ಕಾಂಗ್ರೆಸ್ ಎಂದರೆ ಕೇವಲ ಪಕ್ಷವಲ್ಲ: ಇದೊಂದು ನಿರಂತರ ಚಳುವಳಿ ಮತ್ತು ಸಿದ್ಧಾಂತ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರಿನ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಬಿಜೆಪಿಯದ್ದು. MGNAREGA ಕಾರ್ಯಕ್ರಮದಡಿ ದಲಿತರು, ಹಿಂದುಳಿದವರಿಗೆ ಹೆಚ್ಚಾಗಿ ಕೆಲಸ ದೊರಕುತ್ತಿತ್ತು. ಈಗ ರಾಜ್ಯಗಳ ಮೇಲೆ ಭಾರಿ ಹೊರೆಯನ್ನೇ ಹೊರೆಸುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ. -
ಬೆಂಗಳೂರು, ಡಿ.28: ಕಾಂಗ್ರೆಸ್ ಎಂದರೆ ಕೇವಲ ಒಂದು ರಾಜಕೀಯ ಪಕ್ಷವಲ್ಲ ಇದೊಂದು ಚಳುವಳಿ ಮತ್ತು ಸಿದ್ಧಾಂತ. ನಾವೆಲ್ಲರೂ ಚಳವಳಿಯಲ್ಲಿದ್ದೇವೆ. ಸಮಾನತೆ, ಸಮಾನ ಅವಕಾಶಗಳನ್ನು ಎಲ್ಲರಿಗೂ ಕೊಡಬೇಕು ಎನ್ನುವ ಸಿದ್ಧಾಂತ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಸಿಎಂ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಯಿಂದ ರಾಜ್ಯ ಮಟ್ಟದವರೆಗೆ ಜನವರಿ 5 ರಿಂದ ನಿರಂತರವಾಗಿ ಆಂದೋಲನವನ್ನು ಪ್ರಾರಂಭಿಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಬಿಜೆಪಿಯದ್ದು
ರಾಷ್ಟ್ರಪಿತನ ಹೆಸರನ್ನೇ ಅಳಿಸಲು ಹೊರಟಿರುವ ಪ್ರಯತ್ನವನ್ನು ವಿಫಲಗೊಳಿಸಬೇಕು. ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಬಿಜೆಪಿಯದ್ದು. MGNAREGA ಕಾರ್ಯಕ್ರಮದಡಿ ದಲಿತರು, ಹಿಂದುಳಿದವರಿಗೆ ಹೆಚ್ಚಾಗಿ ಕೆಲಸ ದೊರಕುತ್ತಿತ್ತು. ಕೇಂದ್ರ ಸರ್ಕಾರ ರಾಜ್ಯಗಳ ಅನುದಾನವನ್ನು ಕೊಡುತ್ತಿತ್ತು. ಈಗ ಹೊಸ ಕಾಯ್ದೆ ಜಾರಿಗೆ ತಂದು, 60% ಕೇಂದ್ರ 40% ರಾಜ್ಯ ಸರ್ಕಾರ ಕೊಡಬೇಕು ಎಂದು ತೀರ್ಮಾನಿಸಿದ್ದಾರೆ. ರಾಜ್ಯಗಳ ಮೇಲೆ ಭಾರಿ ಹೊರೆಯನ್ನೇ ಹೊರೆಸುತ್ತಿದ್ದಾರೆ. ಇದನ್ನು ವಿಫಲಗೊಳಿಸಬೇಕು ಎಂದು ಸಿಎಂ ಕರೆ ನೀಡಿದರು.
ಸ್ವಾತಂತ್ರ್ಯ ಉಳಿಸಿಕೊಳ್ಳೋಣ
ಸತ್ಯಾಗ್ರಹ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್. ಇದನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣ ಎಂದ ಅವರು, ಬ್ರಿಟಿಷ್ ಅಧಿಕಾರಿ ಎ. ಒ ಹ್ಯೂಮ್ ಅವರು ಕಾಂಗ್ರೆಸ್ ಪಕ್ಷವನ್ನು 1885ರಲ್ಲಿ ಪ್ರಾರಂಭಿಸಿ 148 ವರ್ಷಗಳಾಗಿವೆ. ಬ್ರಿಟಿಷ್ ಆಡಳಿತದ ದಬ್ಬಾಳಿಕೆಯ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾರಂಭವಾದ ಕಾಂಗ್ರೆಸ್ ನಾಗರಿಕರ ಹಕ್ಕುಗಳ ರಕ್ಷಣೆ, ನ್ಯಾಯಯುತ ಆಡಳಿತಕ್ಕಾಗಿ ಒತ್ತಾಯಿಸಿತು. ಮುಂಬೈನಲ್ಲಿ ಅಧಿವೇಶನ ನಡೆದ ನಂತರ ನಿಧಾನವಾಗಿ ಬೆಳಕನ್ನು ಕಾಣುವಂತಾಯಿತು. 1915ರಲ್ಲಿ ಮಹಾತ್ಮ ಗಾಂಧಿ ಅವರನ್ನು ಗೋಖಲೆಯವರು ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಲು ಗಾಂಧಿಯವರನ್ನು ಆಹ್ವಾನಿಸುತ್ತಾರೆ. ಡಿಸೆಂಬರ್ 28 ಐತಿಹಾಸಿಕ ದಿನವಾಗಿದ್ದು, ಅದನ್ನು ಮರೆಯಲು ಸಾಧ್ಯವಿಲ್ಲ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಜನಸಂಘ, ಆರ್.ಎಸ್.ಎಸ್, ಹಿಂದೂ ಮಹಾ ಸಭಾ , ಬಿಜೆಪಿ ಸಂಘಟನೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ವಾರಸುದಾರರು ಕಾಂಗ್ರೆಸ್ ಪಕ್ಷ ಎಂದರು.
ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಗಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧಿ 1915 ರಿಂದ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಇಡೀ ದೇಶವನ್ನು ಸುತ್ತಿದ ನಂತರ ಕಾಂಗ್ರೆಸ್ ನೇತೃತ್ವವನ್ನು ಹೊತ್ತುಕೊಂಡರು.
ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾದಾಗ ಬಿಜೆಪಿ ಪಾಲ್ಗೊಳ್ಳಲಿಲ್ಲ
ವಿಶ್ವದಲ್ಲಿಯೇ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ. ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾದಾಗಲೂ ಬಿಜೆಪಿ ಇದರಲ್ಲಿ ಪಾಲ್ಗೊಳ್ಳಲಿಲ್ಲ. ಬ್ರಿಟಿಷರೊಂದಿಗೆ ಸೇರಿಕೊಂಡಿದ್ದ ಬಿಜೆಪಿ, ನಮಗೆ ದೇಶಭಕ್ತಿಯ ಪಾಠವನ್ನು ಹೇಳಿಕೊಡುತ್ತಾರೆ. ಅವರು ದೇಶಭಕ್ತರಂತೂ ಅಲ್ಲ ಎಂದರು. ದೇಶಭಕ್ತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಯ ಒಬ್ಬ ನಾಯಕರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲಿಲ್ಲ. ಈಗ ಮಹಾತ್ಮ ಗಾಂಧಿಯವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ. ಗಾಂಧಿಯವರನ್ನು ನಾಥುರಾಮ್ ಗೋಡ್ಸೆ ಕೊಂದ. ಬಿಜೆಪಿ ಕಚೇರಿಯ ಮೇಲೆ ಇತ್ತೀಚಿನವರೆಗೆ ಭಾರತದ ಧ್ವಜವೂ ಹಾರಾಡುತ್ತಿರರಿಲ್ಲ. ಇವರಿಗೆ ದೇಶಕ್ಕೆ ಸ್ವಾತಂತ್ರ್ಯ ಬರುವುದೇ ಇಷ್ಟವಿರಲಿಲ್ಲ ಎಂದರು.
ದೇಶ ಮತ್ತು ಸಮಾಜ ಒಡೆಯುದೇ ಕೆಲಸವೇ ಬಿಜೆಪಿಯ ಸಾಧನೆ
ಕಾಂಗ್ರೆಸ್ನವರು ಎನ್ನುವುದೇ ನಮಗೆ ಹೆಮ್ಮೆಯ ಸಂಗತಿ. ಆಧುನಿಕ ಭಾರತದ ರೂವಾರಿ ಜವಾಹರ್ ಲಾಲ್ ನೆಹರು ಅವರು. ಜೈ ಜವಾನ್ ಜೈ ಕಿಸಾನ್ ಘೋಷಣೆ ನೀಡಿದ್ದು ಲಾಲ್ ಬಹದ್ದೂರ್ ಶಾಸ್ತ್ರಿ, ಸಾಮಾಜಿಕ ನ್ಯಾಯ ರೂವಾರಿ ಇಂದಿರಾ ಗಾಂಧಿ, ಗರೀಬಿ ಹಠಾವೋ ಎನ್ನುವುದು ಕೇವಲ ಘೋಷಣೆಯಲ್ಲ. ಅದಕ್ಕೆ ಪೂರಕವಾಗಿ 20 ಅಂಶದ ಕಾರ್ಯಕ್ರಮವನ್ನು ನೀಡಿದರು. ಆಹಾರದಲ್ಲಿ ಸ್ವಾವಲಂಬನೆ ಬರಲು ಇಂದಿರಾ ಗಾಂಧಿ ಹಾಗೂ ಜಗಜೀವನ ರಾಮ್ ಅವರು ಕಾರಣ. 21ನೇ ಶತಮಾನಕ್ಕೆ ಸೂಕ್ತ ಕೊಡುಗೆಗಳನ್ನು ನೀಡಿದ್ದು ರಾಜೀವ್ ಗಾಂಧಿ. ಬಿಜೆಪಿಯ ಸಾಧನೆ ಏನೆಂದರೆ, ದೇಶ ಮತ್ತು ಸಮಾಜ ಒಡೆಯುವ ಕೆಲಸ. ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿದ್ದು ಮನುವಾದಿಗಳು. ಚಾತುರ್ವರ್ಣ ವ್ಯವಸ್ಥೆಯನ್ನು ಹುಟ್ಟುಹಾಕಿದ್ದೆ ಬಿಜೆಪಿ. ಸಮಾನ ಅವಕಾಶಗಳು ಸಂವಿಧಾನ ರಚನೆಯಾದ ಮೇಲೆ ಸಮಾನ ಅವಕಾಶಗಳು ದೊರಕುವಂತಾಯಿತು ಎಂದರು.
ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ
ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ರಾಜಕೀಯ ಪ್ರಜಾಪ್ರಭುತ್ವ ನಿಂತಿದೆ. ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ರಾಜಕೀಯ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂಬ ತತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆಯಿದೆ. ಅದಕ್ಕಾಗಿಯೇ ನಾವು ಅಸಮಾನತೆ ಹೋಗಲಾಡಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ನೀಡಿದರು. ಶಿಕ್ಷಣ, ಉದ್ಯೋಗ ಖಾತರಿ ಮುಂತಾದ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ.ಯಾರಿಗೂ ಈ ಪ್ರಮಾಣದ ದ್ವೇಷ ಇರಬಾರದು. ಮಹಾತ್ಮಾ ಗಾಂಧಿಯವರನ್ನು ಕೊಂದ ನಂತರವೂ ಇದನ್ನು ಮುಂದುವರೆದಿದ್ದಾರೆ. ನೆಹರೂ, ಇಂದಿರಾ ಗಾಂಧಿ , ರಾಜೀವ್ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಕಂಡರೆ ಅವರಿಗೆ ಆಗುವುದೇ ಇಲ್ಲ. ನರೇಗಾ ಯೋಜನೆ ಹೆಸರನ್ನು ವಿಬಿ ಜಿ ರಾಮ್ ಜಿ ಎಂದು ಕರೆದಿದ್ದು ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯನ್ನೇ ಮಾಡಲಿಲ್ಲ ಎಂದರು. ಇವರು ಹೇಳುವ ರಾಮ ದಶರಥ ರಾಮನಲ್ಲ, ಬಿಜೆಪಿ ಯ ರಾಮ ಎಂದರು.
ದೇಶದಲ್ಲಿ ಬದಲಾವಣೆ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳು ಎಲ್ಲರಿಗೂ ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ನೀತಿಯೇ ಇಲ್ಲದವರು ಯೋಜನಾ ಆಯೋಗದ ಹೆಸರನ್ನು ನೀತಿ ಆಯೋಗ ಎಂದು ಬದಲಾಯಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಟೀಕಿಸಿದರು. ದೇಶದಲ್ಲಿ ಬದಲಾವಣೆ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳು ಎಲ್ಲರಿಗೂ ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ರಾಜೀವ್ ಗಾಂಧಿ
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ರಾಜೀವ್ ಗಾಂಧಿ. ಹಿಂದುಳಿದವರಿಗೆ , ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾದ ಮೀಸಲಾತಿ ಇರಬಾರದು ಎಂದು ಬಿಜೆಪಿ ಉಪಾಧ್ಯಕ್ಷ ರಾಮ ಜೋಯಿಸ್ ಸುಪ್ರೀಂ ಕೋರ್ಟಿಗೆ ಹೋದರು. ಸುಪ್ರೀಂ ಕೋರ್ಟಿನಲ್ಲಿ ಮೀಸಲಾತಿ ಕೊಟ್ಟಿರುವುದು ಸಾಂವಿಧಾನಿಕವಾಗಿದೆ ಎಂದು ತೀರ್ಪು ನೀಡುತ್ತಾರೆ. ದೇಶಕ್ಕೆ ಬಿಜೆಪಿಯ ಮತಗಳ್ಳತನ ಬಿಟ್ಟರೆ ಬೇರೇನೂ ಕೊಡುಗೆ ನೀಡಿಲ್ಲ. ಸುಳ್ಳೇ ಅವರ ಮನೆ ದೇವರು ಎಂದರು.
MGNAREGA ಹೆಸರು ಬದಲಾವಣೆ: ಪ್ರಧಾನಿ ಕಚೇರಿಯಿಂದಲೇ ತೀರ್ಮಾನ
ರಾಜಕೀಯದಲ್ಲಿ ಅಧಿಕಾರ ಬರುತ್ತೆ ಹೋಗುತ್ತದೆ, ಆದರೆ ಬಿಜೆಪಿಯವರು ಅಧಿಕಾರ ಹಿಡಿಯಲು ಮತಗಳ್ಳತನ ಸೇರಿದಂತೆ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂದರು. MGNAREGA ಹೆಸರು ಬದಲಾವಣೆ ಮಾಡಿದ್ದರೂ ಮಹಾತ್ಮ ಗಾಂಧಿ ಹೆಸರು ಶಾಶ್ವತ. ಕಾರ್ಯಕ್ರಮದ ಹೆಸರು ಬದಲಾವಣೆ ಮಾಡಿದ್ದ ತಕ್ಷಣ ಅವರ ಹೆಸರನ್ನು ಅಳಿಸಲು ಸಾಧ್ಯವೇ ಎಂದರು. ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು ರೂಪಿಸಿದ ಕಾರ್ಯಕ್ರಮ 2005 ರಿಂದ ಇಂದಿನವರೆಗೂ ಇತ್ತು. ಈಗ ಬದಲಾಯಿಸಿದ್ದಾರೆ. ಇದು ಸಚಿವ ಸಂಪುಟದಲ್ಲಿ ತೀರ್ಮಾನವಾಗಿಲ್ಲ. ಪ್ರಧಾನಮಂತ್ರಿಗಳ ಕಚೇರಿಯಿಂದಲೇ ತೀರ್ಮಾನವಾಗಿದೆ ಎಂದರು. ಸಂಬಂಧಪಟ್ಟ ಇಲಾಖೆ ಸಚಿವರಿಗೂ ಇದರ ಬಗ್ಗೆ ತಿಳಿಲಿಲ್ಲ. ಇದನ್ನು ಉಳಿಸಿಕೊಳ್ಳುವ ರಕ್ಷಿಸುವ ಕರ್ತವ್ಯ ನಮ್ಮದು ಎಂದರು.
ಬುಲ್ಡೋಜರ್ ಸಂಸ್ಕೃತಿ ನಮ್ಮಲ್ಲಿ ಇಲ್ಲ; ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಡಿ.ಕೆ.ಶಿವಕುಮಾರ್ ತಿರುಗೇಟು
ಉಪಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಪದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎ ಐ ಸಿ ಸಿ ಕಾರ್ಯದರ್ಶಿ ಗೋಪಿನಾಥ್, ಇಂಧನ ಸಚಿವ ಕೆ. ಜೆ.ಜಾರ್ಜ್, ಮೊದಲಾದವರು ಉಪಸ್ಥಿತರಿದ್ದರು.