4 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ, ಕೊಲೆ: ಎನ್ಕೌಂಟರ್ ಮೂಲಕ ಪಾಪಿಯನ್ನು ಹೊಡೆದುರುಳಿಸಿದ ಖಾಕಿ ಪಡೆ
Crime News: 4 ವರ್ಷದ ಬಾಲಕಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಯನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಅಪರಾಧಿಯನ್ನು ಪೊಲೀಸರು ಕರೆದೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪೊಲೀಸರ ಮೇಲೆ ದಾಳಿ ಮಾಡಿದ ಅಪರಾಧಿಯನ್ನು ಶೂಟ್ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ -
ಗಾಂಧಿನಗರ, ಜು. 20: 4 ವರ್ಷದ ಬಾಲಕಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಯನ್ನು ಎನ್ಕೌಂಟರ್ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಬಂಧನಕ್ಕೊಳಗಾಗಿದ್ದ ಆರೋಪಿಯು ಪೊಲೀಸರ ಮೇಲೆ ದಾಳಿ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಸ್ವಯಂ ರಕ್ಷಣೆಗಾಗಿ ಪೊಲೀಸರು ಪ್ರತಿ ದಾಳಿ ನಡೆಸಬೇಕಾಯ್ತು. ಈ ಗುಂಡಿನ ಚಕಮಕಿ ವೇಲೆ ಗಾಯಗೊಂಡ ಅಧಿಕಾರಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ (Crime News).
ಗುಜರಾತ್ನ ಆನಂದ್ ಜಿಲ್ಲೆಯ ವಸಾದ್ ರೈಲ್ವೆ ನಿಲ್ದಾಣದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಸುರೇಶ್ ಪರ್ಮಾರ್, ಸೋಮವಾರ (ಜುಲೈ 20) ಮುಂಜಾನೆ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಗೀಡಾಗಿದ್ದಾನೆ. ಅಪರಾಧ ನಡೆದ ಕೆಲವೇ ಗಂಟೆಗಳಲ್ಲಿ ಬೊರ್ಸಾದ್ ಗ್ರಾಮೀಣ ಪೊಲೀಸರು ಪರ್ಮಾರ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಹಲ್ಲೆ ಮತ್ತು ಕೊಲೆಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಸ್ಥಳೀಯ ಕ್ರೈಂ ಬ್ರ್ಯಾಂಚ್ಗೆ ಹಸ್ತಾಂತರಿಸಲಾಯಿತು.
ಸುರೇಶ್ ಪರ್ಮಾರ್ನನ್ನು ಪೊಲೀಸರು ಕರೆದೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಪರ್ಮಾರ್ ವಾಂತಿ ಮಾಡುತ್ತಿದ್ದರಿಂದ ಅಧಿಕಾರಿಗಳು ಪೊಲೀಸ್ ವ್ಯಾನ್ ಅನ್ನು ರಸ್ತೆಯ ಬದಿ ನಿಲ್ಲಿಸಿದರು. ವಾಹನದಿಂದ ಇಳಿದ ಕೂಡಲೇ ಆತ ಇದ್ದಕ್ಕಿದ್ದಂತೆ ಚಾಕುವನ್ನು ಎಳೆದುಕೊಂಡು ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನಿಸಿ ಪೊಲೀಸರ ಮೇಲೆ ದಾಳಿ ನಡೆಸಿದ್ದ.
14 ವರ್ಷದ ಅತ್ಯಾಚಾರ ಸಂತ್ರಸ್ತೆ ಪರ ಕೇರಳಂ ಹೈಕೋರ್ಟ್ ತೀರ್ಪು; 28 ವಾರಗಳ ಗರ್ಭಪಾತಕ್ಕೆ ಅನುಮತಿ
ಹಠಾತ್ ಹಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜ್ವೀರ್ಸಿನ್ಹ್ ಮತ್ತು ಮಹಿಪಾಲ್ಸಿನ್ಹ್ ಗಾಯಗೊಂಡರು. ಪೊಲೀಸ್ ಸಬ್-ಇನ್ಸ್ಪೆಕ್ಟರ್ ರಾಣಾ ಚಾಕು ಕೆಳಗೆಸೆದು ಶರಣಾಗುವಂತೆ ಪದೇ ಪದೆ ಎಚ್ಚರಿಕೆ ನೀಡಿದರೂ ಪರ್ಮಾರ್ ಹಲ್ಲೆ ಮುಂದುವರಿಸಿದ್ದ. ಇದರಿಂದಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು. ಎನ್ಕೌಂಟರ್ನಲ್ಲಿ ಗಾಯಗೊಂಡ ಪರ್ಮಾರ್ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಬಾಲಕಿಯ ಅಪಹರಣ
ನಾಲ್ಕು ವರ್ಷದ ಬಾಲಕಿಯನ್ನು ವಸಾದ್ ರೈಲ್ವೆ ನಿಲ್ದಾಣದಿಂದ ಕರೆದೊಯ್ದು ಕೊಲೆ ಮಾಡಿರುವ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ಸಂತ್ರಸ್ತ ಮಗುವಿನ ಕುಟುಂಬ ಕೆಲವೇ ದಿನಗಳ ಹಿಂದೆಯಷ್ಟೇ ಕೆಸಲ ಅರಸಿಕೊಂಡು ಈ ಪ್ರದೇಶಕ್ಕೆ ಆಗಮಿಸಿತ್ತು. ಬಾಲಕಿಯ ಕುಟುಂಬವು ಜೀವನೋಪಾಯಕ್ಕಾಗಿ ರೈಲ್ವೆ ನಿಲ್ದಾಣದಲ್ಲಿ ತ್ಯಾಜ್ಯ ಸಂಗ್ರಹಿಸುವ ಕೆಲಸ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಬಾಲಕಿಯ ಶವ ಪತ್ತೆಯಾದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂತು. ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.