ಯೋಗಿ ನಾಡಲ್ಲಿ ಮುಂದುವರಿದ ದುಷ್ಕರ್ಮಿಗಳ ಬೇಟೆ; ಅರ್ಚಕನ ಹತ್ಯೆಗೈದವನ್ನು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದ ಪೊಲೀಸರು
Priest Killed in Police Encounter: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದ ದೇವಾಲಯದ ಅರ್ಚಕನ ಹತ್ಯೆಯ ಪ್ರಮುಖ ಆರೋಪಿಯನ್ನು ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ. ಪೊಲೀಸರ ಮೇಲೆಯೇ ಆತ ಗುಂಡು ಹಾರಿಸಿದ್ದರಿಂದ, ಪ್ರತಿದಾಳಿ ನಡೆಸಲಾಯಿತು. ಈ ವೇಳೆ ಗಂಭೀರ ಗಾಯಗೊಂಡ ಆತ ಸಾವಿಗೀಡಾಗಿದ್ದಾನೆ.
ಸಾಂದರ್ಭಿಕ ಚಿತ್ರ -
ಲಖನೌ, ಜೂ. 16: ಉತ್ತರ ಪ್ರದೇಶದ (Uttar Pradesh) ಉನ್ನಾವೋ ಜಿಲ್ಲೆಯಲ್ಲಿ ನಡೆದ ದೇವಾಲಯದ ಅರ್ಚಕನ ಹತ್ಯೆಯ ಪ್ರಮುಖ ಆರೋಪಿಯನ್ನು ಪೊಲೀಸ್ ಎನ್ಕೌಂಟರ್ನಲ್ಲಿ (Police Encounter) ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕಾನ್ಸ್ಟೇಬಲ್ ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಮತ್ತು ಎಸ್ಒಜಿ (ವಿಶೇಷ ಕಾರ್ಯಾಚರಣೆ) ತಂಡವು ಗಸ್ತು ಕರ್ತವ್ಯದಲ್ಲಿದ್ದಾಗ, ಆರೋಪಿ ಇಸ್ರೇಲ್ ತಾಜ್ಪುರ ಗ್ರಾಮದ ಅಂಡರ್ಪಾಸ್ ಬಳಿ ಇದ್ದಾನೆ ಎಂಬ ಸುಳಿವು ಸಿಕ್ಕಿತು ಎಂದು ಉನ್ನಾವ್ ಎಸ್ಪಿ ಜೈ ಪ್ರಕಾಶ್ ಸಿಂಗ್ ಹೇಳಿದ್ದಾರೆ.
ಪೊಲೀಸ್ ಮತ್ತು ಎಸ್ಒಜಿ ಸಿಬ್ಬಂದಿಯ ಜಂಟಿ ತಂಡ ಸ್ಥಳಕ್ಕೆ ತಲುಪಿ, ಆರೋಪಿ ಇಸ್ರೇಲ್ನನ್ನು ಸುತ್ತುವರಿದು ಶರಣಾಗುವಂತೆ ಕೇಳಿಕೊಂಡಿತು. ಆದರೆ ಇಸ್ರೇಲ್ ಜಂಟಿ ತಂಡದ ಮೇಲೆ ಗುಂಡು ಹಾರಿಸಿದ. ಒಂದು ಗುಂಡು ಸಬ್ಇನ್ಸ್ಪೆಕ್ಟರ್ ನ್ಯೂಟನ್ ಕುಮಾರ್ ಸಿಂಗ್ ಅವರ ಗುಂಡು ನಿರೋಧಕ ಜಾಕೆಟ್ಗೆ ತಗುಲಿತು. ಇನ್ನೊಂದು ಗುಂಡು ಎಸ್ಒಜಿ ಕಾನ್ಸ್ಟೆಬಲ್ ವಿಕಾಸ್ ಭದೌರಿಯಾ ಅವರ ತೋಳಿಗೆ ತಗುಲಿತು ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರತಿಕಾರದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಇಸ್ರೇಲ್ನನ್ನು ಬಂಗರ್ಮೌದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಅಂತಾ ಘೋಷಿಸಿದರು. ಎನ್ಕೌಂಟರ್ ಸ್ಥಳದಿಂದ ಪೊಲೀಸರು .315 ಬೋರ್ ಕಂಟ್ರಿ ನಿರ್ಮಿತ ಪಿಸ್ತೂಲ್, ಎರಡು ಬಳಕೆಯಾದ ಕಾರ್ಟ್ರಿಡ್ಜ್ಗಳು ಮತ್ತು ಒಂದು ಚಾಕುವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣ: ಆರೋಪಿಗಳಿಂದ ಉತ್ತರ ಪ್ರದೇಶ ವಿಧಾನಸಭೆ ಮೇಲೆ ದಾಳಿಗೆ ಯೋಜನೆ
ಇಬ್ಬರು ಆರೋಪಿಗಳ ಬಂಧನ
ಮತ್ತೊಂದು ಬೆಳವಣಿಗೆಯಲ್ಲಿ, ಆಗ್ರಾ-ಲಖನೌ ಎಕ್ಸ್ಪ್ರೆಸ್ವೇಯ ಮೇಲ್ಸೇತುವೆಯ ಬಳಿ ಪ್ರಕರಣದ ಐದನೇ ಆರೋಪಿ ಶಾನು ಅಲಿಯಾಸ್ ಮುನ್ನಾ ಕಾಲಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನಿಗೆ 1 ಲಕ್ಷ ರುಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ. ಅರ್ಚಕನ ಹತ್ಯೆಗೆ ಸಂಬಂಧಿಸಿದಂತೆ ಐವರು ಮತ್ತು ಕೆಲವು ಇನ್ನು ಕೆಲವು ಆರೋಪಿಗಳವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಬಂಗಾರ್ಮೌವಿನ ಬೋಧೇಶ್ವರ ದೇವಸ್ಥಾನದಲ್ಲಿ ದೀರ್ಘಕಾಲದಿಂದ ಅರ್ಚಕರಾಗಿದ್ದ ರಾಮ್ ಮಿಲನ್ ದಾಸ್ ಅವರನ್ನು ಜೂನ್ 9ರಂದು ನಿರ್ಮಾಣ ಹಂತದಲ್ಲಿರುವ ದೇವಾಲಯವೊಂದರಲ್ಲಿ ಇರಿದು ಕೊಲೆ ಮಾಡಲಾಗಿತ್ತು. ಸುಮಾರು ಆರು ತಿಂಗಳ ಹಿಂದೆ ದಾಸ್ ಮನೆಯಿಂದ 200 ಮೀಟರ್ ದೂರದಲ್ಲಿ ದೇವಾಲಯವನ್ನು ನಿರ್ಮಿಸಲು ಪ್ರಾರಂಭಿಸಿದ್ದರು. ಅಲ್ಲಿ ಅವರು ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಕೊಲೆಯಾದ ಬಗ್ಗೆ ದಾಸ್ ಅವರ ಹಿರಿಯ ಸಹೋದರ ವೀರೇಂದ್ರ ಪೊಲೀಸರಿಗೆ ದೂರು ನೀಡಿದ್ದರು.
ಉತ್ತರ ಪ್ರದೇಶದಲ್ಲಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ, ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈ ಎನ್ಕೌಂಟರ್ ಸಾಬೀತುಪಡಿಸಿದೆ ಎಂದು ಉನ್ನಾವ್ ಲೋಕಸಭಾ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.