ರಾಜ್ಯ ಸರ್ಕಾರವು EV ತೆರಿಗೆ ವಿನಾಯಿತಿ ಹಿಂಪಡೆದಿರುವುದು ಆರ್ಥಿಕ ದಿವಾಳಿತನದ ಸೂಚಕ: ಪ್ರಲ್ಹಾದ್ ಜೋಶಿ ಟೀಕೆ
Pralhad Joshi: ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಜಗತ್ತೇ ಗ್ಯಾಸ್, ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ತತ್ತರಿಸುತ್ತಿದೆ. ಭಾರತ ಪೆಟ್ರೋಲಿಯಂ ಉತ್ಪನ್ನಗಳ ಆಮದು ತಗ್ಗಿಸಲು ನವೀಕರಿಸಬಹುದಾದ ಇಂಧನ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ, ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರದ ಇಂಥ ಸ್ವಾವಲಂಬಿ ಯೋಜನೆಗಳನ್ನು ಹಾಳುಗೆಡವುವ ಕೆಲಸ ಮಾಡುತ್ತಿದೆ ಎಂದು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ. -
ನವದೆಹಲಿ, ಏ.3: ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾದ ಪರಿಣಾಮ ಸಿಕ್ಕ ಸಿಕ್ಕಲ್ಲಿ ಹಣ ಹೊಂದಿಸಲು ಕೈ ಹಾಕುತ್ತಿದೆ. ಧನ ದಾಹದಿಂದ ಆತ್ಮನಿರ್ಭರ ಭಾರತಕ್ಕೆ ಕೊಡಲಿ ಪೆಟ್ಟು ಕೊಡುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ಹಣ ಕ್ರೋಢೀಕರಣ ದಾಹ ಇದೀಗ ಎಲೆಕ್ಟ್ರಿಕ್ ವಾಹನಗಳನ್ನೂ ಬಿಟ್ಟಿಲ್ಲ. ಇದು ಸ್ವಾವಲಂಬಿ ಭಾರತದ ಕಾರ್ಯಾನುಷ್ಠಾನಕ್ಕೆ ತೊಡಕಾಗಿದೆ ಎಂದು ಗುಡುಗಿದರು.
ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಜಗತ್ತೇ ಗ್ಯಾಸ್, ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ತತ್ತರಿಸುತ್ತಿದೆ. ಭಾರತ ಪೆಟ್ರೋಲಿಯಂ ಉತ್ಪನ್ನಗಳ ಆಮದು ತಗ್ಗಿಸಲು ನವೀಕರಿಸಬಹುದಾದ ಇಂಧನ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ, ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರದ ಇಂಥ ಸ್ವಾವಲಂಬಿ ಯೋಜನೆಗಳನ್ನು ಹಾಳುಗೆಡವುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯಿತಿ ಹಿಂಪಡೆದು ಪರಿಸರ ಸ್ನೇಹಿ ವಾಹನಗಳನ್ನು ದೂರವಿಡುತ್ತಿದೆ. ಜನತೆ ಮತ್ತೆ ಪೆಟ್ರೋಲ್, ಡಿಸೇಲ್ ವಾಹನಗಳತ್ತ ಹಿಂತಿರುಗಲು ದಾರಿ ಮಾಡಿ ಕೊಟ್ಟಂತಾಗಿದೆ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ಜೋಶಿ ತಿವಿದರು.
ಮೂರೂವರೆ ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದಂತಹ ರಾಜ್ಯ ಸರ್ಕಾರ ಇದೀಗ ಕೇವಲ ₹250 ಕೋಟಿ ಆದಾಯ ಸಂಗ್ರಹಕ್ಕಾಗಿ EV ವಾಹನಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದಿದೆ. ಇಷ್ಟು ಸಣ್ಣ ಸಣ್ಣ ಮೊತ್ತ ಕ್ರೋಡೀಕರಣಕ್ಕೂ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ ಎಂದರೆ ರಾಜ್ಯ ಸರ್ಕಾರ ಅದೆಷ್ಟರ ಮಟ್ಟಿಗೆ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದರು. EV ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ಹಾಕುವ ಮೂಲಕ ಸರ್ಕಾರ ಹಣ ಸಂಪಾದನೆ ದಾರಿ ಮಾಡಿಕೊಂಡಿದೆ. ಆರ್ಥಿಕ ದಿವಾಳಿತನ ತಪ್ಪಿಸಿಕೊಳ್ಳಲು ಸಿಕ್ಕ ಸಿಕ್ಕಲ್ಲಿ ಹೆಚ್ಚಿನ ವ್ಯಾಟ್ ಸಂಗ್ರಹಕ್ಕೆ ಮುಂದಾಗಿದೆ ಎಂದು ಅವರು ಟೀಕಿಸಿದರು.
ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚು ತೆರಿಗೆ ಅಂದರೆ, ರಾಜ್ಯದ ಪಾಲಿನ ಕಮರ್ಷಿಯಲ್ ಟ್ಯಾಕ್ಸ್ ವಿಧಿಸಲು ಅವಕಾಶವಿದ್ದು, ಇದರಿಂದ ಆದಾಯ ಹೆಚ್ಚುತ್ತದೆಂಬ ಏಕ ಆಲೋಚನೆಯಲ್ಲಿ ಕರ್ನಾಟಕ ಸರ್ಕಾರ ಈ ರೀತಿ ವರ್ತಿಸುತ್ತಿದೆ. ಭಾರತ 2030ರ ವೇಳೆಗೆ ಶೇ.50ರಷ್ಟು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ಗುರಿ ಹೊಂದಿದ್ದರೆ, ರಾಜ್ಯ ಸರ್ಕಾರ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಹರಿಹಾಯ್ದರು.
ಲೈಫ್ಟೈಮ್ ರಸ್ತೆ ತೆರಿಗೆ ವಿಧಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ
ಭಾರತ ಇಂದು ಶುದ್ಧ ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಸಾಗುತ್ತಿದ್ದು, ಜಗತ್ತೇ ನಮ್ಮ ದೇಶವನ್ನು ಅನುಸರಿಸುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ, ದೇಶದ ಸುಸ್ಥಿರ ಭವಿಷ್ಯದ ಆಶಯಗಳಿಗೆ ತಣ್ಣೀರೆರಚುತ್ತಿದೆ. ಕಚ್ಚಾ ತೈಲ ಬೆಲೆ ಆಕಾಶಕ್ಕೇರಿದ ಪ್ರಸ್ತುತ ಸಂದರ್ಭದಲ್ಲಿ ಇವಿ ವಾಹನಗಳು ಜನಸಾಮಾನ್ಯರ ಕೈಗೆಟುಕದಂತೆ ದುಬಾರಿ ಮಾಡುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.