Keshava Prasad B Column: ಬೇಗನೆ ಶ್ರೀಮಂತರಾಗಲು ಸಾಧ್ಯವಿಲ್ಲ, ಸಂಬಳ ಒಂದೇ ಸಾಲದು !
ಪೂರ್ಣ ಪ್ರಮಾಣದ ಲೇಖಕರಾಗುವುದಕ್ಕೆ ಮೊದಲು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವರು 11 ವರ್ಷ ಗಳ ಸೇವೆ ಸಲ್ಲಿಸಿದ್ದರು. ಆದ್ದರಿಂದ ಹಣದ ಬಗ್ಗೆ ಅವರು ಆಗಿಂದಾಗ್ಗೆ ಬರೆಯುವ ಲೇಖನಗಳು ಸ್ವಾರಸ್ಯಕರ ವಾಗಿರುತ್ತವೆ. ಅಮೆರಿಕ ಮೂಲದ ಬಹುರಾಷ್ಟ್ರೀಯ ಬ್ಯಾಂಕಿಂಗ್ ದಿಗ್ಗಜ ‘ಗೋಲ್ಡ್ ಮನ್ ಸ್ಯಾಕ್ಸ್’ನ ಹಾಂಕಾಂಗ್ ಕಚೇರಿಯಲ್ಲಿ ದುಡಿದಿದ್ದರು. ಡೊಯೆಚ್ ಬ್ಯಾಂಕ್ನ ಮುಂಬಯಿ ಶಾಖೆಯಲ್ಲೂ ಕೆಲ ಕಾಲ ನಿರ್ದೇಶಕರಾಗಿದ್ದರು.


ಮನಿ ಮೈಂಡೆಡ್
ನೀವು ದಿಢೀರ್ ಶ್ರೀಮಂತರಾಗಲು ಸಾಧ್ಯವಿಲ್ಲ. ಸಂಬಳ ಒಂದೇ ಸಾಲದು. ನೀವೆಷ್ಟು ಸಂಪಾದಿಸು ತ್ತೀರಿ ಎನ್ನುವುದು ಮಾತ್ರ ಮುಖ್ಯವಲ್ಲ, ಎಷ್ಟು ಉಳಿತಾಯ ಮಾಡುತ್ತೀರಿ ಮತ್ತು ಹೂಡಿಕೆ ಮಾಡುತ್ತೀರಿ ಎಂಬುದನ್ನು ಅವಲಂಬಿಸಿ ಶ್ರೀಮಂತರಾಗುತ್ತೀರಿ"- ಹೀಗೆ ಖಚಿತವಾಗಿ ಹೇಳುತ್ತಾರೆ ಖ್ಯಾತ ಲೇಖಕ ಚೇತನ್ ಭಗತ್! 1974ರಲ್ಲಿ ಜನಿಸಿದ ಅವರು ಅಸಂಖ್ಯಾತ ಯುವ ಓದುಗರ ಕಣ್ಮಣಿ.
ಅಂಕಣಕಾರ, ಚಿತ್ರಕಥೆ ಬರಹಗಾರ, ಯುಟ್ಯೂಬರ್ ಮತ್ತು ಪ್ರೇರಣಾದಾಯಿ ಲೇಖನಗಳ ಸರದಾರ. 2010ರಲ್ಲಿ ‘ಟೈಮ್’ ನಿಯತಕಾಲಿಕೆಯ, ಜಗತ್ತಿನ 100 ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿ ಕೊಂಡ ಲೇಖಕ! ಅವರ ಕಾದಂಬರಿಗಳು ಬಾಲಿವುಡ್ ಸಿನಿಮಾ ಆಗಿವೆ.
ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದ ಚೇತನ್ ಭಗತ್ ಅವರ ತಂದೆ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ತಾಯಿ ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ವಿಜ್ಞಾನಿ ಯಾಗಿದ್ದರು.
ಆರ್ಮಿ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದಾಗ ಶಾಲೆಯ ನಿಯತಕಾಲಿಕೆಗೆ ‘ಜೋಕ್ಸ್’ ಬರೆಯು ತ್ತಿದ್ದರಂತೆ. ದಿಲ್ಲಿಯ ಐಐಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಗಳಿಸಿದ ಬಳಿಕ ಅಹಮದಾಬಾದ್ನ ಐಐಎಂನಲ್ಲಿ ಮಾರ್ಕೆಟಿಂಗ್ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಡಿಗ್ರಿ ಪಡೆದರು.
ಇದನ್ನೂ ಓದಿ: Keshav Prasad B Column: ವಿಕಸಿತ ಭಾರತಕ್ಕಾಗಿ ಪ್ರತಿ ಹೆಜ್ಜೆಯೂ ಐತಿಹಾಸಿಕ, ಸಂಭ್ರಮ ಸ್ವಾಭಾವಿಕ !
ಪೂರ್ಣ ಪ್ರಮಾಣದ ಲೇಖಕರಾಗುವುದಕ್ಕೆ ಮೊದಲು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವರು 11 ವರ್ಷ ಗಳ ಸೇವೆ ಸಲ್ಲಿಸಿದ್ದರು. ಆದ್ದರಿಂದ ಹಣದ ಬಗ್ಗೆ ಅವರು ಆಗಿಂದಾಗ್ಗೆ ಬರೆಯುವ ಲೇಖನಗಳು ಸ್ವಾರಸ್ಯಕರವಾಗಿರುತ್ತವೆ. ಅಮೆರಿಕ ಮೂಲದ ಬಹುರಾಷ್ಟ್ರೀಯ ಬ್ಯಾಂಕಿಂಗ್ ದಿಗ್ಗಜ ‘ಗೋಲ್ಡ್ ಮನ್ ಸ್ಯಾಕ್ಸ್’ನ ಹಾಂಕಾಂಗ್ ಕಚೇರಿಯಲ್ಲಿ ದುಡಿದಿದ್ದರು. ಡೊಯೆಚ್ ಬ್ಯಾಂಕ್ನ ಮುಂಬಯಿ ಶಾಖೆಯಲ್ಲೂ ಕೆಲ ಕಾಲ ನಿರ್ದೇಶಕರಾಗಿದ್ದರು.
“ಗೋಲ್ಡ್ಮನ್ ಸ್ಯಾಕ್ಸ್ನಂಥ ಬ್ಯಾಂಕ್ನಲ್ಲಿ ಡಾಲರ್ ಗಟ್ಟಲೆ ಸಂಬಳ ಪಡೆಯುತ್ತಿದ್ದೆ. ಮಧ್ಯಮ ವರ್ಗದ ಕುಟುಂಬದ ದೃಷ್ಟಿಯಿಂದ ಹೋಲಿಸಿದರೆ, ಅದ್ಭುತ ಸಕ್ಸಸ್ ಅದಾಗಿತ್ತು. ಅನೇಕ ಮಂದಿ ಗೋಲ್ಡಮನ್ ಸ್ಯಾಕ್ಸ್ನಲ್ಲಿ ಕೆಲಸ ಸಿಕ್ಕಿದರೆ ಸಾಕು ಎಂದು ಹೆಣಗಾಡುತ್ತಿದ್ದರು. ಅದಕ್ಕಾಗಿ ನಾನೂ ಇಪ್ಪತ್ತೇಳು ಇಂಟರ್ವ್ಯೂಗಳನ್ನು ಎದುರಿಸಿದ್ದೆ. ಹೀಗಿದ್ದರೂ, ನನಗೆ ಸಂತೋಷ ಇರಲಿಲ್ಲ.
ಐಐಟಿಯ ಹಾಸ್ಟೆಲ್ನ ಸಣ್ಣ ಕೊಠಡಿಯಲ್ಲಿ ಮನಸ್ಸಿಗೆ ತೋಚಿದ್ದನ್ನು ಗೀಚುತ್ತಿದ್ದಾಗ, ಗೆಳೆಯ ರೊಂದಿಗೆ ಹರಟೆ ಹೊಡೆಯುತ್ತಿದ್ದ ದಿನಗಳ ಅರಾಮವಾಗಿ ಇರುತ್ತಿದ್ದೆ. ಆದ್ದರಿಂದ ಬ್ಯಾಂಕಿನ ಕೆಲಸದ ಜತೆ ಜತೆಯಲ್ಲಿಯೇ ಬಿಡುವಿನಲ್ಲಿ ಬರವಣಿಗೆಯ ಹವ್ಯಾಸವನ್ನು ಮುಂದುವರಿಸಿದೆ. ಗೋಲ್ಡ್ಮನ್ ಸ್ಯಾಕ್ಸ್ನಲ್ಲಿದ್ದಾಗಲೇ 2000ರಲ್ಲಿ ‘ಫೈವ್ ಪಾಯಿಂಟ್ ಸಮ್ವನ್’ ಕಾದಂಬರಿ ಬರೆದೆ.
ಅದು ನನಗೆ ತೃಪ್ತಿ ಕೊಟ್ಟಿತು. ಮಾತ್ರವಲ್ಲದೆ ಪೂರ್ಣಕಾಲಿಕ ಲೇಖಕನಾಗುವ ಹಂತಕ್ಕೆ ಕರೆದೊ ಯ್ದಿತು" ಎನ್ನುತ್ತಾರೆ ಚೇತನ್ ಭಗತ್. 2009ರಲ್ಲಿ ಗಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದ್ದ ಪ್ರಸಿದ್ಧ ಬಾಲಿವುಡ್ ಸಿನಿಮಾ ‘ತ್ರೀ ಈಡಿಯಟ್ಸ್ ’ನ ಕಥೆ ಇದೇ ಕಾದಂಬರಿಯನ್ನು ಆಧರಿಸಿದ್ದು. 2005ರಲ್ಲಿ ಅವರು ಎರಡನೇ ಕಾದಂಬರಿ ‘ಒನ್ ನೈಟ್ ಅಟ್ ದಿ ಕಾಲ್ ಸೆಂಟರ್’ ಬಿಡುಗಡೆಗೊಳಿಸಿದರು, ಮೂರೇ ದಿನದಲ್ಲಿ ಅದರ 50000 ಪ್ರತಿಗಳು ಮಾರಾಟವಾದವು.
ಬ್ಯಾಂಕಿಂಗ್ನಲ್ಲಿ ದಶಕದ ಅನುಭವ ಇರುವುದರಿಂದಲೋ ಏನೋ, ಚೇತನ್ ಭಗತ್ ಅವರು ಹಲವಾರು ಸಲ ವೈಯಕ್ತಿಕ ಹಣಕಾಸು ವಿಚಾರಗಳ ಬಗ್ಗೆ ಬರೆದಿದ್ದಾರೆ. ಸಂದರ್ಶನಗಳಲ್ಲಿ ಉಪಯುಕ್ತ ಸಲಹೆಗಳನ್ನೂ ಕೊಟ್ಟಿದ್ದಾರೆ. “ನೀವು ಸಂಬಳ ಮಾತ್ರ ಪಡೆಯುತ್ತಿದ್ದರೆ ಶ್ರೀಮಂತ ರಾಗಲು ಸಾಧ್ಯವಿಲ್ಲ" ಎಂಬ ವಾಸ್ತವವನ್ನು ಹೇಳಲು ಚೇತನ್ ಭಗತ್ ಹಿಂಜರಿಯುವುದಿಲ್ಲ.
ಹಾಗಾದರೆ ಏನು ಮಾಡಬೇಕು? ಉಳಿತಾಯ ಮತ್ತು ಹೂಡಿಕೆ ಎರಡನ್ನೂ ಮಾಡಲು ಕಲಿಯಬೇಕು. ಇದನ್ನು ಮನದಟ್ಟು ಮಾಡಿಕೊಡಲು ತಮ್ಮ ಮತ್ತು ಸ್ನೇಹಿತನ ಸ್ವಾರಸ್ಯಕರ ಕಥೆಯೊಂದನ್ನು ಇತ್ತೀಚಿನ ಕೃತಿ ‘11 ರೂಲ್ಸ್ ಫಾರ್ ಲೈಫ್’ನಲ್ಲಿ ವಿವರಿಸಿದ್ದಾರೆ.
ಅದರ ಸಾರ ಇಲ್ಲಿದೆ. “ನನ್ನ ಸ್ನೇಹಿತ ದಿನೇಶ್ (ಹೆಸರು ಬದಲಿಸಿದೆ). ಈಗ ಸಂಕ್ಷಿಪ್ತವಾಗಿ ‘ಡಿ’ ಎನ್ನೋಣ. ಕಾಲೇಜು ದಿನಗಳಿಂದ ಸ್ನೇಹಿತರು. ಇಬ್ಬರೂ ಐವತ್ತರ ವಯಸ್ಸಿಗೆ ಬಂದು ಮುಟ್ಟಿದ್ದೇವೆ. ವರ್ಷದ ಹಿಂದೆ ‘ಡಿ’ ಕೆಲಸ ಕಳೆದುಕೊಂಡ. ಮತ್ತೊಂದು ಕೆಲಸ ಸಿಗುತ್ತಿಲ್ಲ ಎಂಬ ಆತಂಕದಲ್ಲಿ ದ್ದಾನೆ.
ಒಂದು ದಿನ ಬಾರ್ನಲ್ಲಿ ಭೇಟಿಯಾಗಿ, ವಿಸ್ಕಿ ಹೀರುತ್ತಾ ಮಾತನಾಡುತ್ತಾ ಕುಳಿತೆವು. ‘ಚಿಂತೆ ಬಿಡು, ಹೇಗೂ ಒಂದಷ್ಟು ಉಳಿತಾಯದ ಹಣ ಇದೆಯಲ್ಲವೇ, ಹೊಸತು ಏನನ್ನಾದರೂ ಮಾಡು’ ಎಂದೆ. ‘ಡಿ’ ಸಿಗರೇಟ್ ಪ್ಯಾಕ್ ಹೊರ ತೆಗೆಯುತ್ತಿದ್ದಂತೆ ‘ಇದು ಬೇಡ, ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದೆ.
‘ಫೈನ್ ಮಿಸ್ಟರ್ ಮೋಟಿವೇಷನಲ್ ಸ್ಪೀಕರ್, ನನಗೀಗ ಯಾರ ಬಳಿಯಿಂದಾದರೂ ಖರ್ಚಿಗೆ ಒಂದಷ್ಟು ದುಡ್ಡು ಬೇಕು’ ಅಂದ. ‘ಇದು ನಿನಗೆ ತಾತ್ಕಾಲಿಕ ನೆಮ್ಮದಿ ಕೊಡಬಹುದು, ಆದರೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತೆ’ ಎಂದೆ. ‘ನಿನ್ನ ಆಯ್ಕೆಯ ಲಕ್ಷುರಿ ನನಗಿಲ್ಲ ಮಿಸ್ಟರ್ ರೈಟರ್, ನಾನೀಗ ಕತ್ತೆಯಂತೆ ದುಡಿಯಲೇಬೇಕು. ಹೊಸ ಮನೆಯ ಇಎಂಐ ಇದೆ. ಮಕ್ಕಳ ಶಾಲೆಯ ಖರ್ಚುಗಳು ಇವೆ. ಕಾರ್ ಲೋನ್ ಇದೆ. ಬಿಲ್ಲುಗಳನ್ನು ಕಟ್ಟಬೇಕು. ಉಳಿತಾಯ ಏನೂ ಇಲ್ಲ. ನಾನು ನಿನ್ನಷ್ಟು ಅದೃಷ್ಟವಂತ ಬೆ ಸೆಲ್ಲರ್ ಲೇಖಕನಲ್ಲ’ ಎಂದ... “ಆದರೆ ನನ್ನ ಹಾದಿ ಹೇಗಿತ್ತು? ಬಹಳ ಸುಲಭದ ಹಾದಿಯಂತೂ ಆಗಿರಲಿಲ್ಲ. ನಾನು ಬ್ಯಾಂಕಿನ ಹುದ್ದೆಗೆ ರಾಜೀನಾಮೆ ಕೊಟ್ಟು ಪೂರ್ಣ ಕಾಲಿಕ ಲೇಖಕನಾಗಲು ನಿರ್ಧರಿಸಿದಾಗ ಬರವಣಿಗೆಯೊಂದರ ಆಗ ಅಂಥ ಗಳಿಕೆ ಇದ್ದಿರಲಿಲ್ಲ.
ಬ್ಯಾಂಕಿನ ಹುದ್ದೆಯ ಸಂಪಾದಿಸುತ್ತಿದ್ದ ಹಣದ ಐದು ಪರ್ಸೆಂಟಿಗೂ ಕಡಿಮೆಯಷ್ಟನ್ನು ಬರವಣಿಗೆ ಯಲ್ಲಿ ಪಡೆಯುತ್ತಿದ್ದೆ. ಅಂದರೆ ನನ್ನ ಆದಾಯದಲ್ಲಿ 95 ಪರ್ಸೆಂಟ್ ಇಳಿದಿತ್ತು. ಐದು ಪರ್ಸೆಂಟ್ ಆದಾಯಕ್ಕೂ ಖಾತರಿ ಇದ್ದಿರಲಿಲ್ಲ. ಒಂದು ವೇಳೆ ಮತ್ತೊಬ್ಬ ಲೇಖಕ ನನ್ನನ್ನು ಹಿಂದಿ ಕ್ಕುತ್ತಿದ್ದರೆ? ಓದುಗರು ಚೇತನ ಭಗತ್ನನ್ನು ಮರೆಯುತ್ತಿದ್ದರೆ? ಇದ್ದ ಐದು ಪರ್ಸೆಂಟ್ ಆದಾಯವೂ ಶೂನ್ಯ ವಾಗುತ್ತಿತ್ತು... “ನನ್ನಲ್ಲಿ ಧೈರ್ಯ ಇದ್ದುದರಿಂದ ಬ್ಯಾಂಕಿನ ಉದ್ಯೋಗವನ್ನು ಬಿಟ್ಟು ಲೇಖಕನಾದೆ. ಹೊಸ ಬರಹಗಾರ ಜನ್ಮ ತಾಳಿದ.
ಹೀಗಿದ್ದರೂ, ನಾನು ಒಂದು ಸೇಫ್ಟಿ ನೆಟ್ ಅನ್ನು ಇಟ್ಟುಕೊಂಡೇ ಧುಮುಕಿದ್ದೆ. ಅದು ಯಾವುದು ಎಂದರೆ ನನ್ನ ಹಣಕಾಸು ಯೋಜನೆ (Financial planning). ಆದ್ದರಿಂದಲೇ 35ನೇ ವಯಸ್ಸಿನಲ್ಲಿ ನನ್ನ ರೆಗ್ಯುಲರ್ ಜಾಬ್ ಅನ್ನು ಬಿಟ್ಟು ಬಿಡಲು ಅದು ಸಹಕಾರಿಯಾಯಿತು. ಆದರೆ ‘ಡಿ’ಗೆ ಐವತ್ತರ ವಯಸ್ಸಿನಲ್ಲೂ ಹಣಕಾಸು ಯೋಜನೆ ಮಾಡಲು ಸಾಧ್ಯವಾಗಿಲ್ಲ.
ಯಾಕೆ?... “ನಾನು ಮತ್ತು ‘ಡಿ’ ಒಟ್ಟಿಗೆ ವಿದೇಶದಲ್ಲಿ ಸಮಾನ ಸಂಬಳದ ಕೆಲಸಕ್ಕೆ ಸೇರಿದ್ದೆವು. ಇಬ್ಬರೂ ದುಬಾರಿಯಾದ ಹಾಂಕಾಂಗ್ ನಗರದಲ್ಲಿ ವಾಸಿಸುತ್ತಿದ್ದೆವು. ಆದರೆ ನಾನು ಹಣವನ್ನು ಸಾಧ್ಯವಾದಷ್ಟು ಉಳಿತಾಯ ಮಾಡುತ್ತಿದ್ದೆ. ‘ಡಿ’ ಮಾಡುತ್ತಿರಲಿಲ್ಲ. ಕಡಿಮೆ ಬಾಡಿಗೆಯ ಮನೆ ಯಲ್ಲಿದ್ದುಕೊಂಡು ವರ್ಷಕ್ಕೆ 18000 ಡಾಲರ್ ಉಳಿಸುತ್ತಿದ್ದೆ.
ಮನೆಯ ಹೆಚ್ಚಿನ ಊಟೋಪಚಾರ ಮಾಡುತ್ತಿದ್ದೆ. ವಿಲಾಸಿ ಪ್ರವಾಸಗಳು ಕಡಿಮೆಯೇ ಇತ್ತು. ಟ್ಯಾಕ್ಸಿಯ ಬದಲಿಗೆ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದೆ. ಆದರೆ ‘ಡಿ’ ಹಾಂಕಾಂಗ್ನ ದುಬಾರಿ ಬಡಾವಣೆಯಲ್ಲಿ ದುಬಾರಿ ಬಾಡಿಗೆಯ ಮನೆಯಲ್ಲಿ ವಾಸಿಸುತ್ತಿದ್ದ, ದುಬಾರಿ ಮದ್ಯವನ್ನೇ ಸೇವಿಸು ತ್ತಿದ್ದ. ಲಕ್ಷುರಿ ಕಾರನ್ನು ಖರೀದಿಸಿದ್ದ. ಉಳಿತಾಯ ಆತನಿಗೆ ಆಗದ ಮಾತಾಗಿತ್ತು....
“ನಾನು ಉಳಿತಾಯ ಮಾಡಿದ್ದು ಮಾತ್ರವಲ್ಲದೆ, ಹೂಡಿಕೆಯನ್ನೂ ಮಾಡುತ್ತಿದ್ದೆ. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದು ಹೇಗೆ ಎಂಬುದು ನನಗೆ ಗೊತ್ತಿರಲಿಲ್ಲ. ಹಾಂಕಾಂಗ್ನಲ್ಲಿ ಗೋಲ್ಡ್ ಮನ್ ಸ್ಯಾಕ್ಸ್ಗೆ ಸೇರುವುದಕ್ಕೆ ಮೊದಲು ನಾನು ಕೆಲಸಕ್ಕೆ ಸೇರಿದ್ದ ಕಂಪನಿಯೊಂದರಲ್ಲಿ ಕೆಲವೇ ತಿಂಗಳಲ್ಲಿ ಸಹೋದ್ಯೋಗಿಯ ನೆರವು ಪಡೆದು ಬ್ರೋಕರೇಜ್ ಅಕೌಂಟ್ ತೆರೆದೆ. ನಾನು ಕೆಲಸ ಮಾಡುತ್ತಿದ್ದ ಕಂಪನಿಯದ್ದೇ ಷೇರುಗಳಲ್ಲಿ ಆಗಿನ ನನ್ನ ಉಳಿತಾಯದ ಬಹುಪಾಲು ಹಣವನ್ನು ಹೂಡಿಕೆ ಮಾಡಿದ್ದೆ. 5000 ಡಾಲರ್ ಮೊತ್ತವಾಗಿತ್ತು. ಬೇರೆ ಕಂಪನಿ ಬಗ್ಗೆ ತಿಳಿದಿರಲಿಲ್ಲ.
ಆದರೆ ಅದು ದೊಡ್ಡ ಪ್ರಮಾದವಾಗಿತ್ತು. ಆರು ತಿಂಗಳುಗಳ ಬಳಿಕ ಹಣಕಾಸು ಬಿಕ್ಕಟ್ಟಿನ ಪರಿಣಾಮ ಆ ಕಂಪನಿ ದಿವಾಳಿಯಾಗಿ ಬಾಗಿಲು ಮುಚ್ಚಿತು. ಷೇರು ನಷ್ಟಕ್ಕೀಡಾಗಿ ನನ್ನ ಉಳಿತಾಯ ಶೂನ್ಯಕ್ಕೆ ತಿರುಗಿತ್ತು. ಜತೆಗೆ ಉದ್ಯೋಗವನ್ನೂ ಕಳೆದುಕೊಂಡೆ. ಹೀಗಿದ್ದರೂ, ಗೋಲ್ಡ್ಮನ್ ಸ್ಯಾಕ್ಸ್ ಬ್ಯಾಂಕಿಗೆ ಸೇರಿದ ಬಳಿಕ ಹೊಸ ಸಹೋದ್ಯೋಗಿಗಳೊಂದಿಗೆ ಸ್ಟಾಕ್ ಮಾರ್ಕೆಟ್ ಬಗ್ಗೆ ಹೆಚ್ಚು ತಿಳಿದುಕೊಂಡೆ.
ಅವರೆಲ್ಲ ಟೆಕ್ ಸ್ಟಾಕ್ಗಳಲ್ಲಿ ಹೂಡಿಕೆ ಮಾಡಿದ್ದರು. ಈ ಹಿಂದಿನ ಅನುಭವದಿಂದ ಪಾಠ ಕಲಿತು ಒಂದೇ ಕಂಪನಿಯಲ್ಲಿ ಹೂಡದಿರಲು ನಿರ್ಧರಿಸಿದೆ. ಭಿನ್ನ ಟೆಕ್ ಇಂಡೆಕ್ಸ್ ಫಂಡ್ಗಳು ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಿದೆ. ಡಾಟ್ ಕಾಮ್ ಬಿಕ್ಕಟ್ಟಿನಿಂದ ಒಂದಷ್ಟು ನಷ್ಟವಾದರೂ, ಮೂಲ ಹೂಡಿಕೆಯ ಮೊತ್ತಕ್ಕೆ ಧಕ್ಕೆಯಾಗಿರಲಿಲ್ಲ. ಈ ನಡುವೆ ಹೂಡಿಕೆಗೆ ಸಂಬಂಧಿಸಿದ ಅನೇಕ ಪುಸ್ತಕ ಗಳನ್ನು ಓದಿದೆ.
ವಾರೆನ್ ಬಫೆಟ್ ಅವರ ಮೌಲ್ಯಾಧಾರಿತ ಷೇರು ಹೂಡಿಕೆ ಪದ್ಧತಿಯನ್ನು ಅನುಸರಿಸಿದೆ. ಮೆಕ್ ಡೊನಾಲ್ಡ್, ಸ್ಟಾರ್ಬಕ್ಸ್, ಆಪಲ್ ಮೊದಲಾದ ಒಳ್ಳೆಯ ಕಂಪನಿಗಳ ಷೇರುಗಳನ್ನು ಖರೀದಿಸಿದೆ. ಈ ಎಲ್ಲ ಬ್ರ್ಯಾಂಡ್ಗಳನ್ನು ಸ್ವತಃ ಬಳಸುತ್ತಿದ್ದೆ. ಭಾರತದಲ್ಲೂ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದೆ.
ಇಪ್ಪತ್ತೈದು ವರ್ಷಗಳ ಹಿಂದಿನಿಂದಲೂ ನನ್ನ ಉದ್ಯೋಗವೇ ಇರಲಿ, ನಂತರದ ಬರವಣಿಗೆಯೇ ಇರಲಿ. ಜತೆಜತೆಯಲ್ಲಿ ಉಳಿತಾಯ ಮತ್ತು ಹೂಡಿಕೆಯನ್ನು ಮುಂದುವರಿಸಿದ್ದೆ. ಅಲ್ಲಿಂದ ಇಲ್ಲಿಯ ವರೆಗೆ ಹಲವು ಷೇರುಗಳು ಹಲವಾರು ಪಟ್ಟು ಬೆಳೆದು ಲಾಭದಾಯಕವಾಗಿವೆ. ಇದನ್ನು ನನ್ನ ಸಂಪತ್ತಿನ ಬಗ್ಗೆ ಜಂಭದಿಂದ ಕೊಚ್ಚಿಕೊಳ್ಳಲು ಹೇಳುತ್ತಿಲ್ಲ.
ಒಂದೇ ವ್ಯತ್ಯಾಸವೇನೆಂದರೆ ನನ್ನ ಸ್ನೇಹಿತ ‘ಡಿ’ ತನ್ನ ಸಂಪಾದನೆಯ ಬಹುಪಾಲು ಹಣವನ್ನು ಖರ್ಚು ಮಾಡುತ್ತಿದ್ದ. ಉಳಿತಾಯ ಮತ್ತು ಹೂಡಿಕೆಯನ್ನು ಮಾಡುವುದಕ್ಕೆ ಆದ್ಯತೆ ನೀಡಿರಲಿಲ್ಲ. ಇದರ ಪರಿಣಾಮ ಐವತ್ತನೇ ವರ್ಷದಲ್ಲಿ ‘ಡಿ’ ತನ್ನ ಪ್ರಾಥಮಿಕ ಅವಶ್ಯಕತೆಗಳಿಗೆ ಉದ್ಯೋಗವನ್ನು ಹುಡುಕಬೇಕಾಗಿದೆ.
ಮತ್ತೊಂದು ಕಡೆ ನಾನು ಮತ್ತೊಮ್ಮೆ ಕಾರ್ಪೊರೇಟ್ ಕಚೇರಿಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲಿ ಇಲ್ಲ. ಇದು ಲಕ್ಷುರಿಯೇ? ಖಂಡಿತವಾಗಿಯೂ ಹೌದು. ಆದರೆ ಇದಕ್ಕಾಗಿ ಕೆಲವೊಂದು ಇತರ ಲಕ್ಷುರಿಗಳನ್ನು ನಾನು ಕೈಬಿಟ್ಟಿದ್ದೆ. ನಾನು ಅದೃಷ್ಟಶಾಲಿಯೇ? ಹೌದು.
ದೀರ್ಘಾವಧಿಗೆ ಹೂಡಿಕೆ ಮಾಡಿದ್ದರಿಂದ ಮಾರುಕಟ್ಟೆ ನನಗೆ ಉತ್ತಮವಾದ ಪ್ರತಿ-ಲವನ್ನೂ ಕೊಟ್ಟಿದೆ. ಇಂಥ ಆಯ್ಕೆಗಳಿಂದ ತನ್ನ ಅದೃಷ್ಟವನ್ನು ಸಂಪಾದಿಸಲು ‘ಡಿ’ಯನ್ನು ಯಾರೊಬ್ಬರೂ ತಡೆದಿರಲಿಲ್ಲ". ಹೀಗೆ ಚೇತನ್ ಭಗತ್ ವಿವರಿಸುತ್ತಾರೆ. ಎಲ್ಲರೂ ಯಾವುದೇ ವೃತ್ತಿ-ಪ್ರವೃತ್ತಿ ಯಲ್ಲಿದ್ದರೂ, ಉತ್ತಮ ಜೀವನಕ್ಕಾಗಿ ತಪ್ಪದೇ ಅನುಸರಿಸಬೇಕಾದ ನಿಯಮವಿದು. ಅಲ್ವಾ?