ರಾಹುಲ್ ಗಾಂಧಿ ವೋಟ್ ಚೋರಿ ಆರೋಪಕ್ಕೆ ವ್ಯತಿರಿಕ್ತವಾದ ಸಮೀಕ್ಷೆ!
ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯವರ ಉಸ್ತುವಾರಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯೊಂದು, ಸಾರ್ವಜನಿಕರಿಗೆ ಇವಿಎಂಗಳು, ವಿವಿಪಿಎಟಿ ಬಗ್ಗೆ ವಿಶ್ವಾಸ ಇರುವುದನ್ನು ಮತ್ತು ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯುತ್ತಿರುವ ಬಗ್ಗೆ ಇರುವ ನಂಬಿಕೆಯನ್ನು ದೃಢಪಡಿಸಿದೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ -
ರಾಜೇಶ್ ಶೆಟ್ಟಿ
ಬೆಂಗಳೂರು: ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯವರ ಉಸ್ತುವಾರಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯೊಂದು, ಸಾರ್ವಜನಿಕರಿಗೆ ಇವಿಎಂಗಳು, ವಿವಿಪಿಎಟಿ ಬಗ್ಗೆ ವಿಶ್ವಾಸ ಇರುವುದನ್ನು ಮತ್ತು ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯುತ್ತಿರುವ ಬಗ್ಗೆ ಇರುವ ನಂಬಿಕೆಯನ್ನು ದೃಢಪಡಿಸಿದೆ. ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳು, ಜನರಲ್ಲಿ ಇವಿಎಂ ಯಂತ್ರಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಸಮೀಕ್ಷೆಯೊಂದನ್ನು ನಡೆಸಿದ್ದರು. " ಲೋಕಸಭಾ ಚುನಾವಣೆ 2024- ನಾಗರಿಕರ ತಿಳುವಳಿಕೆ, ನಿಲುವು ಮತ್ತು ಅಭ್ಯಾಸʼ ಎಂಬ ಶೀರ್ಷಿಕೆಯಲ್ಲಿ ಸಮೀಕ್ಷೆ ನಡೆಸಲಾಗಿತ್ತು.
ಸಮೀಕ್ಷಾ ವರದಿಯನ್ನು ಕರ್ನಾಟಕ ಮಾನಿಟರಿಂಗ್ ಆಂಡ್ ಇವಾಲ್ಯೂಷನ್ ಅಥಾರಿಟಿಯ ವೆಬ್ ಸೈಟ್ನಲ್ಲಿ ಪ್ರಕಟಿಸಲಾಗಿತ್ತು. ಈ ಕೆಎಂಇಎ ಪ್ರಾಧಿಕಾರವು ರಾಜ್ಯ ಸರಕಾರದ ಯೋಜನೆ ಮತ್ತು ಅಂಕಿ ಅಂಶಗಳ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಈ ವರದಿ ವೈರಲ್ ಆಗಿತ್ತು. ಇದರ ಬಗ್ಗೆ ಬಿಜೆಪಿ ಪ್ರಸ್ತಾಪಿಸುತ್ತಿದ್ದಂತೆ, ವಿವಾದ ರಾಜಕೀಯ ಸ್ವರೀಪ ಪಡೆಯುತ್ತಿದ್ದಂತೆ ಕೆಎಂಇಎ ವೆಬ್ ಸೈಟ್ನಿಂದ ಸಮೀಕ್ಷೆಯ ವರದಿಯನ್ನು ತೆಗೆದು ಹಾಕಲಾಗಿದೆ. ಹಾಗಾದರೆ ಸಮೀಕ್ಷೆಯಲ್ಲಿ ಏನಿತ್ತು? ಇದು ಯಾವಾಗ ನಡೆದಿತ್ತು? ವಿವರಗಳನ್ನು ನೋಡೋಣ.
ರಾಜ್ಯ ಸರಕಾರದ ಪ್ಲಾನಿಂಗ್, ಪ್ರೋಗ್ರಾಮ್ ಮಾನಿಟರಿಂಗ್ ಮತ್ತು ಸ್ಟಾಟಿಸ್ಟಿಕ್ಸ್ ಇಲಾಖೆಯ ವ್ಯಾಪ್ತಿಗೆ ಬರುವ ಕೆಎಂಇಎಯು ಚುನಾವಣಾ ಆಯೋಗದ ಪರವಾಗಿ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಬಹುತೇಕ ಜನರು ಇವಿಎಂ ಮೇಲೆ ತಮಗೆ ವಿಶ್ವಾಸ ಹೆಚ್ಚಿದೆ ಎಂದೇ ಹೇಳಿದ್ದರು.
ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ 5,001 ಜನರನ್ನು ಸಮೀಕ್ಷೆಯಲ್ಲಿ ಸಂದರ್ಶಿಸಲಾಯಿತು. ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಸಮೀಕ್ಷೆ ನಡೆಯಿತು. ಗ್ರಾಮೀಣ, ನಗರ , ಪಟ್ಟಣಗಳಲ್ಲಿ ಸಮೀಕ್ಷೆ ಆಗಿತ್ತು. ವಯಸ್ಸು, ಲಿಂಗ, ಸಾಮಾಜಿಕ ಕೆಟಗರಿಯನ್ನು ಪರಿಗಣಿಸಲಾಗಿತ್ತು. ಈ ಸಮೀಕ್ಷೆಯು ಇಡೀ ವೋಟ್ ಚೋರಿ ನರೇಟಿವ್ ಅನ್ನು ನಿರಾಕರಿಸಿದೆ. ಈ ಸಮೀಕ್ಷೆ ಪ್ರಕಾರ ಪ್ರತಿ ಐವರು ಮತದಾರರಲ್ಲಿ ನಾಲ್ವರು ಇವಿಎಂ ಯಂತ್ರಗಳ ಬಗ್ಗೆ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಅಂದರೆ 83.61% ಗೂ ಹೆಚ್ಚು ಜನ ಇವಿಎಂ ನೀಡುವ ಫಲಿತಾಂಶದ ಬಗ್ಗೆ ವಿಶ್ವಾಸ ಇಟ್ಟುಕೊಂಡಿದ್ದಾರೆ. 84.55% ಮಂದಿ 2024ರ ಲೋಕಸಭೆ ಚುನಾವಣೆಯು ನ್ಯಾಯ ಸಮ್ಮತ ಚುನಾವಣೆ ನಡೆದಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ಮತಗಳವು ಆರೋಪ ಮಾಡುತ್ತಿದ್ದರೂ, ಅವರದ್ದೇ ರಾಜ್ಯ ಸರಕಾರ ಪ್ರಕಟಿಸಿದ ಸಮೀಕ್ಷೆಯು ವಿಭಿನ್ನವಾದ ವಾಸ್ತವವನ್ನು ತಿಳಿಸಿದೆ. 83.61 ಪರ್ಸೆಂಟ್ ಜನರು ಬಹಳ ಸ್ಪಷ್ಟವಾಗಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಶೀನ್ಗಳು ನಿಖರ ಫಲಿತಾಂಶವನ್ನು ನೀಡುತ್ತಿವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವುದು ವಿಶೇಷ. ಕಲಬುರಗಿಯಲ್ಲಿ 94.86 ಪರ್ಸೆಂಟ್ ಮಂದಿ ಇವಿಎಂ ನಿಖರತೆ ಬಗ್ಗೆ ನಂಬಿಕೆ ಹೊಂದಿರುವುದು ಗಮನಾರ್ಹ. ಕಲಬುರಗಿಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರೂರು ಕೂಡ ಆಗಿದೆ. ಅಲ್ಲಿಯೇ ರಾಹುಲ್ ಗಾಂಧಿಯವರು ಮತಗಳವು ಆರೋಪಗಳನ್ನು ಮಾಡಿದ್ದರು. ಇವಿಎಂ ಯಂತ್ರದ ನಿಖರತೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಪ್ರಕ್ರಿಯೆ, ವಿವಿಪಿಎಟಿ ವೆರಿಫಿಕೇಶನ ಪ್ರಕ್ರಿಯೆ ಇರಬಹುದು, ಕಲಬುರಗಿ ಜಿಲ್ಲೆಯ ಜನರು ಚುನಾವಣಾ ಆಯೋಗ, ಇವಿಎಂ ಬಗ್ಗೆ ವಿಶ್ವಾಸ ಹೊಂದಿರುವುದನ್ನು ಗಮನಿಸಬಹುದು.
ಸಮೀಕ್ಷೆಯ ಪ್ರಕಾರ 84.55% ಮಂದಿ ಭಾರತದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ವಿಧಾನದಲ್ಲಿ ಚುನಾವಣೆಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ. ಇಲ್ಲೂ ಕಲಬುರಗಿಯಲ್ಲಿ 94.86% ಮಂದಿ ಇದನ್ನು ಒಪ್ಪಿದ್ದಾರೆ. ಮೈಸೂರು-ಬೆಳಗಾವಿಯಲ್ಲೂ ಇದೇ ರೀತಿ ಜನ ಸಮ್ಮತಿಸಿದ್ದಾರೆ. ತಂತ್ರಜ್ಞಾನದಿಂದ ಪಾರದರ್ಶಕತೆ ಬರುತ್ತದೆ ಎಂಬುದನ್ನು ಮತದಾರರು ಮನವರಿಕೆ ಮಾಡಿಕೊಂಡಿದ್ದರು.
ವೋಟರ್ ವೆರಿಫಿಯೆಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಬಗ್ಗೆಯೂ ಜನರಲ್ಲಿ ಜಾಗೃತಿ ಇದೆ. 85.29 ಪರ್ಸೆಂಟ್ ಮಂದಿ ವಿವಿಪಿಎಟಿ ಬಗ್ಗೆ ಗೊತ್ತಿದೆ ಎಂದು ತಿಳಿಸಿದ್ದಾರೆ. ಇದು ಮತದಾರರಿಗೆ ಎಲೆಕ್ಟ್ರಾನಿಕ್ ವೋಟಿಂಗ್ ಸಿಸ್ಟಮ್ನಲ್ಲಿ ಫೀಡ್ ಬ್ಯಾಕ್ ಕೊಡುತ್ತದೆ. ತಾವು ಹಾಕಿದ ವೋಟ್ ಸರಿಯಾದ ಅಭ್ಯರ್ಥಿಗೆ ಹೋಗುತ್ತಿದೆ ಎಂಬುದನ್ನು ಖಾತರಿಪಡಿಸುತ್ತದೆ. 65.39 ಪರ್ಸೆಂಟ್ ಮಂದಿ ಮತ ಚಲಾಯಿಸುವಾಗ ವಿವಿಪಿಎಟಿಯನ್ನು ಪರಿಶೀಲಿಸಿದ್ದಾರೆ. ಕಲಬುರಗಿಯಲ್ಲಿ 82.38 ಪರ್ಸೆಂಟ್ ಮಂದಿ ಪರಿಶೀಲಿಸಿದ್ದಾರೆ. ಕರ್ನಾಟಕದ ಮಹದೇವಪುರ ಮತ್ತು ಅಳಂದಾ ವಿಧಾನಸಭೆ ಕ್ಷೇತ್ರವನ್ನು ಉಲ್ಲೇಖಿಸಿ ರಾಹುಲ್ ಗಾಂಧಿಯವರು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರು.
ಕಾಂಗ್ರೆಸ್ ಪ್ರಕಾರ ಗ್ರಾಮೀಣ ಮತದಾರರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮತದಾರರಿಗೆ ಚುನಾವಣೆ ಮೇಳೆ ದಿಕ್ಕುತಪ್ಪಿಸಲಾಗುತ್ತದೆ. ವಾಸ್ತವವೇನೆಂದರೆ ಈ ವರ್ಗದ ಮತದಾರರು ಕೂಡ ಇವಿಎಂ ಬಗ್ಗೆ ವಿಶ್ವಾಸ ಹೊಂದಿದ್ದಾರೆ. 81.3 ಪರ್ಸೆಂಟ್ ಮಂದಿಯ ಪ್ರಕಾರ ಪ್ರತಿಯೊಂದು ಮತವೂ ಕೌಂಟ್ ಆಗುತ್ತದೆ. ಮತಗಟ್ಟೆ ಅಧಿಕಾರಿಗಳ ಸಮಗ್ರತೆ ಬಗ್ಗೆ ಕಾಂಗ್ರೆಸ್ ಪ್ರಶ್ನಿಸಿತ್ತು. ಆದರೆ ಸಮೀಕ್ಷೆಯಲ್ಲಿ 95 ಪರ್ಸೆಂಟ್ ಮಂದಿ ಮತಗಟ್ಟೆ ಸಿಬ್ಬಂದಿ ಬಗ್ಗೆ ಸಹಕಾರ ಪ್ರವೃತ್ತಿಯವರು ಎಂಬ ನಂಬಿಕೆ ಹೊಂದಿದ್ದಾರೆ. ಅವರು ಯಾವುದೇ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗದೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಂಬಿದ್ದಾರೆ.