Tumkur News: ಕಾಲ್ತುಳಿತದಲ್ಲಿ ಮೃತಪಟ್ಟ ಮನೋಜ್ ಕುಟುಂಬಕ್ಕೆ ಮತ್ತೊಂದು ಆಘಾತ; ಮೊಮ್ಮಗನ ಅಗಲಿಕೆ ನೋವಲ್ಲಿ ಅಜ್ಜಿಯೂ ಸಾವು!
Tumkur News: ತುಮಕೂರಿನ ದೇವರಾಜ್ ಕುಂಟುಂಬಕ್ಕೆ ಆಘಾತದ ಮೇಲೆ ಆಘಾತ ಎದುರಾಗಿದೆ. ಕಾಲ್ತುಳಿತ ದುರಂತದಲ್ಲಿ ಮಗನನ್ನು ಕಳೆದುಕೊಂಡ ನೋವಲ್ಲಿದ್ದ ದೇವರಾಜ್ ಅವರ ತಾಯಿ ದೇವಿರಮ್ಮ ಕೂಡ ಮೃತಪಟ್ಟಿದ್ದಾರೆ. ಮನೋಜ್ ಸಾವಿನಿಂದ ತೀವ್ರವಾಗಿ ನೊಂದಿದ್ದ ಅಜ್ಜಿ ನಿಧನರಾಗಿದ್ದಾರೆ.


ತುಮಕೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟಿದ್ದ 11 ಮಂದಿ ಪೈಕಿ ತುಮಕೂರಿನ (Tumkur News) ವಿದ್ಯಾರ್ಥಿ ಮನೋಜ್ (Manoj) ಕೂಡ ಒಬ್ಬರು. ಮಗನ ಅಗಲಿಕೆಯ ನೋವಿನಲ್ಲಿದ್ದ ಕುಟುಂಬಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೂಡ ಸಾವನ್ನಪ್ಪಿರುವುದು ಕಂಡುಬಂದಿದೆ. ತುಮಕೂರಿನ ದೇವರಾಜ್ ಕುಂಟುಂಬಕ್ಕೆ ಆಘಾತದ ಮೇಲೆ ಆಘಾತ ಎದುರಾಗಿದೆ. ಕಾಲ್ತುಳಿತ ದುರಂತದಲ್ಲಿ ಮೊಮ್ಮಗನನ್ನು ಕಳೆದುಕೊಂಡ ನೋವಲ್ಲಿದ್ದ ದೇವರಾಜ್ ಅವರ ತಾಯಿ ದೇವಿರಮ್ಮ ಕೂಡ ಮೃತಪಟ್ಟಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ದೇವಿರಮ್ಮ ಮೊಮ್ಮಗ ಮನೋಜ್ ಸಾವಿನ ಸುದ್ದಿ ತಿಳಿದಾಗಿನಿಂದ ಊಟವನ್ನೇ ಬಿಟ್ಟಿದ್ದರು. ಯಾರು ಎಷ್ಟೇ ಹೇಳಿದರೂ ಊಟ ಮಾಡುತ್ತಿರಲಿಲ್ಲ. ಮನೋಜ್ ಸಾವಿನಿಂದ ತೀವ್ರವಾಗಿ ನೊಂದಿದ್ದರು. ಇದರಿಂದ ಇನ್ನಷ್ಟು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ದೇವೀರಮ್ಮ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮತ್ತೊಂದೆಡೇ ಮನೋಜ್ ತಾಯಿ ಕೂಡ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಮನೋಜ್ ಕುಟುಂಬಕ್ಕೆ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರ
ತುಮಕೂರು: ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ (Bengaluru stampede) ಮೃತಪಟ್ಟಿದ್ದ ಕುಣಿಗಲ್ ತಾಲೂಕಿನ ನಾಗಸಂದ್ರದ ವಿದ್ಯಾರ್ಥಿ ಮನೋಜ್ ಕುಮಾರ್ ಕುಟುಂಬಕ್ಕೆ ರಾಜ್ಯ ಸರಕಾರದ ವತಿಯಿಂದ 25 ಲಕ್ಷ ಪರಿಹಾರ ನೀಡಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನೋಜ್ ತಂದೆ ದೇವರಾಜು ಅವರಿಗೆ ಪರಿಹಾರದ ಚೆಕ್ ಅನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಹಸ್ತಾಂತರಿಸಿದರು.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಿಂದ ತಕ್ಷಣ 25 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರದಿಂದ ಆದೇಶ ಬಂದಿದ್ದು, ಅದರಂತೆ ನಾವು ಪರಿಹಾರದ ಚೆಕ್ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದ್ದಾರೆ.
ಮನೋಜ್ ತಂದೆ ದೇವರಾಜು ಅವರು ಮಾತನಾಡಿ, ಸರ್ಕಾರ ಹಣ ನೀಡಿದೆ, ಆದರೆ ನಮ್ಮ ಮಗ ಬದುಕಿ ಬರಲಿಲ್ಲ. ನಮಗೆ ಆದಂತೆ ಮುಂದೆ ಬೇರೆ ಯಾರಿಗೂ ಈ ರೀತಿ ಆಗುವುದು ಬೇಡ. ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ನನ್ನ ಮಗ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಇನ್ನು ಎರಡು ವರ್ಷ ಹೋಗಿದ್ದರೆ ಉತ್ತಮ ಉದ್ಯೋಗ ಸಂಪಾದಿಸಿ ಇದಕ್ಕಿಂತ ಎರಡರಷ್ಟು ಸಂಪಾದನೆ ಮಾಡುತ್ತಿದ್ದ. ಪರಿಹಾರದ ಹಣವನ್ನು ಅವನ ತಂಗಿ ಹಾಗೂ ತಾಯಿ ಖಾತೆಗೆ ಹಾಕುತ್ತೇವೆ. ಅವರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ. ಮಗಳಿದ್ದಾಳೆ, ಅವಳಿಗಾದರೂ ಉತ್ತಮ ಭವಿಷ್ಯ ರೂಪಿಸಿ ಕೊಡುತ್ತೇನೆ ಎಂದು ತಮ್ಮ ಮನದ ದುಖಃವನ್ನು ತೋಡಿಕೊಂಡರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಹಾಗೂ ಕುಣಿಗಲ್ ತಹಸೀಲ್ದಾರ್ ರಶ್ಮಿ ಇದ್ದರು.
ಈ ಸುದ್ದಿಯನ್ನೂ ಓದಿ | Bengaluru Stampede: 2 ಗಂಟೆ ಕಾಲ ನನಗೆ ಕಾಲ್ತುಳಿತದ ಬಗ್ಗೆ ಗೊತ್ತೇ ಇರಲಿಲ್ಲ, ಪೊಲೀಸ್ ಆಯುಕ್ತರಿಂದ ಕರ್ತವ್ಯಲೋಪ: ಸಿಎಂ ಸಿದ್ದರಾಮಯ್ಯ