Bengaluru Tunnel Road: ತೇಜಸ್ವಿ ಸೂರ್ಯ ತಮ್ಮ ಕ್ಷೇತ್ರದ ಜನಕ್ಕೆ ಸಾರ್ವಜನಿಕ ಸಾರಿಗೆ ಬಳಸುವಂತೆ ಹೇಳಲಿ: ಡಿಕೆಶಿ
DK Shivakumar: ತೇಜಸ್ವಿ ಸೂರ್ಯ ಅವರು ಕೆಲವು ಸಲಹೆ ನೀಡಿದ್ದಾರೆ. ಟನಲ್ ರಸ್ತೆಯಲ್ಲಿ ಕೇವಲ ಕಾರುಗಳಿಗೆ ಅನುಕೂಲವಾಗುತ್ತದೆ. ಮೆಟ್ರೋ ಮಾರ್ಗ ಕೂಡ ವಿಸ್ತರಿಸಬೇಕು ಎಂದು ಹೇಳುತ್ತಿದ್ದಾರೆ. ಇಲ್ಲಿ ಮೆಟ್ರೋ ಸೇರಿಸಲು ನಮ್ಮ ತಕರಾರು ಇಲ್ಲ. ಇದರ ಜತೆಗೆ ಅವರು ನೀಡಿರುವ ಇತರೆ ಸಲಹೆಗಳನ್ನು ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
-
ಬೆಂಗಳೂರು, ಅ. 28: ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ (Bengaluru Tunnel Road) ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಕೊಟ್ಟ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ. ಆದರೂ ಅವರ ಸಲಹೆಗಳನ್ನು ಗೌರವಿಸುತ್ತೇನೆ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಅವರು ಪ್ರತಿಕ್ರಿಯೆ ನೀಡಿದರು.
ಸಂಸದ ತೇಜಸ್ವಿ ಸೂರ್ಯ ಅವರ ಭೇಟಿ ಬಗ್ಗೆ ಕೇಳಿದಾಗ, ʼತೇಜಸ್ವಿ ಸೂರ್ಯ ಅವರು ಕೆಲವು ಸಲಹೆ ನೀಡಿದ್ದಾರೆ. ಟನಲ್ ರಸ್ತೆಯಲ್ಲಿ ಕೇವಲ ಕಾರುಗಳಿಗೆ ಅನುಕೂಲವಾಗುತ್ತದೆ. ಮೆಟ್ರೋ ಮಾರ್ಗ ಕೂಡ ವಿಸ್ತರಿಸಬೇಕು ಎಂದು ಹೇಳುತ್ತಿದ್ದಾರೆ. ಇಲ್ಲಿ ಮೆಟ್ರೋ ಸೇರಿಸಲು ನಮ್ಮ ತಕರಾರು ಇಲ್ಲ. ಇದರ ಜತೆಗೆ ಅವರು ನೀಡಿರುವ ಇತರೆ ಸಲಹೆಗಳನ್ನು ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಇನ್ನು ಬೆಂಗಳೂರಿನಲ್ಲಿ ಖಾಸಗಿ ಬಸ್ಗಳು, ಸಣ್ಣ ಬಸ್ಗಳಿಗೆ ಅವಕಾಶ ನೀಡಿ ಎಂದು ಹೇಳುತ್ತಿದ್ದಾರೆ. ಈಗಾಗಲೇ ಬೆಂಗಳೂರು ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಖಾಸಗಿ ಬಸ್ಗಳಿಗೆ ಅವಕಾಶ ನೀಡಿದರೆ ಏನು ಉಪಯೋಗ ಎಂದು ಚರ್ಚೆ ಮಾಡಬೇಕಿದೆ ಎಂದರು.
ಸಂಸದರು ಬನ್ನಿ, ಪ್ರಧಾನಿ ಭೇಟಿ ಮಾಡಿ ಅನುದಾನ ಕೇಳೋಣ
ಅವರು ಬಿಎಂಎಲ್ಟಿ ಮಾಡಬೇಕು ಎಂದು ಹೇಳಿದರು. ಆಗ ನಾನು ನಿಮ್ಮ ಕಾಲದಲ್ಲಿ ಯಾಕೆ ಮಾಡಲಿಲ್ಲ ಎಂದು ಕೇಳಿದೆ? ಅದಕ್ಕೆ ಅವರು ಆಗ ಆಗಲಿಲ್ಲ ಎಂದರು. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಕೊಡಿಸುತ್ತೀರಿ ಎಂದು ಕೇಳಿದೆ. ನಿಮ್ಮ ಸಂಸದರೆಲ್ಲ ಬನ್ನಿ, ನಾನು ಕೂಡ ಬರುತ್ತೇನೆ. ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಒತ್ತಾಯ ಮಾಡೋಣ ಎಂದು ಹೇಳಿದೆ ಎಂದರು.
ಲಾಲ್ ಬಾಗ್ನಲ್ಲಿ ಟನಲ್ ರಸ್ತೆಗೆ ಆರು ಎಕರೆ ಸ್ವಾಧೀನವಿಲ್ಲ
ಇನ್ನು ಟನಲ್ ರಸ್ತೆಗೆ ಲಾಲ್ ಬಾಗ್ನಲ್ಲಿ ಆರು ಎಕರೆ ಭೂಮಿಯನ್ನು ಬಳಸಿಕೊಳ್ಳುವುದಿಲ್ಲ. ಲಾಲ್ ಬಾಗ್ನ ಮೂಲೆಯಲ್ಲಿ ಟನಲ್ ರಸ್ತೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಲಾಗುವುದು. ಇಲ್ಲಿ ಬೇಡ ಎಂದರೆ, ಬೇರೆ ಎಲ್ಲಿ ಇದಕ್ಕೆ ಅವಕಾಶ ಕಲ್ಪಿಸಬಹುದು, ನೀವೇ ಸಲಹೆ ನೀಡಿ ಎಂದು ಕೇಳಿದೆ. ಅದಕ್ಕೆ ಅವರು ಎಲ್ಲಾ ದೇಶಗಳಲ್ಲೂ ಟನಲ್ ರಸ್ತೆ ಬೇಡ ಎನ್ನುತ್ತಿದ್ದಾರೆ ಎಂದರು. ಅದಕ್ಕೆ ನಾನು, ನೀವು ಒಬ್ಬರು ಹೇಳಿದಂತೆ ಕೇಳಲು ಆಗುವುದಿಲ್ಲ ಎಂದು ಹೇಳಿದೆ. ಒಆರ್ಆರ್ನಲ್ಲಿ 70% ಸಾರ್ವಜನಿಕ ಸಾರಿಗೆ, ಬಿಟಿಆರ್ಎಸ್ ಮಾಡಬೇಕು ಎಂದು ಹೇಳಿದರು. ಸಬ್ ಅರ್ಬನ್ ರೈಲುಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಹೇಳಿದರು. ಅದಕ್ಕೆ ಸರಿ, ಕೇಂದ್ರ ಸರ್ಕಾರದ ಬಳಿ ಹೋಗಿ ಹಣ ಕೇಳೋಣ. ಸೋಮಣ್ಣ ಅವರ ಜತೆ ಚರ್ಚೆ ಮಾಡೋಣ. ಹಣ ಕೊಟ್ಟರೆ ಮಾಡೋಣ. ಇದುವರೆಗೂ ಕೇಂದ್ರ ಸರ್ಕಾರ ಹಣ ನೀಡದ ಕಾರಣ, ಒಂದು ರೈಲನ್ನೂ ಸೇರಿಸಿಲ್ಲ. ಎಲ್ಲಕ್ಕೂ ನಮ್ಮ ಮೇಲೆ ಅವಲಂಬಿತವಾದರೆ ಹೇಗೆ? ಕೇವಲ ಸಲಹೆ ಮಾತ್ರವಲ್ಲ, ಇದಕ್ಕೆ ಪೂರಕವಾಗಿ ಹಣವನ್ನು ತನ್ನಿ ಎಂದು ಹೇಳಿದ್ದೇನೆ ಎಂದರು.
ತಮ್ಮ ಕ್ಷೇತ್ರದ ಜನರಿಗೆ ಕೇವಲ ಸಾರ್ವಜನಿಕ ಸಾರಿಗೆ ಬಳಸಲು ಕರೆ ನೀಡಲಿ
ಸಾರ್ವಜನಿಕ ಸಾರಿಗೆ ಮಾಡಿದರೆ ಖಾಸಗಿ ವಾಹನ ಕಡಿಮೆಯಾಗುತ್ತದೆ ಎಂದು ತೇಜಸ್ವಿ ಸೂರ್ಯ ಹೇಳುತ್ತಿದ್ದಾರೆ ಎಂದು ಕೇಳಿದಾಗ, ʼಈಗ ನೀವು ಇಲ್ಲಿಗೆ ಬರುವಾಗ ನಿಮ್ಮ ವಾಹನ ತಂದಿದ್ದೀರಿ. ನೀವು ನಿಮ್ಮ ವಾಹನ ತರುವುದನ್ನು ನಾನು ತಡೆಯಲು ಆಗುತ್ತದೆಯೇ? ಇದು ಸಾಮಾಜಿಕ ಬಾಧ್ಯತೆ. ಜನ ತಮ್ಮ ವಾಹನದಲ್ಲೇ ತಾವು, ತಮ್ಮ ಮನೆಯವರು ಪ್ರಯಾಣ ಮಾಡಬೇಕು ಎಂದು ಬಯಸುತ್ತಾರೆ. ನಾವು ಅವರಿಗೆ ನಿಮ್ಮ ವಾಹನ ತರಬೇಡಿ ಎಂದು ತಡೆಯಲು ಆಗುತ್ತದೆಯೇ? ಬೇಕಿದ್ದರೆ ಸಂಸದರು ತಮ್ಮ ಕ್ಷೇತ್ರದ ಜನರಿಗೆ, ನೀವು ನಿಮ್ಮ ಕಾರುಗಳನ್ನು ಮನೆಯಲ್ಲೇ ನಿಲ್ಲಿಸಿ, ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡಿ ಕರೆ ನೀಡಲಿ. ಆಗ ಯಾರು ಪಾಲನೆ ಮಾಡುತ್ತಾರೆ ನೋಡೋಣ? ಕಾರಿಲ್ಲದ ಹುಡುಗನ ಮನೆಗೆ ಹೆಣ್ಣು ನೀಡಲು ಹಿಂದೇಟು ಹಾಕುತ್ತಾರೆ. ಇಂತಹ ಸಾಮಾಜಿಕ ಬಾಧ್ಯತೆಗಳ ಬಗ್ಗೆ ಸಂಸದರಿಗೆ ಅರಿವಿಲ್ಲʼ ಎಂದು ತಿಳಿಸಿದರು.
ಸಲಹೆ ಎಲ್ಲರೂ ನೀಡುತ್ತಾರೆ, ಹಣ ಕೊಡುವವರು ಯಾರು?
ಈ ಹಿಂದೆ ನೀವು ಖಾಲಿ ಟ್ರಂಕ್ ಎಂದು ಹೇಳಿದ್ದೀರಿ ಎಂದು ಕೇಳಿದಾಗ, ʼಹಣದ ವಿಚಾರದಲ್ಲಿ ಖಾಲಿ ಟ್ರಂಕ್ ಎಂದು ಹೇಳಿದೆ. ಯಾವುದೇ ಯೋಜನೆ ಮಾಡಬೇಕಾದರೂ ಹಣ ಬೇಕು. ಕೇವಲ ಟ್ವೀಟ್, ಟೀಕೆಗಳಿಂದ ಪರಿಹಾರ ಸಿಗುವುದಿಲ್ಲ. ಪ್ರಧಾನಮಂತ್ರಿಗಳಿಂದ ಹಣ ಕೊಡಿಸಲಿ. ಸಲಹೆಗಳನ್ನು ಯಾರು ಬೇಕಾದರೂ, ಎಷ್ಟು ಬೇಕಾದರೂ ನೀಡುತ್ತಾರೆ. ಟನಲ್ ಬೇಡ ಎನ್ನುತ್ತೀರಿ, ಕಟ್ಟಡ ಕೆಡವಬಾರದು ಎನ್ನುತ್ತೀರಿ, ನಾವು ಹೆಚ್ಚು ಬಸ್ ಬಿಟ್ಟರೆ ಎಷ್ಟು ಜನ ಓಡಾಡುತ್ತಾರೆ. ಎಲ್ಲಾ ಕಡೆಗೂ ಮೆಟ್ರೋ ಕಲ್ಪಿಸಲು ಆಗುತ್ತದೆಯೇ?ʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Prize money: ಒಲಿಂಪಿಕ್ಸ್ ಪದಕ ವಿಜೇತರಿಗೆ 5 ಕೋಟಿ ರೂಪಾಯಿ ಬಹುಮಾನ: ಸಿಎಂ ಸಿದ್ದರಾಮಯ್ಯ
8-10 ದಿನಗಳಲ್ಲಿ ಪರಿಷತ್ ಚುನಾವಣೆ ಅಭ್ಯರ್ಥಿ ಹೆಸರು ಅಂತಿಮ
ಪರಿಷತ್ ಚುನಾವಣೆ ಸಂಬಂಧ ನಡೆದ ಪೂರ್ವಭಾವಿ ಸಭೆ ಬಗ್ಗೆ ಕೇಳಿದಾಗ, ʼಮುಂದಿನ ವರ್ಷ ನಡೆಯಲಿರುವ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆಗೆ ಮುಂದಿನ 8-10 ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದು, ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಪೂರ್ವಭಾವಿ ಸಭೆ ನಡೆಸಿದ್ದೇವೆ. ಕಾರ್ಯಕರ್ತರು ಹಾಗೂ ಟಿಕೆಟ್ ಆಕಾಂಕ್ಷಿಗಳ ಜತೆ ಚರ್ಚೆ ಮಾಡಿ ನಂತರ ನಾನು ದೆಹಲಿಗೆ ಹೆಸರುಗಳನ್ನು ಶಿಫಾರಸ್ಸು ಮಾಡುತ್ತೇನೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.