ಮತ್ತೊಂದು ಬೆಂಕಿ ದುರಂತ; ಹಗಲಲ್ಲೇ ಹೊತ್ತಿ ಉರಿದ ಖಾಸಗಿ ಬಸ್
ರಾಜ್ಯದಲ್ಲಿ ಇತ್ತೀಚೆಗೆ ಸಾಲು ಸಾಲು ಖಾಸಗಿ ಬಸ್ಗಳು ಬೆಂಕಿ ದುರಂತಕ್ಕೆ ಸಿಲುಕುತ್ತಿವೆ. ಇದೀಗ ಚಂದ್ರಲೇಔಟ್ ಬಿಎಂಟಿಸಿ ಡಿಪೋ (BMTC) ಸಮೀಪದಲ್ಲಿ ನಿಂತಿದ್ದ ಹೊಸ ಖಾಸಗಿ ಬಸ್ವೊಂದು ಹಠಾತ್ ಹೊತ್ತಿ ಉರಿದಿದೆ. ಈ ಘಟನೆ ಇಂದು 10.20ರ ಸುಮಾರಿಗೆ ನಡೆದಿದೆ ಎಂದು ತಿಳಿದು ಬಂದಿದೆ.
ಎಐ ರಚಿತ ಚಿತ್ರ -
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಾಲು ಸಾಲು ಖಾಸಗಿ ಬಸ್ಗಳು (Fire accident) ಬೆಂಕಿ ದುರಂತಕ್ಕೆ ಸಿಲುಕುತ್ತಿವೆ. ಇದೀಗ ಚಂದ್ರಲೇಔಟ್ ಬಿಎಂಟಿಸಿ ಡಿಪೋ (BMTC) ಸಮೀಪದಲ್ಲಿ ನಿಂತಿದ್ದ ಹೊಸ ಖಾಸಗಿ ಬಸ್ವೊಂದು ಹಠಾತ್ ಹೊತ್ತಿ ಉರಿದಿದೆ. ಈ ಘಟನೆ ಇಂದು 10.20ರ ಸುಮಾರಿಗೆ ನಡೆದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಬೆಂಕಿಯಿಂದ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿ ಹತ್ತಿಕೊಂಡಾಗ ಬಸ್ನಲ್ಲಿ ಯಾರೂ ಇರಲಿಲ್ಲ. ಇದರಿಂದ ಭಾರೀ ಅನಾಹುತ ತಪ್ಪಿದೆ.
ಈ ಬಸ್ ದುರಂತ ಚಂದ್ರಲೇಔಟ್ ಪ್ರದೇಶದ ಬಿಎಂಟಿಸಿ ಡಿಪೋ ಬಳಿ ನಡೆದಿದೆ. ಇಲ್ಲಿ ಬಸ್ ನಿಲುಗಡ್ಡೆಯ ಸ್ಥಳದಲ್ಲಿತ್ತು. ಈ ಸಮಯದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು ಧಗಧಗನೆ ಉರಿದಿದೆ. ಇನ್ನೂ ಬಸ್ ಹೊಸದಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಏಕೆ ಹಾಗೆ ಹೊತ್ತಿಕೊಂಡಿತು ಎಂಬುದಕ್ಕೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಶಾರ್ಟ್ ಸರ್ಕ್ಯೂಟ್, ಎಂಜಿನ್ ಸಮಸ್ಯೆ, ಇಂಧನ ಸೋರಿಕೆ ಅಥವಾ ಇನ್ನಾವುದೋ ತಾಂತ್ರಿಕ ದೋಷ ಕಾರಣವಾಗಿರಬಹುದು ಎಂದು ಪ್ರಾಥಮಿಕ ಊಹೆಗಳಿವೆ. ಬೆಂಕಿ ತೀವ್ರವಾಗಿ ಹರಡಿದ್ದರಿಂದ ಬಸ್ ಸಂಪೂರ್ಣ ಭಸ್ಮವಾಗಿದೆ.
ಬಸ್ನಿಂದ ಕಪ್ಪು ಹೊಗೆ ಭಾರೀ ಪ್ರಮಾಣದಲ್ಲಿ ಹೊರಬರುತ್ತಿರುವುದು, ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಏರಿವೆ. ಈ ಘಟನೆಯ ನಂತರ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ವರದಿಯಾಗಿಲ್ಲ ಎಂದು ಮೂಲಗಳು ಹೇಳಿವೆ.
ಕಳೆದ ವಾರ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ನಾನ್ ಎಸಿ ಸ್ಲೀಪರ್ ಬಸ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಸೂಡೂರು ಗ್ರಾಮದ ಬಳಿ ನಡೆದಿದೆ.
ಮಹಾ ಶಿವರಾತ್ರಿ ವೇಳೆ ದುರಂತ: ಸಾಹಸ ಪ್ರದರ್ಶನದ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಾವು
ಹೊಸನಗರ ತಾಲೂಕು ಅರಸಾಳು ಬಳಿಯ 9ನೇ ಮೈಲಿಗಲ್ಲಿನ ಬಳಿ ಬಸ್ಗೆ ಆಕಸ್ಮಿಕ ಬೆಂಕಿ ತಗುಲಿದೆ. ಈ ವೇಳೆ ಬಸ್ನಲ್ಲಿ ಸುಮಾರು 36 ಜನ ಪ್ರಯಾಣಿಕರಿದ್ದರು. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದರಲ್ಲಿ 12 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ರಿಪ್ಪನ್ಪೇಟೆಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ರಿಪ್ಪನ್ಪೇಟೆ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.