Vishwavani Book Release: ಓದಿನಿಂದ ನಮ್ಮ ಇತಿಹಾಸವನ್ನು ವಿಭಿನ್ನವಾಗಿ ನೋಡಬಹುದು: ಡಾ. ಡಿ. ವೀರೇಂದ್ರ ಹೆಗ್ಗಡೆ
Vishwavani Pustaka: ಬೆಂಗಳೂರಿನಲ್ಲಿ ನಡೆದ ವಿಶ್ವವಾಣಿ ಪ್ರಕಾಶನದ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದ್ದು, ಓದಿನಿಂದ ವಿಭಿನ್ನ ಪ್ರಯೋಜನಗಳಿರುತ್ತವೆ. ನಾನು ಭಟ್ಟರ ಬರಹಗಳ ಅಭಿಮಾನಿ. ಪತ್ನಿ ಹೇಮಾವತಿ ಹೆಗ್ಗಡೆ ಕೂಡ ವಿಶ್ವವಾಣಿ ಕ್ಲಬ್ಹೌಸ್ ಕಾರ್ಯಕ್ರಮಗಳು ನಿರಂತರ ಕೇಳುಗರು ಎಂದು ತಿಳಿಸಿದ್ದಾರೆ.


ಬೆಂಗಳೂರು: ಓದಿನಿಂದ ವಿಭಿನ್ನ ಪ್ರಯೋಜನಗಳಿರುತ್ತವೆ. ನಾನು ವಿಶ್ವವಾಣಿ ಪತ್ರಿಕೆಯನ್ನು (Vishwavani Book Release) ಪ್ರತಿದಿನ ತಪ್ಪದೇ ಓದುತ್ತೇನೆ. ಆಧುನಿಕ ಬದುಕನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಕಲೆಯನ್ನು ಅದು ನನಗೆ ಕಲಿಸಿದೆ. ಪತ್ರಿಕೆಯೆಂದರೆ ಬರಿಯ ವಾರ್ತೆಗಳಿರುವುದಲ್ಲ. ಮನಸ್ಸನ್ನು ಅರಳಿಸುವ ಲೇಖನಗಳಿರಬೇಕು. ಒಂದು ವರ್ಷದ ನಂತರ ತೆರೆದು ನೋಡಿದರೂ ಓದುವಂತಿರಬೇಕು. ವಿಶ್ವವಾಣಿ ಅಂಥ ಪತ್ರಿಕೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ (Veerendra Heggade) ತಿಳಿಸಿದರು.
ಬೆಂಗಳೂರಿನಲ್ಲಿ ಇಂದು (ಜುಲೈ 26) ನಡೆದ ವಿಶ್ವವಾಣಿ ಪ್ರಕಾಶನದ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಓದಿನಿಂದ ನಮ್ಮ ಇತಿಹಾಸವನ್ನು ವಿಭಿನ್ನವಾಗಿ ನೋಡಬಹುದು. ಕೊರೊನಾ ಕಾಲದಲ್ಲಿ ನಾನು ರಾಣಿ ಚೆನ್ನಭೈರಾದೇವಿ ಕುರಿತು ಗಜಾನನ ಶರ್ಮ ಅವರು ಬರೆದ ಪುಸ್ತಕ ಓದಿ ರಾಣಿಯ ಬಗ್ಗೆ ಅರಿತೆ. ನಂತರ ಅದರ ಬಗ್ಗೆ ಪ್ರಯತ್ನಿಸಿ ರಾಣಿಯ ನೆನಪಿಗಾಗಿ ಒಂದು ಅಂಚೆ ಚೀಟಿಯನ್ನು ಹೊರತರಲಾಯಿತು. ಇದೀಗ ಆಕೆಗಾಗಿ ಹೊನ್ನಾವರದ ಬಳಿ ಒಂದು ಸ್ಮಾರಕವನ್ನು ಮಾಡಲು ಮುಂದಾಗಿದ್ದೇನೆ. ಇದಕ್ಕೆ ಸರಕಾರ ಜಾಗವೊಂದನ್ನು ಒದಗಿಸಬೇಕಿದೆ. ರಾಣಿಯ ಬಗ್ಗೆ ಇಷ್ಟು ಕೆಲಸ ಮಾಡಲು ಹೇಗೆ ಸಾಧ್ಯವಾಯಿತು ಎಂದು ಲೇಖಕರು ಕೇಳಿದಾಗ, ಪುಸ್ತಕ ಓದಿದ್ದರಿಂದ ಎಂದು ಉತ್ತರಿಸಿದೆ ಎಂದು ನುಡಿದರು.
ನಾನು ಭಟ್ಟರ ಬರಹಗಳ ಅಭಿಮಾನಿ. ಪತ್ನಿ ಹೇಮಾವತಿ ಹೆಗ್ಗಡೆ ಕೂಡ ವಿಶ್ವವಾಣಿ ಕ್ಲಬ್ಹೌಸ್ ಕಾರ್ಯಕ್ರಮಗಳು ನಿರಂತರ ಕೇಳುಗರು. ನಾನೂ ಪ್ರವಾಸ ಮಾಡುತ್ತೇನೆ. ಆದರೆ ಬರೆಯುವಷ್ಟು ನೆನಪಿನಲ್ಲಿ ಉಳಿಯುವುದಿಲ್ಲ. ಭಟ್ಟರು ಎಲ್ಲವನ್ನೂ ನೆನಪಿಟ್ಟುಕೊಂಡು ಬರೆಯುತ್ತಾರೆ. ಇದು ಹೇಗೆ ಸಾಧ್ಯವೆಂದು ನಾನು ಕೇಳಿದಾಗ, ವಿಮಾನದಲ್ಲೇ ಬರೆಯುತ್ತೇನೆ ಎಂದು ಉತ್ತರಿಸಿದ್ದರು ಎಂದು ನೆನಪಿಸಿಕೊಂಡರು.
ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರ ನಾಲ್ಕು ಪುಸ್ತಕ ಸೇರಿ ವಿಶ್ವವಾಣಿ ಪುಸ್ತಕ ಪ್ರಕಾಶನದ 8 ಕೃತಿಗಳು ಬಿಡುಗಡೆಯಾದವು. ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ಸಂಪಾದಕರಾದ ಶೋಭಾ ಮಳವಳ್ಳಿ, ವಿಶ್ವೇಶ್ವರ ಭಟ್, ಉದ್ಯಮಿ ಹಾಗೂ ಲೇಖಕರಾದ ಎಸ್. ಷಡಕ್ಷರಿ, ಉದ್ಯಮಿ ಮತ್ತು ಅಂಕಣಕಾರ ಕಿರಣ್ ಉಪಾಧ್ಯಾಯ, ಪತ್ರಕರ್ತ ರಾಜು ಅಡಕಳ್ಳಿ, ನಿರೂಪಕಿ ಹಾಗೂ ಲೇಖಕಿ ರೂಪಾ ಗುರುರಾಜ್ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Roopa Gururaj Column: ಅನೇಕ ಸಮಸ್ಯೆಗಳಿಗೆ ಪರಿಹಾರ ನಮ್ಮೊಳಗೆ ಇರುತ್ತದೆ
ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ಅವರ 100ನೇ ಪುಸ್ತಕ ವಿದೇಶ ಕಾಲ, ಸಂಪಾದಕರ ಸದ್ಯಶೋಧನೆ ಭಾಗ 7, ಸಂಪಾದಕರ ಸದ್ಯಶೋಧನೆ 8, Ask The Editor ಭಾಗ 3, ರೂಪಾ ಗುರುರಾಜ್ ಅವರ ಒಂದೊಳ್ಳೆ ಮಾತು-4, ರಾಜು ಅಡಕಳ್ಳಿಯವರ ಗೆದ್ದವರ ಕಥೆಗಳು, ಕಿರಣ್ ಉಪಾಧ್ಯಾಯರ ಉಭಯದೇಶವಾಸಿ, ಎಸ್ ಷಡಕ್ಷರಿಯವರ ಯಶಸ್ವಿ ಬದುಕಿಗೆ ಸರಳ ಸೂತ್ರಗಳು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.