ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಈ ಸಾವುಗಳು ಅನಿವಾರ್ಯವಾ? ಅಪರಿಹಾರ್ಯವಾ?

ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಿಂದ ಪ್ರಾರಂಭವಾದ ಸಾವಿನ ಸೂತಕವು ಪರಿಹಾರ ವಾಗುವು ದರೊಳಗೆ, ಬೆಂಗಳೂರಿನ ಕಾಲ್ತುಳಿತದಿಂದುಂಟಾದ ಸಾವುಗಳ ನೋವು ಮನಸ್ಸಿನಿಂದ ಮಾಸುವುದ ರೊಳಗೆ ಅಹಮದಾಬಾದಿನಲ್ಲಿ ನಡೆದ ಘೋರ ವಿಮಾನದುರಂತವು ನಮ್ಮ ಗಾಯದ ಮೇಲೆ ಬರೆ ಎಳೆದಿದೆ.

ಈ ಸಾವುಗಳು ಅನಿವಾರ್ಯವಾ? ಅಪರಿಹಾರ್ಯವಾ?

ವಿದ್ಯಮಾನ

vinayakvbhat@autoaxle.com

ಹಿಂದಿನ ಗುರುವಾರ, ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನವು, ಅಹಮದಾಬಾದ್ ನ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿ ಬೆಂಕಿಯುಂಡೆಯಾಗಿ ಸ್ಫೋಟಗೊಂಡಿತು.

ಇದು ಭಾರತದ ಅತ್ಯಂತ ಭೀಕರ ವಿಮಾನ ದುರಂತ ಎನ್ನಲಾಗುತ್ತದೆ. ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಪೈಕಿ ಒಬ್ಬರು ಮಾತ್ರವೇ ಪವಾಡಸದೃಶ ರೀತಿಯಲ್ಲಿ ಬದುಕಿದರೆ, ಮಿಕ್ಕವರು ಕುಡುತೆ ನೀರನ್ನು ಕುಡಿಯಲೂ ಅವಕಾಶವಾಗದೆ ಅಗ್ನಿಗೆ ಆಹುತಿಯಾಗಿ ಬಿಟ್ಟರು. ಸತ್ತವರಲ್ಲಿ 11 ಮಕ್ಕಳು ಮತ್ತು ಇಬ್ಬರು ಶಿಶುಗಳು ಸೇರಿದ್ದಾರೆ ಎಂದು ತಿಳಿದಾಗ ಮನಸ್ಸಿಗೆ ಮತ್ತೊಂದಷ್ಟು ನೋವು. ವಿಮಾನ ನಿಲ್ದಾಣದ ಸಮೀಪವಿರುವ ಜನನಿಬಿಡ ವಸತಿ ಪ್ರದೇಶದ ಮೇಲೆ ಹಾರಬೇಕಿದ್ದ ವಿಮಾನವು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಾಗ, ಎಂದಿನಂತೆ ನೆಮ್ಮದಿಯಿಂದ ಮಧ್ಯಾಹ್ನದ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದನ್ನು ಕೇಳುವಾಗ ಮನಸ್ಸು ಮರುಗುತ್ತದೆ.

ಈ ದುರಂತದಲ್ಲಿ ಬಲಿಯಾದವರ ಕುಟುಂಬಿಕರು ಶುಕ್ರವಾರ ಬೆಳಗಾಗುವಷ್ಟರಲ್ಲಿ ಅಹಮದಾ ಬಾದ್‌ ನ ಮುಖ್ಯ ಆಸ್ಪತ್ರೆಯ ಮುಂದೆ ಸಾಲುಗಟ್ಟಿ ನಿಂತಿದ್ದರು. ಅವರೆಲ್ಲಾ ಒಂದು ದಿನ ಮೊದಲು ನೋಡಿದ ಪ್ರೀತಿಪಾತ್ರರ ಮೃತ ದೇಹಗಳನ್ನು ಗುರುತಿಸುವ ಸಲುವಾಗಿ, ತಮ್ಮವರು ಬದುಕಿರಬಹು ದೆಂಬ ಸಣ್ಣ ಆಸೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಡಿಎನ್‌ಎ ಮಾದರಿಗಳನ್ನು ನೀಡಲು ಸಿದ್ಧರಾಗಿ ನಿಂತಿದ್ದರು.

ಇದನ್ನೂ ಓದಿ: Vinayak V Bhat Column: ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ಎಲ್ಲರೂ ಸುಟ್ಟು ಭಸ್ಮವಾಗಿರುವುದನ್ನು ನೋಡಿಯೂ, ‘ನಮ್ಮವರು ಬದುಕಿದ್ದಾರೇನೋ...’ ಎನ್ನುವ ಆಸೆ ಅಥವಾ ಬದುಕಿರಲಿ ಎನ್ನುವ ಆಶಯ ಅವರದ್ದಾಗಿರಬೇಕು, ಪಾಪ! ಮೃತರ ಡಿಎನ್‌ಎ ಮಾದರಿಯ ಪರೀಕ್ಷೆಗಳನ್ನು ಪೂರ್ಣಗೊಳಿಸಿ ದೇಹವನ್ನು ಸಂಬಂಧಿಕರಿಗೆ ತಲುಪಿಸಲು ಅಲ್ಲಿನ ವೈದ್ಯರುಗಳು ಕಳೆದ 3-4 ದಿನಗಳಿಂದ ಹೆಣಗುತ್ತಿದ್ದಾರೆ.

ಹೆಚ್ಚಿನ ಶವಗಳು ಸುಟ್ಟು ಕರಕಲಾಗಿ ಹೋಗಿರುವುದರಿಂದ, ಅವನ್ನು ಗುರುತಿಸುವ ಪ್ರಕ್ರಿಯೆಯು ಅತ್ಯಂತ ಸವಾಲಿನದ್ದಾಗಿದೆ. ಡಿಎನ್‌ಎ ಪರೀಕ್ಷೆಗಳನ್ನು ಸಣ್ಣ ಬ್ಯಾಚ್‌ಗಳಲ್ಲಿ ನಡೆಸಲಾಗುತ್ತಿರುವು ದರಿಂದ ಸಮಯವೂ ಹಿಡಿಯುತ್ತಿದೆ. ಪ್ರತಿ ಕುಟುಂಬಕ್ಕೂ ಸರಿಯಾದ ದೇಹವೇ ಸಿಗುವುದನ್ನು ಖಾತ್ರಿಪಡಿಸಿಕೊಳ್ಳಲು ಗಾಂಧಿನಗರದ ವಿಧಿವಿಜ್ಞಾನ ನಿರ್ದೇಶನಾಲಯ ಹಗಲು-ರಾತ್ರಿಯೆನ್ನದೆ ಶ್ರಮಿಸುತ್ತಿದೆ.

ಆದರೆ, ವಿಪತ್ತಿನ ತೀವ್ರತೆಯನ್ನು ಗಮನಿಸಿದಾಗ, ಸ್ಫೋಟದಿಂದಾದ ಅತೀವ ತಾಪಮಾನದಿಂದಾಗಿ ಹಲವು ಪ್ರಯಾಣಿಕರ ಡಿಎನ್‌ಎ ಹಾನಿಗೊಳಗಾಗಿರುವ ಸಾಧ್ಯತೆಯೂ ಇದೆಯಂತೆ. ಸುಟ್ಟ ದೇಹ ಗಳಿಂದ ‘ದಂತ’ ದಾಖಲೆಗಳನ್ನು ಸಂಗ್ರಹಿಸಲು ವೈದ್ಯರ ತಂಡವು ಕಳೆದೆರಡು ದಿನಗಳಿಂದ ಯತ್ನಿಸು ತ್ತಿದೆ. ಅದು ಡಿಎನ್‌ಎ ಆಧಾರದಲ್ಲಿ ಶವವನ್ನು ಗುರುತಿಸಲು ಉಳಿದಿರುವ ಏಕೈಕ ಮಾರ್ಗವಾಗಿದೆ.

ಇದುವರೆಗೆ 200ಕ್ಕೂ ಹೆಚ್ಚು ಶವಗಳನ್ನು ಗುರುತಿಸಿ ಸಂಬಂಧಿಸಿದವರಿಗೆ ನೀಡಲಾಗಿದೆ ಎಂಬ ಮಾಹಿತಿಯಿದೆ. ಸದರಿ ಅಪಘಾತದಲ್ಲಿ ಸಂಬಂಧಿಕರನ್ನು ಕಳೆದುಕೊಂಡು ಅದಾಗಲೇ ಆಘಾತ ದಲ್ಲಿರುವ ಕುಟುಂಬಿಕರು, ಮೃತದೇಹಗಳಿಗಾಗಿ ಕಾಯುವ ನೋವನ್ನೂ ಅನುಭವಿಸುವಂತಾಯಿತು.

ಹೀಗೆ ಶವಕ್ಕಾಗಿ ಆಸ್ಪತ್ರೆಯ ಬಾಗಿಲಿನಲ್ಲಿ ನಿಂತು ಹುಡುಕಾಡುವುದನ್ನು, ಗುರುತು ಸಿಗುತ್ತಿದ್ದಂತೆ ಆ ಕಳೇಬರಗಳನ್ನು ದುಃ ಖತಪ್ತ ಕುಟುಂಬಿಕರು ಒಯ್ಯುವುದನ್ನು ನೋಡುವುದು ವೈರಿಗಳಿಗೂ ಬರಬಾರದ ಪರಿಸ್ಥಿತಿ. ಕಳೆದ 8 ದಿನಗಳಿಂದ ಇಂಥದೊಂದು ಕಸರತ್ತಿನಲ್ಲಿ ತೊಡಗಿರುವ ಕುಟುಂಬಿ ಕರ ಮನಸ್ಥಿತಿಯನ್ನೂ, ಅವರ ಮನೆಯ ವಾತಾವರಣವನ್ನೂ ಒಮ್ಮೆ ಕಲ್ಪಿಸಿಕೊಳ್ಳಿ. ಸಿಕ್ಕಿದ ಶವಗಳೆಲ್ಲವೂ ಮೂಲರೂಪದ ಯಾವ ಚಿಹ್ನೆಯನ್ನೂ ತೋರದೇ, ಸುಟ್ಟು ಕರಕಲಾಗಿ ಒಂದೇ ತರಹ ಕಾಣುತ್ತಿದ್ದರೂ, ಸಂಬಂಧಿಕರು ಮಾತ್ರ ‘ಇದು ನಮ್ಮದಿರಬಹುದು, ಅದು ನಮ್ಮದಿರಬಹುದು’ ಎಂದು ತಮ್ಮವರ ಶವಕ್ಕಾಗಿ ಹುಡುಕಾಡುವುದನ್ನು ನೆನೆದರೇ ಮನಸ್ಸಿಗೆ ವೇದನೆಯಾಗುತ್ತದೆ.

7 R

ಹಾಗಂತ, ಸುಮ್ಮನೆ ಬಿಟ್ಟುಹೋಗಲೂ ಆಗದು; ತಮ್ಮವರ ಶವ ಸಿಕ್ಕಿ, ಅದಕ್ಕೆ ತಂತಮ್ಮ ನಂಬಿಕೆ ಗಳನ್ವಯ ಉತ್ತರಕ್ರಿಯೆಗಳನ್ನಾದರೂ ಮಾಡಬೇಕು ಎನ್ನುವ ಭಾವನೆ ಯಾರಿಗಾದರೂ ಇರುತ್ತದೆ (ಕರೋನಾದ ಮೊದಲ ಅಲೆಯಲ್ಲಿ ಸಾವಿಗೀಡಾದವರ ಕಳೇಬರವನ್ನೂ ಸಂಬಂಧಿಕರಿಗೆ ಕೊಡದೆಯೇ ಆಸ್ಪತ್ರೆಯವರೇ ಮಣ್ಣು ಮಾಡಿದ್ದನ್ನು ನಾವು ಕಂಡಿದ್ದೇವೆ).

ಕುಟುಂಬಸ್ಥರ ದುಃಖ ಹೆಚ್ಚಾಗುತ್ತದೆ ಎಂಬ ಕಾರಣಕ್ಕೋ ಏನೋ, ‘ಆದಷ್ಟು ಬೇಗ ಮೃತದೇಹದ ಅಂತ್ಯಕ್ರಿಯೆ ಮಾಡಿಬಿಡಬೇಕು’ ಎಂದು ನಮ್ಮಲ್ಲಿ ಹೇಳುವುದಿದೆ. ‘ಬೆಂಕಿಯಲ್ಲೇ ಬೆಂದು ಕರಕಲಾದ ಶರೀರಕ್ಕೆ ಇನ್ನೆಂಥಾ ಅಗ್ನಿಸ್ಪರ್ಶ ಶಾಸ್ತ್ರದ ಅಗತ್ಯವಿದೆ?’ ಎಂದು ಕೆಲವರಿಗೆ ಅನ್ನಿಸಬಹುದು.

ಆದರೆ, ಮನುಷ್ಯರಾದವರಿಗೆ ‘ಕರ್ತವ್ಯಪ್ರಜ್ಞೆ’ ಎನ್ನುವುದೊಂದು ಇರುತ್ತದಲ್ಲಾ, ಅದಕ್ಕಾಗಿ ಆ ಕುಟುಂಬಗಳು ಕಾಯುತ್ತಿರುವುದು. “ಟೇಕ್-ಆಫ್ ಆದ ನಿಮಿಷಗಳಲ್ಲಿ ದೊಡ್ಡ ಶಬ್ದವಾಯಿತು, ನೋಡನೋಡುವುದರೊಳಗಾಗಿ ಇವೆಲ್ಲಾ ಆಯಿತು" ಎಂದು ಬದುಕುಳಿದ ವಿಶ್ವಾಸ್ ಕುಮಾರ್ ರಮೇಶ್ ಆಸ್ಪತ್ರೆಯ ಹಾಸಿಗೆಯಲ್ಲಿದ್ದೇ ಹೇಳಿದ್ದಾರೆ.

“ನಾನು ಎದ್ದಾಗ, ಸುತ್ತಲೂ ಶವಗಳಿದ್ದವು. ನನಗೆ ಭಯವಾಗಿ ಎದ್ದು ಓಡಿದೆ. ನನ್ನ ಸುತ್ತಲೂ ವಿಮಾನದ ತುಣುಕುಗಳಿದ್ದವು, ಯಾರೋ ನನ್ನನ್ನು ಆಂಬುಲೆನ್ಸ್‌ನಲ್ಲಿ ಹಾಕಿ ಆಸ್ಪತ್ರೆಗೆ ಕರೆದೊ ಯ್ದರು. ನನ್ನ ಸೋದರ ಅಜಯ್ ಕೂಡ ವಿಮಾನದಲ್ಲಿ ಬೇರೆ ಸಾಲಿನಲ್ಲಿ ಕುಳಿತು ಪಯಣಿಸುತ್ತಿದ್ದ. ನನಗೆ ಆತ ಮತ್ತೆ ಸಿಗಲಿಕ್ಕಿಲ್ಲ" ಎನ್ನುತ್ತಿದ್ದರು ಅವರು. ಅಪಘಾತದ ಭೀಕರತೆಯನ್ನು ಕಂಡಿದ್ದ ಅವರಿಗೆ ತಮ್ಮ ಸೋದರ ಬದುಕುಳಿದಿರಲಿಕ್ಕಿಲ್ಲ ಎಂಬುದು ಮನವರಿಕೆ ಯಾಗಿಹೋಗಿತ್ತು.

ರಮೇಶ್ ಈಗ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದು, ಅವರೊಂದಿಗೆ ಪಯಣಿಸುತ್ತಿದ್ದ ಸೋದರ ಅಜಯ್‌ರ ಶವವನ್ನು ಬುಧವಾರ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ. ಈಗ ರಮೇಶ್ ಅವರ ಪರಿಸ್ಥಿತಿ ನೋಡಿ, ಅವರ ಸಂಬಂಧಿಕರ ಅಳಲು ನೋಡಿ! ರಮೇಶ್ ಪವಾಡಸದೃಶವಾಗಿ ಬದುಕಿ ಬಂದಿದ್ದಕ್ಕೆ ಸಂತೋಷಪಡಬೇಕೋ ಅಥವಾ ಅಜಯ್ ಉಳಿಯದಿದ್ದುದಕ್ಕೆ ಅಳಬೇಕೋ? ಉಭಯ ಸಂಕಟ ಅಂದರೆ ಇದೇ ಇರಬೇಕು. “ನಾನೂ ಬದುಕುಳಿಯಬಾರದಿತ್ತು" ಎಂದು ರಮೇಶ್ ಹೇಳಿರು ವುದು ಈ ನೋವಿನಲ್ಲೇ ಇರಬೇಕು.

ಇನ್ನು, ಹಾಸ್ಟೆಲ್‌ನಲ್ಲಿ ಮಧ್ಯಾಹ್ನದ ಊಟ ಸವಿಯುತ್ತಿದ್ದ, ಮುಂದೆ ತಮ್ಮ ವೃತ್ತಿಜೀವನದಲ್ಲಿ ಅನೇಕ ರೋಗಿಗಳ ಪ್ರಾಣ ರಕ್ಷಿಸುವ ಸಂಕಲ್ಪ ತೊಟ್ಟು ತಮ್ಮ ಪಾಡಿಗೆ ಕಾಲೇಜಿನಲ್ಲಿ ಓದಿಕೊಂಡಿದ್ದ ಭಾವಿ ವೈದ್ಯರ ಸಾವಿನ ಬಗ್ಗೆ, ಅವರ ಕುಟುಂಬಿಕರ ನೋವಿನ ಬಗ್ಗೆ ಏನನ್ನುವುದು? ಉಪಾಹಾರಗೃಹದ ಮೇಜಿನ ಮೇಲೆ ಊಟದಿಂದ ತುಂಬಿದ ತಟ್ಟೆಗಳನ್ನು ಮಾತ್ರ ನೋಡುವಾಗ, ‘ಊಟ ಮಾಡುತ್ತಿದ್ದರೆ ಅದು ಮುಗಿಯುವವರೆಗೆ ಯಮಧರ್ಮರಾಜ ಕಾಯುತ್ತಾನಂತೆ’ ಎನ್ನುವ ನಮ್ಮ ನಂಬಿಕೆಯೂ ಸುಳ್ಳಾದಂತಾಯಿತು.

ಇನ್ನು, ಬೆಂಗಳೂರಿನ ಕಾಲ್ತುಳಿತದ ಘಟನೆಯನ್ನು ನೋಡಿದರೆ, ತುಳಿದವರೂ ತುಳಿಸಿಕೊಂಡು ಸತ್ತವರೂ ಅಭಿಮಾನಿಗಳೇ; KSCA ಯವರದ್ದು ತಪ್ಪು, ಹುಚ್ಚು ಅಭಿಮಾನಿಗಳದ್ದೇ ತಪ್ಪು, ಅದೂ ಸಾಲದಿದ್ದರೆ ಪೊಲೀಸರದ್ದು ತಪ್ಪು! ವಿಪಕ್ಷದವರನ್ನು ಕೇಳಿದರೆ ಸರಕಾರದ್ದೇ ತಪ್ಪು. ಒಟ್ಟಿನಲ್ಲಿ ತಪ್ಪು ಯಾರದ್ದು ಅಂದರೆ, ‘ಆರ್‌ಸಿಬಿ ತಂಡ ಕಪ್ ಗೆದ್ದಿದ್ದೇ ಈ ಅವಘಡಕ್ಕೆ ಮೂಲ ಕಾರಣ’ ಎನ್ನುವಂತಾಯ್ತು.

ಒಂದು ಮಾತು ತಿಳಿದುಕೊಳ್ಳಬೇಕು- ಯಾವ ಕಾಲ್ತುಳಿತವೂ ಉದ್ದೇಶಪೂರ್ವಕವಾಗಿ ಆಗುವುದಿಲ್ಲ. ನೆರೆನೀರು ತನ್ನ ಮೂಗಿನವರೆಗೆ ಬಂದಾಗ, ತನ್ನನ್ನು ತಾನು ಬಚಾವ್ ಮಾಡಿಕೊಳ್ಳುವುದಕ್ಕಾಗಿ, ತಲೆಯ ಮೇಲೆ ಹೊತ್ತುಕೊಂಡಿದ್ದ ತನ್ನ ಮರಿಯನ್ನೇ ತನ್ನ ಕಾಲಡಿಗೆ ಹಾಕಿ, ಸ್ವಲ್ಪ ಹೊತ್ತಾದರೂ ತಾನು ಬದುಕಬಹುದೇ? ಎಂದು ಆಲೋಚಿಸುವ ಕೋತಿಯ ಕಥೆಯಂತೆಯೇ ಇದು.

ತಾನು ಉಳಿಯಬೇಕು ಅಂತಾದರೆ, ಮತ್ತೊಬ್ಬರ ಮೇಲೆ ಹತ್ತಿಹೋಗುವ ಪರಿಸ್ಥಿತಿ ಅದು. ಕೆಳಗೆ ಬಿದ್ದವನನ್ನು ಮೇಲೆತ್ತುವ ಪ್ರಯತ್ನಕ್ಕಿಳಿದರೆ ಈತನೂ ಬಿದ್ದ ಅಂತಲೇ ಅರ್ಥ! ಮತ್ತೊಬ್ಬನನ್ನು ತುಳಿದು ಸಾಗುವುದು ಉದ್ದೇಶವಲ್ಲದಿದ್ದರೂ, ತಾನು ಬದುಕಬೇಕೆನ್ನುವ ಆತುರದಲ್ಲಿ ಮತ್ತೊಬ್ಬ ರನ್ನು ತುಳಿದು ಸಾಗುವ ಪರಿಸ್ಥಿತಿ ಉಂಟಾಗಿಬಿಡುತ್ತದೆ.

ಇಂಥ ಕಾಲ್ತುಳಿತದ ಘಟನೆಗಳಲ್ಲಿ ಮಕ್ಕಳು, ಮಹಿಳೆಯರು, ಮುದುಕರಂಥ ದುರ್ಬಲರು ಕೆಳಗೆ ಬಿದ್ದು ಪ್ರಾಣ ಬಿಟ್ಟರೆ, ಸಬಲರು ಬದುಕಿಬರುತ್ತಾರೆ, ಅಷ್ಟೇ. ಇದೊಂಥರಾ ಹಿಂಡಿನ ಮನಸ್ಥಿತಿ. ಜನರು ಗುಂಪಿನಲ್ಲಿರುವಾಗ ಇತರರೊಂದಿಗೆ ಸೇರಿಕೊಂಡು ವಿವೇಚಿಸದೆ ವರ್ತಿಸುವ ಒಂದು ಪ್ರವೃತ್ತಿ.

ಇದನ್ನು ‘ಸಮೂಹ ಸನ್ನಿ’ (Mob Mentality) ಎನ್ನಬಹುದಾಗಿದ್ದು, ಜನರು ಗುಂಪಿನಲ್ಲಿರುವಾಗ ತಮ್ಮ ಸ್ವಂತ ಅಭಿಪ್ರಾಯಗಳನ್ನು ಬದಿಗಿಟ್ಟು, ಗುಂಪಿನ ಅಭಿಪ್ರಾಯ ಅಥವಾ ನಡವಳಿಕೆಯನ್ನು ಅನುಸರಿಸುವ ಚಿತ್ತವೃತ್ತಿ ಅದು. ಕಾಲ್ತುಳಿತದ ಘಟನೆಯಾದ ನಂತರದಲ್ಲಿ, ಇಂಥ ನೂಕುನುಗ್ಗಲಲ್ಲಿ ಸಿಲುಕಿದವರು ಏನು ಮಾಡಬೇಕು ಮತ್ತು ಮಾಡಬಹುದು ಎಂಬ ಉಪಯುಕ್ತ ಮಾಹಿತಿಯಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ, ಅವೆಲ್ಲಾ ನೋಡಲು ಚಂದವಷ್ಟೇ, ಅಗತ್ಯವಿದ್ದಾಗ ಕೈಹಿಡಿಯುವಂಥವಲ್ಲ.

ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಿಂದ ಪ್ರಾರಂಭವಾದ ಸಾವಿನ ಸೂತಕವು ಪರಿಹಾರ ವಾಗುವುದರೊಳಗೆ, ಬೆಂಗಳೂರಿನ ಕಾಲ್ತುಳಿತದಿಂದುಂಟಾದ ಸಾವುಗಳ ನೋವು ಮನಸ್ಸಿನಿಂದ ಮಾಸುವುದರೊಳಗೆ ಅಹಮದಾಬಾದಿನಲ್ಲಿ ನಡೆದ ಘೋರ ವಿಮಾನದುರಂತವು ನಮ್ಮ ಗಾಯದ ಮೇಲೆ ಬರೆ ಎಳೆದಿದೆ. ಸಾಲದೆಂಬಂತೆ, ಕೇದಾರನಾಥ ದಾರಿಯಲ್ಲಿ ಹೆಲಿಕಾಪ್ಟರ್ ಪತನದಿಂದಾದ ಸಾವುಗಳು. ಅಂತೂ, ಸಾವಿನ ಸವಾರಿ ಸಾಗುತ್ತಲೇ ಇದೆ. ಆದರೆ ಇಂಥ ಒಂದು ಘಟನೆಯಿಂದ ಇನ್ನೊಂದನ್ನು ಮರೆಯಬೇಕಷ್ಟೇ ಬಿಟ್ಟರೆ, ಅನ್ಯಮಾರ್ಗವಿಲ್ಲದಂತಾಗಿದೆ.

ರಷ್ಯಾ-ಉಕ್ರೇನ್ ಯುದ್ಧದಲ್ಲಿ, ಇಸ್ರೇಲ್-ಹಮಾಸ್ ಹಣಾಹಣಿಯಲ್ಲಿ, ಈಗ ಇರಾನ್-ಇಸ್ರೇಲ್ ನಡುವಿನ ಕಾದಾಟದಲ್ಲಿ ಸತ್ತವರ ಸಂಖ್ಯೆ ಹತ್ತಾರು ಸಾವಿರ ದಾಟಿದರೂ ನಮ್ಮನ್ನು ಅಷ್ಟೊಂದು ಬಾಧಿಸುವುದಿಲ್ಲ; ನಮ್ಮ ಸುತ್ತಮುತ್ತಲು ಆದ ದೇಶಬಾಂಧವರ ಸರಣಿ ಸಾವುಗಳು ಮಾತ್ರ ನಮ್ಮನ್ನು ಬಹಳ ಕಾಡುತ್ತವೆ. ಸಾವೇ ಹಾಗೆ.

ಸಾವು ಮತ್ತು ಸತ್ತವರ ಸಂಬಂಧಿಕರಿಗೆ ಅದರಿಂದುಂಟಾಗುವ ನೋವು-ದುಃ ಖಗಳು ಸಮಾನ ವಾಗಿದ್ದರೂ, ಅದು ನಮ್ಮ ಹತ್ತಿರದಲ್ಲಾದರೆ ಚುಚ್ಚುವುದು ಹೆಚ್ಚು. ಅದರಲ್ಲೂ, ನೀರಿನಲ್ಲಿ ಮುಳುಗಿ, ಕೊಳವೆ ಬಾವಿಯಲ್ಲಿ ಸಿಲುಕಿ ಅಥವಾ ಅಪಘಾತದಲ್ಲಿ ಮುಗ್ಧ ಮಕ್ಕಳು ಸತ್ತರೆ, ಅವರ ಪಾಲಕರ ಗೋಳಾಟವನ್ನು ಟಿವಿಯಲ್ಲಿ ನೋಡುವಾಗಲಂತೂ ನಿಷ್ಠುರಿಗಳಿಗೂ ಕರುಳು ‘ಚುರ್’ ಎನ್ನುವುದರಲ್ಲಿ ಸಂಶಯವಿಲ್ಲ (ಪಾಕಿಸ್ತಾನದ ಪೇಶಾವರ್‌ನಲ್ಲಿ ಕೆಲ ವರ್ಷಗಳ ಹಿಂದೆ ಶಾಲೆಯ ಮೇಲೆ ಉಗ್ರರ ದಾಳಿಯಾಗಿ, ನೂರಾರು ಮಕ್ಕಳು ಸಾವನ್ನಪ್ಪಿದವರು.

ಆಗ ಭಾರತವು ಜಾತಿ-ಧರ್ಮ-ವೈರತ್ವಗಳನ್ನು ಮರೆತು ಪಾಕಿಸ್ತಾನದ ಜತೆಗೆ ಶೋಕಾಚರಣೆ ಮಾಡಿದ್ದು ಮನದಲ್ಲಿನ್ನೂ ಹಸಿಯಾಗಿದೆ). ಹಾಗೆಯೇ ದೇಶ ಕಾಯುವ ಕಾಯಕದಲ್ಲಿ ಯೋಧರು ಅಸುನೀಗಿದಾಗ, ಅವರ ಶವಪೆಟ್ಟಿಗೆಯನ್ನು ನೋಡಿದಾಗಲೂ ರಾತ್ರಿ ನಿದ್ರೆ ಹತ್ತುವುದಿಲ್ಲ.

‘ಸಾವು’ ಎಂಬ ಪರಮಸತ್ಯವೇ ಹಾಗೆ, ನೋವೇ ಅದರ ಸತ್ವ. ನೋವಿಲ್ಲದ ಸಾವೇ ಇಲ್ಲ. ‘ಆಯಾಸ ವಿಲ್ಲದ ಮರಣವನ್ನು ಕೊಡು’ ಎಂದು ದೇವರನ್ನು ಪ್ರಾರ್ಥಿಸುವ ಪರಿಪಾಠವೇನೋ ನಮ್ಮ ಸಂಸ್ಕೃತಿಯಲ್ಲಿದೆ. ಆದರೆ, ಸತ್ತವರು ಆಯಾಸದಿಂದ ಸತ್ತರೋ, ಅನಾಯಾಸದಿಂದಲೋ ಎಂಬುದು ನಮಗಂತೂ ಗೊತ್ತಾಗುವುದಿಲ್ಲ.

ಕಾರಣ, ಸತ್ತವರಾರೂ ಮತ್ತೆ ಬಂದು ಅದನ್ನು ಹೇಳಿದ್ದಿಲ್ಲ. ಆದರೆ ಉಳಿದವರ ಗೋಳನ್ನಂತೂ ನಾವು ನೋಡುತ್ತೇವೆ. ಮರಣ ಎನ್ನುವುದು ವಯೋಸಹಜವಾಗೇ ಆಗಲಿ ಅಥವಾ ಅಪಘಾತ, ರೋಗದಿಂದಲೇ ಆಗಲಿ, ‘ಸಾವು’ ಎಂಬ ಶಬ್ದವೇ ಭಯಾನಕ. ಮರಣಭಯಕ್ಕಿಂತ ದೊಡ್ಡ ಭಯವಿಲ್ಲ. ಅನ್ಯರಿಗೆ ಅದೊಂಥರಾ ಸ್ಮಶಾನವೈರಾಗ್ಯ ಇದ್ದಂತೆ, ಕ್ಷಣಿಕವಾಗಿ ನೋವನ್ನು ನೀಡುತ್ತದೆ ಮತ್ತು ಕಾಲಾನುಕ್ರಮದಲ್ಲಿ ಮರೆತು ಹೋಗಿ ಬಿಡುತ್ತದೆ.

ಈಗ ವಿಮಾನ ದುರಂತದಲ್ಲಿ ಮಡಿದವರ ಕುಟುಂಬಿಕರ ವ್ಯಥೆಯನ್ನು ನೋಡುತ್ತಿರುವ ನಾವು, ಉಗ್ರರ ದಾಳಿಯಿಂದ ಮಡಿದವರನ್ನು ಮರೆತಿದ್ದೇವೆ. ಆದರೆ, ಅವರ ಮಡದಿ-ಮಕ್ಕಳು ಮರೆಯಲು ಸಾಧ್ಯವಾ? ಈ ಸಾವು ಅವರನ್ನು ನಿರಂತರ ಕಾಡುತ್ತಲೇ ಇರುತ್ತದೆ. ನಾವು ಈ ಹೊತ್ತಿನಲ್ಲಿ, ‘ಮೃತ್ಯು ವೆನ್ನುವುದೊಂದು ತೆರೆಯಿಳಿತ; ತೆರೆಯೇರು, ಮತ್ತೆ ತೋರ್ಪುದು ನಾಳೆ’ ಎಂಬ ಡಿವಿಜಿಯವರ ಸ್ಪೂರ್ತಿವಾಕ್ಯವನ್ನು ನೆನಪಿಸಿಕೊಳ್ಳಬೇಕಷ್ಟೇ.

ಹುಟ್ಟು, ಜರಾ ಮರಣಗಳು ಮುಂತಾದ, ಮಾನವನ ಮಿತಿಯನ್ನು ಮೀರಿದ, ಮನುಷ್ಯನಿಗೆ ಪರಿಹರಿಸಲು ಸಾಧ್ಯವಿಲ್ಲದ ಅಥವಾ ಅವನ ನಿಯಂತ್ರಣದ ಮಿತಿಯಲ್ಲಿಲ್ಲದ ವಿಷಯಗಳ ಕುರಿತು ಶೋಕಿಸುವ ಅರ್ಹತೆಯೂ ಅವನಿಗಿರುವುದಿಲ್ಲ ಎನ್ನುವ ಗೀತಾವಾಕ್ಯಕ್ಕೆ ಶರಣಾಗಬೇಕಷ್ಟೇ. ಬೇರಿನ್ನಾವ ದಾರಿಯಿದೆ ಹೇಳಿ?