ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nava Brindavana: ನವ ವೃಂದಾವನ ಪೂಜೆ ವಿವಾದ; ಸಾಮರಸ್ಯದಿಂದ ಸಮಸ್ಯೆಗೆ ಇತಿಶ್ರೀ ಹಾಡಲು ರಾಯರ ಮಠ-ಉತ್ತರಾದಿ ಮಠದ ಶ್ರೀಗಳ ನಿರ್ಧಾರ

Nava Brindavana Pooja controversy: ಕೊಪ್ಪಳ ಜಿಲ್ಲೆಯ ಆನೆಗೊಂದಿಯ ನವ ವೃಂದಾವನದ ಪೂಜೆ ವಿವಾದವನ್ನು ಸಾಮರಸ್ಯದಿಂದ ಪರಿಹರಿಸಿಕೊಳ್ಳುವುದಾಗಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.

ನವ ವೃಂದಾವನ ಪೂಜೆ ವಿವಾದಕ್ಕೆ ಇತಿಶ್ರೀ ಹಾಡಲು ಉಭಯ ಶ್ರೀಗಳ ನಿರ್ಧಾರ

Profile Prabhakara R Jun 12, 2025 10:18 PM

ರಾಯಚೂರು: ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿ ಮಠದ ನಡುವಿನ ದಶಕಗಳ ವಿವಾದಕ್ಕೆ ಸೌಹಾರ್ದ ಮಾತುಕತೆ ಮೂಲಕ ಇತಿಶ್ರೀ ಉಭಯ ಮಠಗಳ ಶ್ರೀಗಳು ಮುಂದಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಆನೆಗೊಂದಿಯ ನವ ವೃಂದಾವನದ ಪೂಜೆ ವಿವಾದವನ್ನು (Nava Brindavana) ಸಾಮರಸ್ಯದಿಂದ ಪರಿಹರಿಸಿಕೊಳ್ಳುವುದಾಗಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು, ರಾಯರ ಮಠ ಹಾಗೂ ಉತ್ತರಾದಿ ಮಠದ ನಡುವೆ ಒಂದು ಸೌಹಾರ್ದ ವಾತಾವರಣ ಏರ್ಪಟ್ಟಿದೆ. ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಎರಡು ಮಠಗಳ ನಡುವೆ ಇರುವ ವಿವಾದ ಕುರಿತು ಸಾಮರಸ್ಯದ ಪರಿಹಾರಕ್ಕೆ ಇಂದು ಮಾತುಕತೆ ನಡೆದಿದೆ ಎಂದು ತಿಳಿಸಿದ್ದಾರೆ.

ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಮಾತನಾಡಿ, ಉತ್ತರಾದಿ ಮಠ ಹಾಗೂ ರಾಘವೇಂದ್ರ ಮಠದ ನಡುವಿನ ಅನೇಕ ದಿನಗಳ ವ್ಯಾಜ್ಯಕ್ಕೆ ಪರಿಹಾರ ನೀಡಲು ವಿಶೇಷ ಪ್ರಯತ್ನ ನಡೆಯುತ್ತಿದೆ. ಶೀಘ್ರದಲ್ಲಿ ಗುರುಗಳ ಕೃಪೆಯಿಂದ ಎಲ್ಲರೂ ಒಗ್ಗಟ್ಟಿನಿಂದ ಇರುವ ಕಾಲ ಬರಲಿದೆ. ನಾವಿಬ್ಬರೂ ಪ್ರೀತಿ, ವಿಶ್ವಾಸದಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.



ಏನಿದು ವಿವಾದ?

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ತಟದಲ್ಲಿರುವ ನವ ವೃಂದಾವನ ಗಡ್ಡೆಯಲ್ಲಿ ಉತ್ತರಾದಿ ಮಠದವರು 'ಶ್ರೀ ರಘುವರ್ಯ ತೀರ್ಥರ ಬೃಂದಾವನ' ಎಂದು ಕರೆದರೆ, ಇದೇ ಬೃಂದಾವನವನ್ನು ರಾಯರ ಮಠದವರು 'ಶ್ರೀ ಜಯತೀರ್ಥರ ಬೃಂದಾವನ' ಎಂದು ಪೂಜೆ ಸಲ್ಲಿಸುತ್ತಿರುವುದೇ ವಿವಾದದ ಮೂಲವಾಗಿದೆ.

ಜಯತೀರ್ಥರ ಬೃಂದಾವನವು ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿದೆ. ಅಲ್ಲಿನ ಭಕ್ತರು ನೂರಾರು ವರ್ಷಗಳಿಂದ ಜಯತೀರ್ಥರ ಬೃಂದಾವನಕ್ಕೆ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಆನೆಗೊಂದಿಯ ನವ ಬೃಂದಾವನದಲ್ಲಿರುವ ಬೃಂದಾವನ ರಘುವರ್ಯ ತೀರ್ಥರ ಬೃಂದಾವನ ಎಂದು ಉತ್ತರಾದಿ ಮಠದವರ ವಾದವಾಗಿದೆ.

ಇನ್ನು ರಾಯರ ಮಠದ ಭಕ್ತರ ಪ್ರತಿವಾದವೇನೆಂದರೆ, ನವ ಬೃಂದಾವನದಲ್ಲಿಇರುವುದು ಜಯತೀರ್ಥರ ಬೃಂದಾವನವಾಗಿದೆ. ಹಲವು ವರ್ಷಗಳಿಂದ ಇದೇ ಬೃಂದಾವನಕ್ಕೆ ಪೂಜೆ ಮಾಡಿಕೊಂಡು ಬರಲಾಗುತ್ತಿದೆ ಎನ್ನುವುದಾಗಿದೆ. ಈ ಸ್ಥಳದ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಉಭಯ ಮಠಗಳ ಮಧ್ಯೆ ಆಗಾಗ್ಗೆ ಗಲಾಟೆ ನಡೆದಿದ್ದು, ವಿವಾದ ಕೋರ್ಟ್‌ ಮೆಟ್ಟಿಲೇರಿದೆ.

ಈ ಸುದ್ದಿಯನ್ನೂ ಓದಿ | Ramayana Movie: ರಾಮಾಯಣ ಚಿತ್ರದಲ್ಲಿ ಮಂಥರಾ ಪಾತ್ರಕ್ಕೆ ಶೀಬಾ ಚಡ್ಡಾ ಆಯ್ಕೆ: ರಣಬೀರ್ ಕಪೂರ್‌ ನಟನೆಯ ಬಹುನಿರೀಕ್ಷಿತ ಚಿತ್ರದಲ್ಲಿ ಮಿಂಚಲಿದ್ದಾರೆ ಸ್ಟಾರ್ಸ್