ಡಿ.25ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ; ಬೈಕ್ ರ್ಯಾಲಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ
2nd Ayurveda World Summit: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಡಿಸೆಂಬರ್ 25ರಿಂದ 28ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಆಯುರ್ವೇದ ಸಮ್ಮೇಳನದ ಜನಜಾಗೃತಿಗಾಗಿ, ಬೆಂಗಳೂರಿನ ಗಿರಿನಗರಲ್ಲಿ ಬೃಹತ್ ಆಯುರ್ವೇದ ಬೈಕ್ ಜಾಥಾಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ ನೀಡಿದರು.
ಆಯುರ್ವೇದ ಬೈಕ್ ಜಾಥಾಗೆ ನ್ಯಾ. ವಿ. ಶ್ರೀಶಾನಂದ ಚಾಲನೆ. -
ಬೆಂಗಳೂರು, ಡಿ.20: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಡಿಸೆಂಬರ್ 25ರಿಂದ 28ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದ್ವಿತೀಯ ಆಯುರ್ವೇದ ಸಮ್ಮೇಳನ (2nd Ayurveda World Summit) ನಡೆಯುವ ಹಿನ್ನೆಲೆಯಲ್ಲಿ ಜನಜಾಗೃತಿಗಾಗಿ ಬೆಂಗಳೂರಿನ ಗಿರಿನಗರದಿಂದ - ಬಸವನಗುಡಿ - ಗಾಂಧಿ ಬಝಾರ್ - ಗಿರಿನಗರದವರೆಗೆ ಬೃಹತ್ ಆಯುರ್ವೇದ ಬೈಕ್ ಜಾಥಾ ನಡೆಯಿತು. ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ, ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ಆಟ - ಪಾಠ ಹಾಗೂ ಚಿಂತನೆ ಸರಿಯಾದಾಗ ಆರೋಗ್ಯಪೂರ್ಣ ಜೀವನ ನಮ್ಮದಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯರದ್ದು ವಸುಧೈವ ಕುಟುಂಬಕಂ ಎಂಬ ವಿಶ್ವಭ್ರಾತೃತ್ವದ ಚಿಂತನೆಯಾಗಿದೆ. ಕಾಯಿಲೆಗಳು ರಸ್ತೆಯ ಹಂಪ್ ಇದ್ದಂತೆ. ನಾವು ವೇಗವಾದ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಕಾಯಿಲೆಗಳು ಬರುತ್ತವೆ ಎಂದು ಅಭಿಪ್ರಾಯಪಟ್ಟರು.
ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದದಲ್ಲಿ ಗರ್ಭದ ಬಗ್ಗೆ ವೈಜ್ಞಾನಿಕ ಮಾಹಿತಿಗಳು ಇದೆ. ಆಗ ಯಾವ Ultrasound Scanning ಗಳು ಇರಲಿಲ್ಲ. ಆದರೂ ಅಂತಹ ಸೂಕ್ಷ್ಮ ಮಾಹಿತಿಗಳನ್ನು ನಮ್ಮ ಆಯುರ್ವೇದ ತಜ್ಞರು ಕಂಡುಕೊಂಡಿದ್ದರು. ಇದು ಆಯುರ್ವೇದದ ಹಿರಿಮೆಗೆ ಒಂದು ಕಿರು ಉದಾಹರಣೆ. ಈ ಹಿನ್ನೆಲೆಯಲ್ಲಿ ಆಯುರ್ವೇದದ ಮಹತಿಯನ್ನು ಸಾರಲು ವಿಶ್ವ ಸಮ್ಮೇಳನ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಬಸವನಗುಡಿಯ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ, ಖ್ಯಾತ ನಟ ಅಜಯ್ ರಾವ್, ಅತ್ರಿಮೆಡ್ ಫಾರ್ಮಾಸ್ಯುಟಿಕಲ್ನ ಸಿಇಓ ಹೃಷಿಕೇಶ್ ದಾಮ್ಲೇ, ಹಿರಿಯ ಪತ್ರಕರ್ತ ವಿನಾಯಕ ಭಟ್ಟ ಮೂರೂರು ಹಾಗೂ ಇತತರು ಉಪಸ್ಥಿತರಿದ್ದು ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.
ವಿಶ್ವ ಆಯುರ್ವೇದ ಸಮ್ಮೇಳನದ ರುವಾರಿ ಡಾ. ಗಿರಿಧರ ಕಜೆ ಮಾತನಾಡಿ, ಆಯುರ್ವೇದದ ಮಹತ್ವವನ್ನು ಜನತೆಯ ಮುಂದಿಡಲು ಬೃಹತ್ ರೂಪದಲ್ಲಿ ಸಮ್ಮೇಳನವನ್ನು ಸಂಘಟಿಸಲಾಗಿದೆ. ಆಯುರ್ವೇದ ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಜನಸಾಮಾನ್ಯರಿಗೂ ಪ್ರಯೋಜನಕಾರಿಯಾಗುವಂತೆ ಸಮ್ಮೇಳನವನ್ನು ಆಯೋಜಿಸಲಾಗಿದೆ. ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ಆಹಾರ ಪ್ರದರ್ಶಿನಿ, ಆಯುರ್ವೇದ ಪಾಕೋತ್ಸವ, ಧನ್ವಂತರಿ ಮಹಾಯಜ್ಞ, ಆಯುರ್ವೇದ ಮೆಗಾ ಎಕ್ಸ್'ಪೋ, ಔಷಧೀಯ ಸಸ್ಯಗಳ ಉಚಿತ ವಿತರಣೆ, ಲೇಸರ್ ಶೋ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಇರಲಿದೆ.
ದಕ್ಷಿಣದ ಏಳು ರಾಜ್ಯಗಳ 137 ಆಯುರ್ವೇದ ವಿದ್ಯಾಲಯಗಳನ್ನು ಧನ್ವಂತರಿ ರಥಯಾತ್ರೆಯು ಈಗಾಗಲೇ ಸಂದರ್ಶಿಸಿದ್ದು, ನಾಡಿನಾದ್ಯಂತ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮ್ಮೇಳನಕ್ಕೆ 3-4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ನಾಳೆ ಆಯುರ್ವೇದ ವಾಕಥಾನ್ ಹಾಗೂ Vintage Car Rally
ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನದ ಪ್ರಚಾರಾರ್ಥವಾಗಿ ನಾಳೆ ಆಯುರ್ವೇದ ವಾಕಥಾನ್ ಹಾಗೂ Vintage Car Rally ಯನ್ನು ಆಯೋಜಿಸಲಾಗಿದೆ.
ನಾಳೆ ಬೆಳಗ್ಗೆ 7.15ಕ್ಕೆ ಆಯುರ್ವೇದ ವಾಕಥಾನ್
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಾಳೆ ಬೆಳಗ್ಗೆ 7.15ಕ್ಕೆ ಆಯುರ್ವೇದ ವಾಕಥನ್ ನಡೆಯಲಿದ್ದು, ಶಾಸಕ ಎಸ್. ಸುರೇಶ್ ಕುಮಾರ್ ಜಾಥಕ್ಕೆ ಚಾಲನೆ ನೀಡಲಿದ್ದಾರೆ. ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಜತೆಯಾಗಲಿದ್ದಾರೆ.
ಸಭ್ಯ ಉಡುಗೆ, ಸಮಯಪಾಲನೆ ಕಡ್ಡಾಯ: ಸರ್ಕಾರಿ ನೌಕರರಿಗೆ ಕಠಿಣ ನಿಯಮ ಜಾರಿ
ವಿಂಟೇಜ್ ಕಾರು ರ್ಯಾಲಿ
ನಾಳೆ ಬೆಳಗ್ಗೆ 8.15 ಕ್ಕೆ ಟೌನ್ಹಾಲ್ನಿಂದ ಅರಮನೆ ಮೈದಾನದವರೆಗೆ Vintage Car Rally ನಡೆಯಲಿದ್ದು, ಟೌನ್ ಹಾಲಿನ ಮುಂಭಾಗ ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಚಾಲನೆ ನೀಡಲಿದ್ದು, ಅನೇಕ ಗಣ್ಯರು ಜತೆಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.