Duniya Vijay: ನಟ ದುನಿಯಾ ವಿಜಯ್ ಅಸಮಾಧಾನದ ಬಗ್ಗೆ ಸೈಮಾ ಸಂಸ್ಥಾಪಕ ಹೇಳಿದ್ದೇನು?
ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ (SIIMA) ಪ್ರಶಸ್ತಿ ಪ್ರದಾನ ಸಮಾರಂಭವು ಈ ಬಾರಿ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸೈಮಾ 2025 ಕಾರ್ಯಕ್ರಮದಲ್ಲಿ ಕನ್ನಡ ತಾರೆಯರನ್ನು ಕಡೆಗಣಿಸಲಾಗಿದೆ ಎಂದು ನಟ ದುನಿಯಾ ವಿಜಯ್ ವೇದಿಕೆ ಮೇಲೆಯೇ ಸೈಮಾ ಆಯೋಜಕರ ವಿರುದ್ದ ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು. ಈ ವಿಡಿಯೊ ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಸೈಮಾ ಸಂಸ್ಥಾಪಕರು ನಟ ದುನಿಯಾ ವಿಜಯ್ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Duniya Vijay -

ಬೆಂಗಳೂರು: ಸಿನಿಮಾ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪ್ರತೀ ವರ್ಷವು ನೀಡಲಾಗುತ್ತದೆ. ಅಂತಹ ಪುರಸ್ಕಾರಗಳಲ್ಲಿ ಸೈಮಾ ಕೂಡ ಒಂದು. ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ (SIIMA) ಪ್ರಶಸ್ತಿ ಪ್ರದಾನ ಸಮಾರಂಭವು ಈ ಬಾರಿ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. 2024ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ, ತಾರೆಯರಿಗೆ ಹಾಗೂ ತಂತ್ರ ಜ್ಞರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸೈಮಾ 2025 ಕಾರ್ಯಕ್ರಮದಲ್ಲಿ ಕನ್ನಡ ತಾರೆಯರನನು ಕಡೆಗಣಿಸಲಾಗಿದೆ ಎಂದು ನಟ ದುನಿಯಾ ವಿಜಯ್ (Duniya Vijay) ವೇದಿಕೆ ಮೇಲೆಯೇ ಸೈಮಾ ಆಯೋಜಕರ ವಿರುದ್ದ ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಸೈಮಾ ಸಂಸ್ಥಾಪಕರು ನಟ ದುನಿಯಾ ವಿಜಯ್ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಟ ದುನಿಯಾ ವಿಜಯ್ ಸೈಮಾ ಪ್ರಶಸ್ತಿ ವಿಚಾರವಾಗಿ ಬಹಿರಂಗವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 5 ಹಾಗೂ 6ರಂದು ದುಬೈಯಲ್ಲಿ ಸೈಮಾ ಅವಾರ್ಡ್ಸ್ 2025 ಸಮಾರಂಭ ನಿನಡೆಯಿತು. ಸೆಪ್ಟೆಂಬರ್ 5ರಂದು ತೆಲುಗು ಹಾಗೂ ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಮೊದಲು ತೆಲುಗು ಸಿನಿಮಾ ತಾರೆಯರಿಗೆ ವಿತರಿಸಲಾಯಿತು. ಅದು ಮುಗಿಯುವಾಗಲೇ ತುಂಬಾ ತಡವಾಗಿತ್ತು. ಹೀಗಾಗಿ ಎಷ್ಟೋ ಸೆಲೆಬ್ರಿಟಿಗಳು ಸಮಾರಂಭದಿಂದ ಅರ್ಧಕ್ಕೆ ನಿರ್ಗಮಿಸಿದ್ದರು. ಬಹುತೇಕ ಸಭಾಂಗಣ ಖಾಲಿಯಾದ ಮೇಲೆ ಕನ್ನಡ ತಾರೆಯರಿಗೆ ಪ್ರಶಸ್ತಿ ವಿತರಿಸಿದ್ದರ ಬಗ್ಗೆ ನಟ ದುನಿಯಾ ವಿಜಯ್ ಅಸಮಧಾನಗೊಂಡಿದ್ದಾರೆ.
ʼʼಯಾರೂ ಇಲ್ಲದೆ ಇದ್ದಾಗ ವೇದಿಕೆಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೋದು ಎಷ್ಟರ ಮಟ್ಟಿಗೆ ಸರಿ? ನಮ್ಮ ಭಾಷೆಯೂ ಕೂಡ ಉತ್ತಮ ಸ್ಥಾನದಲ್ಲಿದೆ. ಅದನ್ನು ಯಾರು ಕೆಳಗಿಳಿಸುವ ಪ್ರಯತ್ನ ಮಾಡಬೇಡಿ. ಕನ್ನಡದಲ್ಲಿಯೂ ಯುವ ಕಲಾವಿದರು ಇದ್ದಾರೆ ಅವರನ್ನು ಗುರುತಿಸಿ ಪ್ರೋತ್ಸಾಹಿಸಿ, ಇದು ಹೀಗೆ ಮುಂದುವರಿದರೆ ಮುಂದಿನ ಸೈಮಾಗೆ ನಾವ್ಯಾರೂ ಬರುವುದಿಲ್ಲʼʼ ಅಂತ ದುನಿಯಾ ವಿಜಯ್ ವೇದಿಕೆ ಮೇಲೆಯೇ ಆಕ್ರೋಶ ಹೊರಹಾಕಿದ್ದರು. ಇದೀಗ ಸೈಮಾ ಸಂಸ್ಥಾಪಕ ವಿಷ್ಣುವರ್ಧನ್ ಇಂದೂರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ʼʼಸೈಮಾ ಪ್ರಶಸ್ತಿ ಬಗ್ಗೆ ನಟರೊಬ್ಬರು ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿದೆ. ಆದರೆ ಅವರು ಹೇಳುವಂತೆ ಕನ್ನಡ ಸಿನಿಮಾ ರಂಗವನ್ನು ನಾವು ಎಂದಿಗೂ ಕೆಟ್ಟದಾಗಿ ನಡೆಸಿಕೊಂಡಿಲ್ಲ. ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳ ಬಗ್ಗೆ ನಮಗೆ ಅಪಾರ ಗೌರವ ಇದೆ. ಕಳೆದ 13ವರ್ಷದಿಂದಲೂ ಅವರನ್ನು ಸಮಾನವಾಗಿ ನಡೆಸಿಕೊಂಡಿದ್ದೇವೆ. ಅಪಾರ ಸವಾಲುಗಳ ಹೊರತಾಗಿಯೂ, ನಾಲ್ಕು ದಕ್ಷಿಣ ಭಾರತದ ಭಾಷೆಗಳನ್ನು ಸಮಾನವಾಗಿ ಗೌರವಿಸುತ್ತ ಅವರ ಸಿನಿಮಾವನ್ನು ಪ್ರೋತ್ಸಾಹಿಸುವ ದೊಡ್ಡ ವೇದಿಕೆಯೊಂದು ಇದ್ದರೆ ಅದುವೆ ಸೈಮಾʼʼ ಎಂದಿದ್ದಾರೆ.
ಮುಂದುವರಿದು, ʼʼಸೈಮಾದಲ್ಲಿ ಮೊಟ್ಟಮೊದಲ ಜೀವಮಾನ ಸಾಧನೆ ಪ್ರಶಸ್ತಿಯನ್ನು ಕೂಡ ಕನ್ಡಡದ ಹೆಮ್ಮೆಯ ನಟ ಅಂಬ ರೀಷ್ ಅವರಿಗೆ ನೀಡಲಾಯಿತು. ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸೂಚಿಸಲು, ಅವರ ನಿಧನದ ನಂತರ ನಾವು ಬೆಂಗಳೂರಿನಲ್ಲಿ ಸೈಮಾ ಆಯೋಜಿಸಿದ್ದೆವು. ಅಂತೆಯೇ ರಾಕಿಂಗ್ ಸ್ಟಾರ್ ಯಶ್ ಅವರ ʼಕೆಜಿಎಫ್ʼ ಸಿನಿಮಾವನ್ನು ಕೂಡ ಭರ್ಜರಿಯಾಗಿ ಪ್ರಚಾರ ಮಾಡಿದ್ದೇವೆ. ಶಿವಣ್ಣ ಅವರ 50 ವರ್ಷಗಳ ಸಂಭ್ರಮವನ್ನು ಕೂಡ ಸೈಮಾ ವತಿಯಿಂದ ಆಚರಿಸಿ ಅದು ದೊಡ್ಡ ಮಟ್ಟಿನ ಕಾರ್ಯಕ್ರಮವಾಗಿ ಪ್ರಸಾರವಾಯ್ತು. ಸುದೀಪ್ ಅವರಿಗೆ ಸೈಮಾದಲ್ಲಿ ಅನೇಕ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. ಉಪೇಂದ್ರ ಕೂಡ ನಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದರೆ. ಹೀಗಾಗಿ ನಾವು ಸೈಮಾದಲ್ಲಿ ಯಾರನ್ನು ಕಡೆಗಣಿಸಿಲ್ಲʼʼ ಎಂದು ವಿಷ್ಣುವರ್ಧನ್ ಇಂದೂರಿ ತಿಳಿಸಿದ್ದಾರೆ.
ʼʼದುನಿಯಾ ವಿಜಯ್ ಅವರ ಹೇಳಿಕೆಯನ್ನು ಯಾವುದೇ ಕಡಿತಗಳಿಲ್ಲದೆ ಸಂಪೂರ್ಣವಾಗಿ ಪ್ರಸಾರ ಮಾಡುವಂತೆ ವಿನಂತಿಸಿದ್ದೇನೆ. ಅವರ ಅಭಿಪ್ರಾಯ ಅವರು ತಿಳಿಸಿದ್ದಾರೆ. ಈ ಬಗ್ಗೆ ನಮ್ಮ ಸ್ಪಷ್ಟನೆ ನಾವು ಈಗ ತಿಳಿಸಿದ್ದೇವೆ. ಸೈಮಾ ದಕ್ಷಿಣ ಭಾರತದ 4 ಉದ್ಯಮಗಳನ್ನು ಒಟ್ಟಿಗೆ ಬೆಸೆಯುವ ಒಂದು ಕುಟುಂಬವಿದ್ದಂತೆ. ಪ್ರತಿ ವರ್ಷ ಇಂತಹ ಕಾರ್ಯಕ್ರಮ ಮಾಡಿದಾಗ ಸಿನಿಮಾ ರಂಗದವರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆʼʼ ಎಂದು ಹೇಳಿದ್ದಾರೆ.