Vishweshwar Hegde Kageri: ಜನ ಗಣ ಮನ- ವಂದೇ ಮಾತರಂ ಕುರಿತು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ವಿವಾದ, ಕಾಂಗ್ರೆಸ್ ಟೀಕೆ
National anthem: ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಗೀತೆ ಪ್ರೇರಣೆ ನೀಡಿತ್ತು. ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳಿಂದಾಗಿ ವಂದೇ ಮಾತರಂ ಯಾವಾಗಲೂ ನಮಗೆ ಸ್ಫೂರ್ತಿ ನೀಡಿದೆ. ಈ ಗೀತೆ 150 ವರ್ಷ ಹಳೆಯದು. ವಂದೇ ಮಾತರಂ ಎಲ್ಲೆಡೆ ಪಠಿಸಲ್ಪಡಬೇಕು. ಅದು ಎಲ್ಲೆಡೆ ಪ್ರತಿಧ್ವನಿಸಬೇಕು ಎಂದು ಕೂಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ -
ಕಾರವಾರ: ಜನ ಗಣ ಮನ (Jana Gana Mana) ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕೆ ರಚಿಸಿದ್ದ ಗೀತೆಯಾಗಿದೆ. ವಂದೇ ಮಾತರಂ (Vande Mataram) ನಮ್ಮ ರಾಷ್ಟ್ರಗೀತೆ (National Anthem) ಆಗಬೇಕಿತ್ತು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಹೇಳಿದ್ದು, ಈ ಹೇಳಿಕೆ ವಿವಾದ ಸೃಷ್ಟಿಸಿದೆ. ಹೊನ್ನಾವರದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ 150ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ʼಏಕತೆಗಾಗಿ ನಡಿಗೆʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾಗೇರಿಯವರು ಈ ಮಾತು ಹೇಳಿದ್ದರು. ಇದೀಗ ಈ ಹೇಳಿಕೆಗೆ ಕಾಂಗ್ರೆಸ್ ಮುಖಂಡರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕಾಗೇರಿ ಹೇಳಿದ್ದೇನು?
ಬಂಕಿಮ್ ಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಜನ ಗಣ ಮನಕ್ಕೆ ಸಮನಾಗಿದೆ. ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ಸಾಕಷ್ಟು ಒತ್ತಡವಿತ್ತು. ಆದರೆ, ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ಜನ ಗಣ ಮನವನ್ನು ಹಾಗೂ ರಾಷ್ಟ್ರೀಯ ಗೀತೆಯಾಗಿ ವಂದೇ ಮಾತರಂ ಅನ್ನು ರಚಿಸಿದ್ದರು. ಆದ್ದರಿಂದ ನಾವು ಎರಡೂ ರಾಷ್ಟ್ರಗೀತೆಗಳನ್ನು ಹೊಂದಿದ್ದೇವೆಂದು ಕಾಗೇರಿ ಹೇಳಿದರು.
ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಗೀತೆ ಪ್ರೇರಣೆ ನೀಡಿತ್ತು. ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳಿಂದಾಗಿ ವಂದೇ ಮಾತರಂ ಯಾವಾಗಲೂ ನಮಗೆ ಸ್ಫೂರ್ತಿ ನೀಡಿದೆ. ಈ ಗೀತೆ 150 ವರ್ಷ ಹಳೆಯದು. ವಂದೇ ಮಾತರಂ ಎಲ್ಲೆಡೆ ಪಠಿಸಲ್ಪಡಬೇಕು. ಅದು ಎಲ್ಲೆಡೆ ಪ್ರತಿಧ್ವನಿಸಬೇಕು ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ತೀವ್ರ ಕಿಡಿ
ಕಾಗೇರಿ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ ಎಸ್ ಎಸ್ ಅವರಿಗೆ ಅವರದ್ದೇ ಆದ ಇತಿಹಾಸ ಗೊತ್ತಿಲ್ಲ. ಬಿಜೆಪಿ ಅವರ ಮ್ಯಾಗ್ಸಿನ್ ಲೇಖನ ಓದಿ. ಆಗ ಗೊತ್ತಾಗುತ್ತದೆ ಎಷ್ಟು ದೇಶ ದ್ರೋಹಿಗಳು ಅಂತ. ರಾಷ್ಟ್ರ ಧ್ವಜಕ್ಕೆ ಗೌರವ ಕೊಟ್ಟಿಲ್ಲ ಇವರು. ಜನಗಣಮನ ಬ್ರಿಟೀಷ್ ಅಧಿಕಾರಿಯ ಸ್ವಾಗತಕ್ಕೆ ಬರೆದಿದ್ದು ಅನ್ನೋದು ಸೃಷ್ಟಿ ಅಷ್ಟೇ. ವಾಟ್ಸ್ ಅಪ್ ನಲ್ಲಿ ಬರೋದನ್ನು ನೋಡ್ತಾರೆ. ಸುಳ್ಳಿನ ಕಾರ್ಖಾನೆ ನಡೆಸಿದ್ದಾರೆ ಅವರ ಶಾಖೆಗಳಲ್ಲಿ ಎಂದು ಕಿಡಿಕಾರಿದರು.
ಆಗ ವಂದೇ ಮಾತರಂ ಗೀತೆಯಿಂದ ಜನ ಪ್ರೇರಿತರಾಗಿದ್ದು ನಿಜ. ಯುವಕರು ಸ್ವಾತಂತ್ರ ಹೋರಾಟಕ್ಕೆ ಧುಮಕಿದರು. ನಂತರ ರಾಷ್ಟ್ರ ಗೀತೆ ಯಾವುದು ಅಂತ ತೀರ್ಮಾನ ಮಾಡಿದ್ದಾರೆ. ಇದೊಂದು ಸಂವಿಧಾನಿಕ ಚರ್ಚೆಯಾಗಲಿ. ಜನರಿಗೆ ಜನ ಗಣ ಮನ ಹಾಗೂ ವಂದೇ ಮಾತರಂ ಬಗ್ಗೆ ಗೌರವ ಇದೆ. ಆರ್ ಎಸ್ ಎಸ್ ಅವರಿಗೆ ಇಲ್ಲ ಅಷ್ಟೇ ಎಂದು ಕಿಡಿಕಾರಿದರು.ಮನುಸ್ಮೃತಿ ತಂದವರು ಇವರು. ಅವರ ಇತಿಹಾಸ ಓದಲಿ ಇವರು ಮೊದಲು ಎಂದು ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: MP Vishweshwar Hegde Kageri: ಜನರ ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
ರಾಷ್ಟ್ರಗೀತೆ ಬಗ್ಗೆ ಗೌರವವಿಲ್ಲ
ಕಾಗೇರಿ ಹೇಳಿಕೆ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, "ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋದರು. ಅವರು ಹೋದ ಮೇಲೆ ನಮ್ಮ ರಾಷ್ಟ್ರದ ಗೀತೆ ಹೇಗಿರಬೇಕು, ಆಡಳಿತ ಹೇಗಿರಬೇಕು ಅಂತ ಆಗಿನ ಪ್ರಧಾನಿ, ಸಚಿವ ಸಂಪುಟ ನಿರ್ಧಾರ ಮಾಡಿತ್ತು. ಈಗ 78 ವರ್ಷ ಆದ ಮೇಲೆ ಬಿಜೆಪಿ ಅವರಿಗೆ ಜ್ಞಾನೋದಯ ಆಗಿದೆ. ಜನಗಣಮನದಲ್ಲಿ ತಪ್ಪು ಏನಿದೆ?" ಎಂದು ಪ್ರಶ್ನಿಸಿದರು.
ಇದನ್ನು ಬಿಜೆಪಿ ಅವರು ಬಳಸುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕ್ರಮದಲ್ಲಿ ಬಳಸುತ್ತಾರೆ. ಈಗಲೂ ಕೂಡ ನೆಹರು, ಗಾಂಧೀಜಿ ಬಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಮಾತನಾಡ್ತಾರೆ. ಅವರೇ ಆರ್ ಎಸ್ ಎಸ್ ಅನ್ನು ನಿಷೇಧ ಮಾಡಿದ್ದರು. ಈ ತರಹ ಚರಿತ್ರೆ ತಿರುಚುವ ಕೆಲಸ ಬಿಜೆಪಿ ಅವರು ಮಾಡ್ತಿದ್ದಾರೆ. ಅವರಿಗೆ ಅದರ ಬಗ್ಗೆ ಗೌರವ ಇಲ್ಲ, ನಮಗೆ ಅದರ ಬಗ್ಗೆ ಗೌರವವಿದೆ" ಎಂದು ಕಿಡಿಕಾರಿದರು.
ಈ ಮಧ್ಯೆ, ನಾವು ವಂದೇ ಮಾತರಂಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಮತ್ತು 'ವಂದೇ ಮಾತರಂ' ಮತ್ತು 'ಜನ ಗಣ ಮನ' ಎರಡೂ ಸಮಾನವಾಗಿವೆ ಎಂದು ಬಿಜೆಪಿ ಮುಖಂಡರು ಕಾಗೇರಿ ಪರ ವಾದಿಸಿದ್ದಾರೆ.