Gen Z Protest: ನೇಪಾಳದಲ್ಲಿ ನಿಲ್ಲದ ಅರಾಜಕತೆ; ಭಾರತೀಯರನ್ನು ಕರೆತರಲು ವಿಶೇಷ ವಿಮಾನ ನಿಯೋಜನೆ
ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ಸೋಮವಾರ ಆರಂಭವಾದ ಜೆನ್ ಝಿ ಪ್ರತಿಭಟನೆಗಳು ತೀವ್ರಗೊಂಡಿದೆ. ಮಂಗಳವಾರದ ವೇಳೆಗೆ ಈ ಪ್ರತಿಭಟನೆ ಹಿಂಸಾತ್ಮಕವಾಗಿ ಬದಲಾಯಿತು, ರಾಜಧಾನಿ ಕಠ್ಮಂಡು ಸೇರಿದಂತೆ ದೇಶದಾದ್ಯಂತ ವ್ಯಾಪಕ ವಿಧ್ವಂಸಕ್ಕೆ ಕಾರಣವಾಗಿದೆ.

-

ಕಠ್ಮಂಡು: ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ನಿಷೇಧ ಮತ್ತು (Gen Z Protest) ಭ್ರಷ್ಟಾಚಾರದ ವಿರುದ್ಧ ಸೋಮವಾರ ಆರಂಭವಾದ ಜೆನ್ ಝಿ ಪ್ರತಿಭಟನೆಗಳು ತೀವ್ರಗೊಂಡಿದೆ. ಮಂಗಳವಾರದ ವೇಳೆಗೆ ಈ ಪ್ರತಿಭಟನೆ ಹಿಂಸಾತ್ಮಕವಾಗಿ ಬದಲಾಯಿತು, ರಾಜಧಾನಿ ಕಠ್ಮಂಡು ಸೇರಿದಂತೆ ದೇಶದಾದ್ಯಂತ ವ್ಯಾಪಕ ವಿಧ್ವಂಸಕ್ಕೆ ಕಾರಣವಾಗಿದೆ. ಈ ವರೆಗೂ 20 ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಸಾವಿರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ನವದೆಹಲಿ ವಿಶೇಷ ವಿಮಾನಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ .
ಮಂಗಳವಾರ ರಾತ್ರಿ ಓಲಿ ರಾಜೀನಾಮೆ ಬಳಿಕವೂ ದೇಶದಲ್ಲಿ ಹಿಂಸಾಚಾರ ಮುಂದುವರಿದಿದೆ. ವಿಮಾನ ನಿಲ್ದಾಣದಲ್ಲಿ 400 ಕ್ಕೂ ಹೆಚ್ಚು ಭಾರತೀಯರು ಪ್ರಸ್ತುತ ಸಿಲುಕಿಕೊಂಡಿದ್ದಾರೆ. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ನೇಪಾಳಿ ಸೇನೆಯೊಂದಿಗೆ ಸಂಪರ್ಕದಲ್ಲಿದ್ದು, ವಿಮಾನಗಳ ಲ್ಯಾಂಡಿಂಗ್ ಅನ್ನು ಸಂಘಟಿಸಲು ಮತ್ತು ನಾಗರಿಕರಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ನವದೆಹಲಿಯಿಂದ ಎರಡು ಭಾರತೀಯ ವಾಯುಪಡೆಯ ವಿಮಾನಗಳನ್ನು ಕಳುಹಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಂಗಳವಾರ, ಪ್ರತಿಭಟನಾಕಾರರು ಸಂಸತ್ತು, ಅಧ್ಯಕ್ಷರ ಕಚೇರಿ, ಪ್ರಧಾನ ಮಂತ್ರಿಯವರ ನಿವಾಸ, ರಾಜಕೀಯ ಪಕ್ಷದ ಕಚೇರಿಗಳು ಮತ್ತು ಹಿರಿಯ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗಲಭೆಯಿಂದಾಗಿ ಮುಚ್ಚಲಾಗಿದ್ದು, ಇಂಡಿಗೋ, ಏರ್ ಇಂಡಿಯಾ ಮತ್ತು ನೇಪಾಳ ಏರ್ಲೈನ್ಸ್ನ ದೆಹಲಿ-ಕಾಠ್ಮಂಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Nepal Riots: ನೇಪಾಳದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮ: ಸಿಎಂ
1,751 ಕಿಮೀ ಉದ್ದದ ಭಾರತ-ನೇಪಾಳ ಗಡಿಯಲ್ಲಿ ಸಶಸ್ತ್ರ ಸೀಮಾ ಬಲ (SSB) ಸಿಬ್ಬಂದಿಯನ್ನು ಹೈ ಅಲರ್ಟ್ ಘೋಷಿಸಲಾಗಿದೆ. ಉತ್ತರ ಪ್ರದೇಶದ ಬಲರಾಂಪುರದಲ್ಲಿ 22 SSB ಚೌಕಿಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಡ್ರೋನ್ ಕ್ಯಾಮೆರಾಗಳಿಂದ ನಿಗಾವಹಿಸಲಾಗುತ್ತಿದೆ. ಲಖಿಂಪುರ್ ಖೇರಿ, ಬಹ್ರೈಚ್ ಮತ್ತು ಮಹಾರಾಜ್ಗಂಜ್ನಲ್ಲಿ ಗಸ್ತು ತೀವ್ರಗೊಳಿಸಲಾಗಿದೆ. ಮಹಾರಾಜ್ಗಂಜ್ನ ಸೋನೌಲಿ ಗಡಿಯಲ್ಲಿ ಶ್ವಾನ ದಳದೊಂದಿಗೆ ವಿಶೇಷ ತಪಾಸಣೆ ನಡೆಯುತ್ತಿದೆ. ‘ಆಪರೇಷನ್ ಕವಚ್’ ಸಮಿತಿಗಳು ಗಡಿಯಾಚೆಗಿನ ಚಲನವಲನಗಳ ಮೇಲೆ ತೀವ್ರ ನಿಗಾವಹಿಸುತ್ತಿವೆ.