ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tiger Death: ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದೇ ದಿನ 5 ಹುಲಿ ಸಾವು, ವಿಷಪ್ರಾಶನ ಶಂಕೆ

Tiger death: ಹುಲಿಗಳ ಸಾವು ಪ್ರಕರಣದ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ತ್ವರಿತ ಕ್ರಮ ಕೈಗೊಂಡಿದ್ದು, ಹುಲಿಗಳ ಅಸಹಜ ಸಾವಿನ‌ ಕುರಿತು ತನಿಖೆಗೆ ಉನ್ನತ ಮಟ್ಟದ ತನಿಖಾ ತಂಡ ರಚಿಸಿದ್ದಾರೆ. ಹುಲಿ ಕಳೇಬರ ಸಿಕ್ಕ ಪ್ರದೇಶದಿಂದ 500 ಮೀ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕ್ಷ್ಯ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದೇ ದಿನ 5 ಹುಲಿ ಸಾವು, ವಿಷಪ್ರಾಶನ ಶಂಕೆ

ಹರೀಶ್‌ ಕೇರ ಹರೀಶ್‌ ಕೇರ Jun 27, 2025 8:04 AM

ಚಾಮರಾಜನಗರ : ಒಂದೇ ದಿನ 5 ಹುಲಿಗಳು ಮೃತಪಟ್ಟ ಘಟನೆ ಹನೂರು ತಾಲೂಕಿನ ಮೀಣ್ಯಂ ಸಮೀಪದ ಅರಣ್ಯದಲ್ಲಿ ಗುರುವಾರ ನಡೆದಿದೆ. ತಾಯಿ ಹುಲಿ ಮತ್ತು 4 ಮರಿಗಳು (tiger death) ಅಸುನೀಗಿದ್ದು, ಮೇಲ್ನೋಟಕ್ಕೆ ವಿಷಪ್ರಾಷನದಿಂದ ಅಸುನೀಗಿರುವ ಶಂಕೆ ವ್ಯಕ್ತವಾಗಿದೆ‌. ಮಲೆ ಮಹದೇಶ್ವರ (Male Mahadeshwara hills) ವನ್ಯಜೀವಿಧಾಮದ ಹೂಗ್ಯಂ ವಲಯದ ಮೀಣ್ಯಂನಲ್ಲಿ ಗುರುವಾರ ಬೆಳಗ್ಗೆ ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ ಈ ಹುಲಿಗಳ ಅಸಹಜ ಸಾವು ಪ್ರಕರಣ ತಿಳಿದಿದೆ.

ಹುಲಿಗಳು ಮೃತಪಟ್ಟ ಅನತಿ ದೂರದಲ್ಲಿ ಹಸುವೊಂದರ ಕಳೇಬರ ಪತ್ತೆಯಾಗಿದ್ದು, ಹುಲಿ ಹಸುವನ್ನು ಬೇಟೆಯಾಡಿದ ಕೋಪಕ್ಕೆ ಯಾರೋ ವಿಷ ಹಾಕಿರುವ ಸಾಧ್ಯತೆ ಇದೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.

6 ಮಂದಿಯ ಉನ್ನತ ಮಟ್ಟದ ತಂಡ ರಚನೆ

ಹುಲಿಗಳ ಸಾವು ಪ್ರಕರಣದ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ತ್ವರಿತ ಕ್ರಮ ಕೈಗೊಂಡಿದ್ದು, ಹುಲಿಗಳ ಅಸಹಜ ಸಾವಿನ‌ ಕುರಿತು ತನಿಖೆಗೆ ಉನ್ನತ ಮಟ್ಟದ ತನಿಖಾ ತಂಡ ರಚಿಸಿದ್ದಾರೆ.

ಪಿಸಿಸಿಎಫ್ ಬಿ. ಪಿ‌. ರವಿ ನೇತೃತ್ವದ ತನಿಖಾ ತಂಡ ಇದಾಗಿದ್ದು, ಎಪಿಸಿಸಿಎಫ್ ಶ್ರೀನಿವಾಸುಲು, ಚಾಮರಾಜನಗರ ಸಿಸಿಎಫ್ ಹೀರಾಲಾಲ್, ಓರ್ವ ಎನ್​​ಟಿಸಿಎ ಪ್ರತಿನಿಧಿ, ಮೈಸೂರು ಮೃಗಾಲಯದ ವೈದ್ಯಾಧಿಕಾರಿ ಹಾಗೂ ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಈ ತನಿಖಾ ತಂಡದಲ್ಲಿದ್ದು, 14 ದಿನಗಳೊಳಗೆ ಸಂಪೂರ್ಣ ವರದಿ ಕೊಡುವಂತೆ ಸಚಿವರು ಆದೇಶಿಸಿದ್ದಾರೆ.

ಮಲೆ ಮಹದೇಶ್ವರ ವನ್ಯಜೀವಿಧಾಮ ಡಿಸಿಎಫ್ ಚಕ್ರಪಾಣಿ, ಪಶು ವೈದ್ಯ ಡಾ. ವಾಸಿಂ‌ ಮಿರ್ಜಾ, ಹನೂರಿನ ಪಶು ವೈದ್ಯ ಡಾ. ಸಿದ್ದರಾಜು ಅವರು ಹುಲಿ ಮತ್ತು ಹುಲಿ ಮರಿಗಳ ಅಂಗಾಂಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ ವಹಿಸಿದ್ದಾರೆ. ಎನ್ ಟಿಸಿಎ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಂಡಿದ್ದು, ಹುಲಿ ಕಳೇಬರ ಸಿಕ್ಕ ಪ್ರದೇಶದಿಂದ 500 ಮೀ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕ್ಷ್ಯ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಇದನ್ನೂ ಓದಿ: Elephant Attack: ಶಿವಮೊಗ್ಗದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ, ಚಾಮರಾಜನಗರದಲ್ಲಿ ಮಹಿಳೆಯ ಹೊತ್ತೊಯ್ದ ಹುಲಿ