Mysuru News: ಮೈಸೂರಿನಲ್ಲಿ ವಿದ್ವಾನ್ ಸತ್ಯನಾರಾಯಣ ರಾಜು ನೇತೃತ್ವದಲ್ಲಿ ವರ್ಣಂ ಕಾರ್ಯಾಗಾರ ಯಶಸ್ವಿ
Mysuru News: ಮೈಸೂರಿನ ವಿಜಯನಗರದ ತ್ರಿಪುರ ಪಾಠಶಾಲೆಯಲ್ಲಿ ಭೈರವಿ ನಾಟ್ಯಶಾಲೆಯ ವತಿಯಿಂದ ಆಯೋಜಿಸಿದ್ದ ವರ್ಣ ಕಾರ್ಯಾಗಾರ ಯಶಸ್ವಿಯಾಗಿ ಪೂರ್ಣಗೊಂಡಿತು. ಕಾರ್ಯಾಗಾರದಲ್ಲಿ ವಿಶ್ವಖ್ಯಾತಿಯ ಭರತನಾಟ್ಯ ವಿದ್ವಾಂಸ, ಬೆಂಗಳೂರಿನ ಸಂಸ್ಕೃತಿ-ಟೆಂಪಲ್ ಆಫ್ ಆರ್ಟ್ಸ್ ನೃತ್ಯ ಸಂಸ್ಥೆಯ ಗುರು ಸತ್ಯನಾರಾಯಣ ರಾಜು ಅವರು ಅಷ್ಟರಾಗಮಾಲಿಕ ವರ್ಣವನ್ನು ಸೂಕ್ಷ್ಮವಾಗಿ ವಿವರಿಸಿದರು. ಈ ಕುರಿತ ವಿವರ ಇಲ್ಲಿದೆ.


ಮೈಸೂರು: ಭೈರವಿ ನಾಟ್ಯಶಾಲೆಯ ವತಿಯಿಂದ ಮೈಸೂರಿನ (Mysuru News) ವಿಜಯನಗರದ ತ್ರಿಪುರ ಪಾಠಶಾಲೆಯಲ್ಲಿ ಆಯೋಜಿಸಿದ್ದ ಮೂರು ದಿನಗಳ ವರ್ಣ ಕಾರ್ಯಾಗಾರ ಯಶಸ್ವಿಯಾಗಿ ಪೂರ್ಣಗೊಂಡಿತು. ಪ್ರಸಿದ್ಧ ನೃತ್ಯ ಗುರುಗಳಾದ ಶೀಲಾ ಶ್ರೀಧರ್, ಡಾ. ತುಳಸಿ ರಾಮಚಂದ್ರ, ವಿದ್ವಾನ್ ಬದರಿ ದಿವ್ಯ ಭೂಷಣ್ ಅವರ ಉಪಸ್ಥಿತಿಯಲ್ಲಿ ಆರಂಭಗೊಂಡ ಕಾರ್ಯಾಗಾರದಲ್ಲಿ ವಿಶ್ವಖ್ಯಾತಿಯ ಭರತನಾಟ್ಯ ವಿದ್ವಾಂಸ, ಬೆಂಗಳೂರಿನ ಸಂಸ್ಕೃತಿ-ಟೆಂಪಲ್ ಆಫ್ ಆರ್ಟ್ಸ್ ನೃತ್ಯ ಸಂಸ್ಥೆಯ ಗುರು ಸತ್ಯನಾರಾಯಣ ರಾಜು ಅವರು ಅಷ್ಟರಾಗಮಾಲಿಕ ವರ್ಣವನ್ನು ಸೂಕ್ಷ್ಮವಾಗಿ ವಿವರಿಸಿದರು. ಮೂರು ದಿನಗಳ ಕಾರ್ಯಾಗಾರದಲ್ಲಿ ಅವರು ಪ್ರಾತ್ಯಕ್ಷಿಕೆ ಸಹಿತ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಿದ್ದು ಗಮನ ಸೆಳೆಯಿತು.
ಕಾರ್ಯಾಗಾರದಲ್ಲಿ ಕಲಿಕಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಮನದಟ್ಟು ಮಾಡಿಸಲು ಗುರು ಸತ್ಯನಾರಾಯಣ ರಾಜು ಅವರೇ ಅಷ್ಟರಾಗ ಮಾಲಿಕಾ ವರ್ಣವನ್ನು ಅಭಿನಯಿಸಿ ಪ್ರಸ್ತುತ ಪಡಿಸಿದರು. ಸೂಕ್ಷ್ಮವಾದ ಸಂಚಾರಿ ಭಾವಗಳು ಎಲ್ಲರನ್ನೂ ಭಾವನಾ ಲೋಕಕ್ಕೆ ಕೊಂಡೊಯ್ದಿದ್ದವು. 8 ಜತಿಗಳನ್ನು ಒಳಗೊಂಡ ವರ್ಣವನ್ನು ಅವರು ಮನೋಜ್ಞವಾಗಿ ಪಡ ಮೂಡಿಸಿದರು.
ಇತ್ತೀಚಿಗೆ ನಿಧನರಾದ ಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ಸ್ಮರಿಸಿದ ವಿದ್ವಾನ್ ಸತ್ಯನಾರಾಯಣ ರಾಜು ಅವರು ಎರಡು ಭಾವಗೀತೆಗೆ ಜೀವ - ಭಾವ ತುಂಬಿ ಅಭಿನಯವನ್ನು ಹೊರ ಹೊಮ್ಮಿಸಿದರು. ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು.... ಹಾಗೂ ಇಷ್ಟು ಕಾಲ ಒಟ್ಟಿಗಿದ್ದು.... ಗೀತೆಗೆ ಅವರ ನೃತ್ಯವು ಕಲಾ ರಸಿಕರನ್ನು ಮಂತ್ರ ಮುಗ್ಧಗೊಳಿಸಿತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ವಿದುಷಿ, ಪದ್ಮಶ್ರೀ ಪುರಸ್ಕೃತ ಚಿತ್ರಾ ವಿಶ್ವೇಶ್ವರನ್ ಮಾತನಾಡಿ, ಕಲಾ ಅಭಿವ್ಯಕ್ತಿಯು ಯುವ ಪೀಳಿಗೆಯಲ್ಲಿ ಬೇರೂರಬೇಕು ಎಂದರೆ ಗುರು ಪರಂಪರೆ ಅನುಸರಣೆ ಬಹಳ ಮುಖ್ಯ ಎಂದರು. ನಂತರ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ಸುದ್ದಿಯನ್ನೂ ಓದಿ | SSC Recruitment 2025: ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಗುಡ್ನ್ಯೂಸ್; ಸ್ಟಾಫ್ ಸೆಲೆಕ್ಷನ್ ಕಮಿಷನ್ನಿಂದ 2,423 ಹುದ್ದೆಗಳ ಭರ್ತಿ
ಹಿಮ್ಮೇಳ ಕಲಾವಿದರ ಸಹಕಾರ
ಕಾರ್ಯಕ್ರಮಕ್ಕೆ ಜೀವ ತುಂಬಿದ ಹಿಮ್ಮೇಳದಲ್ಲಿ ವಿದುಷಿ ವಸುಧಾ ಬಾಲಕೃಷ್ಣ (ಹಾಡುಗಾರಿಕೆ), ಭರತ್ ನಾರಾಯಣ್ (ನಟುವಾಂಗ), ವಿದ್ವಾನ್ ವಿನಯ್ ನಾಗರಾಜ್ (ಮೃದಂಗ), ವಿದ್ವಾನ್ ಕಾರ್ತಿಕ್ ಸಾತವಲ್ಲಿ (ಕೊಳಲು) ಗಮನ ಸೆಳೆದರು. ತ್ರಿಪುರ ಪಾಠ ಶಾಲೆಯ ವಿದುಷಿ ಗೌರಿ ಸೇತುರಾಮ್ ಅವರಿಗೆ ಕಾರ್ಯಕ್ರಮ ಆಯೋಜಕ ಭರತ್ ನಾರಾಯಣ ಗೌರವಿಸಿದರು.