Tiger Attack: ಚಾಮರಾಜನಗರದಲ್ಲಿ ಒಂದೇ ತಿಂಗಳಲ್ಲಿ 2ನೇ ಬಲಿ ಪಡೆದ ನರಭಕ್ಷಕ ಹುಲಿ
Tiger Attack: ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದು ಹುಲಿ ನರಭಕ್ಷಕನಾಗಿ ಪರಿವರ್ತಿತವಾಗಿದೆ ಎಂದು ತರ್ಕಿಸಲಾಗಿದ್ದು, ಈ ಹುಲಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಡಂಚಿನ ಜನ ಆಗ್ರಹಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಚಾಮರಾಜನಗರ: ಚಾಮರಾಜನಗರದ (Chamarajanagara) ಗುಂಡ್ಲುಪೇಟೆಯ ದೇಶಿಪುರ ಎಂಬ ಕಾಡಂಚಿನ ಗ್ರಾಮದಲ್ಲಿ ಹುಲಿ (Tiger) ಮತ್ತೊಂದು ಜೀವವನ್ನು ಬಲಿ ಪಡೆದಿದೆ. ದನ ಮೇಯಿಸಲು ತೆರಳಿದ್ದ ಮಧ್ಯವಯಸ್ಕ ಪುಟ್ಟಮ್ಮ ಎಂಬಾಕೆ ಹುಲಿ ದಾಳಿಗೆ (Tiger Attack) ಆಹಾರವಾಗಿದ್ದಾರೆ. ಗುರುವಾರ ಸಂಜೆ ದನಕರುಗಳು ಹಾಗೂ ಕುರಿಗಳ ಹಿಂಡನ್ನು ಮೇಯಿಸುತ್ತಿರುವಾಗಲೇ ಹಠಾತ್ ಆಗಿ ಹುಲಿ ದಾಳಿ ಮಾಡಿದೆ. ಪುಟ್ಟಮ್ಮನನ್ನು ಕೊಂದ ಹುಲಿ, ನಂತರ ಸ್ವಲ್ಪ ದೂರ ಎಳೆದೊಯ್ದಿತ್ತು. ಹೊಟ್ಟೆ ಬಗೆದು ತಿನ್ನುತ್ತಿರುವಾಗಲೇ, ಜನ ನೋಡಿ ಬೆಚ್ಚಿದ್ದಿದ್ದಾರೆ. ನಾಲ್ಕೈದು ಮಂದಿ ಬೊಬ್ಬೆ ಹೊಡೆದಿದ್ದಾರೆ. ಆಗ ಹುಲಿ ಪುಟ್ಟಮ್ಮ ಮೃತದೇಹ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದೆ.
ಈ ಘಟನೆ ನಡೆದು ಎರಡ್ಮೂರು ಗಂಟೆ ಕಳೆದರೂ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಯಾವೊಬ್ಬ ಅಧಿಕಾರಿಯೂ ಸ್ಥಳದತ್ತ ಸುಳಿದಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಯಳಂದೂರಿನ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಯ ರಾಮಯ್ಯನಪೋಡು ಬಳಿ 4 ದಿನದ ಹಿಂದೆ ರಂಗಮ್ಮ ಎಂಬ ವೃದ್ಧೆಯನ್ನು ಹುಲಿ ಕೊಂದಿತ್ತು. ಆ ಘಟನೆಯ ಕಹಿ ನೆನೆಪು ಮಾಸುವ ಮುನ್ನವೇ ಈಗ ಪುಟ್ಟಮ್ಮ ಹುಲಿ ದಾಳಿಗೆ ಸಾವನ್ನಪ್ಪಿದ್ದಾರೆ.
ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ಮಾಡಿದ ಘಟನೆ ಚಾಮರಾಜನಗರ ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ರಾಮಯ್ಯನ ಪೋಡಿ ಎಂಬಲ್ಲಿ ಜೂನ್ 10 ರಂದು ನಡೆದಿತ್ತು. ಗಾಯಗೊಂಡಿದ್ದ ರವಿ ಅವರನ್ನು ಚಾಮರಾಜನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದು ಹುಲಿ ನರಭಕ್ಷಕನಾಗಿ ಪರಿವರ್ತಿತವಾಗಿದೆ ಎಂದು ತರ್ಕಿಸಲಾಗಿದ್ದು, ಈ ಹುಲಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಡಂಚಿನ ಜನ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Viral Video: ಫೋಟೋಗೆ ಪೋಸ್ ಕೊಡುತ್ತಿದ್ದ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ; ವಿಡಿಯೋ ವೈರಲ್