DK Suresh: ಶ್ರೀ ಕ್ಷೇತ್ರದ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ನಾಚಿಕೆಯಾಗಬೇಕು ಎಂದ ಡಿ.ಕೆ.ಸುರೇಶ್
DK Suresh: ಧರ್ಮಸ್ಥಳ ಕ್ಷೇತ್ರ ರಾಜಕೀಯ ವಸ್ತುವಲ್ಲ. ಶ್ರೀ ಕ್ಷೇತ್ರದ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವವರಿಗೆ ನಾಚಿಕೆಯಾಗಬೇಕು. ಸೌಜನ್ಯ ಪ್ರಕರಣ ಸೇರಿದಂತೆ ಅನೇಕ ಆರೋಪಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುಂಚಿತವಾಗಿಯೂ ನಡೆದಿತ್ತು. ಈ ಆರೋಪಗಳು ಬಂದಂತಹ ಸಂದರ್ಭದಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಯಾವುದೇ ರೀತಿಯ ಹೇಳಿಕೆ ನೀಡಿದ ಉದಾಹರಣೆಗಳು ಎಲ್ಲಿಯೂ ಇಲ್ಲ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.

-

ಬೆಂಗಳೂರು: ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವಂತಹ ಬಿಜೆಪಿ- ಜೆಡಿಎಸ್ ಪಕ್ಷಗಳ ರಾಜಕೀಯ ಒಳಒಪ್ಪಂದವನ್ನು ಕಾಂಗ್ರೆಸ್ ಸರ್ಕಾರ ನಿಷ್ಪಕ್ಷಪಾತ ಎಸ್ಐಟಿ ತನಿಖೆ ಮೂಲಕ ವಿಫಲಗೊಳಿಸಿದೆ. ಇದೆಲ್ಲವೂ ಪ್ರತಿಪಕ್ಷಗಳ ರಾಜಕೀಯ ನಾಟಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಮ್ಮ ರಕ್ತದಾಹ ನಿಲ್ಲಿಸಿ, ಕ್ಷೇತ್ರದ ಪಾವಿತ್ರ್ಯತೆ ಉಳಿಸಿ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ಕಿಡಿಕಾರಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಧರ್ಮಸ್ಥಳಕ್ಕೆ ಬಿಜೆಪಿಯವರು ಭೇಟಿ ಜತೆಗೆ ಸೌಜನ್ಯ ಅವರ ಮನೆಗೂ ಭೇಟಿ ನೀಡಿದ ಬಗ್ಗೆ ಕೇಳಿದಾಗ, ʼಯಾತ್ರೆಯಲ್ಲಿ ಅಲ್ಲಿನ ಜನಪ್ರತಿನಿಧಿಗಳೂ ಸಹ ಶ್ರೀಕ್ಷೇತ್ರವನ್ನು ಒಪ್ಪಿ ಮಾತನಾಡಿಲ್ಲ. ಕೇವಲ ಸ್ವಾಮಿ ಮಂಜುನಾಥನ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆಗ ಸುಖಾಸುಮ್ಮನೆ ಆರೋಪಗಳನ್ನು ಮಾಡಿ, ಈಗ ಕೊಳಕು ರಾಜಕಾರಣದಿಂದ ಆಚೆ ಬರಲು ಧರ್ಮಸ್ಥಳದ ಯಾತ್ರೆ ಮಾಡಲಾಗಿದೆ. ಇದು ಕ್ಷೇತ್ರದ ಮೇಲೆ ಇರುವ ಗೌರವದಿಂದ ಮಾಡಿರುವ ಯಾತ್ರೆಯಲ್ಲʼ ಎಂದು ಆರೋಪಿಸಿದರು.
ಬಿಜೆಪಿ- ಜೆಡಿಎಸ್ ಅವರು ಏತಕ್ಕೆ ಯಾತ್ರೆ ಮಾಡಿದ್ದಾರೆ. ಯಾರಿಗೆ ಸಾಂತ್ವನ ಹೇಳಲು ಯಾತ್ರೆಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದ ಡಿ.ಕೆ. ಸುರೇಶ್ ಅವರು, ಬಿಜೆಪಿಯವರ ರಾಜಕೀಯ ಬೇಳೆ ಅಲ್ಲಿ ಬೇಯುವುದಿಲ್ಲ. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಬಿಜೆಪಿಗರ ರಾಜಕೀಯ ಒಳ ಒಪ್ಪಂದಗಳನ್ನು ಅರಿತಿದ್ದಾರೆ ಎಂದು ದೂರಿದರು. ಈ ಹಿಂದೆಯೂ ಸೌಜನ್ಯ ಅವರ ಮನೆಗೆ ತೆರಳಿ ಸಾಂತ್ವನವೆಂಬ ನಾಟಕವಾಡಿ ಯಾವ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎನ್ನುವುದು ದಾಖಲೆಗಳಲ್ಲಿದೆ. ಈಗಲೂ ಸಹ ಇದೇ ರೀತಿಯ ವ್ಯವಸ್ಥೆ ರೂಪಿಸಿ ಜನರನ್ನು ಮರುಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜಕೀಯ ಮಾಡುವವರಿಗೆ ನಾಚಿಕೆಯಾಗಬೇಕು
ಧರ್ಮಸ್ಥಳ ಕ್ಷೇತ್ರ ರಾಜಕೀಯ ವಸ್ತುವಲ್ಲ. ಶ್ರೀ ಕ್ಷೇತ್ರದ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವವರಿಗೆ ನಾಚಿಕೆಯಾಗಬೇಕು. ಸೌಜನ್ಯ ಪ್ರಕರಣ ಸೇರಿದಂತೆ ಅನೇಕ ಆರೋಪಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುಂಚಿತವಾಗಿಯೂ ನಡೆದಿತ್ತು. ಈ ಆರೋಪಗಳು ಬಂದಂತಹ ಸಂದರ್ಭದಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಯಾವುದೇ ರೀತಿಯ ಹೇಳಿಕೆ ನೀಡಿದ ಉದಾಹರಣೆಗಳು ಎಲ್ಲಿಯೂ ಇಲ್ಲ ಎಂದರು. ನಿಷ್ಪಕ್ಷವಾಗಿ ಎಸ್ಐಟಿ ತನಿಖೆ ನಡೆದ ನಂತರ ಏಕಾಏಕಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ, ಈ ಕ್ಷೇತ್ರದ ಪರವಾಗಿ ನಾವಿದ್ದೇವೆ ಎಂದು ಅವರು ಹೇಳಿದ ನಂತರ, ಬಿಜೆಪಿ ಹಾಗೂ ಜೆಡಿಎಸ್ನವರು ಈ ತರಾತುರಿಯಲ್ಲಿ ಯಾತ್ರೆ ಮಾಡಿದ್ದಾರೆ ಎಂದು ಹೇಳಿದರು.
ಇದು ಆರ್ಎಸ್ಎಸ್ನ ಎರಡು ಬಣಗಳ ಕಿತ್ತಾಟವೇ ಎಂದು ಕೇಳಿದಾಗ, ʼಈ ವಿಚಾರ ಎಲ್ಲರಿಗೂ ತಿಳಿದಿದೆ. ಈ ವಿಚಾರ ಏಕೆ ಉಲ್ಬಣವಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಗೆ ಹೋದರೆ ತಿಳಿಯುತ್ತದೆ. ಆರ್ಎಸ್ಎಸ್ ಹಾಗೂ ಬಿಜೆಪಿಯ ಎರಡು ಬಣಗಳ ವಿಚಾರ ಇರಬಹುದು. ಇವರ ನಾಟಕ ಇಲ್ಲಿಗೆ ನಿಲ್ಲಬೇಕುʼ ಎಂದರು.
ರಾಜೇಂದ್ರ, ರಾಜಣ್ಣ ಹಿರಿಯ ನಾಯಕರು
ಶಿವಕುಮಾರ್ ಅವರು ಬಿಜೆಪಿಗೆ ಹೋಗಬಹುದು ಎನ್ನುವ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿಕೆ ಬಗ್ಗೆ ಕೇಳಿದಾಗ, ʼರಾಜೇಂದ್ರ ಅವರು ಹಾಗೂ ರಾಜಣ್ಣ ಅವರು ಇಬ್ಬರೂ ಹಿರಿಯ ನಾಯಕರು. ಅವರಿಗೆ ಏನೇನು ಮಾಹಿತಿ ಇದೆಯೋ ನನಗೆ ಗೊತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಯವರು, ಎಐಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಯವರು ಉತ್ತರ ನೀಡುತ್ತಾರೆʼ ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: ಪ್ರವಾಸೋದ್ಯಮ, ಪೌರಾಣಿಕ, ಅಧ್ಯಾತ್ಮಿಕ ಮಹತ್ವ ತಿಳಿಸುವ ರೀತಿ ಅಂಜನಾದ್ರಿ ಬೆಟ್ಟ ಅಭಿವೃದ್ಧಿ- ಸಿಎಂ
ಸೆಪ್ಟೆಂಬರ್ ಕ್ರಾಂತಿ ಎಂದರೆ ಬಿಜೆಪಿಗೆ ಹೋಗುವುದು ಎನ್ನುವ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼನಮ್ಮ ಬಳಿ ಜನಬೆಂಬಲವೂ ಇಲ್ಲ. ಅವರಷ್ಟು ತಿಳುವಳಿಕೆಯೂ ಇಲ್ಲ. ನಮಗೆ ಇರುವುದು ಕಾಂಗ್ರೆಸ್ ಪಕ್ಷವೊಂದೇ, ಆ ಪಕ್ಷದ ಕೆಳಗೆ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಧ್ವಜದ ಕೆಳಗೆ, ಕಾಂಗ್ರೆಸ್ಸಿಗರ ಜತೆಗೆ ಕೆಲಸ ಮಾಡಿ ಅಭ್ಯಾಸವಿದೆ. ಉಳಿದದ್ದು ಅವರಿಗೆ ಬಿಟ್ಟಿದ್ದುʼ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.