ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ತುರ್ತು ಪರಿಸ್ಥಿತಿಯಲ್ಲಿ ಆರ್‌ಎಸ್‌ಎಸ್‌ ಹೋರಾಟ

ಇಂದಿರಾರ ವಕೀಲರು ನೀಡಿದ್ದ ಸಂಘದ ನಿಷೇಧದ ಸಲಹೆ ಪತ್ರಕರ್ತ ರಿಗೆ ಸೋರಿಕೆಯಾಗಿ 20-06-1975ರಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಪರಿಣಾಮ, ದೇಶದಾದ್ಯಂತ ಸರಕಾರದ ವಿರುದ್ಧ ದೊಡ್ಡಮಟ್ಟದ ಆಕ್ರೋಶ ಕೇಳಿ ಬಂತು. ಹಾಗಾಗಿ ಇಂದಿರಾರು ಸಂಘವನ್ನು ನಿಷೇಧಿಸುವ ನಿರ್ಧಾರವನ್ನು ಕೈ ಬಿಡಬೇಕಾಯಿತು.

ತುರ್ತು ಪರಿಸ್ಥಿತಿಯಲ್ಲಿ ಆರ್‌ಎಸ್‌ಎಸ್‌ ಹೋರಾಟ

ಮೋಹನ್‌ ವಿಶ್ವ ಮೋಹನ್‌ ವಿಶ್ವ Jun 21, 2025 8:03 AM

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

1970ರ ದಶಕದಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಆದರೆ ‘ಭ್ರಷ್ಟಾಚಾರವು ಜಗತ್ತಿನೆಡೆ ಇರುವಂತೆ ಭಾರತ ದಲ್ಲಿಯೂ ಇದೆ, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹೇಳಿದ್ದರು.

ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾದಂತೆ ಗುಜರಾತಿನಲ್ಲಿ ಅದರ ವಿರುದ್ಧ ದೊಡ್ಡದೊಂದು ಚಳವಳಿ ಪ್ರಾರಂಭವಾಯಿತು. ಗುಜರಾತಿನ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಚಿಮನ್ ಭಾಯ್ ಪಟೇಲ ವಿರುದ್ಧ ದೊಡ್ಡಮಟ್ಟದ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಅವರ ವಿರುದ್ಧ ಪ್ರಾರಂಭವಾದ ಚಳವಳಿಯನ್ನು ‘ನಿರ್ಮಾಣ್ ಆಂದೋಲನ’ವೆಂದು ಕರೆಯಲಾಯಿತು.

ನಂತರದ ದಿನಗಳಲ್ಲಿ ಈ ಆಂದೋಲನ ಗುಜರಾತಿನಿಂದ ಬಿಹಾರ ತಲುಪಿತು. ಆಗ ಜಯಪ್ರಕಾಶ್ ನಾರಾಯಣ್ ವಿರೋಧ ಪಕ್ಷಗಳ ನೇತೃತ್ವ ವಹಿಸಿ ಈ ಆಂದೋಲನವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) ‘ನಿರ್ಮಾಣ್ ಆಂದೋಲನ’ವನ್ನು ಬೆಂಬಲಿಸಿತ್ತು. ಸಂಘ ನೀಡಿದ ಬೆಂಬಲದ ಬಗ್ಗೆ ಪತ್ರಕರ್ತ ರೊಬ್ಬರು ಕೇಳಿದ ಪ್ರಶ್ನೆಗೆ ಬಾಳಾ ಸಾಹೇಬರು, “ಸಂಘದ ಸ್ವಯಂಸೇವಕ ಈ ದೇಶದ ನಾಗರಿಕನಾಗಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವುದು ತಪ್ಪೇ? ಭ್ರಷ್ಟಾಚಾರದ ಸಮಸ್ಯೆ ಎಲ್ಲರನ್ನೂ ಕಾಡುವಂತೆ ಸ್ವಯಂಸೇವಕನನ್ನೂ ಕಾಡುತ್ತದೆ. ಈ ಸಮಸ್ಯೆ ಬಗೆಹರಿದರೆ ಅವನಿಗೂ ಒಳ್ಳೆಯದಲ್ಲವೇ? ಒಳ್ಳೆಯ ಕಾರ್ಯಕ್ಕೆ ಯಾಕೆ ಆತ ಕೈ ಜೋಡಿಸಬಾರದು?" ಎಂದಿದ್ದರು.

ಇದನ್ನೂ ಓದಿ: Mohan Vishwa Column: ಭಾರತ ಜಪಾನ್‌ ಮೀರಿಸಿದರೆ ಎಡಚರರಿಗೆ ಉರಿ

ಕೆಲವು ತಿಂಗಳಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ದೊಡ್ಡಮಟ್ಟದಲ್ಲಿ ದೇಶದಾದ್ಯಂತ ಹರಡಿತು. ಸಂಘದ ಸ್ವಯಂಸೇವಕರು ಈ ಆಂದೋಲನದಲ್ಲಿ ದೊಡ್ಡಮಟ್ಟದಲ್ಲಿ ಭಾಗವಹಿಸು ತ್ತಿರುವ ವಿಷಯ ಇಂದಿರಾರಿಗೆ ತಿಳಿಯಿತು. 1975ರ ಜನವರಿಯಲ್ಲಿ ಇಂದಿರಾರ ವಕೀಲರೊಬ್ಬರು ಆರೆಸ್ಸೆಸ್ ಅನ್ನು ನಿಷೇಧಿಸಬೇಕೆಂದು ಪತ್ರದ ಮೂಲಕ ಸಲಹೆ ನೀಡಿದ್ದರು. ಇಂದಿರಾರ ಅಪ್ಪ ಜವಾಹರಲಾಲ್ ನೆಹರು 1948ರಲ್ಲಿ ಆರೆಸ್ಸೆಸ್‌ನ ಕಾರ್ಯಕರ್ತರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ನಿಷೇಧಿಸಿದ್ದರು.

ಇತಿಹಾಸ ಮರುಕಳಿಸುತ್ತದೆ ಎನ್ನುವಂತೆ, ಇಂದಿರಾ ಅಧಿಕಾರಕ್ಕೆ ಬಂದ ನಂತರ ಅಂಥದೇ ಪ್ರಯತ್ನಕ್ಕೆ ಕೈಹಾಕಿದ್ದರು. ಇಂದಿರಾರ ವಕೀಲರು ನೀಡಿದ್ದ ಸಂಘದ ನಿಷೇಧದ ಸಲಹೆ ಪತ್ರಕರ್ತ ರಿಗೆ ಸೋರಿಕೆಯಾಗಿ 20-06-1975ರಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಪರಿಣಾಮ, ದೇಶದಾದ್ಯಂತ ಸರಕಾರದ ವಿರುದ್ಧ ದೊಡ್ಡಮಟ್ಟದ ಆಕ್ರೋಶ ಕೇಳಿ ಬಂತು. ಹಾಗಾಗಿ ಇಂದಿರಾರು ಸಂಘವನ್ನು ನಿಷೇಧಿಸುವ ನಿರ್ಧಾರವನ್ನು ಕೈ ಬಿಡಬೇಕಾಯಿತು. “ಕಮ್ಯುನಿಸ್ಟರ ಮಾತು ಕೇಳಿ ಕಾಂಗ್ರೆಸ್ ಸರಕಾರ ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು ಇದರ ಭಾಗವಾಗಿ ಸಂಘವನ್ನು ನಿಷೇಧಿಸುವತ್ತ ಚಿಂತನೆ ನಡೆಸುತ್ತಿದೆ.

ಶಿಸ್ತಿಗೆ ಹೆಸರಾಗಿರುವ ಸಂಘವು ಇಂಥ ಬೆದರಿಕೆಗೆ ಜಗ್ಗುವುದಿಲ್ಲ" ಎಂದು ಬಾಳಾ ಸಾಹೇಬರು ಹೇಳಿದ್ದರು. ಇಷ್ಟಾದರೂ ಇಂದಿರಾರ ಮೇಲೆ ಸಂಘಕ್ಕೆ ನಂಬಿಕೆ ಇರಲಿಲ್ಲ, ಇಂದಲ್ಲ ನಾಳೆ ಬ್ಯಾನ್ ಮಾಡಬಹುದೆಂಬ ಅನುಮಾನ ಸಂಘಕ್ಕಿತ್ತು. ಅದೇ ಸಮಯದಲ್ಲಿ ಅಲಹಾಬಾದ್ ನ್ಯಾಯಾಲಯವು ಇಂದಿರಾರ 1971ರ ಚುನಾವಣೆಯಲ್ಲಿ ನಡೆದ ಅಕ್ರಮಗಳನ್ನು ಪರಿಗಣಿಸಿ ಅವರ ಚುನಾವಣಾ ಗೆಲುವನ್ನು ಅಸಿಂಧುಗೊಳಿಸಿ, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರ ದೆಂದು ತೀರ್ಪನ್ನು ನೀಡಿತು.

ತೀರ್ಪು ಬಂದಾಕ್ಷಣ ಇಂದಿರಾರು ರಾತ್ರೋರಾತ್ರಿ ಸಂವಿಧಾನವನ್ನು ತಿದ್ದುಪಡಿ ಮಾಡಿ ತಮ್ಮ ಚುನಾವಣೆ ವಿಷಯ ನ್ಯಾಯವ್ಯಾಪ್ತಿಗೆ ಬರುವುದಿಲ್ಲವೆಂದರು. ಇದನ್ನು ಕಂಡ ನ್ಯಾಯಾಲಯ ಈ ತಿದ್ದುಪಡಿಯು ಸಂವಿಧಾನದ ಮೂಲ ಉದ್ದೇಶಗಳ ವಿರುದ್ಧವಿರುವ ಕಾರಣ, ದೇಶದ ಸಾರ್ವ ಭೌಮತ್ವಕ್ಕೆ ಧಕ್ಕೆ ಬಂದಿದೆ ಎಂದಿತ್ತು. ನಂತರ ದೇಶದಾದ್ಯಂತ ಇಂದಿರಾರ ವಿರುದ್ಧ ಹಾಹಾಕಾರವೇ ಸೃಷ್ಟಿಯಾಯಿತು.

ಇಂದಿರಾರ ಸರ್ವಾಧಿಕಾರಿ ಆಡಳಿತದಲ್ಲಿ ಸಿಕ್ಕ ಸಿಕ್ಕವರನ್ನು ಜೈಲಿಗೆ ಹಾಕಲಾಯಿತು. ಮೊದಲ ಬಾರಿಗೆ ಪತ್ರಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು. 04-07-1975ರಂದು ಆರೆಸ್ಸೆಸ್ ಅನ್ನು ನಿಷೇಧಿಸಲಾಯಿತು. ಜತೆಗೆ ಒಟ್ಟಾರೆ 27 ಸಂಘಟನೆಯನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಇಂದಿರಾರ ಪ್ರಮುಖ ಟಾರ್ಗೆಟ್ ಆರೆಸ್ಸೆಸ್ ಆಗಿತ್ತು. ಬಾಳಾ ಸಾಹೇಬರನ್ನು ಬಂಧಿಸಿ ಯರವಾಡ ಜೈಲಿನಲ್ಲಿಡಲಾಗಿತ್ತು.

ಅಲ್ಲಿದ್ದ ಇತರ ಹೋರಾಟಗಾರರು ಬಾಳಾ ಸಾಹೇಬರನ್ನೊಮ್ಮೆ ಕೇಳಿದರಂತೆ- “ನೀವು ಜೈಲಿನಲ್ಲಿ ದ್ದರೂ ಹೊರಗಡೆ ತಮ್ಮ ಹೋರಾಟ ಅಷ್ಟು ಸರಾಗವಾಗಿ ಹೇಗೆ ನಡೆಯುತ್ತಿದೆ?" ಅಂತ. ಆಗ ಬಾಳಾ ಸಾಹೇಬರು, “ಇಂದಿರಾರು ಒಬ್ಬ ಸರಸಂಘಚಾಲಕನನ್ನು ಬಂಧಿಸಿರಬಹುದು, ಹೊರಗಡೆ ನಾಲ್ವರು ಸರಸಂಘಚಾಲಕರಿದ್ದಾರೆ" ಅಂತ ಹೇಳಿದ್ದರಂತೆ.

ಈ ಮಾತುಗಳಿಂದ ತಿಳಿಯುವುದೇನೆಂದರೆ ಸಂಘದಲ್ಲಿ ಸ್ಥಾನವೆಂಬುದು ಮುಖ್ಯವಲ್ಲ, ಮಾಡುವ ಕೆಲಸ ಮುಖ್ಯವಾಗುತ್ತದೆ. ಸಂಘದ ಪ್ರತಿಯೊಬ್ಬರೂ ಸಮಾನವಾಗಿ, ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಾರೆ. ಬಾಳಾಸಾಹೇಬರು ಜೈಲಿನಲ್ಲಿರುವಾಗ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡುವ ವೇಳೆ, “ತುರ್ತು ಪರಿಸ್ಥಿತಿ 14 ವರ್ಷಗಳ ಕಾಲ ಇರಬಹುದು, ಅಲ್ಲಿಯವರೆಗೂ ನಮ್ಮ ಹೋರಾಟ ವನ್ನು ಗಟ್ಟಿಯಾಗಿ ನಿಂತು ಮುಂದುವರಿಸಬೇಕು.

ಈ ಹೋರಾಟ ಒಂದು ಯುದ್ಧವಿದ್ದಂತೆ. ತಾಳ್ಮೆ ಹಾಗೂ ನಿರಂತರ ಹೋರಾಟದ ಮೂಲಕವಷ್ಟೇ ನಾವು ಈ ಯುದ್ಧವನ್ನು ಗೆಲ್ಲಬೇಕು. ಅದಕ್ಕಾಗಿ ಎಲ್ಲರೂ ಸಿದ್ಧರಾಗಿರಬೇಕು" ಎಂದು ಹೇಳುತ್ತಿದ್ದರು. ಬಾಳಾಸಾಹೇಬರು ಸ್ವಯಂಸೇವಕರಿಗೆ ಯಾವಾಗಲೂ ಇಸ್ರೇಲ ದೇಶದ ಉದಾಹರಣೆಯನ್ನು ನೀಡುತ್ತಿದ್ದರು.

ಯಹೂದಿಗಳ ನಿರಂತರ ದೇಶಾಭಿಮಾನ ಹಾಗೂ ಇಚ್ಛಾಶಕ್ತಿಯ ಪರಿಣಾಮ, ಎಂಥ ಸಮಸ್ಯೆ ಎದುರಾದರೂ ಇಸ್ರೇಲ್ ದೇಶ ಧೈರ್ಯವಾಗಿ ಎದುರಿಸಲು ಸದಾ ಸಿದ್ಧವಿರುತ್ತದೆ. ಹಾಗಾಗಿ ಸಂಘದ ಕಾರ್ಯಕರ್ತರೂ ನಿರಂತರ ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು ಎನ್ನುತ್ತಿದ್ದರು ಅವರು. 04-12-1976ರಲ್ಲಿ ಲಂಡನ್‌ನಿಂದ ಬಂದಿದ್ದ ಪತ್ರಕರ್ತರೊಬ್ಬರು, “ಇಂದಿರಾರ ಸರ್ವಾಧಿಕಾರಿ ಧೋರಣೆ ಯಿಂದ ಭಾರತದಲ್ಲಿ ಸತ್ತು ಹೋಗಿರುವ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಆರೆಸ್ಸೆಸ್‌ನಿಂದ ಮಾತ್ರ ಸಾಧ್ಯ" ಎಂದಿದ್ದರು.

ಅವರ ಮಾತಿಗೆ ಹಲವರು ಸಹಮತ ವ್ಯಕ್ತಪಡಿಸಿದ್ದರು. ಈಗಲೂ ಬಹುತೇಕರು ಸಂಘವಿಲ್ಲದಿದ್ದರೆ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದು ಕಷ್ಟವಿತ್ತೆಂದು ಹೇಳುತ್ತಾರೆ. 2003ರಲ್ಲಿ ‘ದಿ ಹಿಂದೂ’ ದಿನಪತ್ರಿಕೆ “ರಾಷ್ಟ್ರೀಯ ಸ್ವಯಂಸೇವಕ ಸಂಘವು ತುರ್ತು ಪರಿಸ್ಥಿಯ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಹೋರಾಟವೆಂದು ಪರಿಗಣಿಸಿದೆ.

ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ" ಎಂದಿತ್ತು. ಜೈಲಿನಲ್ಲಿದ್ದ ಬಾಳಾ ಸಾಹೇಬರು ಇಂದಿರಾರಿಗೆ ಪತ್ರವೊಂದನ್ನು ಬರೆದು- “ಇಡೀ ಸರಕಾರವೇ ನಿಮ್ಮ ಕೈಯಲ್ಲಿರುವಾಗ ಸಂಘದ ಕಚೇರಿಗಳನ್ನು ತಲಾಶ್ ಮಾಡಿ ಸಂಘದ ವಿರುದ್ಧ ನೀವು ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವ ಪುರಾವೆಗಳು ಸಿಗುತ್ತದೆಯೇ?" ಎಂದು ಸವಾಲು ಹಾಕಿದರು. ಆದರೆ ಇಂದಿರಾರಿಗೆ ಸವಾಲನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ, ಅವರ ಪತ್ರಕ್ಕೆ ಉತ್ತರಿಸಲು ಯಾವ ದಾರಿಯೂ ಕಾಣಿಸಲಿಲ್ಲ.

ಜನತಾಪಕ್ಷದ ಸ್ಥಾಪನೆಯ ಬಗ್ಗೆ ಜೈಲಿನಲ್ಲಿ ಚರ್ಚೆಗಳು ಶುರುವಾಗಿದ್ದವು. ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರವನ್ನು ಅಧಿಕಾರಕ್ಕೆ ತಂದು ಇಂದಿರಾರ ಸರ್ವಾಧಿಕಾರಿ ಧೋರಣೆಯನ್ನು ಅಂತ್ಯಗೊಳಿಸಬೇಕೆಂಬ ಉದ್ದೇಶದಿಂದ ಮುಂದಿನ ಚುನಾವಣೆಯಲ್ಲಿ ಜನತಾಪಕ್ಷ ಸ್ಪರ್ಧಿಸ ಬೇಕೆಂದು ನಿರ್ಧರಿಸಲಾಗಿತ್ತು. ಅದೇ ಸಮಯದಲ್ಲಿ ಇಂದಿರಾರ ಬೇಹುಗಾರಿಕಾ ತಂಡ ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಗೆ ಸೋಲಾಗುವುದು ನಿಶ್ಚಿತವೆಂದು ಹೇಳಿತ್ತು.

ಇಂದಿರಾರು ಹೇರಿದ್ದ ತುರ್ತು ಪರಿಸ್ಥಿಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗು ತ್ತಿದ್ದವು. ಹೀಗಾಗಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಒತ್ತಡ ಇಂದಿರಾರ ಮೇಲಿತ್ತು. ವಿವಿಧ ಅಂತಾರಾಷ್ಟ್ರೀಯ ಸಂಘಟನೆಗಳು ಭಾರತದಲ್ಲಿ ನಡೆಯುತ್ತಿದ್ದ ಪ್ರಜಾಪ್ರಭು ತ್ವದ ಕಗ್ಗೊಲೆಯ ಬಗ್ಗೆ ಸತತವಾಗಿ ವರದಿ ಮಾಡುತ್ತಿದ್ದವು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂದಿರಾರಿಗೆ ಸೋಲಿನ ಭಯ ಕಾಡತೊಡಗಿತ್ತು.

ಹೀಗಾಗಿ, ಆರೆಸ್ಸೆಸ್‌ನ ಹಿರಿಯ ಪ್ರಚಾರಕರೊಬ್ಬರಿಗೆ ಕೆಲವು ಸರಕಾರಿ ಅಧಿಕಾರಿಗಳ ಮೂಲಕ ಅವರು ಕಳಿಸಿದ ಸಂದೇಶ ಹೀಗಿತ್ತು: “ಸಂಘವು ಜನತಾಪಕ್ಷಕ್ಕೆ ಬೆಂಬಲ ನೀಡಿದರೆ ಸರಕಾರ ಹೇರಿರುವ ನಿಷೇಧವನ್ನು ಹಿಂಪಡೆಯುವುದಿಲ್ಲ. ಜನರ ಮಧ್ಯೆ ಸಂಘಕ್ಕೆ ವಿರೋಧವಿದ್ದು, ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರುತ್ತದೆ. ಆಗ ತೆರೆಯ ಹಿಂದೆ ಕೆಲಸ ಮಾಡುತ್ತಿರುವ ಸ್ವಯಂಸೇವಕರನ್ನು ಬಂಧಿಸಲಾಗುವುದು. ಅದರಿಂದ ಅವರ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಇದೆಲ್ಲವೂ ಬೇಡವೆಂದರೆ ಸಂಘವು ಜನತಾಪಕ್ಷದಿಂದ ದೂರ ಉಳಿಯಬೇಕು".

ಸಂಘವು ತನ್ನ ಮೇಲಿನ ನಿಷೇಧದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಭಾರತದಲ್ಲಿ ಪ್ರಜಾಪ್ರಭುತ್ವ ವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತಿತ್ತು. ಜನತಾಪಕ್ಷ ತನ್ನ ಪ್ರಣಾಳಿಕೆಯಲ್ಲಿ ‘ಆರೆಸ್ಸೆಸ್ ಮೇಲಿನ ನಿಷೇಧವನ್ನು ತೆಗೆಯುತ್ತೇವೆ’ ಎಂದು ಮುದ್ರಿಸಲು ಮುಂದಾದಾಗ ಬೇಡ ವೆಂದಿದ್ದ ಬಾಳಾಸಾಹೇಬರು, “ಸಂಘದ ಕೆಲಸವೇನಿದ್ದರೂ ದೇಶವನ್ನು ಸರ್ವಾಧಿಕಾರದಿಂದ ಮುಕ್ತಗೊಳಿಸಿ ಪ್ರಜಾಪ್ರಭುತ್ವವನ್ನು ಮರುನಿರ್ಮಾಣ ಮಾಡುವುದು" ಎಂದಿದ್ದರು.

ದೊಡ್ಡಮಟ್ಟದ ಹೋರಾಟಗಳ ಫಲವಾಗಿ ದೇಶದಲ್ಲಿ ಇಂದಿರಾರ ಸರ್ವಾಧಿಕಾರಿ ಆಡಳಿತ ಅಂತ್ಯ ವಾಯಿತು, ಪ್ರಜಾಪ್ರಭುತ್ವ ಮರುಸ್ಥಾಪಿತವಾಯಿತು. ಸುಮಾರು 30 ವರ್ಷಗಳ ಬಳಿಕ ಭಾರತದಲ್ಲಿ ಕಾಂಗ್ರೆಸ್ಸೇತರ ಸರಕಾರ, ಅಂದರೆ ಜನತಾಪಕ್ಷದ ಸರಕಾರ ಅಧಿಕಾರಕ್ಕೆ ಬಂದಿತು. 21 ತಿಂಗಳುಗಳ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲಿನ ನಿಷೇಧವನ್ನು ನೂತನ ಸರಕಾರ ಹಿಂಪಡೆಯಿತು.

ಜೈಲಿನಿಂದ ಹೊರ ಬಂದ ಬಾಳಾಸಾಹೇಬರು ಯಥಾಪ್ರಕಾರ ಸಂಘದಲ್ಲಿನ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ಸಂಘವು ತಮಗೆ ನೀಡಿದ್ದ ಜವಾಬ್ದಾರಿಯನ್ನು ನಿಭಾಯಿಸಿದರು.