ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಅಬ್ಬರಿಸಿದ ಗೂಳಿ: ಸೆನ್ಸೆಕ್ಸ್‌ 746 ಅಂಕ ಜಿಗಿತ, ನಿಫ್ಟಿ 24,585ಕ್ಕೆ ಏರಿಕೆ: ಕಾರಣವೇನು?

Share Market: ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೋಮವಾರ ಗೂಳಿಯ ಅಬ್ಬರ ಕಂಡು ಬಂದಿತು. ಸೆನ್ಸೆಕ್ಸ್‌ ಮಧ್ಯಾಹ್ನದ ವೇಳೆಗೆ 500 ಅಂಕ ಏರಿಕೆಯಾಗಿತ್ತು. 80,397 ಅಂಕಗಳ ಎತ್ತರಕ್ಕೆ ಏರಿತ್ತು. ನಿಫ್ಟಿ 161 ಅಂಕ ಜಿಗಿದು 24,524ರ ಮಟ್ಟದಲ್ಲಿತ್ತು. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್‌ 746 ಅಂಕ ಏರಿಕೆಯಾಗಿ 80,604ಕ್ಕೆ ಸ್ಥಿರವಾಯಿತು. ನಿಫ್ಟಿ 221 ಅಂಕ ಏರಿಕೆಯಾಗಿ 24,585 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ಸೆನ್ಸೆಕ್ಸ್‌ 746 ಅಂಕ ಜಿಗಿತ, ನಿಫ್ಟಿ 24,585ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ.

Profile Siddalinga Swamy Aug 11, 2025 10:23 PM

ಮುಂಬೈ: ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೋಮವಾರ ಗೂಳಿಯ ಅಬ್ಬರ ಕಂಡು ಬಂದಿತು (Stock Market). ಸೆನ್ಸೆಕ್ಸ್‌ (Sensex) ಮಧ್ಯಾಹ್ನದ ವೇಳೆಗೆ 500 ಅಂಕ ಏರಿಕೆಯಾಗಿತ್ತು. 80,397 ಅಂಕಗಳ ಎತ್ತರಕ್ಕೆ ಏರಿತ್ತು. ನಿಫ್ಟಿ (Nifty) 161 ಅಂಕ ಜಿಗಿದು 24,524ರ ಮಟ್ಟದಲ್ಲಿತ್ತು. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್‌ 746 ಅಂಕ ಏರಿಕೆಯಾಗಿ 80,604ಕ್ಕೆ ಸ್ಥಿರವಾಯಿತು. ನಿಫ್ಟಿ 221 ಅಂಕ ಏರಿಕೆಯಾಗಿ 24,585 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಮುಖ್ಯವಾಗಿ ಬ್ಯಾಂಕಿಂಗ್‌ ಷೇರುಗಳು ಗಗನಕ್ಕೇರಿತು. ಸತತ 6 ದಿನಗಳಿಂದ ಕುಸಿಯುತ್ತಿದ್ದ ಸೂಚ್ಯಂಕಗಳು ಇಂದು ಚೇತರಿಸಿತು.

16 ಪ್ರಮುಖ ಸೆಕ್ಟರ್‌ಗಳ ಪೈಕಿ 8 ಸೆಕ್ಟರ್‌ಗಳು ರೆಡ್‌ ಆಗಿತ್ತು. ಬ್ರಾಡರ್‌ ಮಾರ್ಕೆಟ್‌ನಲ್ಲಿ ಸ್ಮಾಲ್‌ ಮತ್ತು ಮಿಡ್‌ ಕ್ಯಾಪ್‌ ಇಂಡೆಕ್ಸ್‌ಗಳು ಇಳಿಕೆ ದಾಖಲಿಸಿತು.



ಎಲೆಕ್ಟ್ರಾನಿಕ್‌ ಉತ್ಪಾದನಾ ವಲಯದ ಕಂಪನಿಯಾಗಿರುವ PG Electroplast ಷೇರು ದರ ಶೇ. 18ಕ್ಕೂ ಹೆಚ್ಚು ಕುಸಿಯಿತು. ಕಳೆದ ಶುಕ್ರವಾರ ಕಂಪನಿಯ ಷೇರಿನ ದರ ಶೇ. 23ಕ್ಕೆ ಇಳಿದಿತ್ತು. ಕಂಪನಿಯ ಇತಿಹಾಸದಲ್ಲಿಯೇ ಹೆಚ್ಚಿನ ಕುಸಿತ ಇದಾಗಿದೆ. ಇದಕ್ಕೆ ಕಾರಣ ಏನೆಂದರೆ, ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ರಿಸಲ್ಟ್‌ ಇಳಿಕೆಯಾಗಿರುವುದು ಮತ್ತು ಪೂರ್ತಿ ವರ್ಷದ ಮುನ್ನೋಟವನ್ನು ಕಡಿತಗೊಳಿಸಿರುವುದು.

PG Electroplast ಕಂಪನಿಯ 1 ಕೋಟಿಗೂ ಹೆಚ್ಚು ಷೇರುಗಳು ಸೋಮವಾರ ಮಲ್ಟಿಪಲ್‌ ಬ್ಲಾಕ್‌ ಡೀಲ್‌ನಲ್ಲಿ ಕೈ ಬದಲಾದ ಕೂಡಲೇ ಷೇರು ದರ ಇಳಿಯಿತು. ನಿಫ್ಟಿ ಪಿಎಸ್‌ಯು ಇಂಡೆಕ್ಸ್‌ ಏರಿಕೆಯಾಯಿತು. ಎಸ್‌ಬಿಐ, ಇಂಡಿಯನ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಇಂಡಿಯಾದ ಷೇರು ದರ ಏರಿಕೆಯಾಯಿತು.

ಇಂದು ಆರಂಭಿಕ ವಹಿವಾಟಿನಲ್ಲಿ ಲಾಭ ಗಳಿಸಿದ ಷೇರುಗಳು: ಎಸ್‌ಬಿಐ, ಎನ್‌ಟಿಪಿಸಿ, ಟ್ರೆಂಟ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಟಾಟಾ ಮೋಟಾರ್ಸ್‌

ನಷ್ಟಕ್ಕೀಡಾದ ಷೇರುಗಳು: ಏಷ್ಯನ್‌ ಪೇಂಟ್ಸ್‌, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫಿನ್‌ ಸರ್ವ್‌, ಎಕ್ಸಿಸ್‌ ಬ್ಯಾಂಕ್‌, ಎಚ್‌ಯುಎಲ್. NSDL ಐಪಿಒದಲ್ಲಿ ಹೂಡಿಕೆದಾರರಿಗೆ 4 ದಿನದಲ್ಲಿ 78% ಲಾಭವಾಗಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉತ್ತರ ಅಮೆರಿಕದ ಅಲಸ್ಕಾದಲ್ಲಿ ಇದೇ ಆಗಸ್ಟ್‌ 15ರಂದು ಮಾತುಕತೆ ನಡೆಸಲಿದ್ದಾರೆ. ಅಮೆರಿಕ-ರಷ್ಯಾ ನಡುವೆ ಸಂಧಾನ ಮಾತುಕತೆ ನಡೆಯಲಿರುವ ಹಿನ್ನೆಲೆಯಲ್ಲಿ ಯುರೋಪ್‌ನಲ್ಲಿ ಷೇರು ಸೂಚ್ಯಂಕಗಳು ಏರಿಕೆಯಾಗಿವೆ.

ಅಮೆರಿಕದ ಅಲಸ್ಕಾ ರಾಜ್ಯವು ಕೆನಡಾ ಜತೆಗೆ ಗಡಿಯನ್ನು ಹಂಚಿಕೊಂಡಿದೆ. ಹಿಂದೊಮ್ಮೆ ಅಲಸ್ಕಾವು ರಷ್ಯಾದ ವಸಾಹತಾಗಿತ್ತು. 1867ರಲ್ಲಿ ಅಮೆರಿಕವು ಅಲಸ್ಕಾ ಪ್ರಾಂತ್ಯವನ್ನು ರಷ್ಯಾದಿಂದ ಖರೀದಿಸಿತ್ತು.

ಇಡೀ ಜಗತ್ತಿನ ಗಮನವನ್ನು ಈ ಅಲಸ್ಕಾ ಸಭೆ ಸೆಳೆದಿದೆ. ಭಾರತ ಕೂಡ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಏಕೆಂದರೆ ಅಮೆರಿಕ-ರಷ್ಯಾ ನಡುವೆ ಒಪ್ಪಂದ ನಡೆದರೆ, ರಷ್ಯಾ-ಉಕ್ರೇನ್‌ ನಡುವೆ ಕದನ ವಿರಾಮ ಏರ್ಪಡುವ ನಿರೀಕ್ಷೆ ಇದೆ. ಒಂದು ವೇಳೆ ಅಮೆರಿಕವು ರಷ್ಯಾ ವಿರುದ್ಧದ ನಿರ್ಬಂಧಗಳನ್ನು ತೆರವುಗೊಳಿಸಲು ಸಮ್ಮತಿಸಿದರೆ, ಭಾರತ ಮತ್ತು ರಷ್ಯಾ ನಡುವೆ ಕಚ್ಚಾ ತೈಲ ವ್ಯಾಪಾರಕ್ಕೆ ಹಾದಿ ಸುಗಮವಾಗಲಿದೆ. ಒಂದು ರಿಲೀಫ್‌ ಸಿಕ್ಕಂತಾಗಲಿದೆ. ಆಗ ರಷ್ಯಾ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಅಮೆರಿಕ ಹಾಕಿರುವ 25% ಟಾರಿಫ್‌ ರದ್ದಾಗುವ ಸಾಧ್ಯತೆಯೂ ಇದೆ. ಹೀಗಾಗಿ ಇದು ಬಹು ನಿರೀಕ್ಷಿತ ಭೇಟಿಯಾಗಿ ಪರಿಣಮಿಸಿದೆ.

ಟ್ರಂಪ್‌ ಅವರು ಕಳೆದ ಶುಕ್ರವಾರ ಅಲಸ್ಕಾದಲ್ಲಿ ಪುಟಿನ್‌ ಜತೆಗಿನ ಮಾತುಕತೆಯನ್ನು ಘೋಷಿಸಿದ್ದರು. ಅದೇ ದಿನ ರಷ್ಯಾಗೆ ಕದನ ವಿರಾಮ ಒಪ್ಪಿಕೊಳ್ಳಲು ಅಮೆರಿಕ ವಿಧಿಸಿರುವ ಗಡುವು ಮುಕ್ತಾಯವಾಗುತ್ತದೆ. ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ಮತ್ತಷ್ಟು ನಿರ್ಬಂಧಗಳನ್ನು ಹೇರುವುದಾಗಿ ಅಮೆರಿಕ ತಿಳಿಸಿದೆ. ಟ್ರಂಪ್‌ ಮಧ್ಯಸ್ಥಿಕೆಯಲ್ಲಿ ರಷ್ಯಾ-ಉಕ್ರೇನ್‌ ನಡುವೆ ಮೂರು ಸಲ ಮಾತುಕತೆ ನಡೆದಿದ್ದರೂ, ಫಲಪ್ರದವಾಗಿಲ್ಲ.

ಅಲಸ್ಕಾ ಸಭೆಯ ಅಜೆಂಡಾ ಏನೆಂದರೆ ಉಕ್ರೇನ್‌ನಲ್ಲಿ ಯುದ್ಧವನ್ನು ಅಂತ್ಯಗೊಳಿಸುವುದು. ಅಮೆರಿದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌, ತಾನು ಗೆದ್ದರೆ 24 ಗಂಟೆಯಲ್ಲಿ ರಷ್ಯಾ-ಉಕ್ರೇನ್‌ ಯುದ್ಧವನ್ನು ನಿಲ್ಲಿಸುವೆ ಎಂದು ಹೇಳಿದ್ದರು. ಕಳೆದ ತಿಂಗಳು ಟ್ರಂಪ್‌, ಪುಟಿನ್‌ ನಡೆಯಿಂದ ನಿರಾಸೆಯಾಗಿದೆ ಎಂದಿದ್ದರು. ತಕ್ಷಣ ಕದನ ವಿರಾಮ ಒಪ್ಪಿಕೊಳ್ಳಲು ಆಗಸ್ಟ್‌ 8ರ ಗಡುವು ಹಾಕಿದ್ದರು. ಅದು ಮುಗಿದಿರುವ ಹಿನ್ನೆಲೆಯಲ್ಲಿ ಆಗಸ್ಟ್‌ 15ಕ್ಕೆ ಮಾತುಕತೆ ನಡೆಯಲಿದೆ. ಉಕ್ರೇನ್‌ ಅಧ್ಯಕ್ಷ ಝೊಲೆನ್‌ಸ್ಕಿ ಅವರನ್ನೂ ಜತೆಗೆ ಮಾತುಕತೆಯಲ್ಲಿ ಸೇರಿಸಬೇಕೆಂದು ಟ್ರಂಪ್‌ ಬಯಸಿದ್ದರೂ, ಸಾಧ್ಯವಾಗಿಲ್ಲ. ಹೀಗಾಗಿ ಆರಂಭದಲ್ಲಿ ಟ್ರಂಪ್-ಪುಟಿನ್‌ ಮಾತನಾಡಲಿದ್ದಾರೆ.

ಬಿಬಿಸಿ ವರದಿಯ ಪ್ರಕಾರ ರಷ್ಯಾ ಮತ್ತು ಉಕ್ರೇನ್‌ ಕೂಡ ಯುದ್ಧವನ್ನು ಅಂತ್ಯಗೊಳಿಸಲು ಬಯಸುತ್ತಿವೆ. ರಷ್ಯಾವು ತಾನು ವಶಪಡಿಸಿಕೊಂಡಿರುವ ಕ್ರಿಮಿಯಾದಿಂದ ಹಿಂದೆ ಸರಿಯಬೇಕು ಎಂದು ಉಕ್ರೇನ್‌ ಒತ್ತಾಯಿಸಿದೆ. ಈ ಬೇಡಿಕೆಗೆ ಇದುವರೆಗೆ ಪುಟಿನ್‌ ಒಪ್ಪಿಲ್ಲ. ತನ್ನ ನೆಲವನ್ನು ರಷ್ಯಾಗೆ ಬಿಟ್ಟು ಕೊಡುವುದಿಲ್ಲ ಎಂದು ಉಕ್ರೇನ್‌ ಪಟ್ಟು ಹಿಡಿದಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳು ನ್ಯಾಟೊ ಮೂಲಕ ಉಕ್ರೇನ್‌ ಮೇಲೆ ಪ್ರಭಾವ ಬೀರುತ್ತಿದ್ದು, ರಷ್ಯಾದ ಗಡಿ ಭಾಗದಲ್ಲಿ ಹೆಜ್ಜೆಯೂರಲು ಬಯಸುತ್ತಿವೆ. ಇದು ರಷ್ಯಾದ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ ಎಂಬುದು ಪುಟಿನ್‌ ಆರೋಪವಾಗಿದೆ. ರಷ್ಯಾವು 2014ರಿಂದ ಕ್ರಿಮಿಯಾವನ್ನು ಆಕ್ರಮಿಸಿಕೊಂಡಿದೆ.

ಭಾರತವು ಟ್ರಂಪ್-ಪುಟಿನ್‌ ಮಾತುಕತೆಯನ್ನು ಸ್ವಾಗತಿಸಿದೆ. ವಿದೇಶಾಂಗ ಸಚಿವಾಲಯವು ಶನಿವಾರ ಹೇಳಿಕೆ ಬಿಡುಗಡೆಗೊಳಿಸಿದ್ದು, ಉಕ್ರೇನ್‌ನಲ್ಲಿ ಸಂಘರ್ಷವನ್ನು ಅಂತ್ಯಗೊಳಿಸಲು ಈ ಮಾತುಕತೆ ಸಹಕಾರಿಯಾಗಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಈ ಪ್ರಯತ್ನವನ್ನು ಭಾರತ ಬೆಂಬಲಿಸಲಿದೆ ಎಂದಿದೆ.

ಈ ಸುದ್ದಿಯನ್ನೂ ಓದಿ | Indian Railway: ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್‌! ಹಬ್ಬಕ್ಕಾಗಿ ಭರ್ಜರಿ ಆಫರ್‌