ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Student Death: ವಿಜಯಪುರದಲ್ಲಿ ಘೋರ ಘಟನೆ, 9ನೇ ತರಗತಿಯ ಹುಡುಗರಿಂದ ಹಲ್ಲೆ, 5ನೇ ತರಗತಿ ಬಾಲಕ ಸಾವು

Vijayapura News: 5 ದಿನಗಳ ಹಿಂದೆ ಅನ್ಸ್ ಹಾಕಿಕೊಂಡಿದ್ದ ಅದೊಂದು ವಾಚ್ ಕಾರಣಕ್ಕೆ ಶಾಲೆಯಲ್ಲಿ ಗಲಾಟೆ ಆಗಿತ್ತು. 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಅನ್ಸ್ ಮೇಲೆ ಹಲ್ಲೆ ಮಾಡಿ ವಾಚ್ ಕಿತ್ತುಕೊಂಡಿದ್ದರು. ಆ ಮೂವರು ವಿದ್ಯಾರ್ಥಿಗಳು ಅನ್ಸ್​ಗೆ ಯದ್ವಾತದ್ವಾ ಹೊಡೆದ ಕಾರಣ ಆತ ಅಸ್ವಸ್ಥನಾಗಿದ್ದ.

ವಿಜಯಪುರದಲ್ಲಿ 9ನೇ ಕ್ಲಾಸ್ ಹುಡುಗರಿಂದ ಹಲ್ಲೆ, 5ನೇ ತರಗತಿ ಬಾಲಕ ಸಾವು

ಮೃತ ಅನ್ಸ್

ಹರೀಶ್‌ ಕೇರ ಹರೀಶ್‌ ಕೇರ Aug 7, 2025 1:38 PM

ವಿಜಯಪುರ: ವಿಜಯಪುರದಲ್ಲಿ (Vijayapur News) ನಂಬಲಸಾಧ್ಯವಾದ ಅಮಾನುಷ ಘಟನೆಯೊಂದು ನಡೆದಿದೆ. ವಾಚ್ ವಿಚಾರವಾಗಿ ಗಲಾಟೆ ನಡೆದು 9ನೇ ತರಗತಿ ವಿದ್ಯಾರ್ಥಿಗಳು 5ನೇ ತರಗತಿಯ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ (Assault Case) ವಿದ್ಯಾರ್ಥಿ (Student Death) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ವಿಜಯಪುರ ನಗರದ ಹೊರಭಾಗದ ಯೋಗಾಪುರದಲ್ಲಿ ಘಟನೆ ನಡೆದಿದೆ. ಬಿಹಾರ ಮೂಲದ ಸುನೀಲ್ ಹಾಗೂ ಶೃತಿ ದಂಪತಿಯ ಪುತ್ರ ಅನ್ಸ್‌ ಮೃತ ಬಾಲಕ.

ಸುನೀಲ್​ ಅವರು ನಗರದಲ್ಲಿ ಪಾನಿಪುರಿ ಮಾರಾಟ ಮಾಡಿ ಜೀವನ ಮಾಡುತ್ತಿದ್ದಾರೆ. ತಮ್ಮ ಮಗ ಅನ್ಸ್‌ನನ್ನು ಶ್ರೀ ಸತ್ಯಸಾಯಿ ಬಾಬಾ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಸೇರಿಸಿದ್ದರು. ಕಳೆದ 5 ದಿನಗಳ ಹಿಂದೆ ಅನ್ಸ್ ಹಾಕಿಕೊಂಡಿದ್ದ ಅದೊಂದು ವಾಚ್ ಕಾರಣಕ್ಕೆ ಶಾಲೆಯಲ್ಲಿ ಗಲಾಟೆ ಆಗಿತ್ತು. 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಅನ್ಸ್ ಮೇಲೆ ಹಲ್ಲೆ ಮಾಡಿ ವಾಚ್ ಕಿತ್ತುಕೊಂಡಿದ್ದರು. ಆ ಮೂವರು ವಿದ್ಯಾರ್ಥಿಗಳು ಅನ್ಸ್​ಗೆ ಯದ್ವಾತದ್ವಾ ಹೊಡೆದ ಕಾರಣ ಆತ ಅಸ್ವಸ್ಥನಾಗಿದ್ದ.

ಪೋಷಕರು ಮಗ ಅನ್ಸ್​​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ 5 ದಿನಗಳ ಬಳಿಕ ಸಾವನ್ನಪ್ಪಿದ್ದಾನೆ. ಹಲ್ಲೆ ವಿಚಾರ ಶಾಲಾ ಮುಖ್ಯಸ್ಥರಿಗೆ ತಿಳಿಸಿದ್ದರೂ ಸ್ಪಂದಿಸಿರಲಿಲ್ಲ. ನಿಮ್ಮ ಮಗ ಏನಾದರೂ ಸತ್ತಿದ್ದಾನಾ ಎಂದು ವಿದ್ಯಾರ್ಥಿಯ ಪೋಷಕರಿಗೆ ಅವರು ಬೆದರಿಕೆ ಹಾಕಿದ್ದು, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣವೆಂದು ಪೋಷಕರು, ಸ್ಥಳೀಯರು ಆರೋಪಿಸಿದ್ದಾರೆ. ಬಾಲಕನ ಶವವನ್ನು ಶಾಲೆಯ ಗೇಟ್ ಬಳಿ ಇಟ್ಟು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯವರು ಹಾಗೂ ಮಂಡಳಿ ಅಧ್ಯಕ್ಷರು ಶಾಲೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.

ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತ ಮೃತ ಬಾಲಕನ ಪೋಷಕರು ಹಾಗೂ ಸ್ಥಳಿಯರೊಂದಿಗೆ ಮಾತುಕತೆ ನಡೆಸಿದರು. ಘಟನೆ ಕುರಿತು ದೂರು ಪಡೆದು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆಂದು ಭರವಸೆ ನೀಡಿದರು. ಪ್ರತಿಭಟನೆಯನ್ನು ಕೈಬಿಟ್ಟು ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಿ ಎಂದು ಹೇಳಿದರು.

ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಕಾರಣ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲು ಪೋಷಕರು ಹಾಗೂ ಸ್ಥಳೀಯರು ಸಹಕಾರ ನೀಡಿದರು. ಪ್ರತಿಭಟನೆ ಕೈಬಿಟ್ಟು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡುವುದಾಗಿ ಮಾಹಿತಿ ನೀಡಿದ್ದಾರೆ. ಸ್ಥಳಿಯರು ಮಾತ್ರ ಈ ಘಟನೆಗೆ ಶಾಲೆಯ ಮುಖ್ಯಸ್ಥರೇ ಕಾರಣವೆಂದು ತೀವ್ರ ಅಸಮಾಧಾನ ಹೊರ ಹಾಕಿದ್ಧಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ಇದನ್ನೂ ಓದಿ: Viral Video: ವರದಕ್ಷಿಣೆಗಾಗಿ ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ; ವೈರಲ್‌ ಆಯ್ತು ಪತಿಯ ಕ್ರೌರ್ಯ