ್ಮಾಪಕ ಕೃಷ್ಣ ಚೈತನ್ಯ ವಿರುದ್ಧ ಎಫ್ಐಆರ್
ಆರೋಪಿಗಳಾದ ಕೃಷ್ಣ ಚೈತನ್ಯ, ಸತ್ಯನಾರಾಯಣ ರೆಡ್ಡಿ ಹಾಗೂ ಅವರ ಐದಾರು ಮಂದಿ ಸಹಚರರು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದು, ನಕಲಿ ದಾಖಲೆ ತೋರಿಸಿ ಕೂಡಲೇ ಜಮೀನು ಖಾಲಿ ಮಾಡುವಂತೆ ಗಲಾಟೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ. ಕೃಷ್ಣ ಚೈತನ್ಯ ʼದಿಯಾʼ ಫಿಲಂ ನಿರ್ಮಾಪಕರು.


ಬೆಂಗಳೂರು : ರೈತರೊಬ್ಬರು ನೀಡಿದ ದೂರಿನನ್ವಯ ಸ್ಯಾಂಡಲ್ ವುಡ್ ನ ದಿಯಾ ಸಿನಿಮಾ ನಿರ್ಮಾಪಕ ಕೃಷ್ಣ ಚೈತನ್ಯ ವಿರುದ್ದ ದೂರು ದಾಖಲಾಗಿದೆ. ರೈತ ರಾಮಮೂರ್ತಿ ಎಂಬುವವರು ನೀಡಿದ ದೂರಿನನ್ವಯ ದಿಯಾ ಸಿನಿಮಾ ನಿರ್ಮಾಪಕ ಕೃಷ್ಣ ಚೈತನ್ಯ ವಿರುದ್ಧ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಆಗಸ್ಟ್ 13ರಂದು ಬೆಳಿಗ್ಗೆ 10.30 ಕ್ಕೆ ರಾಮಮೂರ್ತಿ ಮತ್ತು ಶಶಿಕಲಾ ಅವರು ಜಮೀನಿನಲ್ಲಿದ್ದ ವೇಳೆ ಮೂರು ಕಾರುಗಳಲ್ಲಿ ಆರೋಪಿಗಳಾದ ಕೃಷ್ಣ ಚೈತನ್ಯ, ಸತ್ಯನಾರಾಯಣ ರೆಡ್ಡಿ ಹಾಗೂ ಅವರ ಐದಾರು ಮಂದಿ ಸಹಚರರು ಅಲ್ಲಿಗೆ ಬಂದು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದು, ನಕಲಿ ದಾಖಲೆ ತೋರಿಸಿ ಕೂಡಲೇ ಜಮೀನು ಖಾಲಿ ಮಾಡುವಂತೆ ಗಲಾಟೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.
2005 ರಲ್ಲಿ ಶಿವರಾಮ ರೆಡ್ಡಿ ಅವರ ಕುಟುಂಬದಿಂದ ವರ್ತೂರು ಹೋಬಳಿ ಕಸವನಹಳ್ಳಿ ಗ್ರಾಮದ ಸರ್ವೇ ನಂಬರ್ 52 ರಲ್ಲಿ 3.35 ಎಕರೆ ಜಮೀನನ್ನು ಶುದ್ಧ ಕ್ರಯಕ್ಕೆ ಖರೀದಿಸಿದ್ದರು. ಈ ಜಮೀನಿನಲ್ಲಿ ನರ್ಸರಿ ಮಾಡುವ ಉದ್ದೇಶದಿಂದ ಆಗಸ್ಟ್ 10ರಂದು ಶಶಿಕಲಾ ಮತ್ತು ಕೋದಂಡಾಚಾರಿ ಅವರಿಗೆ ಭೋಗ್ಯದ ಕರಾರು ಮಾಡಿಕೊಟ್ಟಿದ್ದರು. ಆದರೆ ಭೂಮಿ ನಮ್ಮದು ಎಂದು ಕೃಷ್ಣ ಚೈತನ್ಯ ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ.