ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangkok Zoo: ಬ್ಯಾಂಕಾಕ್‌ನ ಸಫಾರಿ ವರ್ಲ್ಡ್‌ನಲ್ಲೊಂದು ಭೀಕರ ದುರಂತ: ಮೃಗಾಲಯ ಸಿಬ್ಬಂದಿಯನ್ನು ಕೊಂದ ಸಿಂಹಗಳು

ಜನಪ್ರಿಯ ತೆರೆದ ಮೃಗಾಲಯವಾಗಿರುವ ಬ್ಯಾಂಕಾಕ್‌ನ ಸಫಾರಿ ವರ್ಲ್ಡ್‌ನಲ್ಲಿ ಮೃಗಾಲಯದ ಪಾಲಕನಾಗಿ ಕೆಲಸ ಮಾಡುತ್ತಿದ್ದ ಜಿಯಾನ್ ರಂಗ್ಖರಸಾಮೀ ಎಂಬಾತನ ಮೇಲೆ ಸಿಂಹಗಳ ಹಿಂಡೊಂದು ದಾಳಿ ನಡೆಸಿ ಕೊಂದು ಹಾಕಿದೆ. ಸುಮಾರು 15 ನಿಮಿಷಗಳ ಕಾಲ ನಡೆದ ಈ ಘಟನೆಗೆ ನೂರಾರು ಸಂದರ್ಶಕರು ಸಾಕ್ಷಿಯಾಗಿದ್ದರು.

ಮೃಗಾಲಯ ಸಿಬ್ಬಂದಿಯನ್ನು ಕೊಂದ ಸಿಂಹಗಳು

-

ಬ್ಯಾಂಕಾಕ್: ಪ್ರವಾಸಿಗರ ಮುಂದೆಯೇ ಸಿಂಹಗಳು (Lions attack) ಮೃಗಾಲಯದ (Bangkok Zoo) ಸಿಬ್ಬಂದಿಯನ್ನು ಕೊಂದು ಹಾಕಿರುವ ಘಟನೆ ಬ್ಯಾಂಕಾಕ್‌ನ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ (Bangkoks Safari World) ನಡೆದಿದೆ. ಈ ಕುರಿತು ಸಂತಾಪ ವ್ಯಕ್ತಪಡಿಸಿರುವ ಸಫಾರಿ ವರ್ಲ್ಡ್, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ. ಮೃಗಾಲಯದಲ್ಲಿದ್ದ ಸಿಂಹಗಳ ಗುಂಪು ಪ್ರವಾಸಿಗರ ಮುಂದೆಯೇ 58 ವರ್ಷದ ಮೃಗಾಲಯದ ಪಾಲಕ ಜಿಯಾನ್ ರಂಗ್ಖರಸಾಮೀ ಎಂಬಾತನನ್ನು ಕೊಂದು ಹಾಕಿದೆ. ಸುರಕ್ಷತಾ ಶಿಷ್ಟಾಚಾರಗಳನ್ನು (Safety etiquette) ಉಲ್ಲಂಘಿಸಿ ಅವರು ಸಿಂಹದ ಆವರಣದೊಳಗೆ ಬಂದಿದ್ದರು ಎನ್ನಲಾಗಿದೆ.

ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಜಿಯಾನ್ ರಂಗ್ಖರಸಾಮೀ ಸುರಕ್ಷತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಸಿಂಹದ ಆವರಣದೊಳಗೆ ಕಾಲಿಟ್ಟ ಕೂಡಲೇ ಸಿಂಹಗಳು ಅವರ ಮೇಲೆ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.



ʼʼಜನಪ್ರಿಯ ತೆರೆದ ಮೃಗಾಲಯ ಮತ್ತು ಪ್ರವಾಸಿಗರ ಆಕರ್ಷಣೆಯಾಗಿದ್ದ ಬ್ಯಾಂಕಾಕ್‌ನ ಸಫಾರಿ ವರ್ಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ರಂಗ್ಖರಸಾಮೀ ಮೇಲೆ ಸಿಂಹಗಳ ಹಿಂಡೊಂದು ಸುಮಾರು 15 ನಿಮಿಷಗಳ ಕಾಲ ದಾಳಿ ನಡೆಸಿದೆ. ಬಳಿಕ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಅವರು ಅಲ್ಲಿ ಸಾವನ್ನಪ್ಪಿದರುʼʼ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ನೂರಾರು ಪ್ರವಾಸಿಗರು ಈ ವೇಳೆ ಮೃಗಾಲಯದಲ್ಲಿದ್ದು, ಅವರು ಈ ಆಘಾತಕಾರಿ ದೃಶ್ಯಕ್ಕೆ ಸಾಕ್ಷಿಯಾಇದ್ದರು. ಕೆಲವರು ಸಿಂಹಗಳ ಗಮನವನ್ನು ಬೇರೆಡೆ ಸೆಳೆಯಲು ಹಾರ್ನ್ ಮಾಡಿದರೂ ಕೂಗಿದರೂ ರಂಗ್ಖರಸಾಮೀ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಈ ಕುರಿತು ಮಾಹಿತಿ ನೀಡಿರುವ ಫ್ರಾ ಮೊಂಗ್ಕುಟ್ ಕ್ಲಾವೊ ಆಸ್ಪತ್ರೆಯ ಮಾಜಿ ಪ್ರಾಧ್ಯಾಪಕ ಮತ್ತು ಶಸ್ತ್ರಚಿಕಿತ್ಸಕ ಕರ್ನಲ್ ಡಾ. ಥವಾಟ್ಚೈ ಕಾಂಚನಾರಿನ್, ಮೃಗಾಲಯದ ಪಾಲಕರಾಗಿದ್ದ ರಂಗ್ಖರಸಾಮೀ ತಮ್ಮ ವಾಹನದಿಂದ ಹೊರಬಂದ ಕೂಡಲೇ ಅವರ ಮೇಲೆ ಸಿಂಹದ ಹಿಂಡು ದಾಳಿ ನಡೆಸಿದೆ ಎಂದು ಹೇಳಿದರು.

ಹಲವು ಮಂದಿ ಈ ದಾಳಿಯನ್ನು ಗಮನಿಸಿದರೂ ಯಾರಿಗೂ ಅವರನ್ನು ಹೇಗೆ ರಕ್ಷಿಸಬೇಕೆಂಬುದು ತಿಳಿಯಲಿಲ್ಲ. ಕೆಲವು ಪ್ರವಾಸಿಗರು ತಮ್ಮ ಕಾರಿನ ಹಾರ್ನ್‌ ಮಾಡಿ ಸಿಂಹಗಳನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಮೊದಲಿಗೆ, ಕೆಲವರು ಸಿಂಹಗಳು ಅಧಿಕಾರಿಯೊಂದಿಗೆ ಪರಿಚಿತವಾಗಿರಬಹುದು ಎಂದು ಭಾವಿಸಿದ್ದರು. ಆದರೆ ಇತರ ಅಧಿಕಾರಿಗಳು ಅವರ ರಕ್ಷಣೆಗೆ ಧಾವಿಸುವ ಮೊದಲು ಸಿಂಹಗಳು ಸುಮಾರು 15 ನಿಮಿಷಗಳ ಕಾಲ ಅವರ ಮೇಲೆ ದಾಳಿ ನಡೆಸಿದೆ ಎಂದರು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ವನ್ಯಜೀವಿ ಇಲಾಖೆಯ ಮಹಾನಿರ್ದೇಶಕ ಅಟ್ಟಪೋಲ್ ಚರೋಯೆಂಚನ್ಸಾ, ಸಿಂಹಗಳಿಗೆ ಆಹಾರ ನೀಡುತ್ತಿರುವಾಗ ರಂಗ್ಖರಸಾಮೀ ಮೇಲೆ ದಾಳಿ ನಡೆದಿದೆ. ಅವುಗಳಲ್ಲಿ ಒಂದರ ಆರೋಗ್ಯ ಕೆಟ್ಟಿದ್ದು ದಾಳಿ ನಡೆಸಲು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಸಫಾರಿ ವರ್ಲ್ಡ್, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವುದಾಗಿ ಹೇಳಿದೆ. ಪ್ರಾಣಿ ಹಕ್ಕುಗಳ ಗುಂಪಾದ ಪೆಟಾ, ಕಾಡು ಪ್ರಾಣಿಗಳನ್ನು ನಿರ್ವಹಿಸುವುದು ಅಪಾಯಕಾರಿಯಾಗಿರುವುದರಿಂದ ಸಿಂಹಗಳನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಒತ್ತಾಯಿಸಿದೆ.

ಸಿಂಹಗಳ ತಪಾಸಣೆ ನಡೆಸಿರುವ ತಜ್ಞರ ತಂಡ, ಎಲ್ಲ ಇತರ ಪ್ರಾಣಿಗಳು ಸಾಮಾನ್ಯ ಸ್ಥಿತಿಯಲ್ಲಿವೆ ಮತ್ತು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನ-ಬೆಂಗಳೂರಿನ ಅಪೋಲೋ ಆಸ್ಪತ್ರೆಗಳಿಂದ ಜಾಗೃತಿ ಅಭಿಯಾನ

ಕಳೆದ 40 ವರ್ಷಗಳಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಕಂಪನಿಯು ಎಲ್ಲ ಪ್ರವಾಸಿಗರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ವಿಶೇಷವಾಗಿ ಕಾಡು ಪ್ರಾಣಿ ವಲಯದಲ್ಲಿ ತೆರೆದ ಮೃಗಾಲಯಕ್ಕೆ ಭೇಟಿ ನೀಡುವಾಗ ವಾಹನಗಳಿಂದ ಇಳಿಯದಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಇಂತಹ ಘಟನೆ ಮರುಕಳಿಸದಂತೆ ತನಿಖೆ ನಡೆಸಿ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಹೆಚ್ಚಿಸುವುದಾಗಿ ತಿಳಿಸಿದೆ.