ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: 1.2 ಲಕ್ಷ ಕೋಟಿ ರೂ. ವಸೂಲಿಗೆ ಅಧಿಕಾರಿಗಳಿಗೆ ಟಾರ್ಗೆಟ್‌: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಆರೋಪ

ಜಿಎಸ್‌ಟಿ‌ ಕೌನ್ಸಿಲ್‌ನಲ್ಲಿ ಯಾವುದೇ ತೀರ್ಮಾನ‌ ತೆಗೆದುಕೊಳ್ಳುವಲ್ಲಿ ರಾಜ್ಯ ಸರ್ಕಾರಗಳೇ ಮಹತ್ವದ ಪಾತ್ರ ವಹಿಸುತ್ತವೆ. ರಾಜ್ಯ ಸರ್ಕಾರಕ್ಕೆ 3ನೇ ಎರಡು ಭಾಗದಷ್ಟು ಅಧಿಕಾರವಿದ್ದರೆ, ಕೇಂದ್ರ ಸರ್ಕಾರಕ್ಕೆ ಒಂದು ಭಾಗ ಮಾತ್ರ ಅಧಿಕಾರವಿದೆ. ರಾಜ್ಯ ‌ಸರ್ಕಾರಗಳ ನಿರ್ಣಯವೇ ಅಂತಿಮವಾಗಿರುತ್ತದೆ. ಹಾಗಿದ್ದರೂ ಸಿದ್ದರಾಮಯ್ಯ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

1.2 ಲಕ್ಷ ಕೋಟಿ ರೂ. ವಸೂಲಿಗೆ ಅಧಿಕಾರಿಗಳಿಗೆ ಟಾರ್ಗೆಟ್‌: ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy Jul 23, 2025 10:46 PM

ನವದೆಹಲಿ: ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಯಾವುದೇ ಮೂಲಗಳಿಂದಾದರೂ ಸರಿ 1.2 ಲಕ್ಷ ಕೋಟಿ ರೂ. ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಟಾರ್ಗೆಟ್‌ ಕೊಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳಿಗೆ ಟಾರ್ಗೆಟ್‌ ನೀಡಿದ್ದರ ಪರಿಣಾಮವೇ ರಾಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್‌ ನೀಡಿದ್ದಾರೆ ಎಂದು ದೂರಿದ್ದಾರೆ.

ನೇರಳೆ ಹಣ್ಣು ಮಾರುವವರಿಗೂ ನೋಟಿಸ್‌

ಹಣ ದಾಹದಲ್ಲಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು-ನೇರಳೆ ಹಣ್ಣು ಮಾರುವವರಿಗೂ ನೋಟಿಸ್‌ ಕೊಟ್ಟಿದೆ. ಅಯೋಗ್ಯ ಸರ್ಕಾರವಲ್ಲವೇ ಇದು? ನಾಚಿಕೆ ಆಗುವುದಿಲ್ಲವೇ ಇವರಿಗೆ? ಎಂದು ಅವರು ಹರಿಹಾಯ್ದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿ ಅತ್ಯಂತ ಕೆಟ್ಟ, ಅಯೋಗ್ಯ ಸರ್ಕಾರ ನಡೆಸುತ್ತಿದ್ದಾರೆ. ಲಂಚ ತೆಗೆದುಕೊಂಡು ಜನರನ್ನು ಅಡ್ಡ ದಾರಿಗೆಳೆಯುವ ಕೆಲಸ ಮಾಡುತ್ತಿದೆ ಈ ಸರ್ಕಾರ ಎಂದು ಆರೋಪಿಸಿದರು.

ಜಿಎಸ್‌ಟಿ‌ ಕೌನ್ಸಿಲ್‌ನಲ್ಲಿ ಯಾವುದೇ ತೀರ್ಮಾನ‌ ತೆಗೆದುಕೊಳ್ಳುವಲ್ಲಿ ರಾಜ್ಯ ಸರ್ಕಾರಗಳೇ ಮಹತ್ವದ ಪಾತ್ರ ವಹಿಸುತ್ತವೆ. ರಾಜ್ಯ ಸರ್ಕಾರಕ್ಕೆ 3ನೇ ಎರಡು ಭಾಗದಷ್ಟು ಅಧಿಕಾರವಿದ್ದರೆ, ಕೇಂದ್ರ ಸರ್ಕಾರಕ್ಕೆ 3ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ರಾಜ್ಯ ‌ಸರ್ಕಾರಗಳ ನಿರ್ಣಯವೇ ಅಂತಿಮವಾಗಿರುತ್ತದೆ. ಹಾಗಿದ್ದರೂ ಸಿದ್ದರಾಮಯ್ಯ ಸರ್ಕಾರ ಬರೀ ಸುಳ್ಳು ಹೇಳುತ್ತ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಖಂಡಿಸಿದರು.

ಪ್ರಧಾನಮಂತ್ರಿ ಸಭೆ ಕರೆದರೂ ಸಿಎಂ ಬರುವುದಿಲ್ಲ, ನೀತಿ ಆಯೋಗದ ಸಭೆಗೂ ಹಾಜರಾಗುವುದಿಲ್ಲ. ಜಿಎಸ್‌ಟಿ ಕೌನ್ಸಿಲ್‌ಗೂ ಬರುವುದಿಲ್ಲ. ಮಂತ್ರಿಗಳನ್ನು ಕಳಿಸಿಕೊಡುವ ಸಿಎಂ ಸಿದ್ದರಾಮಯ್ಯ ಬರೀ ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಸುಳ್ಳು ಹೇಳಲು ಇವರಿಗೆ ಮಿತಿಯೇ ಇಲ್ಲ ಎಂದು ಜೋಶಿ ಆರೋಪಿಸಿದರು.

ಕರ್ನಾಟಕಕ್ಕಿಂತ ದೊಡ್ಡ ದೊಡ್ಡ ನಗರಗಳು ಮಹಾರಾಷ್ಟ್ರದಲ್ಲಿವೆ. ಮುಂಬೈ, ಪುಣೆ, ನಾಗ್ಪುರದಂತಹ ಬೃಹತ್‌ ವಾಣಿಜ್ಯ ನಗರಗಳಿವೆ. ಅಲ್ಲೆಲ್ಲೂ ಇಲ್ಲದ ಜಿಎಸ್‌ಟಿ ನೋಟಿಸ್‌ ನಮ್ಮ ರಾಜ್ಯದಲ್ಲಷ್ಟೇ ಏಕೆ? ಎಂದು ಪ್ರಶ್ನಿಸಿರುವ ಸಚಿವ ಜೋಶಿ, ಸಿಎಂ ಸಿದ್ದರಾಮಯ್ಯ ಸರ್ಕಾರ ಮಾಡುವುದೆಲ್ಲವನ್ನೂ ಮಾಡಿ ಈಗ ಕೇಂದ್ರದ ಮೇಲೆ ಹಾಕಲು ಹೊರಟಿದೆ ಎಂದು ಖಂಡಿಸಿದರು.

ಯುಪಿಐ ಅಭೂತಪೂರ್ವ ಯಶಸ್ಸು

ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್‌ ಎಕಾನಮಿ ಬಗ್ಗೆ ಪ್ರಸ್ತಾಪಿಸಿದಾಗ ಪಿ. ಚಿದಂಬರಂ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಅನೇಕರು ಟೀಕಿಸಿದ್ದರು. ಆದರೆ ಡಿಜಿಟಲ್‌ ವಹಿವಾಟು ಅಭೂತಪೂರ್ವ ಯಶಸ್ಸು ಸಾಧಿಸಿದೆ ಎಂದು ಹೇಳಿದರು.‌

ಈ ಸುದ್ದಿಯನ್ನೂ ಓದಿ | Karnataka escoms: ಮಾಹಿತಿ ತಂತ್ರಜ್ಞಾನ ಉನ್ನತೀಕರಣ: ಜುಲೈ 25ರಿಂದ ಎರಡು ದಿನ ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ

UPIಯಲ್ಲಿ ಒಟ್ಟು 650.26 ಮಿಲಿಯನ್‌ ವಹಿವಾಟು ನಡೆದಿದೆ. 7 ದೇಶಗಳಲ್ಲಿ ಇದು ಕವರ್‌ ಆಗುತ್ತಿದೆ. ಇನ್ನು ವೀಸಾದಲ್ಲಿ 639 ಮಿಲಿಯನ್‌ ವಹಿವಾಟು ಆಗಿದೆ. ಇದು 200 ದೇಶಗಳಲ್ಲಿದೆ. ಇಷ್ಟೊಂದು ಪ್ರಮಾಣದಲ್ಲಿ ಡಿಜಿಟಲ್‌ ಆರ್ಥಿಕತೆ ಯಶಸ್ವಿಯಾಗಿದೆ. ಆದರೆ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಯುಪಿಐ ವಹಿವಾಟಿಗೆ ಧಕ್ಕೆ ತರುವ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.