ತಮನ್ನಾ ಭಾಟಿಯಾ ಆಯ್ಕೆ ವಿವಾದದ ನಡುವೆಯೂ 2,016 ಕೋಟಿ ರುಪಾಯಿ ವಹಿವಾಟು ನಡೆಸಿದ ಮೈಸೂರು ಸ್ಯಾಂಡಲ್ ಸೋಪ್; ಹೊರ ರಾಜ್ಯಗಳಲ್ಲಿ ದಾಖಲೆ ಮಾರಾಟ
Mysore Sandal Soap: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) 2025–26ರಲ್ಲಿ 2,016 ಕೋಟಿ ರುಪಾಯಿ ವಹಿವಾಟು ಮಾಡಿದೆ. ಇದರೊಂದಿಗೆ ನಿವ್ವಳ ಲಾಭ 507 ಕೋಟಿ ರುಪಾಯಿಗೆ ತಲುಪಿದೆ. ಭಾರಿ ವಿವಾದದ ನಡುವೆಯೂ ಇತಿಹಾಸದಲ್ಲೇ ಅತ್ಯಧಿಕ ಹಣಕಾಸು ದಾಖಲೆ ಸಾಧಿಸಿದೆ. ಈ ವರ್ಷ ಸಂಸ್ಥೆಯು ರಾಜ್ಯ ಖಜಾನೆಗೆ 150 ಕೋಟಿ ರುಪಾಯಿ ಲಾಭಾಂಶವನ್ನು ನೀಡಿದ್ದು, 21ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ಜಿಗಿದಿದೆ.
ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿ ತಮನ್ನಾ ಭಾಟಿಯಾ (ಸಂಗ್ರಹ ಚಿತ್ರ) -
ಬೆಂಗಳೂರು, ಏ. 30: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) 2025–26ರಲ್ಲಿ 2,016 ಕೋಟಿ ರುಪಾಯಿ ವಹಿವಾಟು ಮಾಡಿದೆ. ನಿವ್ವಳ ಲಾಭ 507 ಕೋಟಿ ರುಪಾಯಿಗೆ ತಲುಪಿದೆ. ಆ ಮೂಲಕ ಭಾರಿ ವಿವಾದದ ನಡುವೆಯೂ ಇತಿಹಾಸದಲ್ಲೇ ಅತ್ಯಧಿಕ ವಹಿವಾಟು ನಡೆಸಿದೆ. ಮೈಸೂರು ಸ್ಯಾಂಡಲ್ ಸೋಪ್ಗೆ (Mysore Sandal Soap) ನಟಿ ತಮನ್ನಾ ಭಾಟಿಯಾ (Tamannaah Bhatia) ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಪರಭಾಷಾ ನಟಿಯನ್ನು ಆಯ್ಕೆ ಮಾಡಿದ್ದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.
ಸರ್ಕಾರಿ ಸ್ವಾಮ್ಯದ ಕಂಪನಿಯ ಬೆಳವಣಿಗೆ ಕಳೆದ ನಾಲ್ಕು ವರ್ಷಗಳಿಂದ ಸ್ಥಿರವಾಗಿದೆ. 2022–23ರಲ್ಲಿ 1,375 ಕೋಟಿ ರುಪಾಯಿ ಇದ್ದ ವಹಿವಾಟು 2023–24ರಲ್ಲಿ 1,571 ಕೋಟಿ ರುಪಾಯಿಗೆ, 2024–25ರಲ್ಲಿ 1,786 ಕೋಟಿ ರುಪಾಯಿಗೆ ಮತ್ತು 2025–26ರಲ್ಲಿ 2,016 ಕೋಟಿ ರುಪಾಯಿಗೆ ಏರಿದೆ. ಇದೇ ಅವಧಿಯಲ್ಲಿ ನಿವ್ವಳ ಲಾಭ 182 ಕೋಟಿ ರುಪಾಯಿಂದ 362 ಕೋಟಿ ರುಪಾಯಿ, 451 ಕೋಟಿ ರುಪಾಯಿ ಮತ್ತು 507 ಕೋಟಿ ರುಪಾಯಿಗೆ ಹೆಚ್ಚಳವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ವರ್ಷ ಸಂಸ್ಥೆಯು ರಾಜ್ಯ ಖಜಾನೆಗೆ 150 ಕೋಟಿ ರುಪಾಯಿ ಲಾಭಾಂಶವನ್ನು ನೀಡಿದೆ. ಇದು ಹಿಂದಿನ 21 ಕೋಟಿ ರುಪಾಯಿಗಿಂತ ಹೆಚ್ಚು. ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರುಪಾಯಿಯನ್ನು ಕೊಡುಗೆಯಾಗಿ ನೀಡಲಾಗುವುದು. ಉತ್ಪಾದನೆಯು 47,494 ಮೆಟ್ರಿಕ್ ಟನ್ಗಳನ್ನು ತಲುಪಿದ್ದು, 57 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ರಫ್ತು ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿದೆ ಸಿಎಂ ಪೋಸ್ಟ್:
The Karnataka Soaps & Detergents Ltd. (KSDL) has achieved an all-time record performance in 2025–26, crossing ₹2,016 crore in turnover and ₹507 crore in net profit.
— Siddaramaiah (@siddaramaiah) April 30, 2026
From a legacy of trust built over a century to becoming a modern, high-performing public enterprise, KSDL stands… pic.twitter.com/Qq2lujpiq7
ಕಂಪನಿಯು ನಾಲ್ಕು ವರ್ಷಗಳಲ್ಲಿ 2,000 ಕೋಟಿ ರುಪಾಯಿಗೂ ಹೆಚ್ಚಿನ ವಹಿವಾಟು ನಡೆಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಇದು ಸುಮಾರು ಶೇಕಡ 35ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು ಪ್ರತಿಬಿಂಬಿಸುತ್ತದೆ. ರಾಜ್ಯವು 2028ರ ವೇಳೆಗೆ 3,000 ಕೋಟಿ ರುಪಾಯಿ ಮತ್ತು 2030ರ ವೇಳೆಗೆ 5,000 ಕೋಟಿ ರುಪಾಯಿ ವಹಿವಾಟು ಸಾಧಿಸುವ ಗುರಿ ಹೊಂದಿದೆ.
ಧೋನಿ ಮೈಸೂರು ಸ್ಯಾಂಡಲ್ ರಾಯಭಾರಿಯಾಗಿದ್ದಲೂ ನಡೆದಿತ್ತು ವಿವಾದ
ಸರ್ಕಾರವು ಶ್ರೀಗಂಧದ ಕೃಷಿಯನ್ನು ವಿಸ್ತರಿಸಿದ್ದು, 3,800 ಎಕರೆಗಳಲ್ಲಿ 700ಕ್ಕೂ ಹೆಚ್ಚು ರೈತರು ಬೆಳೆಯುತ್ತಿದ್ದಾರೆ. ಆರ್ಥಿಕ ಲಾಭದ ಹೊರತಾಗಿಯೂ, ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿಯಾಗಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿದ ನಂತರ ಕಂಪನಿಯ ಬ್ರ್ಯಾಂಡಿಂಗ್ ತಂತ್ರವು ಟೀಕೆಗೆ ಗುರಿಯಾಗಿತ್ತು.
ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ಬ್ರ್ಯಾಂಡ್ಗೆ ಕನ್ನಡಿಗರಲ್ಲದ ವ್ಯಕ್ತಿಯನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವುದನ್ನು ವಿರೋಧ ಪಕ್ಷದ ನಾಯಕರು ಮತ್ತು ಕನ್ನಡ ಪರ ನಾಯಕರು ಪ್ರಶ್ನಿಸಿದ್ದರು. ಸರ್ಕಾರವು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಬ್ರ್ಯಾಂಡ್ನ ರಾಷ್ಟ್ರೀಯ ಮತ್ತು ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿತ್ತು. ತಮನ್ನಾ ಅವರ ಆಯ್ಕೆ ಕೆಎಸ್ಡಿಎಲ್ ತನ್ನ ಸಾಂಪ್ರದಾಯಿಕ ಮಾರುಕಟ್ಟೆಗಳನ್ನು ಮೀರಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ವಾದಿಸಿದ್ದರು.
ಏನಿದು ವಿವಾದ?
ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ಗಳ ರಾಯಭಾರಿ ಸಂಬಂಧವಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಯಿತು.
ಮೈಸೂರು ಸ್ಯಾಂಡಲ್ ಸೋಪ್ ಅನ್ನು ಕರ್ನಾಟಕದ ಹೆಮ್ಮೆ ಎಂದೇ ಹೇಳಲಾಗುತ್ತದೆ. ಆದರೆ ಕನ್ನಡಿಗರನ್ನು ಬಿಟ್ಟು ಹೊರ ರಾಜ್ಯದ ನಟಿಯನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದಕ್ಕೆ ಕೆಲವು ಕನ್ನಡಪರ ಸಂಘಟನೆಗಳು ಮತ್ತು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು. ಸ್ಥಳೀಯರಿಗೆ ಆದ್ಯತೆ ನೀಡಬೇಕಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.
ಈ ವಿವಾದದ ನಡುವೆಯೂ ಕಂಪನಿ ತನ್ನ ಮಾರಾಟದಲ್ಲಿ ದೊಡ್ಡ ಏರಿಕೆಯನ್ನು ದಾಖಲಿಸಿ 2,016 ಕೋಟಿ ರುಪಾಯಿಗೂ ಹೆಚ್ಚು ವಹಿವಾಟು ನಡೆಸಿದೆ.