Stabbing Case: ಕಳ್ಳರನ್ನು ಹಿಡಿಯಲು ಹೋದ ಪೊಲೀಸ್ ಪೇದೆಗೆ ಚಾಕು ಇರಿತ!
Stabbing Case: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಖಾನ್ ಆಸ್ಪತ್ರೆಯ ಪಕ್ಕದಲ್ಲಿ ಮಂಗಳವಾರ ರಾತ್ರಿ ಕಳ್ಳರು ಬಂದಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಕಳ್ಳರನ್ನು ಹಿಡಿಯಲು ಹೋದಾಗ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿಯಲಾಗಿದೆ.


ವಿಜಯಪುರ: ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ಪೇದೆಗೆ ಚಾಕು ಇರಿದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. ಮನೆ ಕಳ್ಳತನಕ್ಕೆ ಬಂದಿದ್ದ ಕಳ್ಳರನ್ನು ಹಿಡಿಯಲು ಪೊಲೀಸರು ಬೆನ್ನಟ್ಟುವಾಗ ಪೊಲೀಸ್ ಪೇದೆಗೆ ಚಾಕುವಿನಿಂದ (Stabbing Case) ಇರಿಯಲಾಗಿದೆ. ಬಸವನಬಾಗೇವಾಡಿಯ ಖಾನ್ ಆಸ್ಪತ್ರೆಯ ಪಕ್ಕದಲ್ಲಿ ಮಂಗಳವಾರ ರಾತ್ರಿ ಕಳ್ಳರು ಬಂದಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಕಳ್ಳರನ್ನು ಹಿಡಿಯಲು ಹೋದಾಗ ಪೊಲೀಸ್ ಪೇದೆಗೆ ಚಾಕುವಿನಿಂದ ಇರಿಯಲಾಗಿದೆ.
ಪಿಐ ಗುರುಶಾಂತ ದಾಶ್ಯಾಳ ಸೇರಿ ನಾಲ್ಕು ಪೊಲೀಸರು, ಕಳ್ಳರಿದ್ದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ಹಿಡಿಯಲು ಪೊಲೀಸರು ಬೆನ್ನಟ್ಟುತ್ತಿದ್ದಂತೆ ಖದೀಮರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೇದೆ ರಮೇಶ ಅವರು ಒಬ್ಬ ಕಳ್ಳನನ್ನು ಹಿಡಿದಿದ್ದಾರೆ. ಈ ವೇಳೆ ಕಳ್ಳ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಪೇದೆಯ ತೊಡೆ ಹಾಗೂ ಮತ್ತೆರಡು ಕಡೆಗೆ ಇರಿದು ಪರಾರಿಯಾಗಿದ್ದಾನೆ.
ಸಿಪಿಐ ಡ್ರೈವರ್ ಹಾಗೂ ಪೊಲೀಸ್ ಪೇದೆಯಾಗಿರುವ ರಮೇಶ ಗೂಳಿ(36) ಹಲ್ಲೆಗೊಳಗಾದ ಪೊಲೀಸ್ ಪೇದೆಯಾಗಿದ್ದಾರೆ. ಸದ್ಯ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ತಂಡವೊಂದು ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಓಡಾಡಿರುವ ದೃಶ್ಯ ಸ್ಥಳೀಯರ ಸಿಸಿ ಟಿವಿಯಲ್ಲಿ ಸೆರೆಯಾಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು ಆ ಆತಂಕ ಮರೆಯುವ ಮುನ್ನವೇ ಸದ್ಯ ಮತ್ತೆ ಜಿಲ್ಲೆಯಲ್ಲಿ ಪೊಲೀಸರ ಮೇಲೆ ಕಳ್ಳರು ಹಲ್ಲೆ ಮಾಡಿದ್ದು ನಿಜಕ್ಕೂ ಜಿಲ್ಲೆಯ ಜನರಲ್ಲಿ ಭಯ ಹುಟ್ಟಿಸುವಂತಾಗಿದೆ.
ನಟಿ ರಮ್ಯಾಗೆ ಅಶ್ಲೀಲ ಮೆಸೇಜ್; ಮತ್ತೋರ್ವನನ್ನು ಬಂಧಿಸಿದ ಸಿಸಿಬಿ
ಬೆಂಗಳೂರು: ನಟಿ ರಮ್ಯಾಗೆ (Actress Ramya) ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮಂಜುನಾಥ ಎಂದು ಗುರುತಿಸಲಾಗಿದ್ದು, ಈತ ಕೊಪ್ಪಳ ಮೂಲದವನು ಎಂದು ತಿಳಿದು ಬಂದಿದೆ. ಇದುವರೆಗೆ ಅಶ್ಲೀಲ ಕಮೆಂಟ್ ಮಾಡಿದ ಐದು ಆರೋಪಿಗಳನ್ನು ಈವರೆಗೆ ಬಂಧಿಸಲಾಗಿದೆ. ಬಂಧಿತರನ್ನ ರಾಜೇಶ್, ಓಬಣ್ಣ, ಗಂಗಾಧರ್, ಭುವನ್ ಎಂದು ಗುರುತಿಸಲಾಗಿದೆ. ಸಿಸಿಬಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಕಮೆಂಟ್ ಮಾಡಿದ ಪ್ರತಿಯೊಬ್ಬರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಮೆಸೇಜ್ ಮಾಡಿದ್ದ ಒಟ್ಟು 48 ಜನರ ಐಪಿ ಅಡ್ರೆಸ್ ಗಳನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ ಇದುವರೆಗೂ ಒಟ್ಟು 15 ಜನರನ್ನು ಗುರುತಿಸಿದ್ದು, ಐವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿಕ್ಕಮಗಳೂರು, ಕೋಲಾರ, ಭಾಗದವರೇ ಹೆಚ್ಚು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಕಮೆಂಟ್ ಮಾಡಿದವರಿಗೆ ಕರೆಸಿ ವಾರ್ನಿಂಗ್ ಕೊಡಲಾಗುತ್ತಿದೆ. ಉಳಿದ ಕೆಲವರು ಐಪಿ ಅಡ್ರೆಸ್ ಬ್ಲಾಕ್ ಮಾಡಿಕೊಂಡು ಮನೆ ಬಿಟ್ಟು ಪರಾರಿಯಾಗಿದ್ದಾರೆ. ನಾರ್ಮಲ್ ಆಗಿ ಕಮೆಂಟ್ ಮಾಡಿದವರು ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಅರಿವಿಲ್ಲದೆ ಮೆಸೇಜ್ ಮಾಡಿದರೆ ಬಗ್ಗೆ ಕೆಲವರು ಕ್ಷಮೆ ಕೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆದ ನಟಿ ಅಶ್ಲೀಲ ಮೆಸೇಜ್ ಕಳುಹಿಸಿದ್ದವರ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಜೊತೆಗೆ 43 ಅಕೌಂಟ್ಗಳ ವಿರುದ್ಧ ದೂರು ದಾಖಲಿಸಿದ್ದರು.
ಈ ಸುದ್ದಿಯನ್ನೂ ಓದಿ | Murder Case: ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿ ನೇಣಿಗೆ ಶರಣಾದ ಆರೋಪಿ
ಇದರ ಬೆನ್ನಲ್ಲೇ ಕಿಡಿಗೇಡಿಗಳ ಪತ್ತೆಗಾಗಿ 6 ತಂಡವನ್ನ ರಚನೆ ಮಾಡಲಾಗಿತ್ತು. ಇದೀಗ ಪೊಲೀಸರು ಕೆಲವರನ್ನು ಬಂಧಿಸಿದ್ದು, ಇನ್ನೂ ಹಲವರಿಗಾಗಿ ಬಲೆ ಬೀಸಿದ್ದಾರೆ. ರಮ್ಯಾ ದೂರಿನನ್ವಯ ಸಿಸಿಬಿಯವರು ಹಲವರನ್ನ ಗುರುತಿಸಿದ್ದಾರೆ. ಕೆಲವರ ಸ್ಪಷ್ಟ ಮಾಹಿತಿ ಸಿಕ್ಕಿದೆ, ಇಬ್ಬರನ್ನ ಅರೆಸ್ಟ್ ಮಾಡಿದ್ದೇವೆ. ಇನ್ನೂ ಹನ್ನೊಂದು ಜನರ ಮಾಹಿತಿ ಸಿಕ್ಕಿದ್ದು ತನಿಖೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದ ಕಾಮೆಂಟ್ಗಳನ್ನೂ ವೆರಿಫೈ ಮಾಡಿದ್ದೇವೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.