ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದ ಪ್ರಲ್ಹಾದ್‌ ಜೋಶಿ

Pralhad Joshi: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರಂತರ ಸುಳ್ಳುಗಳು ಮತ್ತು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣವನ್ನು ತೀಕ್ಷ್ಣವಾಗಿ ವಿರೋಧಿಸುತ್ತೇವೆ. ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಧರ್ಮಾಧಾರಿತ ಮೀಸಲಾತಿ ನೀಡುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸಾಮರಸ್ಯ ಮುರಿಯಲು ಶ್ರಮಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಪ್ರಲ್ಹಾದ್‌ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

Profile Siddalinga Swamy Jun 21, 2025 10:14 PM

ಬಾಗಲಕೋಟೆ: ‘ಅಲ್ಪಸಂಖ್ಯಾತರು ಸಂಪನ್ಮೂಲಗಳ ಮೊದಲ ಹಕ್ಕು ಹೊಂದಿದ್ದಾರೆ’ ಎಂದಿದ್ದೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಇದನ್ನು ಯಾರೂ ಮರೆತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿರುಗೇಟು ನೀಡಿದರು. ಪಟ್ಟದಕಲ್‌ನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ವಸತಿ ಯೋಜನೆಯಲ್ಲಿ ʼಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲಾತಿʼ ಕೇಂದ್ರದ ಮಾರ್ಗಸೂಚಿಯಲ್ಲೇ ಇತ್ತು ಎಂದಿರುವ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರೆಂದು ಹರಿಹಾಯ್ದಿದ್ದಾರೆ.

2006ರಲ್ಲಿ ಯುಪಿಎ ಸರ್ಕಾರದ ಆಡಳಿತದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಇದರಡಿಯ PMAY ನಲ್ಲಿ ಶೇ.15ರಷ್ಟು ಮೀಸಲಾತಿ ಪದ್ಧತಿ ಇರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಗಳಿಗಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರಂತರ ಸುಳ್ಳುಗಳು ಮತ್ತು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣವನ್ನು ತೀಕ್ಷ್ಣವಾಗಿ ವಿರೋಧಿಸುತ್ತೇವೆ ಎಂದರಲ್ಲದೆ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಧರ್ಮಾಧಾರಿತ ಮೀಸಲಾತಿ ನೀಡುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸಾಮರಸ್ಯ ಮುರಿಯಲು ಶ್ರಮಿಸುತ್ತಿದೆ ಎಂದು ಖಂಡಿಸಿದರು.

ಎನ್‌ಡಿಎ ಧರ್ಮಾಧಾರಿತ ಮೀಸಲಾತಿ ನೀಡಿಲ್ಲ

ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ ಎನ್‌ಡಿಎ ಸರ್ಕಾರ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸುತ್ತಿದೆಯೇ ಹೊರತು ಧರ್ಮಾಧಾರಿತ ಮೀಸಲಾತಿ ನೀಡಿಲ್ಲ. 2019ರಲ್ಲಿ ಯಾವುದೇ ರೀತಿಯ ಧರ್ಮಾಧಾರಿತ ಮಾರ್ಗಸೂಚಿಗಳನ್ನು ಎನ್‌ಡಿಎ ಸರ್ಕಾರ ಹೊರಡಿಸಿಲ್ಲ ಎಂದು ಸಚಿವ ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದರು.

ಗೈಡ್‌ಲೈನ್‌ಗೂ ಮುನ್ನ ಗೊಂದಲ ಸೃಷ್ಟಿಸುತ್ತಿದ್ದಾರೆ

ಕೇಂದ್ರ ಸರ್ಕಾರ ಜಾತಿ ಸಮೀಕ್ಷೆಗೆ ಓಬಿಸಿ ಆಯೋಗಕ್ಕೆ ಮಾನ್ಯತೆ ಕೊಟ್ಟಿದೆ. ಆದರೆ, ಜಾತಿ ಸಮೀಕ್ಷೆ ಸಂಬಂಧ ಇನ್ನೂ ಮಾರ್ಗಸೂಚಿ ಹೊರಡಿಸಿಲ್ಲ, ಮಾರ್ಗಸೂಚಿಯಲ್ಲಿ ಏನಿರಲಿದೆ? ಎಂಬುದನ್ನು ನೋಡುವಷ್ಟು ವ್ಯವಧಾನ ಸಹ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕಿಲ್ಲ ಎಂದರು. ಕೇಂದ್ರ ಸರ್ಕಾರ ಸಂಪೂರ್ಣವಾದಂತಹ ಜಾತಿ ಸಮೀಕ್ಷೆ ಮಾಡುತ್ತದೆ ಎಂದಿದ್ದರೂ ರಾಜ್ಯ ಕಾಂಗ್ರೆಸ್‌ ಸರ್ಕಾರ ನಮ್ಮದು ಬೇರೆ, ಅವರದ್ದು ಬೇರೆ ಎನ್ನುತ್ತಿದೆ. ಹಾಗಾದರೆ ಇಷ್ಟು ದಿನ ಏನು ಮಾಡುತ್ತಿದ್ದರು? ಕೇಂದ್ರದಿಂದ ಜಾತಿ ಸಮೀಕ್ಷೆ ಗೈಡಲೈನ್‌ ಬರುವ ಮುನ್ನವೇ ಇವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜಾತಿ ಗಣತಿ ಅಲ್ಲ, ಸಮೀಕ್ಷೆಯಿದು

ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆಸುತ್ತಿರುವುದು ಜಾತಿ ಜನಗಣತಿ ಅಲ್ಲ, ಅದು ಜಾತಿ ಸಮೀಕ್ಷೆ. 2004ರಲ್ಲೇ ಜಾತಿ ಮರು ಸಮೀಕ್ಷೆ ನಡೆಸುವುದಾಗಿ ಹೇಳಿ ಬಜೆಟ್‌ ಅಲ್ಲಿ ₹30 ಕೋಟಿ ಮೀಸಲಿಟ್ಟಿದ್ದರು. ಆಗ 2 ವರ್ಷ ಆಡಳಿತದಲ್ಲಿದ್ದು ಏನೂ ಮಾಡಲಿಲ್ಲ. 2013ರಿಂದ ಸಂಪೂರ್ಣ 5 ವರ್ಷ ಆಡಳಿತದಲ್ಲಿದ್ದರೂ ಏನೂ ಮಾಡಲಿಲ್ಲ. ಮೀಸಲಿಟ್ಟ ಮೊತ್ತ ಕರಗಿಸಿದರಷ್ಟೇ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ನಾಗಮೋಹನದಾಸ್‌ ಆಯೋಗ ರಚಿಸಿದರು. 2016ರಲ್ಲಿ ಅದರ ವರದಿ ಸ್ವೀಕರಿಸಲಿಲ್ಲ. 2018-19ರಲ್ಲಿ ಅವರದ್ದೇ ಸಮ್ಮಿಶ್ರ ಸರ್ಕಾರ ಇದ್ದರೂ ಜಾತಿ ಸಮೀಕ್ಷೆ ಪ್ರಯತ್ನ ಮಾಡಲಿಲ್ಲ. ಈಗ 2023-2025ರಲ್ಲಿ ಅಧಿಕಾರಕ್ಕೆ ಬಂದರೂ ಇನ್ನೂ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

165 ಕೋಟಿ ನುಂಗಿದ ಸರ್ಕಾರ

ನಾಗಮೋಹನದಾಸ್‌ ವರದಿ ಸರಿ ಇರದೇ ಇದ್ದಿದ್ದರೆ ಹತ್ತಾರು ಬಾರಿ ಕ್ಯಾಬಿನೆಟ್‌ ಅಲ್ಲಿ ಏಕಿಟ್ಟಿರಿ? ಈ ವರದಿ ಜಾರಿಗೊಳಿಸಿಯೇ ಸಿದ್ಧ ಎಂದು ಉದ್ದುದ್ದ ಭಾಷಣ ಬಿಗಿದು ಎದೆ ತಟ್ಟಿ, ಮೇಜು ಕುಟ್ಟಿ ಹೇಳಿದ್ದೀರಿ?. ಆದರೆ, ಮಾಡಿದ್ದೇನು? ಎಂದು ಪ್ರಶ್ನಿಸಿದ ಸಚಿವರು, ತಮ್ಮ ಸರ್ಕಾರ ಇದಕ್ಕಾಗಿ ಮೀಸಲಿಟ್ಟ ₹165 ಕೋಟಿ ನುಂಗಿ ನೀರು ಕುಡಿದಿದೆ ಅಷ್ಟೇ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್‌ 21 ವರ್ಷ ಮಾಡಿದ್ದೇನು?

ಹಿಂದುಳಿದ ವರ್ಗದವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಬದ್ಧತೆಯಿಲ್ಲ. ಸಾಮಾಜಿಕ ನ್ಯಾಯ, ಸಮಾನತೆ ಎನ್ನುತ್ತಾರಷ್ಟೇ. ಎಸ್ಸಿ-ಎಸ್ಟಿ, ಒಬಿಸಿ ಮತ್ತು ಮೇಲ್ವರ್ಗದಲ್ಲಿರುವ ಬಡವರ ಬಗ್ಗೆ ನೈಜ ಕಾಳಜಿಯಿಲ್ಲ. ಇದ್ದಿದ್ದರೆ ಕಾಂಗ್ರೆಸ್‌ 21 ವರ್ಷ ಏನು ಮಾಡಿತು? ಎಂದು ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು.

ಕಾಂಗ್ರೆಸ್‌ ಮೀಸಲಾತಿ ವಿರೋಧಿಸಿದ್ದು ಸುಳ್ಳೇ?

ಡಾ. ಅಂಬೇಡ್ಕರ್‌ ಅವರು ಮೀಸಲಾತಿ ಕಲ್ಪಿಸಿದ ಬಗ್ಗೆ ಸಂಸತ್‌ನಲ್ಲಿ ನೆಹರು ವಿರೋಧಿಸಿದ್ದು, ತಿರಸ್ಕರಿಸಿದ್ದು ಸುಳ್ಳೇ? ರಾಜೀವ ಗಾಂಧಿ ಅವರು ಮೀಸಲಾತಿ ವಿರೋಧಿಸಿ ಭಾಷಣ ಮಾಡಿದ್ದು ಸುಳ್ಳೇ? ಮಂಡಲ ಆಯೋಗಕ್ಕೆ ವಿರೋಧ ಮಾಡಿದ್ದು ಸುಳ್ಳೇ? ಸಿದ್ದರಾಮಯ್ಯ ಅವರು ಮೊದಲು ಇದಕ್ಕೆ ಉತ್ತರಿಸಲಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಸವಾಲು ಹಾಕಿದರು.

ಈ ಸುದ್ದಿಯನ್ನೂ ಓದಿ | Karnataka Rains:‌ ನಾಳೆ ದಕ್ಷಿಣ ಕನ್ನಡ, ಉಡುಪಿ ಸೇರಿ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಭಾರಿ ಮಳೆ ನಿರೀಕ್ಷೆ

ವೋಟ್‌ ಬ್ಯಾಂಕ್‌ ಆಗಿ ನೋಡುತ್ತಿದ್ದಾರೆ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಸಾಮಾಜಿಕ ಬದ್ಧತೆಯಿಲ್ಲ. ಹಿಂದುಳಿದವರ ಕಲ್ಯಾಣ ಮಾಡುವ ಯಾವ ಭಾವನೆ, ಮಾನಸಿಕತೆ ಇಲ್ಲವಾಗಿದೆ. ಈಗ ಬರೀ ಸುಳ್ಳು ಹೇಳುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ, ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಸಮಾಜದ ಕಡುಬಡವರನ್ನು ವಂಚಿಸುವುದೇ ಕಾಂಗ್ರೆಸ್‌ನ ಡಿಎನ್‌ಎ. ಎಸ್ಸಿಎಸ್ಟಿ, ಓಬಿಸಿ ಮತ್ತು ಮುಸ್ಲಿಂರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ವೋಟ್‌ ಬ್ಯಾಂಕ್‌ ಆಗಿ ನೋಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಇವರನ್ನೆಲ್ಲ ಒಗ್ಗೂಡಿಸಿ ಅಧಿಕಾರಕ್ಕೆ ಬರುವುದಷ್ಟೇ ಇವರ ಗುರಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.