Hemavathi Express Link Canal: ಮಾಗಡಿ, ರಾಮನಗರಕ್ಕೆ ಹೇಮಾವತಿ ನೀರು ಹೋಗುವುದಿಲ್ಲ: ಸಚಿವ ಪರಮೇಶ್ವರ್
Hemavathi Express Link Canal: ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ಯಾರಿಗೂ ತೊಂದರೆ ಆಗದಂತೆ ಮಾಡುತ್ತೇವೆ. ತುಮಕೂರಿನ ಮಗನಾಗಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಜನರಿಗೆ ವಿರುದ್ಧವಾದ ಕೆಲಸವನ್ನು ನಾನು ಮಾಡುವುದಿಲ್ಲ. ತುಮಕೂರಿನ ಜನರ ವಿಶ್ವಾಸದಿಂದ ಕೆಲಸ ಮಾಡುತ್ತೇನೆ ಎಂದು ಗೃಹ ಸಚಿವ ಪರಮೇಶ್ವರ್ ಭರವಸೆ ನೀಡಿದ್ದಾರೆ.


ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯಿಂದ (Hemavathi Express Link Canal) ಮಾಗಡಿ ಮತ್ತು ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದಿಲ್ಲ. ಈ ಬಗ್ಗೆ ರೈತರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವ ಪರಮೇಶ್ವರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಮಾಡಿದರೆ, ರೈತರ ವ್ಯವಸಾಯಕ್ಕೆ ಮತ್ತು ಕುಡಿಯಲು ನೀರು ಸಿಗುವುದಿಲ್ಲ ಎಂಬ ತಪ್ಪು ಕಲ್ಪನೆಗಳು ಹುಟ್ಟಿಕೊಂಡಿವೆ. ಈ ಪ್ರಾಜೆಕ್ಟ್ನಿಂದ ತುಮಕೂರು ಭಾಗದ ಜನರಿಗೆ ಯಾವುದೇ ರೀತಿಯ ನೀರಿನ ತೊಂದರೆಯಾಗುವುದಿಲ್ಲ. ತುಮಕೂರಿಗೆ ಹಂಚಿಕೆಯಾಗಿರುವ ನೀರು ಎಂದಿನಂತೆ ಹರಿಯಲಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
2025ರ ಜನವರಿ 5ರಂದು ನಡೆದ ಕ್ಯಾಬಿನೆಟ್ನಲ್ಲಿ ಲಿಂಕ್ ಕೆನಾಲ್ ಬಗ್ಗೆ ಪರಿಶೀಲನೆ ಮಾಡಿ, ಈ ಯೋಜನೆಗೆ ಅನುಮೋದನೆ ನೀಡಿ, ಸುಮಾರು 986 ಕೋಟಿ ರೂ. ಅನುದಾನ ನೀಡಲಾಯಿತು. ಹೇಮಾವತಿ ಲಿಂಕ್ ಕೆನಾಲ್ ಕುರಿತಂತೆ ಟೆಕ್ನಿಕಲ್ ಕಮಿಟಿ ನೀಡಿರುವ ವರದಿ ಪ್ರಮುಖ ಶಿಫಾರಸುಗಳ ಪ್ರಕಾರ, ತುಮಕೂರು ಮತ್ತು ಕುಣಿಗಲ್ ಕಡೆ ನೀರು ಬಿಡುವ ಲೆವೆಲ್ ಸಮನಾಗಿರಬೇಕು ಎಂದು ತೀರ್ಮಾನಿಸಲಾಗಿತ್ತು. ಅದರಂತೆ ಈಗಲೂ ಮುಂದುವರಿಸುತ್ತಿದ್ದೇವೆ.
ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ಯಾರಿಗೂ ತೊಂದರೆ ಆಗದಂತೆ ಮಾಡುತ್ತೇವೆ. ತುಮಕೂರಿನ ಮಗನಾಗಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಜನರಿಗೆ ವಿರುದ್ಧವಾದ ಕೆಲಸವನ್ನು ನಾನು ಮಾಡುವುದಿಲ್ಲ. ತುಮಕೂರಿನ ಜನರ ವಿಶ್ವಾಸದಿಂದ ಕೆಲಸ ಮಾಡುತ್ತೇನೆ ಎಂದರು.
ಈ ಯೋಜನೆಯಿಂದ ತುಮಕೂರಿನ ಜನರಿಗೆ ತೊಂದರೆಯಾಗಲು ಬಿಡುವುದಿಲ್ಲ. ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಅನುಷ್ಟಾನ ಮಾಡುತ್ತೇವೆ. ತುಮಕೂರಿನ ಜನಕ್ಕೆ, ರೈತರಿಗೆ, ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಇದು ನನ್ನ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.
ಶಾಸಕರು ಯಾವುದೇ ರೀತಿಯಲ್ಲಿ ರಾಜಕೀಯ ಮಾಡಬಾರದು
ಯೋಜನೆ ವಿಚಾರದಲ್ಲಿ ಶಾಸಕರು ಯಾವುದೇ ರೀತಿಯಲ್ಲಿ ರಾಜಕೀಯ ಮಾಡಬಾರದು. ಶಾಶ್ವತ ನೀರಾವರಿ ಯೋಜನೆಗಳಲ್ಲಿ ರಾಜಕೀಯ ಬೆರೆಸುವುದರ ಬದಲು ಸಹಕರಿಸಬೇಕು. ನಮ್ಮ ಸರ್ಕಾರ ರೈತ ವಿರೋಧಿ ಸರ್ಕಾರವಲ್ಲ. ರೈತರಿಗೆ ಬೇಕಾದ ಸವಲತ್ತುಗಳನ್ನು ನೀಡುತ್ತಾ ಬಂದಿದ್ದೇವೆ. ನಮ್ಮ ಸರ್ಕಾರವು 2013-18ರವರೆಗೆ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಹೇಳಿದ್ದೆವು. ಅದರಂತೆ 68 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದರು.
ರೈತ ಸಮುದಾಯಕ್ಕೆ ಕೊಡುಗೆ ನೀಡುವುದು ನಮ್ಮ ಆದ್ಯತೆ. ಸಮ್ಮಿಶ್ರ ಸರ್ಕಾರ ಇದ್ದಾಗಲೂ ರೈತರಿಗೆ, ನೀರಾವರಿಗೆ ಆದ್ಯತೆ ಮುಂದುವರಿಸಿದ್ದೇವೆ. ಈಗಿನ ಸರ್ಕಾರವು ಮುಂದುವರಿಸಿದೆ. ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ಯಾರಿಗೂ ತೊಂದರೆ ಆಗದಂತೆ ಮಾಡುತ್ತೇವೆ.
ಈ ಯೋಜನೆ ಹೊಸದಾಗಿ ಪ್ರಾರಂಭವಾಗಿರುವುದಲ್ಲ. 2007ರಲ್ಲಿ ಹೇಮಾವತಿ ನೀರು ಹಂಚಿಕೆಯಾಗಿದೆ. ಸುಮಾರು 43.67 ಟಿಎಂಸಿ ಕರ್ನಾಟಕಕ್ಕೆ ಹಂಚಿಕೆಯಾಗಿದೆ. ಅದರಲ್ಲಿ ತುಮಕೂರಿಗೆ 25.31 ಟಿಎಂಸಿ ನೀರು ಹಂಚಿಕೆಯಾಗಿದೆ. ಎಡದಂಡೆ ಕಾಲುವೆಗೆ 18.36 ಟಿಎಂಸಿ ಹಂಚಿಕೆಯಾಗಿದ್ದು, ಹಾಸನ, ಮಂಡ್ಯ, ಕೆ.ಆರ್.ನಗರ, ಮೈಸೂರು ಬರುತ್ತವೆ. ತುಮಕೂರು ಭಾಗಕ್ಕೆ 25.31 ಟಿಎಂಸಿ ನೀರು ಹಂಚಿಕೆಯಾಗಿದ್ದು, ಇದರಲ್ಲಿ ನೀರಾವರಿಗೆ 10.936 ಟಿಎಂಸಿ ಹಂಚಿಕೆಯಾಗಿದೆ. ನಾಗಮಂಗಲ ಬ್ರ್ಯಾಂಚ್ ಕೆನಾಲ್ನಲ್ಲಿ 7.757 ಟಿಎಂಸಿ ಕೃಷಿ ನೀರಾವರಿಗೆ ಹಂಚಿಕೆಯಾಗಿದೆ. ಎರಡು ಸೇರಿ ಕುಡಿಯಲು 6.617 ಟಿಎಂಸಿ ನೀರು ಹಂಚಿಕೆಯಾಗಿದೆ. ತುಮಕೂರು ಬ್ರ್ಯಾಂಚ್ ಕೆನಾಲ್ನಲ್ಲಿ ತುಮಕೂರಿಗೆ ಬರಬೇಕಿರುವುದು 2815 ಎಂಸಿಎಫ್ಟಿ ಮತ್ತು ಕುಣಿಗಲ್ ಹೋಗಬೇಕಿರುವ ನೀರು 3037 ಎಂಸಿಎಫ್ಟಿ. ಆದರೆ ಇಲ್ಲಿವರೆಗೆ ಕುಣಿಗಲ್ಗೆ ಕಡಿಮೆ ಪ್ರಮಾಣದ ನೀರು ಸಿಕ್ಕಿದೆ. ಕಳೆದ 10 ವರ್ಷದಲ್ಲಿ ಕುಣಿಗಲ್ಗೆ 10 ಟಿಎಂಸಿ ನೀರು ಹೋಗಲೇ ಇಲ್ಲ. 2021-22ರಲ್ಲಿ 25.270 ಟಿಎಂಸಿ ನೀರು ಬಂದಿದೆ. ನಮಗೆ ಬರಬೇಕಿದ್ದ ಸಂಪೂರ್ಣ ನೀರು ಬಂದಿದೆ. ಆದರೆ ಆ ವರ್ಷವೂ 0.4486 ನೀರು ಕುಣಿಗಲ್ಗೆ ಹೋಗಿದೆ. 1 ಟಿಎಂಸಿ ನೀರು ಸಹ ಹೋಗಿಲ್ಲ. ಇದನ್ನು ತಿಳಿದು ಎಕ್ಸ್ಪ್ರೆಸ್ ಕೆನಾಲ್ ಮಾಡಲು ತೀರ್ಮಾನಿಸಲಾಯಿತು. ಎಕ್ಸ್ಪ್ರೆಸ್ ಕೆನಾಲ್ ಮಾಡಿದರೆ ತುಮಕೂರಿಗೆ ನೀರು ಬರುವುದಿಲ್ಲ. ರೈತರಿಗೆ ಮತ್ತು ಕುಡಿಯಲು ನೀರು ಸಿಗುವುದಿಲ್ಲ ಎಂಬ ಪ್ರಶ್ನೆ ಬಂದಿವೆ. ಈ ಪ್ರಾಜೆಕ್ಟ್ನಲ್ಲಿ ಸುರೇಶ್ಗೌಡ ಅವರ ಕ್ಷೇತ್ರ ಬರುತ್ತದೆ. ಹೀಗಾಗಿ ಅವರಿಗೆ ಆತಂಕ ಬಂದಿದೆ. ಅವರಿಗೆ ಎಷ್ಡು ನೀರು ಹೋಗಬೇಕು, ಮೊದಲು ಎಷ್ಡು ಪ್ರಮಾಣದ ನೀರು ಹೋಗುತ್ತಿತ್ತು. ಅಷ್ಟು ಹೋಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್, ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜಾ ಮತ್ತಿತರರಿದ್ದರು.
ಹೇಮಾವತಿ ಕೆನಾಲ್ ವಿರುದ್ಧ ಪ್ರತಿಭಟನೆ; ನಾಲ್ವರ ಬಂಧನ
ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಯೋಜನೆ ತಡೆಗೆ ಆಗ್ರಹಿಸಿ ನಡೆಸಿದ್ದ ಪ್ರತಿಭಟನೆ ಸಂಬಂಧ ನಾಲ್ವರನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ವೇಳೆ ತುರುವೇಕೆರೆ ಸಿಪಿಐ ಲೋಹಿತ್ ಅವರ ಮೇಲೆ ಹಲ್ಲೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಆನಂದ್, ಚೇತನ್, ಲೋಕೇಶ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಗುಬ್ಬಿ ವೃತ್ತ ನಿರೀಕ್ಷಕ ರಾಘವೇಂದ್ರ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Chikkanayakanahalli (Tumkur) News:ಹೇಮಾವತಿ ನೀರು ಹರಿಸಲು ಪ್ರಾಮಾಣಿಕವಾಗಿ ಶ್ರಮ ಹಾಕುತ್ತಿದ್ದೇನೆ : ಸಿಬಿಎಸ್
ಸರ್ಕಾರ ಬಿಜೆಪಿ ಮುಖಂಡರನ್ನು ಗುರಿಯಾಗಿಸಿಕೊಂಡು ಹೇಮಾವತಿ ಕೆನಾಲ್ ಯೋಜನೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರನ್ನು ಸುಖಾ ಸುಮ್ಮನೆ ಬಂಧಿಸಿರುವುದು ಸರಿಯಲ್ಲ. ಈ ಬಗ್ಗೆ ವಿಧಾನಸೌಧದ ವರೆಗೂ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಮುಖಂಡರು ಗುಡುಗಿದ್ದಾರೆ.