Bengaluru Fraud Case: ಲೈಂಗಿಕ ಸಮಸ್ಯೆ ಪರಿಹರಿಸುವೆ ಎಂದು ಟೆಕ್ಕಿಗೆ 48 ಲಕ್ಷ ವಂಚಿಸಿದ್ದ ವಿಜಯ್ ಗುರೂಜಿ ಅರೆಸ್ಟ್
ರಸ್ತೆ ಪಕ್ಕದಲ್ಲಿ ಟೆಂಟ್ನಲ್ಲಿ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಜಾಹೀರಾತು ಹಾಕಿ, ನಕಲಿ ಔಷಧಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾದ ಟೆಕ್ಕಿ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದರು. ದುಬಾರಿ ಔಷಧಗಳನ್ನು ಸೇವಿಸಿದರೂ ಟೆಕ್ಕಿಯ ಲೈಂಗಿಕ ಸಮಸ್ಯೆ ಪರಿಹಾರವಾಗಿಲ್ಲ. ಬದಲಿಗೆ ಕಿಡ್ನಿಗಳಿಗೆ ಹಾನಿಯಾಗಿದೆ. ಹೀಗಾಗಿ ಪೊಲೀಸರಿಗೆ ಟೆಕ್ಕಿ ದೂರು ನೀಡಿದ್ದರು.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ.2: ಲೈಂಗಿಕ ಸಮಸ್ಯೆ ಪರಿಹರಿಸುವುದಾಗಿ ನಂಬಿಸಿ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 48 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ (Bengaluru Fraud Case) ಸಂಬಂಧಿಸಿ ಆರೋಪಿ ವಿಜಯ್ ಗುರೂಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಯುರ್ವೇದ ಔಷಧದ ಮೂಲಕ ಪರಿಹಾರ ನೀಡುವುದಾಗಿ ನಂಬಿಸಿ ಟೆಕ್ಕಿಗೆ ವಂಚನೆ ಮಾಡಲಾಗಿತ್ತು. ಔಷಧ ಪಡೆದ ನಂತರ ಟೆಕ್ಕಿಯ ಕಿಡ್ನಿಗಳಿಗೂ ಹಾನಿಯಾಗಿದ್ದರಿಂದ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಆರೋಪಿಯ ಬಂಧಿನವಾಗಿದೆ.
ಆರೋಪಿ ವಿಜಯ್ ಗುರೂಜಿ, ರಸ್ತೆ ಪಕ್ಕದಲ್ಲಿ ಟೆಂಟ್ನಲ್ಲಿ ಕುಳಿತು ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಜಾಹೀರಾತು ಹಾಕಿ, ನಕಲಿ ಔಷಧಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಎನ್ನಲಾಗಿದೆ. ವಂಚನೆಗೊಳಗಾದ ಟೆಕ್ಕಿ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಂಗೇರಿಯಿಂದ ಹೋಗುವಾಗ ರಸ್ತೆ ಬದಿಯ ಟೆಂಟ್ ಮೇಲೆ ಹಾಕಿದ್ದ `ಲೈಂಗಿಕ ಸಮಸ್ಯೆಗೆ ಆಯುರ್ವೇದಿಕ್ ಚಿಕಿತ್ಸೆ’ ಎಂಬ ಜಾಹೀರಾತನ್ನು ಗಮನಿಸಿದ್ದಾರೆ. ಹೀಗಾಗಿ ಅಲ್ಲಿದ್ದ ವಿಜಯ್ ಗುರೂಜಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಗುರೂಜಿ ಟೆಕ್ಕಿಗೆ `ದೇವರಾಜ್ ಬೂಟಿ’ ಎಂಬ ಔಷಧಿಯನ್ನು ಖರೀದಿಸಲು ಸೂಚಿಸಿದ್ದಾನೆ.
ಒಂದು ಗ್ರಾಂ ಔಷಧಿಗೆ 1.5 ಲಕ್ಷ ರೂ. ಎಂದು ಹೇಳಿದ್ದ ಗುರೂಜಿ, ಅದರಂತೆ ಟೆಕ್ಕಿಯಿಂದ 1,60,000 ರೂ. ಪಡೆದುಕೊಂಡಿದ್ದ. ಈ ಔಷಧಗೆ ಹಣವನ್ನು ಆನ್ಲೈನ್ನಲ್ಲಿ ಪಾವತಿಸಬಾರದು ಮತ್ತು ಒಬ್ಬರೇ ಬಂದು ತೆಗೆದುಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದ. ಅದರಂತೆ ಟೆಕ್ಕಿ ಕೂಡ ಗುರೂಜಿಯ ಮಾತನ್ನು ನಂಬಿ ಹಣ ನೀಡಿದ್ದಾರೆ.
ಬೆಂಗಳೂರು ದರೋಡೆ: ಇಬ್ಬರ ಬಂಧನ, 5.30 ಕೋಟಿ ರೂ. ಹಣ ಸೀಜ್
ಹಂತ ಹಂತವಾಗಿ ದೇವರಾಜ್ ಬೂಟಿ ಮತ್ತು `ಭವನ ಬೂಟಿ ತೈಲ’ ಹೆಸರಿನಲ್ಲಿ ದುಬಾರಿ ಔಷಧಗಳನ್ನು ಮಾರಾಟ ಮಾಡಿದ್ದಾನೆ. ಟೆಕ್ಕಿ ತಮ್ಮ ಲೈಂಗಿಕ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಬರೋಬ್ಬರಿ 17 ಲಕ್ಷ ರೂ. ಹಣ ಖರ್ಚು ಮಾಡಿ, ಔಷಧಿಗಳನ್ನು ಖರೀದಿಸಿದ್ದಾರೆ. ಅಷ್ಟೇ ಅಲ್ಲದೆ, ಬ್ಯಾಂಕ್ನಲ್ಲಿ 20 ಲಕ್ಷ ರೂ. ಸಾಲ ಪಡೆದು, ಹೀಗೆ ಒಟ್ಟು 48 ಲಕ್ಷ ರೂ. ಹಣವನ್ನು ಗುರೂಜಿಗೆ ನೀಡಿದ್ದಾರೆ.
ಇಷ್ಟೆಲ್ಲಾ ದುಬಾರಿ ಔಷಧಗಳನ್ನು ಸೇವಿಸಿದರೂ ಟೆಕ್ಕಿಯ ಲೈಂಗಿಕ ಸಮಸ್ಯೆ ಪರಿಹಾರವಾಗಿಲ್ಲ. ಬದಲಿಗೆ, ಮತ್ತೆ ಅದೇ ಸಮಸ್ಯೆ ಶುರುವಾಗಿದೆ. ಚಿಕಿತ್ಸೆ ಗುಣಮುಖವಾಗದ ಬಗ್ಗೆ ಪ್ರಶ್ನಿಸಿದಾಗ, ಗುರೂಜಿ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನಂತರ ತಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಾಗ ರಕ್ತ ಪರೀಕ್ಷೆ ಮಾಡಿಸಿದಾಗ, ಆಯುರ್ವೇದ ಚಿಕಿತ್ಸೆಯಿಂದಾಗಿ ಕಿಡ್ನಿಗೆ ಸಮಸ್ಯೆ ಆಗಿರುವುದು ಪತ್ತೆಯಾಗಿದೆ.
ಆಹಾರಕ್ಕೆ ಬೆರೆಸಲು ವಿಷಕಾರಿ ದತ್ತೂರ ಬೀಜದ ಪುಡಿ ನೀಡಿದ್ದ ‘ಮಾಂತ್ರಿಕ’ ಅರೆಸ್ಟ್
ಕೊನೆಗೆ ತಾನು ವಂಚನೆಗೊಳಗಾಗಿರುವುದನ್ನು ಅರಿತ ಟೆಕ್ಕಿ, ಕೊನೆಗೆ ವಿಜಯ್ ಗುರೂಜಿ ಮತ್ತು ವಿಜಯಲಕ್ಷ್ಮಿ ಆಯುರ್ವೇದಿಕ್ ಸಂಸ್ಥೆಯ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಜಯ್ ಗುರೂಜಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.