ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Bhagwat: ಸ್ವದೇಶಿ-ಸ್ವಾವಲಂಬನೆಗೆ ಪರ್ಯಾಯವಿಲ್ಲ- ಮೋಹನ್ ಭಾಗವತ್

RSS Chief Mohan Bhagwat Speech: ಆಮದಿನ ಮೇಲಿನ ಅವಲಂಬನೆಯು ಕಡ್ಡಾಯವಾಗಬಾರದು. ಸ್ವದೇಶಿ ಅಥವಾ ಸ್ಥಳೀಯ ಉತ್ಪಾದನೆಗೆ ಪರ್ಯಾಯವಿಲ್ಲ ಎಂದು ಅಮೆರಿಕದ ಸುಂಕ ನೀತಿಯ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದರು. ಜಗತ್ತು ಪರಸ್ಪರ ಅವಲಂಬಿತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ಸ್ವದೇಶಿ ಮತ್ತು ಸ್ವಾವಲಂಬನೆ ಅಭಿವೃದ್ಧಿಯ ಜೀವಾಳ: ಮೋಹನ್ ಭಾಗವತ್

-

Priyanka P Priyanka P Oct 2, 2025 2:46 PM

ನಾಗ್ಪುರ: ಆರ್‌ಎಸ್ಎಸ್ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವಿಜಯದಶಮಿಯಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್(RSS Chief Mohan Bhagwat) ಅವರು ನಾಗ್ಪುರದಲ್ಲಿ ಹಿಂದೂಗಳನ್ನುದ್ದೇಶಿಸಿ ಭಾಷಣ ಮಾಡಿದರು. ಅಮೆರಿಕದ ಸುಂಕ ನೀತಿಯ ಬಗ್ಗೆ ಮಾತನಾಡಿದ ಅವರು, ಆಮದಿನ ಮೇಲಿನ ಅವಲಂಬನೆಯು ಕಡ್ಡಾಯವಾಗಬಾರದು. ಸ್ವದೇಶಿ ಅಥವಾ ಸ್ಥಳೀಯ ಉತ್ಪಾದನೆಗೆ ಪರ್ಯಾಯವಿಲ್ಲ ಎಂದು ಹೇಳಿದರು.

ಅಮೆರಿಕ ಜಾರಿಗೆ ತಂದ ಹೊಸ ಸುಂಕ ನೀತಿಯನ್ನು ಅವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಆದರೆ, ಪ್ರತಿಯೊಬ್ಬರೂ ಅವರಿಂದ ಪ್ರಭಾವಿತರಾಗಿದ್ದಾರೆ. ಜಗತ್ತು ಪರಸ್ಪರ ಅವಲಂಬಿತವಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ದೇಶವು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲ. ನಾವು ಸ್ವದೇಶಿಯನ್ನು ಅವಲಂಬಿಸಿ ಸ್ವಾವಲಂಬನೆಯ ಮೇಲೆ ಗಮನಹರಿಸಬೇಕು. ಜೊತೆಗೆ ನಮ್ಮೆಲ್ಲಾ ಸ್ನೇಹಪರ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದು ಅವರು ಹೇಳಿದರು.

ರಾಷ್ಟ್ರವ್ಯಾಪಿ ಚಳುವಳಿಯಿಂದ ಆಡಳಿತ ಬದಲಾವಣೆಗೆ ಕಾರಣವಾದ ನೇಪಾಳದಲ್ಲಿನ ಇತ್ತೀಚಿನ ಅಶಾಂತಿಯ ಬಗ್ಗೆಯೂ ಭಾಗವತ್ ಪ್ರಸ್ತಾಪಿಸಿದರು. ನೇಪಾಳದಲ್ಲಿ ನಡೆದ ಜೆನ್-ಝಡ್ ಪ್ರತಿಭಟನೆಯನ್ನು ಉಲ್ಲೇಖಿಸಿ, ನೆರೆಹೊರೆಯಲ್ಲಿ ಉಂಟಾಗಿರುವ ಅಶಾಂತಿ ಉತ್ತಮ ಸಂಕೇತವಲ್ಲ ಎಂದು ಅವರು ಹೇಳಿದರು. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಇತ್ತೀಚೆಗೆ ನೇಪಾಳದಲ್ಲಿ ಆಡಳಿತ ಬದಲಾವಣೆಯು ನಮಗೆ ಕಳವಳಕಾರಿಯಾಗಿದೆ. ಭಾರತದಲ್ಲಿ ಇಂತಹ ಅಶಾಂತಿಯನ್ನು ಸೃಷ್ಟಿಸಲು ಬಯಸುವ ಶಕ್ತಿಗಳು ನಮ್ಮ ದೇಶದ ಒಳಗೆ ಮತ್ತು ಹೊರಗೆ ಸಕ್ರಿಯವಾಗಿವೆ ಎಂದು ಅವರು ಹೇಳಿದರು.

ವಿಡಿಯೊ ವೀಕ್ಷಿಸಿ:



ಪ್ರಜಾಪ್ರಭುತ್ವ ಚಳುವಳಿಗಳು ಬದಲಾವಣೆಯನ್ನು ತರುತ್ತವೆ. ಆದರೆ ಈ ಬದಲಾವಣೆಗಳನ್ನು ಹಿಂಸಾತ್ಮಕ ದಂಗೆಗಳು ತರುವುದಿಲ್ಲ. ಅವು ಕ್ರಾಂತಿಯನ್ನು ಉಂಟುಮಾಡುತ್ತವೆ. ಆದರೆ, ಯಥಾಸ್ಥಿತಿ ಮಾತ್ರ ಹಾಗೆಯೇ ಉಳಿಯುತ್ತದೆ. ಇತಿಹಾಸವನ್ನು ಒಮ್ಮೆ ಪರಿಶೀಲಿಸಿ ನೋಡಿ. ಯಾವುದೇ ಕ್ರಾಂತಿಯು ತನ್ನ ಉದ್ದೇಶವನ್ನು ಪೂರೈಸಿಲ್ಲ. ಫ್ರಾನ್ಸ್ ತನ್ನ ರಾಜನ ವಿರುದ್ಧ ದಂಗೆ ಎದ್ದಿತು, ನೆಪೋಲಿಯನ್ ಚಕ್ರವರ್ತಿಯಾಗಿ ಅಧಿಕಾರಕ್ಕೇರಿದನು. ಎಷ್ಟೋ ಸಮಾಜವಾದಿ ಚಳುವಳಿಗಳು ನಡೆದವು. ಈ ಎಲ್ಲಾ ಸಮಾಜವಾದಿ ದೇಶಗಳು ಈಗ ಬಂಡವಾಳಶಾಹಿಯಾಗಿವೆ. ಅರಾಜಕತೆ ಉಂಟಾದರೆ ವಿದೇಶಿ ಶಕ್ತಿಗಳು ತಮ್ಮ ಆಟಗಳನ್ನು ಆಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ವೈವಿಧ್ಯತೆಯು ಭಾರತದ ಸಂಪ್ರದಾಯವಾಗಿದೆ. ಭಿನ್ನಾಭಿಪ್ರಾಯಗಳನ್ನು ಕಾನೂನಿನೊಳಗೆ ವ್ಯಕ್ತಪಡಿಸಬೇಕು. ಸಮುದಾಯಗಳನ್ನು ಕೆರಳಿಸುವುದು ಸ್ವೀಕಾರಾರ್ಹವಲ್ಲ. ಆಡಳಿತವು ನ್ಯಾಯಯುತವಾಗಿ ವರ್ತಿಸಬೇಕು. ಯುವಕರು ಸಹ ಬಹಳ ಜಾಗರೂಕರಾಗಿರಬೇಕು. ಅಗತ್ಯವಿದ್ದರೆ ಮಾತ್ರ ಮಧ್ಯಪ್ರವೇಶಿಸಬೇಕು. ನಾವು vs ಅವರು ಎಂಬ ಮನಸ್ಥಿತಿಯು ಸ್ವೀಕಾರಾರ್ಹವಲ್ಲ ಅಥವಾ ಒಪ್ಪತಕ್ಕದಲ್ಲ ಎಂದು ಹೇಳಿದರು.

ಇನ್ನು ಪಹಲ್ಗಾಮ್ ದಾಳಿಯ ಬಗ್ಗೆ ಮಾತನಾಡಿದ ಅವರು, ಧರ್ಮವನ್ನು ಕೇಳಿ 26 ಮಂದಿ ಅಮಾಯಕರನ್ನು ಕೊಂದಿರುವುದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ನಂತರ ಭಾರತ ಸರ್ಕಾರವು ತಕ್ಕ ಪ್ರತ್ಯುತ್ತರ ನೀಡಿತು. ದೇಶದ ಬಲವಾದ ನಾಯಕತ್ವ ಮತ್ತು ವೀರ ಯೋಧರ ಶೌರ್ಯದಿಂದಾಗಿ ಎದುರಾಳಿಗಳಿದೆ ದಿಟ್ಟ ಉತ್ತರ ನೀಡಿದೆ. ಈ ಅವಧಿಯಲ್ಲಿ ಸಮಾಜದ ಶಕ್ತಿ ಮತ್ತು ಏಕತೆಯನ್ನು ಸಹ ನಾವು ನೋಡಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Gruhalakshmi scheme: ಗೃಹಲಕ್ಷ್ಮಿ ಹಣದಲ್ಲಿ ಆಯುಧ ಪೂಜೆ ದಿನದಂದು ವಾಷಿಂಗ್ ಮಷಿನ್ ಖರೀದಿಸಿದ ಮಹಿಳೆ; ಸಿಎಂ ಸಂತಸ