ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amit Shah: ಅಗತ್ಯ ಬಿದ್ದರೆ ಧರ್ಮಸ್ಥಳ ಕೇಸ್‌ ಎನ್‌ಐಎಗೆ: ಸಂತರ ನಿಯೋಗಕ್ಕೆ ಅಮಿತ್‌ ಶಾ ಭರವಸೆ

Dharmasthala Case: ಪಂಚಮಸಾಲಿ ಲಿಂಗಾಯತ ಮಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದ ಈ ನಿಯೋಗದಲ್ಲಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಪೀಠಗಳ ಒಟ್ಟು ಎಂಟು ಸ್ವಾಮೀಜಿಗಳು ಭಾಗವಹಿಸಿದ್ದರು.

ಅಗತ್ಯ ಬಿದ್ದರೆ ಧರ್ಮಸ್ಥಳ ಕೇಸ್‌ ಎನ್‌ಐಎಗೆ: ಸಂತರಿಗೆ ಅಮಿತ್‌ ಶಾ ಭರವಸೆ

-

ಹರೀಶ್‌ ಕೇರ ಹರೀಶ್‌ ಕೇರ Sep 4, 2025 12:17 PM

ನವದೆಹಲಿ: ಧರ್ಮಸ್ಥಳ (Dharmasthala) ಕ್ಷೇತ್ರದ ಬಗ್ಗೆ ಅಪಪ್ರಚಾರ, ಅವಹೇಳನದ ಷಡ್ಯಂತ್ರ ನಡೆದಿದೆ. ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಬೇಕೆಂದು ಒತ್ತಾಯಿಸಿ, ಕರ್ನಾಟಕದ ಸನಾತನ ಸಂತರ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್ ಶಾ (Home minister Amit Shah) ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ. ಅಗತ್ಯ ಬಿದ್ದರೆ ತನಿಖೆಯನ್ನು ಎನ್‌ಐಎಗೆ ವಹಿಸಲಾಗುವುದು ಎಂದು ಅಮಿತ್‌ ಶಾ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪಂಚಮಸಾಲಿ ಲಿಂಗಾಯತ ಮಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದ ಈ ನಿಯೋಗದಲ್ಲಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಪೀಠಗಳ ಒಟ್ಟು ಎಂಟು ಸ್ವಾಮೀಜಿಗಳು ಭಾಗವಹಿಸಿದ್ದರು. ಈ ಭೇಟಿಯ ಸಂದರ್ಭದಲ್ಲಿ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಮತ್ತು ಅಪಪ್ರಚಾರದ ಕುರಿತು ಸುದೀರ್ಘ ಚರ್ಚೆ ನಡೆದಿದೆ.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯ ಬಗ್ಗೆ ಸ್ವಾಮೀಜಿಗಳಿಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ಈ ಪ್ರಕರಣವನ್ನು ಎನ್‌ಐಎಗೆ ವಹಿಸಿದರೆ ಹೆಚ್ಚು ಪಾರದರ್ಶಕವಾಗಿ ಮತ್ತು ಸಮಗ್ರವಾಗಿ ತನಿಖೆ ನಡೆಯಲಿದೆ ಎಂದು ಸ್ವಾಮೀಜಿಗಳ ತಂಡ ಒತ್ತಾಯಿಸಿದೆ. ಧರ್ಮಸ್ಥಳದ ಬಾಹುಬಲಿ ಬೆಟ್ಟದವರೆಗೆ ತಲುಪಿರುವ ಉತ್ಖನನ ಕಾರ್ಯಾಚರಣೆಯ ಬಗ್ಗೆ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಉತ್ಖನನವು ಶ್ರೀ ಕ್ಷೇತ್ರ ಧರ್ಮಸ್ಥಳದ ಆಧ್ಯಾತ್ಮಿಕ ಮಹತ್ವವನ್ನು ಹಾಳುಗೆಡಹುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಆರೋಪಿಸಿದ ಸ್ವಾಮೀಜಿಗಳು, ಈ ಷಡ್ಯಂತ್ರದ ಸತ್ಯಾಂಶವನ್ನು ಬಯಲಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ, ಸ್ವಾಮೀಜಿಗಳು ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳವು ಲಕ್ಷಾಂತರ ಭಕ್ತರ ಆಧ್ಯಾತ್ಮಿಕ ಕೇಂದ್ರವಾಗಿದ್ದು, ಇದರ ವಿರುದ್ಧ ಯೋಜಿತ ರೀತಿಯಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಶಬರಿಮಲೆ ಮತ್ತು ತಿರುಪತಿಯಂತಹ ಇತರ ಪವಿತ್ರ ಧಾರ್ಮಿಕ ಕ್ಷೇತ್ರಗಳ ಬಳಿಕ, ಈಗ ಧರ್ಮಸ್ಥಳವನ್ನು ಗುರಿಯಾಗಿಸಲಾಗಿದೆ ಎಂದು ಸ್ವಾಮೀಜಿಗಳು ಗೃಹ ಸಚಿವರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ. "ಹಿಂದೂ ಧರ್ಮ ಕ್ಷೇತ್ರಗಳನ್ನು ಸಂಶಯದಿಂದ ನೋಡುವಂತೆ ಮಾಡುವ ಷಡ್ಯಂತ್ರವಿದು. ಜನರು ದೇವಸ್ಥಾನಗಳಿಗೆ ಹೋಗದಂತೆ ತಡೆಯುವ ದುರುದ್ದೇಶ ಇದರ ಹಿಂದಿದೆ" ಎಂದು ನಿಯೋಗವು ಆರೋಪಿಸಿದೆ.

ಸ್ವಾಮೀಜಿಗಳ ನಿಯೋಗವು ಈ ಪ್ರಕರಣವನ್ನು ಎನ್‌ಐಎಗೆ ಶೀಘ್ರವಾಗಿ ವಹಿಸಬೇಕೆಂದು ಮನವಿ ಮಾಡಿದೆ. ಈ ಆರೋಪಗಳ ಹಿಂದೆ ರಾಷ್ಟ್ರವಿರೋಧಿ ಶಕ್ತಿಗಳ ಕೈವಾಡವಿದೆ ಎಂದು ಸ್ವಾಮೀಜಿಗಳು ಆರೋಪಿಸಿದ್ದಾರೆ. "ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ" ಎಂದು ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಈ ಪ್ರಕರಣದ ಗಂಭೀರತೆಯನ್ನು ಅರಿತಿರುವ ಶಾ, ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಗಂಭೀರವಾಗಿ ಕ್ರಮ ಕೈಗೊಳ್ಳಲಿದೆ ಎಂದು ಸೂಚಿಸಿದ್ದಾರೆ. ಸ್ವಾಮೀಜಿಗಳು ಈ ಷಡ್ಯಂತ್ರವು ಕೇವಲ ಧರ್ಮಸ್ಥಳಕ್ಕೆ ಸೀಮಿತವಾಗಿಲ್ಲ, ಬದಲಿಗೆ ಇತರ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನೂ ಗುರಿಯಾಗಿಸುತ್ತಿದೆ ಎಂದು ಅಮಿತ್​ ಶಾ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Dharmasthala case: ಧರ್ಮಸ್ಥಳ ಪ್ರಕರಣ; ಮಾಸ್ಕ್‌ ಮ್ಯಾನ್‌ ಮತ್ತೆ 3 ದಿನ ಎಸ್‌ಐಟಿ ಕಸ್ಟಡಿಗೆ