Vinayaka V Bhat Column: ಸಂಸ್ಕೃತಕ್ಕೂ, ಸಂತನ ಸಾಧನೆಗೂ ಸಂದ ಜ್ಞಾನಪೀಠ
“ಅರೆ! ಜಾತ್ಯತೀತ ರಾಷ್ಟ್ರದಲ್ಲಿ ಕಾವಿಧಾರಿಯೊಬ್ಬರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಗೌರವವನ್ನು ಕೊಡ ಮಾಡುವುದು ಅಂದರೇನು? ಬೇರೆ ಯಾರೂ ಸಿಗಲಿಲ್ಲವಾ? ಇದು ಹಿಂದೂಗಳ ಓಲೈಕೆಯಲ್ಲದೆ ಮತ್ತೇನು? ಹೇಗಿದ್ದರೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ ಮತ್ತು ರಾಮಭದ್ರಾಚಾರ್ಯರು ಪ್ರಧಾನಿ ಮೋದಿ ಯವರಿಗೆ ಅತ್ಯಾಪ್ತರು ಕೂಡ.


ವಿದ್ಯಮಾನ
ವಿನಾಯಕ ವೆಂ. ಭಟ್ಟ
ಮೇ 16, 2025ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸ್ಕೃತ ಭಾಷೆಯ ಶ್ರೇಷ್ಠ ವಿದ್ವಾಂಸ, ರಾಮಾನಂದ ಪರಂಪರೆಯ ಜಗದ್ಗುರು, ಸ್ವಾಮಿ ರಾಮಭದ್ರಾಚಾರ್ಯ ಅವರಿಗೆ ಸಮಗ್ರ ಸಂಸ್ಕೃತ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ, 58ನೇ ಜ್ಞಾನಪೀಠ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, “ರಾಮಭದ್ರಾಚಾರ್ಯಜಿ ಅವರು ಶ್ರೇಷ್ಠತೆಗೆ ಸ್ಪೂರ್ತಿದಾಯಕ ಉದಾಹರಣೆಯಾಗಿದ್ದಾರೆ.
ಅವರು ದೈಹಿಕವಾಗಿ ಅಶಕ್ತರಾಗಿದ್ದರೂ, ತಮ್ಮ ದೈವಿಕ ದೃಷ್ಟಿಯಿಂದ ಸಾಹಿತ್ಯ ಮತ್ತು ಸಮಾಜಕ್ಕೆ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ" ಎಂದರು. ದೇವಭಾಷೆ ಸಂಸ್ಕೃತಕ್ಕೆ 2006ರಲ್ಲಿ ಮೊದಲ ಬಾರಿ ಈ ಪ್ರಶಸ್ತಿಯ ಗೌರವ ಸಂದಿತ್ತಾದರೂ, ಶುದ್ಧ ಸನಾತನಿ ಸನ್ಯಾಸಿಯೊಬ್ಬರಿಗೆ ಜ್ಞಾನಪೀಠ ದೊರಕಿದ್ದು ಇದೇ ಮೊದಲಿರಬೇಕು. ರಾಮಭದ್ರಾಚಾರ್ಯರಿಗೆ 2015ರಲ್ಲಿ ಭಾರತದ 2ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಮತ್ತು 2021ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಅನ್ನು ನೀಡಲಾಗಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.
“ಅರೆ! ಜಾತ್ಯತೀತ ರಾಷ್ಟ್ರದಲ್ಲಿ ಕಾವಿಧಾರಿಯೊಬ್ಬರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಗೌರವವನ್ನು ಕೊಡಮಾಡುವುದು ಅಂದರೇನು? ಬೇರೆ ಯಾರೂ ಸಿಗಲಿಲ್ಲವಾ? ಇದು ಹಿಂದೂಗಳ ಓಲೈಕೆಯಲ್ಲದೆ ಮತ್ತೇನು? ಹೇಗಿದ್ದರೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ ಮತ್ತು ರಾಮಭದ್ರಾಚಾರ್ಯರು ಪ್ರಧಾನಿ ಮೋದಿಯವರಿಗೆ ಅತ್ಯಾಪ್ತರು ಕೂಡ.

ಅಷ್ಟೇ ಅಲ್ಲದೆ, ಇವರು ವಿಶ್ವ ಹಿಂದೂ ಪರಿಷತ್ನೊಂದಿಗೆ ನಿಕಟ ಸಂಪರ್ಕ ಹೊಂದಿರುವವರು ಮತ್ತು ರಾಮಮಂದಿರದ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವವರು. ಇಷ್ಟೆ ಇದ್ದ ಮೇಲೆ ಕೇಳಬೇಕೆ? ಮೋದಿಯವರೇ ಇವರಿಗೆ ಪ್ರಶಸ್ತಿ ಸಿಗುವಂತೆ ಮಾಡಿದ್ದು" ಎಂದೆ ಇಷ್ಟೊತ್ತಿಗೆ ಎಡಚರು ಅರಚಲು ಶುರುಮಾಡಬೇಕಿತ್ತು. ಆದರೆ ಯಾಕೋ ಎಲ್ಲರೂ ಸುಮ್ಮನಿದ್ದಾರಪ್ಪ!
ನನ್ನ ಪ್ರಕಾರ, ಸ್ವಾಮಿ ರಾಮಭದ್ರಾಚಾರ್ಯರ ಯೋಗ್ಯತೆ ಮತ್ತು ಸಾಹಿತ್ಯಕ್ಕೆ ಅವರು ನೀಡಿದ ಯೋಗದಾನಗಳು ಇವರುಗಳ ಬಾಯಿ ಮುಚ್ಚಿಸಿರಲಿಕ್ಕೆ ಸಾಕು. ಇನ್ನೊಂದು ವಿಷಯ ಹೇಳಬೇಕು, ಈ ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರಕಾರ ಅಥವಾ ಅದರ ಅಂಗಸಂಸ್ಥೆಗಳು ನೀಡುತ್ತವೆ ಎಂಬ ತಪ್ಪು ಕಲ್ಪನೆಯೂ ಜನರಲ್ಲಿ ವ್ಯಾಪಕವಾಗಿದೆ. ಆದರೆ ವಾಸ್ತವವೇ ಬೇರೆ.
ರಾಷ್ಟ್ರಪತಿಗಳು ನೀಡುತ್ತಾರಾದರೂ, ಈ ಪ್ರಶಸ್ತಿಯನ್ನು ಕೇಂದ್ರ ಸರಕಾರದಿಂದ ನೀಡುವುದಲ್ಲ; ಅದು ‘ಜ್ಞಾನಪೀಠ ಟ್ರಸ್ಟ್’ ಎಂಬ ಖಾಸಗಿ ಸಂಸ್ಥೆಯಿಂದ ಕೊಡಲ್ಪಡುತ್ತದೆ. ಭಾರತೀಯ ಜ್ಞಾನಪೀಠ, ಒಂದು ಸಂಸ್ಥೆಯಾಗಿ ಸ್ಥಾಪನೆಯಾಗಿದ್ದು 1944ರಲ್ಲಿ. ಶಾಂತಿ ಪ್ರಸಾದ್ ಜೈನ್ ಅವರು ಇದರ ಸ್ಥಾಪಕರು. ಅವರ ಕುಟುಂಬದವರೇ ಈಗಲೂ ಈ ವಿಶ್ವಸ್ಥ ಮಂಡಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: Vinayak V Bhat Column: ಸುಮ್ನ ಇರಲಾರದೇ ಇರುವೆ ಬಿಟ್ಕಂಡಂತಾಯ್ತು !
ಭಾರತೀಯ ಭಾಷೆಗಳಲ್ಲಿ ರಚಿತವಾಗಿರುವ ಅತ್ಯುತ್ಕೃಷ್ಟ ಸಾಹಿತ್ಯ ಕೃತಿಗಳಿಗೆ ಸಲ್ಲುವ ಗೌರವ ‘ಜ್ಞಾನಪೀಠ’ ಪ್ರಶಸ್ತಿಯಾಗಿದ್ದು, 1982ರಿಂದ ಇದನ್ನು ಒಂದು ನಿರ್ದಿಷ್ಟ ಕೃತಿಯ ಬದಲಿಗೆ, ಯಾವುದಾದರೂ ಭಾರತೀಯ ಭಾಷಾ ಸಾಹಿತ್ಯಕ್ಕೆ ನೀಡಿದ ಸಮಗ್ರ ಕೊಡುಗೆಯನ್ನು ಗುರುತಿಸಿ ನೀಡಲಾಗುತ್ತಿದೆ. ಈವರೆಗೆ ಹಿಂದಿ ಭಾಷೆಯ ಸಾಹಿತಿಗಳು 11 ಬಾರಿ ಈ ಪ್ರಶಸ್ತಿ ಪಡೆದು, ಹಿಂದಿ ಯನ್ನು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದರೆ, ನಮ್ಮ ಕನ್ನಡ ಭಾಷೆಯು 8 ಬಾರಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು 2ನೇ ಸ್ಥಾನದಲ್ಲಿದೆ.
ಪ್ರಸ್ತುತ, ಪ್ರಶಸ್ತಿ ವಿಜೇತ ಜಗದ್ಗುರು ರಾಮಭದ್ರಾಚಾರ್ಯರ ಕುರಿತು ಸ್ವಲ್ಪ ಹೇಳುವುದಾದರೆ, ಇವರು ಚಿತ್ರಕೂಟದಲ್ಲಿರುವ ‘ತುಳಸಿಪೀಠ’ ಧಾರ್ಮಿಕ ಮತ್ತು ಸಾಮಾಜಿಕ ಸೇವಾಸಂಸ್ಥೆಯ ಸ್ಥಾಪಕರು. ಜತೆಗೆ, ಅಂಗವಿಕಲ ವಿಶ್ವವಿದ್ಯಾಲಯದ ಸ್ಥಾಪಕರು ಮತ್ತು ಆಜೀವ ಕುಲಪತಿಗಳೂ ಹೌದು. ಇವರದು ಬಹು ಆಯಾಮದ ವ್ಯಕ್ತಿತ್ವ. ಆಧ್ಯಾತ್ಮಿಕ ವಿಭೂತಿ ಪುರುಷ, ಶಿಕ್ಷಣತಜ್ಞ, ಸಂಸ್ಕೃತ ಭಾಷೆಯ ಶ್ರೇಷ್ಠ ವಿದ್ವಾಂಸ, ಕವಿ, ಲೇಖಕ, ವ್ಯಾಖ್ಯಾನಕಾರ, ತತ್ವಜ್ಞಾನಿ, ಸಂಗೀತ ಸಂಯೋಜಕ, ಗಾಯಕ, ನಾಟಕಕಾರ, ಕಥಾಕೀರ್ತನಕಾರ ಹೀಗೆ ನಾನಾ ಮಗ್ಗಲುಗಳಲ್ಲಿನ ಅಪರೂಪದ ಸಾಧಕರಾಗಿರುವ ಇವರು 22 ಭಾಷೆಗಳಲ್ಲಿ ಸಲೀಸಾಗಿ ಮಾತನಾಡಬಲ್ಲವರು.
ಭೋಜ್ಪುರಿ, ಸಂಸ್ಕೃತ, ಹಿಂದಿ ಮತ್ತಿತರ ಭಾಷೆಗಳಲ್ಲಿ ಆಶುಕವಿತ್ವ ಶಕ್ತಿ ಇರುವವರು. ಇವರು ಇಲ್ಲಿಯವರೆಗೆ 240ಕ್ಕೂ ಹೆಚ್ಚು ಪುಸ್ತಕಗಳನ್ನೂ, 50ಕ್ಕೂ ಹೆಚ್ಚು ಪ್ರಬಂಧಗಳನ್ನೂ ಬರೆದಿದ್ದಾರೆ. ರಾಮಚರಿತ ಮಾನಸ ಮತ್ತು ಹನುಮಾನ್ ಚಾಲೀಸಾದ ವ್ಯಾಖ್ಯಾನಗಳು, ಅಷ್ಟಾಧ್ಯಾಯಿ ಸಂಸ್ಕೃತ ವ್ಯಾಖ್ಯಾನ ಮತ್ತು ಪ್ರಸ್ಥಾನತ್ರಯೀ ಗ್ರಂಥಗಳ ಸಂಸ್ಕೃತ ವ್ಯಾಖ್ಯಾನಗಳು ಇವರ ಕೃತಿಗಳಲ್ಲಿ ಸೇರಿವೆ.
1950ರ ಮಕರ ಸಂಕ್ರಾಂತಿಯ ದಿನದಂದು, ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ಗ್ರಾಮ ವೊಂದರಲ್ಲಿ ರಾಜದೇವ್ ಮಿಶ್ರಾ ಮತ್ತು ಶಚಿದೇವಿ ದಂಪತಿಗೆ ಜನಿಸಿದ ಆಚಾರ್ಯರ ಜನ್ಮನಾಮ ಗಿರಿಧರ. ಇವರ ಆರಂಭಿಕ ಶಿಕ್ಷಣವು ಅಜ್ಜನಿಂದಲೇ ಆಯಿತು. ರಾಮಾಯಣ ಮತ್ತು ಮಹಾ ಭಾರತದ ವಿವಿಧ ಪ್ರಸಂಗಗಳನ್ನು ಅಜ್ಜ ಇವರಿಗೆ ನಿತ್ಯ ಹೇಳುತ್ತಿದ್ದರು.
ಗಿರಿಧರರು 3ನೇ ವಯಸ್ಸಿನಲ್ಲೇ ಅವಧಿ ಭಾಷೆಯಲ್ಲಿ ತಮ್ಮ ಮೊದಲ ಕಾವ್ಯವನ್ನು ರಚಿಸಿ ಅಚ್ಚರಿ ಮೂಡಿಸಿದ್ದರು. ಕೃಷ್ಣನ ಸಾಕುತಾಯಿ ಯಶೋದೆಯು, ಕೃಷ್ಣನನ್ನು ನೋಯಿಸಿದ್ದಕ್ಕಾಗಿ ಗೋಪಿಯ ಜತೆ ಜಗಳವಾಡಿದ ಸಂದರ್ಭವನ್ನು ಆಚಾರ್ಯರು ಈ ಕಾವ್ಯದಲ್ಲಿ ವರ್ಣಿಸಿದ್ದರು. 5ನೇ ವಯಸ್ಸಿನಲ್ಲಿ ತನ್ನ ನೆರೆಯವರ ಸಹಾಯದಿಂದ ಸಂಪೂರ್ಣ ಭಗವದ್ಗೀತೆಯನ್ನು ಅಧ್ಯಾಯ ಮತ್ತು ಶ್ಲೋಕಸಂಖ್ಯೆಗಳೊಂದಿಗೆ 15 ದಿನಗಳಲ್ಲಿ ಕಂಠಪಾಠ ಮಾಡಿದ್ದ ಗಿರಿಧರರು, 7ನೇ ವಯಸ್ಸಿನಲ್ಲಿ ಅಜ್ಜನ ಸಹಾಯದಿಂದ 60 ದಿನಗಳಲ್ಲಿ, ಸುಮಾರು 10000 ಪದ್ಯಗಳನ್ನೊಳಗೊಂಡ ರಾಮಚರಿತ ಮಾನಸವನ್ನು ಅಧ್ಯಾಯ ಮತ್ತು ಶ್ಲೋಕ ಸಂಖ್ಯೆಯೊಂದಿಗೆ ಕಂಠಪಾಠ ಮಾಡಿದ್ದರು.
ನಂತರ, ವೇದಗಳು, ಉಪನಿಷತ್ತುಗಳು, ಸಂಸ್ಕೃತ ವ್ಯಾಕರಣದ ಕೃತಿಗಳು, ಭಾಗವತ ಹಾಗೂ ತುಳಸಿದಾಸರ ಎಲ್ಲ ಕೃತಿಗಳನ್ನು ಕಂಠಪಾಠ ಮಾಡಿ ಮುಗಿಸಿದ್ದರು. 17 ವರ್ಷದವರೆಗೆ ಗಿರಿಧರರು ಯಾವುದೇ ಔಪಚಾರಿಕ ಶಾಲಾ ಶಿಕ್ಷಣವನ್ನು ಪಡೆಯದಿದ್ದರೂ, ಅನೇಕ ಪ್ರಮುಖ ಸಾಹಿತ್ಯ ಕೃತಿಗಳನ್ನು ಬೇರೆಯವರಿಂದ ಕೇಳುವ ಮೂಲಕ ಕಲಿತಿದ್ದರು. ಅವರು ಕಥಾವಾಚಕ ಆಗಲಿ ಎಂದು ಕುಟುಂಬವು ಬಯಸಿದ್ದರೆ, ಅಧ್ಯಯನವನ್ನು ಮುಂದುವರಿಸುವುದು ಗಿರಿಧರರ ಆಶಯವಾಗಿತ್ತು.
ಅದರಂತೆ, ಸಂಸ್ಕೃತ ವ್ಯಾಕರಣ, ಹಿಂದಿ, ಇಂಗ್ಲಿಷ್ ಮುಂತಾದ ವಿಷಯಗಳ ಅಧ್ಯಯನಕ್ಕೆಂದು ತಂದೆಯವರು ಗಿರಿಧರರನ್ನು ಹತ್ತಿರದ ಜೌನ್ಪುರದ ಸಂಸ್ಕೃತ ಕಾಲೇಜಿಗೆ ಸೇರಿಸಿದರು. ‘ಏಕಪಾಠೀ’ ಯಾಗಿದ್ದ, ಅಂದರೆ ವಿಷಯವನ್ನು ಒಮ್ಮೆ ಕೇಳುವ ಮೂಲಕ ಕಂಠಪಾಠ ಮಾಡುವ ಸಾಮರ್ಥ್ಯ ಹೊಂದಿದ್ದ ಆಚಾರ್ಯರು ಕೇವಲ 3 ತಿಂಗಳಲ್ಲಿ ವರದರಾಜನ ಸಂಪೂರ್ಣ ಲಘು ಸಿದ್ಧಾಂತ ಕೌಮುದಿಯನ್ನು ಕಂಠಪಾಠ ಮಾಡಿ ಕರಗತ ಮಾಡಿಕೊಂಡರು.
ನಂತರ, ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಛಂದಸ್ಸಿನ ಕುರಿತಾದ ‘ಚಂದ್ರಪ್ರಭಾ’ ಎಂಬ ಕೃತಿ ಯನ್ನು ಅಧ್ಯಯನ ಮಾಡುವಾಗ, ಛಂದಸ್ಸಿನ 8 ಗಣಗಳನ್ನು ಕಲಿತ ಮರುದಿನವೇ ಭುಜಂಗ ಪ್ರಯಾತ ಛಂದಸ್ಸಿನಲ್ಲಿ ತಮ್ಮ ಮೊದಲ ಸಂಸ್ಕೃತ ಪದ್ಯವನ್ನು ರಚಿಸಿದ್ದರು. 1971ರಲ್ಲಿ ಗಿರಿಧರರು ವ್ಯಾಕರಣದಲ್ಲಿನ ಉನ್ನತ ಅಧ್ಯಯನಕ್ಕಾಗಿ ವಾರಾಣಸಿಯ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು ಮತ್ತು ಪದವಿಯ ಅಂತಿಮ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು.
ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವಾಗ ನವದೆಹಲಿಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ಸಂಸ್ಕೃತ ಸಮ್ಮೇಳನದಲ್ಲಿ ಭಾಗವಹಿಸಿ, ವ್ಯಾಕರಣ, ಸಾಂಖ್ಯ, ನ್ಯಾಯ, ವೇದಾಂತ ಮತ್ತು ಸಂಸ್ಕೃತ ಅಂತ್ಯಾಕ್ಷರಿ ವಿಭಾಗಗಳಲ್ಲಿ 5 ಚಿನ್ನದ ಪದಕಗಳನ್ನು ಗೆದ್ದರು. ಮುಂದೆ ವ್ಯಾಕರಣದಲ್ಲಿ ಅಂತಿಮ ಆಚಾರ್ಯ ಪರೀಕ್ಷೆಗಳಲ್ಲೂ ಅಗ್ರಸ್ಥಾನ ಪಡೆದು, 7 ಚಿನ್ನದ ಪದಕಗಳು ಮತ್ತು ಕುಲಪತಿ ಯ ಚಿನ್ನದ ಪದಕವನ್ನು ಗೆದ್ದರು.
ಗಿರಿಧರರು ವ್ಯಾಕರಣ ವಿಷಯದಲ್ಲಿ ಮಾತ್ರ ಸ್ನಾತಕೋತ್ತರ ಪದವಿಗೆ ದಾಖಲಾಗಿದ್ದರೂ, ವಿಶ್ವವಿದ್ಯಾಲಯದಲ್ಲಿ ಕಲಿತ ಎಲ್ಲಾ ವಿಷಯಗಳಲ್ಲೂ ‘ಆಚಾರ್ಯ’ ಎಂದು ಘೋಷಿಸಲ್ಪಟ್ಟಿದ್ದು ಅವರ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿ. ಸ್ನಾತಕೋತ್ತರ ಪದವಿಯ ನಂತರ ಗಿರಿಧರರು ಅದೇ ಸಂಸ್ಥೆ ಯಲ್ಲಿ ಸಂಸ್ಕೃತ ವ್ಯಾಕರಣದಲ್ಲಿ ‘ವಿದ್ಯಾವಾರಿಧಿ’ ಪದವಿಯನ್ನು ಪೂರ್ಣಗೊಳಿಸಿದರು.
ನಂತರ, ಯುಜಿಸಿ ಅವರಿಗೆ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ವ್ಯಾಕರಣ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಆಹ್ವಾನಿಸಿದರೂ ಗಿರಿಧರರು ಅದನ್ನು ಒಪ್ಪಿಕೊಳ್ಳದೆ, ಸಾಹಿತ್ಯ, ಧರ್ಮ, ಸಮಾಜ ಮತ್ತು ಅಂಗವಿಕಲರ ಸೇವೆಗೆ ಬದುಕನ್ನು ಮುಡಿಪಾಗಿಡಲು ನಿರ್ಧರಿಸಿದರು. ಮುಂದೆ, ಕೇವಲ 13 ದಿನಗಳಲ್ಲಿ ರಚಿಸಿದ ಪಾಣಿನಿ ನ್ಯಾಯಶಾಸ ಪ್ರಬಂಧಕ್ಕಾಗಿ ಅವರಿಗೆ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯವು ‘ವಾಚಸ್ಪತಿ’ ಪದವಿಯನ್ನು ನೀಡಿ ಗೌರವಿಸಿತು.
ಆಚಾರ್ಯರು ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು 11 ಉಪನಿಷತ್ತುಗಳ ಮೇಲೆ ‘ಶ್ರೀರಾಘವಕೃಪಾ ಭಾಷ್ಯಂ’ ಎಂಬ ಶೀರ್ಷಿಕೆಯಲ್ಲಿ ಸಂಸ್ಕೃತದಲ್ಲಿ ವ್ಯಾಖ್ಯಾನಗಳನ್ನು ಮಾಡಿ ಈ ಕಾಲದಲ್ಲೂ ಪ್ರಸ್ಥಾನತ್ರಯಿಯ ಮೇಲೆ ಭಾಷ್ಯ ಬರೆಯಬಹುದು ಎಂಬುದನ್ನು ತೋರಿಸಿಕೊಟ್ಟರು. ಅವರ ಸಾಹಿತ್ಯವು ಹಲವಾರು ನದಿಗಳು ಏಕಕಾಲದಲ್ಲಿ ಪ್ರವಹಿಸುವಂತೆ, ಶಿವ-ಪಾರ್ವತಿಯರ ತಾಂಡವ ಮತ್ತು ಲಾಸ್ಯಗಳನ್ನು ಆನಂದಿಸಿದಂತೆ; ಇವರ ‘ಶ್ರೀ ಭಾರ್ಗವ ರಾಘವೀಯಂ’ ಕಾವ್ಯವು, ಭಾರವಿಯ ‘ಕಿರಾತಾರ್ಜುನೀಯಂ’, ಶ್ರೀಹರ್ಷನ ‘ನೈಷಧಿಯ ಚರಿತೆ’ ಮತ್ತು ಮಾಘನ ‘ಶಿಶುಪಾಲವಧೆ’ ಮುಂತಾದ ಸಂಸ್ಕೃತ ಮಹಾಕಾವ್ಯಗಳ ಸಾಲಿನಲ್ಲಿ ನಿಲ್ಲುವಂಥದ್ದು ಎನ್ನುವವರಿದ್ದಾರೆ.
ಒಬ್ಬ ಸದೃಢ ಮನುಷ್ಯನಿಗೇ, ಆಚಾರ್ಯರು ಮಾಡಿದಷ್ಟು ಅಧ್ಯಯನವನ್ನು, ಸಾಹಿತ್ಯ ಸೃಜನೆಯನ್ನು ಕನಸಿನಲ್ಲೂ ಕೈಗೊಳ್ಳುವುದು ಸಾಧ್ಯವಿಲ್ಲವೇನೋ. ಆದರೆ, ಆಚಾರ್ಯರು ದೃಷ್ಟಿಯ ಸಹಾಯವಿಲ್ಲದೆಯೇ ಈ ಎಲ್ಲ ಸಾಧನೆಗಳನ್ನೂ ಮಾಡಿದ್ದಾರೆಂದರೆ ಅದು ಅಚ್ಚರಿಯೇ. ಹೌದು, ಆಚಾರ್ಯರು ಹುಟ್ಟಿ 2 ತಿಂಗಳಾಗುವಷ್ಟರಲ್ಲಿ ಯಾತನಾಮಯ ‘ಟ್ರಾಕೋಮಾ’ ಸೋಂಕಿಗೆ ತುತ್ತಾಗಿ ಶಾಶ್ವತವಾಗಿ ದೃಷ್ಟಿಯನ್ನು ಕಳೆದುಕೊಂಡರು.
ಚಿಕಿತ್ಸೆಗೆಂದು ಅನೇಕ ವೈದ್ಯರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಅಂದಿನಿಂದ ಆಚಾರ್ಯರು ಕತ್ತಲೆಯ ಬದುಕನ್ನು ಬದುಕಿದ್ದಾರೆ, ಬಾಹ್ಯದೃಷ್ಟಿಯ ನೆರವಿಲ್ಲದೆಯೇ ಅಂತರ್ ದೃಷ್ಟಿಯಿಂದಲೇ ಎಲ್ಲವನ್ನೂ ಸಾಧಿಸಿದ್ದಾರೆ. ಅಂಧರು ಬಳಸುವ ‘ಬ್ರೈಲ್’ ಲಿಪಿಯನ್ನು ಬಳಸಲು ಇವರು ಒಪ್ಪದ ಕಾರಣ, ಓದಲು ಅಥವಾ ಬರೆಯಲು ಇವರಿಗೆ ಇಂದಿಗೂ ಸಾಧ್ಯವಿಲ್ಲ; ಶ್ರವಣ ದಿಂದಷ್ಟೇ ಕಲಿಕೆಯಾಗಬೇಕು ಮತ್ತು ಬೇರೆಯವರಿಗೆ ಬಾಯಿಂದ ಹೇಳುವ ಮೂಲಕವಷ್ಟೇ ಇವರು ತಮ್ಮ ಸಾಹಿತ್ಯವನ್ನು ಸೃಷ್ಟಿಸಬೇಕು.
ಆಚಾರ್ಯರ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದ ಪ್ರಭಾವಿತರಾಗಿದ್ದ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಒಮ್ಮೆ ಇವರನ್ನು ದೆಹಲಿಯಲ್ಲಿ ಭೇಟಿಯಾದಾಗ, ಇವರ ಕಣ್ಣುಗಳ ಚಿಕಿತ್ಸೆ ಗೆಂದು ಸ್ವಂತ ಖರ್ಚಿನಲ್ಲಿ ಅಮೆರಿಕಕ್ಕೆ ಕಳುಹಿಸುವುದಾಗಿ ಪ್ರಸ್ತಾಪಿಸಿದರು. ಆದರೆ ಇದನ್ನು ನಯವಾಗಿ ನಿರಾಕರಿಸಿದ ಆಚಾರ್ಯರು, ‘ಕಿಂ ದೃಷ್ಟವ್ಯಂ ಪತಿತಜಗತಿ ವ್ಯಾಪ್ತದೋಷೇಯಪ್ಯಸತ್ಯೇ ....’ ಎಂಬ ಸಂಸ್ಕೃತ ಶ್ಲೋಕದ ಮೂಲಕ ಇಂದಿರಾರಿಗೆ ಉತ್ತರಿಸಿದರು. ಅಂದರೆ, ‘ಸುಳ್ಳು ಮತ್ತು ದುರ್ಗುಣಗಳಿಂದ ತುಂಬಿದ ಈ ಪತಿತಲೋಕದಲ್ಲಿ ನಾನು ನೋಡಲು ಆಸೆ ಪಡುವುದಿಲ್ಲ.
ನಾನು ಶ್ರೀರಾಮನನ್ನು ಮಾತ್ರ ನೋಡಲಿಚ್ಛಿಸುವವನು. ನೋಡಬೇಕಾದುದನ್ನು ಒಳದೃಷ್ಟಿಯಿಂದ ನಿತ್ಯ ನೋಡುತ್ತಿರುವ ನನಗೆ ಈ ಬಾಹ್ಯದೃಷ್ಟಿಯಿಂದ ಏನಾಗಬೇಕಿದೆ’ ಎಂದಿದ್ದರಂತೆ ಆಚಾರ್ಯರು. ಆಚಾರ್ಯರ ಧೋರಣೆಯನ್ನು ಪುಷ್ಟೀಕರಿಸುವ, ಆಚಾರ್ಯರೂ ಆಗಾಗ ಹೇಳುವ ಸಂಸ್ಕೃತದ ಪ್ರಸಿದ್ಧ ಮಾತಿದು- ‘ಅನೇಕಸಂಶಯೋಚ್ಛೇದಿ, ಪರೋಕ್ಷಾರ್ಥಸ್ಯ ದರ್ಶಕಮ | ಸರ್ವಸ್ಯ ಲೋಚನಂ ಶಾಸಂ, ಯಸ್ಯ ನಾಸ್ತ್ಯಂಧ ಏವ ಸಃ’- ಅಂದರೆ, ಸಕಲ ಸಂಶಯಗಳನ್ನು ಪರಿಹರಿಸಿ ಪರೋಕ್ಷ ಜ್ಞಾನದ ಅರಿವನ್ನು ಮೂಡಿಸುವ ಸನಾತನ ಶಾಸ್ತ್ರ ವಿಜ್ಞಾನವೇ ಮನುಷ್ಯನಿಗೆ ನಿಜವಾದ ಕಣ್ಣುಗಳು; ಯಾರಿಗೆ ಈ ಸನಾತನ ಶಾಸ್ತ್ರಜ್ಞಾನದ ಅರಿವಿಲ್ಲವೋ, ಅಂಥವರು ಕಣ್ಣಿದ್ದರೂ ಅಂಧರು ಎಂದರ್ಥ.
ಯೋಗ್ಯತಾಸಂಪನ್ನರು ಪೀಠದಲ್ಲಿ ಕುಳಿತಾಗ ಆ ಪೀಠಕ್ಕೇ ಗೌರವ ದೊರೆಯುವಂತೆ, ಶ್ರೀ ರಾಮಭದ್ರಾಚಾರ್ಯರಂಥ ನಿಜಾರ್ಥದ ಜ್ಞಾನಿಗಳಿಗೆ ಕೊಡಮಾಡಿದ್ದರಿಂದ ‘ಜ್ಞಾನಪೀಠ’ ಪ್ರಶಸ್ತಿಗಿದ್ದ ಘನತೆ-ಗೌರವಗಳು ನೂರ್ಮಡಿಯಾದಂತಾಯಿತು.