DK Shivakumar: ಹಸಿರಿಗಾಗಿ ಮಾತ್ರವಲ್ಲ, ನಮ್ಮ ಉಸಿರಿಗಾಗಿ ಪರಿಸರ ಸಂರಕ್ಷಿಸಬೇಕು: ಡಿ.ಕೆ.ಶಿವಕುಮಾರ್
DK Shivakumar: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಜವಾಹರಲಾಲ್ ನೆಹರು ತಾರಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ʼವಿಶ್ವ ಪರಿಸರ ದಿನಾಚರಣೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನಾವು ಪರಿಸರವನ್ನು ಕೇವಲ ಹಸಿರಿಗಾಗಿ ಮಾತ್ರವಲ್ಲ, ನಮ್ಮ ಉಸಿರಿಗಾಗಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.


ಬೆಂಗಳೂರು: ನಾವು ಪರಿಸರವನ್ನು ಕೇವಲ ಹಸಿರಿಗಾಗಿ ಮಾತ್ರವಲ್ಲ, ನಮ್ಮ ಉಸಿರಿಗಾಗಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಜವಹರಲಾಲ್ ನೆಹರು ತಾರಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ʼವಿಶ್ವ ಪರಿಸರ ದಿನಾಚರಣೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಯಾರ ಆಸ್ತಿಯಲ್ಲ. ಮಾನವ ಸೇರಿದಂತೆ ಎಲ್ಲಾ ಪ್ರಾಣಿಗಳು ಬದುಕುತ್ತಿರುವುದು ಪ್ರಕೃತಿಯಿಂದ. ನೀರು, ಗಾಳಿ, ಮರ, ಪರಿಸರಕ್ಕೆ ಜಾತಿ, ಧರ್ಮವಿಲ್ಲ. ಹಿಂದೆ ಹಳ್ಳಿಗಳಲ್ಲಿ ಮನೆಯ ಪಕ್ಕ ಸಣ್ಣ ತೋಟವಾದರೂ ಮಾಡಿಕೊಳ್ಳುತ್ತಿದ್ದೆವು. ನಂತರ ಮನೆ ಕಾಂಪೌಂಡ್ ಒಳಗೆ ತೆಂಗು, ಮಾವು, ಹಲಸಿನ ಮರ ಹಾಕುತ್ತಿದ್ದೆವು. ನಗರ ಪ್ರದೇಶಗಳಲ್ಲಿ ಜಾಗದ ಕೊರತೆಯಿಂದ ವಿವಿಧ ಸಣ್ಣಪುಟ್ಟ ಗಿಡಗಳನ್ನು ಬೆಳೆಸುತ್ತಿದ್ದೇವೆ ಎಂದರು.
ನಮ್ಮ ಮಕ್ಕಳು ನಮ್ಮ ನಿಜವಾದ ಆಸ್ತಿ. ಅವರಿಗಾಗಿ ಭವಿಷ್ಯ ರೂಪಿಸಬೇಕು ಎಂದು ಮಕ್ಕಳಿಂದಲೇ ಒಂದೊಂದು ಗಿಡ ನೆಡಿಸಿ ಅವರೇ ಅವುಗಳನ್ನು ಬೆಳೆಸುವಂತೆ ಮಾಡಬೇಕು ಎಂಬುದು ನಮ್ಮೆಲ್ಲರ ಆಸೆ. ಹೀಗಾಗಿ ನಾನು ಬೆಂಗಳೂರು ನಗರದ ಸಚಿವನಾದ ಬಳಿಕ ಈ ಕಾರ್ಯಕ್ರಮವನ್ನು ನಡೆಸಲು ಆದೇಶ ನೀಡಲಾಯಿತು. ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ಶಾಲೆ ಒಂದೊಂದು ಪ್ರದೇಶ ಆಯ್ಕೆ ಮಾಡಿಕೊಂಡು ಅಲ್ಲಿ ತಮ್ಮ ಶಾಲೆ ವಿದ್ಯಾರ್ಥಿಗಳಿಂದ ಗಿಡ ನೆಡಿಸಿ ಅದನ್ನು ಬೆಳೆಸಬೇಕು. ಆ ಗಿಡದ ಮೇಲೆ ಆ ಮಗುವಿನ ಹೆಸರು ಹಾಕಿಕೊಳ್ಳುವ ಅವಕಾಶ ನೀಡುವ ಕಾರ್ಯ ಆರಂಭಿಸಿದೆವು. ಈ ಕಾರ್ಯಕ್ರಮದ ಮೂಲಕ ಇಲ್ಲಿಯವರೆಗೂ 53 ಸಾವಿರ ಮಕ್ಕಳು ಗಿಡ ನೆಟ್ಟು ಅವುಗಳನ್ನು ಬೆಳೆಸುತ್ತಿದ್ದಾರೆ. ಈ ಪ್ರಕ್ರಿಯೆ ಹೀಗೆ ಮುಂದುವರಿಯಬೇಕು ಎಂದು ಹೇಳಿದರು.
ಇಂದು ಬೆಂಗಳೂರು ಹವಾಮಾನ ಕ್ರಿಯಾ ಕೋಶ (ಬೆಂಗಳೂರು ಕಾರ್ಯಯೋಜನೆ ಕ್ಲಬ್) ಆರಂಭಿಸಿದ್ದೇವೆ. ಈ ಕ್ಲಬ್ನಲ್ಲಿ ಕನಿಷ್ಠ 10 ಜನ ಸದಸ್ಯರು ಇರಬೇಕು ಎಂದು ಪ್ರಸ್ತಾವನೆ ಬಂದಿತ್ತು. ಆದರೆ ನಾನು ಕನಿಷ್ಠ 25 ಸದಸ್ಯರು ಇರಬೇಕು ಎಂದು ತೀರ್ಮಾನ ಮಾಡಿದೆ. ಬೆಂಗಳೂರಿನಲ್ಲಿ ಸುಮಾರು 7 ಸಾವಿರ ಶಾಲೆಗಳಿವೆ. ಇಲ್ಲಿ ಆರಂಭಿಸಿದ ನಂತರ ಬೇರೆ ಪ್ರದೇಶಗಳಲ್ಲಿ ವಿಸ್ತರಿಸಬಹುದು. ಬೆಂಗಳೂರು ಗಾರ್ಡನ್ ಸಿಟಿ ಎಂಬ ಹೆಸರು ಪಡೆದಿದ್ದು, ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಈ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ನೀಡಬೇಕು ಎಂದು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ನಾನು ಸರ್ಕಾರಿ ಶಾಲೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಕಾರ್ಯಕ್ರಮ ನಡೆಸುತ್ತಿದ್ದರು. ಇದನ್ನು ನೋಡಿ ನನಗೆ ಅಸಮಾಧಾನವಾಯಿತು. ಹೀಗಾಗಿ ಅವರಿಗೆ ನಾನು ಒಂದು ಸೂಚನೆ ನೀಡಿದೆ. ಮುಂದೆ ಬೆಂಗಳೂರಿನಲ್ಲಿ ಶಾಲೆಯಲ್ಲಿ ಕಾರ್ಯಕ್ರಮ ಮಾಡಿದರೆ ಅವುಗಳನ್ನು ಶಾಲಾ ಮಕ್ಕಳೇ ನಡೆಸಬೇಕು ಎಂದು ಮಾರ್ಗದರ್ಶನ ನೀಡಿದೆ. ಈ ಕಾರ್ಯಕ್ರಮವನ್ನು ಮಕ್ಕಳೇ ನಡೆಸುತ್ತಿದ್ದಾರೆ. ಆ ಮೂಲಕ ಅವರಲ್ಲಿ ನಾಯಕತ್ವ ಗುಣಬೆಳೆಸಬೇಕು ಎಂದು ಹೇಳಿದರು.
ಇಂದು ನಾವು ಬ್ಲೂ, ಗ್ರೀನ್ ಪ್ರಶಸ್ತಿ ನೀಡಿದ್ದೇವೆ. ಮುಂದೆ ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ ಹೆಚ್ಚು ಸ್ಪರ್ಧೆ ಏರ್ಪಡಲಿದೆ. ವಿವಿಧ ನಾಗರೀಕ ಸಂಘ ಸಂಸ್ಥೆಗಳು ಕೂಡ ಈ ವಿಚಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇಂದು 175 ಅರ್ಜಿಗಳು ಬಂದಿವೆ. ಮುಂದೆ 500-1000 ಅರ್ಜಿ ಬರಬಹುದು. ಶಾಲೆಗಳಲ್ಲಿನ ಕ್ಲಬ್ಗಳಿಗೆ ಅಗತ್ಯ ನೆರವು ನೀಡಲಾಗುವುದು. ಈ ಕ್ಲಬ್ಗಳ ಕಾರ್ಯಾಚರಣೆ ಕುರಿತ ಮಾರ್ಗಸೂಚಿ ಪುಸ್ತಕವನ್ನು ಇಂದು ನಾವು ಬಿಡುಗಡೆ ಮಾಡಿದ್ದೇವೆ. ನಿಮ್ಮ ಜತೆ ಎಲ್ಲಾ ಸಂಸ್ಥೆಗಳು ಪರಿಸರ ಸಂರಕ್ಷಣೆಯಲ್ಲಿ ಕೆಲಸ ಮಾಡಲು ಇದನ್ನು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸುದ್ದಿಯನ್ನೂ ಓದಿ | SSC Recruitment 2025: ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಗುಡ್ನ್ಯೂಸ್; ಸ್ಟಾಫ್ ಸೆಲೆಕ್ಷನ್ ಕಮಿಷನ್ನಿಂದ 2,423 ಹುದ್ದೆಗಳ ಭರ್ತಿ
ದುರ್ಘಟನೆ ಹಿನ್ನೆಲೆಯಲ್ಲಿ ಗುರುವಾರದಂದು ಸರ್ಕಾರದ ವತಿಯಿಂದ ಮಾಡಬೇಕಾಗಿದ್ದ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ನಮ್ಮ ಜನ ಸಂಭ್ರಮಾಚರಣೆ ಸಮಯದಲ್ಲಿ ಶೋಕ ಆಚರಿಸುವಂತಾಯಿತು. ಇದರಿಂದ ನಾವೆಲ್ಲರೂ ನೋವಿನಲ್ಲಿದ್ದು, ಈ ವಿಚಾರವಾಗಿ ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.