Karnataka Per Capita Income: ತಲಾದಾಯದಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಥಮ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ
ನಂಜುಂಡಪ್ಪ ಅವರ ವರದಿಯ ಆಶಯಗಳು ಮತ್ತು ಪರಿಣಾಮಗಳನ್ನು ಅಧಿವೇಶನದಲ್ಲಿ ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ ಅವರು, ನಂಜುಂಡಪ್ಪ ಅವರ ವರದಿಯ ಬಳಿಕ ನೀಡಿದ ಅನುದಾನಗಳ ಬಳಕೆ, ಅನುಷ್ಠಾನ ಮತ್ತು ಫಲಿತಾಂಶದ ಬಗ್ಗೆ ಅಧ್ಯಯನ, ಸಮೀಕ್ಷೆ ನಡೆಸುವ ಸರ್ಕಾರದ ಕಾಳಜಿ ಮತ್ತು ಮಹತ್ವವನ್ನು ವಿಸ್ತೃತವಾಗಿ ವಿವರಿಸಿದರು.
ಸಿಎಂ ಸಿದ್ದರಾಮಯ್ಯ -
ಬೆಳಗಾವಿ, ಡಿ.19: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರಿಸುವಾಗ ರಾಜ್ಯದ ಜಿಲ್ಲಾವಾರು ತಲಾದಾಯದ (Karnataka Per Capita Income) ಬಗ್ಗೆ ಮಾಹಿತಿ ನೀಡಿದ್ದು, ತಲಾ ಆದಾಯದಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಕಡಿಮೆ ಇರುವುದು ತಲಾ ಆದಾಯದಲ್ಲಿ ಹಿಂದುಳಿಯಲು ಒಂದು ಕಾರಣ. ತಲಾ ಆದಾಯದಲ್ಲಿ ಕಲಬುರಗಿ ಅತ್ಯಂತ ಹಿಂದುಳಿದಿದೆ ಎಂದು ಸಿಎಂ ಹೇಳಿ, ತಲಾ ಆದಾಯದ ಜಿಲ್ಲಾವಾರು ಪಟ್ಟಿಯನ್ನು ಸದನದ ಮುಂದಿಟ್ಟಿದ್ದಾರೆ.
ಜಿಲ್ಲಾವಾರು ತಲಾದಾಯ 2023-24 (ರೂ.ಗಳಲ್ಲಿ)
- ಬೆಂಗಳೂರು ನಗರ- 7,38,910
- ದಕ್ಷಿಣ ಕನ್ನಡ- 5,56,059
- ಉಡುಪಿ- 5,33,469
- ಚಿಕ್ಕಮಗಳೂರು-4,44,472
- ಬೆಂಗಳೂರು ಗ್ರಾಮಾಂತರ- 4,04,138
- ಶಿವಮೊಗ್ಗ-3,49,177
- ಮಂಡ್ಯ- 3,06,448
- ತುಮಕೂರು-3,02,707
- ಕೊಡಗು- 2,94,898
- ಹಾಸನ -2,94,272
- ಬಳ್ಳಾರಿ- 2,93,985
- ರಾಮನಗರ -2,77,619
- ಉತ್ತರ ಕನ್ನಡ- 2,66,619
- ಧಾರವಾಡ - 2,61,563
- ಚಾಮರಾಜನಗರ- 2,59,387
- ಬಾಗಲಕೋಟೆ- 2,49,478
- ಮೈಸೂರು- 2,39,296
- ಚಿಕ್ಕಬಳ್ಳಾಪುರ- 2,31,154
- ಕೋಲಾರ- 2,15,255
- ದಾವಣಗೆರೆ - 2,09,655
- ಚಿತ್ರದುರ್ಗ - 1,98,950
- ಗದಗ- 1,94,453
- ಹಾವೇರಿ- 1,84,111
- ರಾಯಚೂರು- 1,66,371
- ವಿಜಯನಗರ- 1,65,546
- ವಿಜಯಪುರ- 1,63,431
- ಬೀದರ್- 1,63,298
- ಬೆಳಗಾವಿ- 1,62,987
- ಕೊಪ್ಪಳ- 1,61,491
- ಯಾದಗಿರಿ- 1,46,364
- ಕಲಬುರಗಿ- 1,43,610
Milk Incentive: ರಾಜ್ಯ ರೈತರಿಗೆ ಗುಡ್ನ್ಯೂಸ್; ಹಾಲಿನ ಪ್ರೋತ್ಸಾಹಧನ 7 ರೂ.ಗೆ ಹೆಚ್ಚಳ
ರಾಜ್ಯದ ಜನರ ಸರಾಸರಿ ತಲಾದಾಯ 3,39,813 ರೂ.
ವಿರೋಧ ಪಕ್ಷದ ನಾಯಕರಾದಿಯಾಗಿ ಅನೇಕರು ತಲಾದಾಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರ ತಲಾದಾಯ ರಾಜ್ಯದ ಉಳಿದೆಡೆಗಳಿಗೆ ಹೋಲಿಸಿದರೆ ಕಡಿಮೆ ಇದೆ. ನಮ್ಮಲ್ಲಿ ಪೂರ್ಣ ಪ್ರಮಾಣದ ತಲಾದಾಯ ಕುರಿತ ವರದಿ ಲಭ್ಯ ಇರುವುದು 2023-24 ರ ಸಾಲಿನದು ಅದನ್ನು ಆಧರಿಸಿ ಹೇಳುವುದಾದರೆ, ಅದರ ಪ್ರಕಾರ ರಾಜ್ಯದ ಜನರ ಸರಾಸರಿ ತಲಾದಾಯ ಪ್ರಸ್ತುತ ದರಗಳಲ್ಲಿ 3,39,813 ರೂ ಇದೆ. ಅದಕ್ಕಿಂತ ಮೇಲೆ 6 ಜಿಲ್ಲೆಗಳಿವೆ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಜಿಲ್ಲೆಗಳ ಜನರ ತಲಾದಾಯ 3.4 ಲಕ್ಷ ರೂಗಳಿಗಿಂತ ಹೆಚ್ಚು.
ಅದಕ್ಕೆ ಸಮೀಪದಲ್ಲಿ 10 ಜಿಲ್ಲೆಗಳಿವೆ. 2.5 ಲಕ್ಷದಿಂದ 3.4 ಲಕ್ಷದವರೆಗೆ ಮಂಡ್ಯ, ತುಮಕೂರು, ಕೊಡಗು, ಹಾಸನ, ಬಳ್ಳಾರಿ, ರಾಮನಗರ, ಉತ್ತರ ಕನ್ನಡ, ಧಾರವಾಡ, ಚಾಮರಾಜನಗರ, ಬಾಗಲಕೋಟೆ ಜಿಲ್ಲೆಗಳು ಇವೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
2 ರಿಂದ 2.5 ಲಕ್ಷ ತಲಾದಾಯ ಇರುವ ಜಿಲ್ಲೆಗಳು 4. ಅವು, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ.
2 ಲಕ್ಷಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಚಿತ್ರದುರ್ಗ, ಗದಗ, ಹಾವೇರಿ, ರಾಯಚೂರು, ವಿಜಯನಗರ, ವಿಜಯಪುರ, ಬೀದರ್, ಬೆಳಗಾವಿ, ಕೊಪ್ಪಳ, ಯಾದಗಿರಿ, ಕಲಬುರಗಿ ಸೇರಿ 11 ಇವೆ.
ನಾವು ತಲಾದಾಯವನ್ನು ಅಭಿವೃದ್ಧಿಯ ಮಾನದಂಡವಾಗಿರಿಸಿಕೊಳ್ಳುತ್ತೇವೆ. ತಲಾದಾಯವೆಂದರೆ ಒಟ್ಟಾರೆ ಆ ಜಿಲ್ಲೆಯ ಒಟ್ಟು ಉತ್ಪನ್ನವನ್ನು ಲೆಕ್ಕ ಹಾಕಿ ಅದನ್ನು ಆ ಜಿಲ್ಲೆಯ ಎಲ್ಲಾ ಜನರಿಗೆ ಡಿವೈಡ್ ಮಾಡಿದಾಗ ಸಿಗುವ ಮೌಲ್ಯವಾಗಿರುತ್ತದೆ. ಹೆಚ್ಚು ಇಂಡಸ್ಟ್ರಿಯಲೈಸ್ ಆದ, ಕಮರ್ಷಿಯಲೈಸ್ ಆದ ಜಿಲ್ಲೆಗಳ ತಲಾದಾಯ ಹೆಚ್ಚಿರುತ್ತದೆ. ಹೆಚ್ಚು ಕೃಷಿಯನ್ನು ಅವಲಂಬಿಸಿದ ಜಿಲ್ಲೆಗಳಲ್ಲಿ ಕಡಿಮೆ ಇರುತ್ತದೆ.
ನಾಲ್ಕನೇ ಗುಂಪಿನ ಜಿಲ್ಲೆಗಳ ಸುಧಾರಣೆಗೆ ನಾವು ಹೆಚ್ಚು ಗಮನ ಹರಿಸಬೇಕಾಗಿದೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 10 ಜಿಲ್ಲೆಗಳು ಹಾಗೂ ಚಿತ್ರದುರ್ಗ ಜಿಲ್ಲೆ ಕಡೆಯ ಕೆಟಗರಿಯಲ್ಲಿ ಬರುತ್ತವೆ. ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲಗಳ ತಲಾದಾಯವು 4 ನೇ ಗುಂಪಿನ ಜನರ ತಲಾದಾಯಕ್ಕೆ ಸಮೀಪದಲ್ಲೆ ಇದೆ.
ಆದರೂ ಉತ್ತರ ಕರ್ನಾಟಕದ 10 ಜಿಲ್ಲೆಗಳ ಜನರ ತಲಾದಾಯ ಅದರಲ್ಲೂ ಕಲ್ಯಾಣ ಕರ್ನಾಟಕದ ಜನರ ತಲಾದಾಯ ಕಡಿಮೆ ಇರಲು ಕಾರಣಗಳೇನು? ಎಂದು ಹುಡುಕುತ್ತಾ ಹೋದರೆ ಡೈರಿ ಚಟುವಟಿಕೆಗಳು ಎಲ್ಲಿ ದುರ್ಬಲವಾಗಿವೆಯೋ ಅಲ್ಲಿಯೇ ತಲಾದಾಯವೂ ಕಡಿಮೆ ಇದೆ. ನೀವು ಸಲಹೆ ಕೊಡಬೇಕಾಗಿವುದು ಇಂಥ ವಿಚಾರಗಳನ್ನೇ ಎಂದು ಸಿಎಂ ಹೇಳಿದರು.
ಹಸು, ಎಮ್ಮೆ ಸಾಕಾಣಿಕೆಯು ತಕ್ಷಣದ ಆದಾಯವನ್ನು ಹೆಚ್ಚು ಮಾಡುತ್ತದೆ. ಜನರು ಗುಳೆ ಹೋಗುವುದನ್ನು ತಪ್ಪಿಸುತ್ತದೆ. ಜನ ನಿಂತರೆ ಅಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಶಿಕ್ಷಣವು ಉತ್ತಮ ಜೀವನದ ಕಡೆಗೆ ಮುನ್ನಡೆಯಲು ಸಾಧ್ಯವಾಗುತ್ತದೆ. ಕೌಶಲ್ಯಯುತ ಶಿಕ್ಷಣದ ಅಗತ್ಯವೂ ಇಂದಿನ ಅಗತ್ಯವಾಗಿದೆ.
2026ರ ಜೂನ್ ವೇಳೆಗೆ ತುಂಗಭದ್ರಾ ಅಣೆಕಟ್ಟಿನ ಎಲ್ಲ ಗೇಟ್ಗಳ ಬದಲಾವಣೆ; ಡಿ.ಕೆ. ಶಿವಕುಮಾರ್
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೈನುಗಾರಿಕೆಗೆ ಆದ್ಯತೆ
ನಾನು ಮಿಲ್ಕ್ ಯೂನಿಯನ್ನುಗಳ ಮಾಹಿತಿ ತರಿಸಿಕೊಂಡು ನೋಡಿದೆ. ಬೆಂಗಳೂರು ಮಿಲ್ಕ್ ಯೂನಿಯನ್ನಿನಲ್ಲಿ ಪ್ರತಿ ದಿನ ಸರಾಸರಿ 17.13 ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತದೆ. ಹಾಸನ, ಮಂಡ್ಯ, ತುಮಕೂರು, ಮೈಸೂರು, ಶಿವಮೊಗ್ಗ, ಕೋಲಾರ ಮಿಲ್ಕ್ ಯೂನಿಯನ್ನುಗಳಲ್ಲಿ ಪ್ರತಿ ದಿನ ಸರಾಸರಿ 7.2 ರಿಂದ 14.08 ಲಕ್ಷ ಕೆಜಿಗಳಷ್ಟು ಹಾಲನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಕಲಬುರಗಿ ಮಿಲ್ಕ್ ಯೂನಿಯನ್ನಿನಲ್ಲಿ [ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳನ್ನು ಒಳಗೊಂಡದ್ದು] ದಿನಕ್ಕೆ ಕೇವಲ 67 ಸಾವಿರ ಕೆಜಿ ಹಾಲು ಮಾತ್ರ ಉತ್ಪಾದನೆಯಾಗುತ್ತಿದೆ. ವಿಜಯಪುರ ಯೂನಿಯನ್ನಿನಲ್ಲಿ 1.47 ಲಕ್ಷ ಕೆಜಿ, ಹಾವೇರಿ ಯೂನಿಯನ್ನಿನಲ್ಲಿ 1.55 ಲಕ್ಷ ಕೆಜಿ ಹಾಲು ಮಾತ್ರ ಉತ್ಪಾದನೆಯಾಗುತ್ತದೆ. ಬೆಳಗಾವಿಯಲ್ಲಿ 2.39 ಲಕ್ಷ ಕೆಜಿ ಸಂಗ್ರಹವಾಗುತ್ತದೆ.
ರಾಜ್ಯದಲ್ಲಿ ಪ್ರಸ್ತುತ ಅಂದಾಜು 6.95 ಕೋಟಿ ಜನಸಂಖ್ಯೆ ಇರಬಹುದು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 2,96,28,767 ಜನರಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.42 ರಷ್ಟು ಜನರು ಈ ಭಾಗದಲ್ಲಿ ವಾಸಿಸುತ್ತಾರೆ. ಈ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹ ದಿನಕ್ಕೆ 3.52 ಕೆಜಿ ಮಾತ್ರ.
ಹಾಗೆಯೇ ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿವೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 97 ವಿಧಾನ ಸಭಾ ಕ್ಷೇತ್ರಗಳಿವೆ. ದಕ್ಷಿಣ ಕರ್ನಾಟಕ ಹಾಗೂ ಕರಾವಳಿಯ ಉಡುಪಿ ದಕ್ಷಿಣ ಕರ್ನಾಟಕ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹದ ಪ್ರಮಾಣ ದಿನಕ್ಕೆ 22.4 ಲೀಟರುಗಳು.
ರಾಜ್ಯದಲ್ಲಿ ಸರಾಸರಿ 1 ಕೋಟಿ ಲೀ.ಗಳು. ಇದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ಸಂಗ್ರಹ 10.45 ಲಕ್ಷ ಲೀಟರ್ ಮಾತ್ರ. ಇನ್ನುಳಿದ ಹಾಲು ಉಳಿದ 17 ಜಿಲ್ಲೆಗಳ ಸುಮಾರು 4 ಕೋಟಿ ಜನರು ಸಂಗ್ರಹಿಸುತ್ತಾರೆ. ಈ ಕಾರಣದಿಂದಲೆ ನಾವು ಈ ವರ್ಷದ ಬಜೆಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹೈನುಗಾರಿಕೆಗೆ ಹೆಚ್ಚು ಆದ್ಯತೆಯನ್ನು ನೀಡಲು ತೀರ್ಮಾನಿಸಿದ್ದೇವೆ ಎಂದು ಸಿಎಂ ಹೇಳಿದರು.
ಇದರ ಜತೆಗೆ ಲೀಪ್ ಎಂಬ [ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮ] ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಎಂಬುದು ಕ್ಷಣಾರ್ಧದಲ್ಲಿ ಸಾಧ್ಯವಾಗಿಬಿಡಬಹುದಾದ ವಿದ್ಯಮಾನವಲ್ಲ. ನಿರಂತರವಾಗಿ ಹಠತೊಟ್ಟ ಹಾಗೆ ಸಾಧಿಸಬೇಕಾದ ಸಂಗತಿ. ಇದಕ್ಕೆ ಜನರೂ ಸಹ ಒಗ್ಗೂಡಬೇಕು. ಮನೋಭಾವದಲ್ಲಿ ಬದಲಾವಣೆ ತಂದುಕೊಳ್ಳಬೇಕು.
ನಾವು ಅಲೆಮಾರಿ ಕುರಿಗಾರರ ಸಂರಕ್ಷಣೆಗಾಗಿ ಕಾಯ್ದೆಯನ್ನೂ ಜಾರಿಗೆ ತಂದಿದ್ದೇವೆ. ನಾವು ರಾಜ್ಯದ ಹಾಗೂ ಈ ಭಾಗದ ಯುವ ಜನರ ಉದ್ಯೋಗಾವಕಾಶಗಳು ಹೆಚ್ಚಲಿ ಎಂಬ ಕಾರಣದಿಂದ ಹೆಚ್ಚೆಚ್ಚು ಜಿಟಿಟಿಸಿಗಳು, ಪಾಲಿಟೆಕ್ನಿಕ್ ಕಾಲೇಜುಗಳು, ಐಟಿಐಗಳನ್ನು ನೀಡುತ್ತಿದ್ದೇವೆ.
ನಮ್ಮ ಸರ್ಕಾರವು ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮತೋಲನವನ್ನು ಆದ್ಯತೆಯ ಸಂಗತಿಗಳಾಗಿ ಪರಿಗಣಿಸುತ್ತದೆ. ಪ್ರಾದೇಶಿಕ ಸಮತೋಲನ ಸಾಧಿಸಬೇಕಾದರೆ ಅಸಮತೋಲನವನ್ನು ಹೋಗಲಾಡಿಸಬೇಕು. ಅಸಮತೋಲನ ಉಂಟಾಗುವುದಕ್ಕೆ ಕಾರಣಗಳನ್ನು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿದ್ದಾಗ ಮಾತ್ರ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ಕುರಿತು ಚಿಂತನೆಗಳನ್ನು ನಡೆಸಿದೆ ಹಾಗೂ ಅನುಷ್ಠಾನಗಳನ್ನು ಮಾಡಿದೆ ಎಂದು ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧ
ಈ ಬಾರಿ ಅಧಿವೇಶನ ಎರಡನೇ ದಿನದಿಂದಲೇ ಪ್ರಾರಂಭವಾಗಿದೆ. ಈ ಕಾರಣಕ್ಕಾಗಿ ವಿರೋಧ ಪಕ್ಷದವರೂ ಸಹ ಸರ್ಕಾರವನ್ನೂ ಹಾಗೂ ಸಭಾಧ್ಯಕ್ಷರನ್ನು ಅಭಿನಂದಿಸಿದ್ದಾರೆ. ನಾನೂ ಸಹ ಸಭಾಧ್ಯಕ್ಷರನ್ನು ಅಭಿನಂದಿಸುತ್ತೇನೆ. ಇದೊಂದು ದಾಖಲೆ. ಹಿಂದಿನ ವರ್ಷಗಳಲ್ಲಿ ಮೊದಲ ವಾರದಲ್ಲೆ ಚರ್ಚೆ ಮಾಡಿದ ಉದಾಹರಣೆಗಳಿಲ್ಲ. ನಾವು ಈ ಭಾಗದ ಅಭಿವೃದ್ಧಿಗೆ ಬದ್ಧರಾಗಿರುವುದರಿಂದ ಸದಸ್ಯರು ಚರ್ಚೆ ನಡೆಸುವುದಕ್ಕೆ ಹಾಗೂ ಉತ್ತರ ಕೊಡುವುದಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಉತ್ತರ ಕರ್ನಾಟಕ ವಿಷಯಗಳ ಕುರಿತು 39 ಜನ ಜನ ಸದಸ್ಯರು ಭಾಗವಹಿಸಿ 17 ಗಂಟೆಗಳಿಗೂ ಹೆಚ್ಚಿನ ಕಾಲ ಚರ್ಚೆ ಮಾಡಿದ್ದಾರೆ. ಮಾನ್ಯ ವಿರೋಧ ಪಕ್ಷದ ನಾಯಕರು 02 ಗಂಟೆ 55 ನಿಮಿಷ ಮಾತನಾಡಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಸುಮಾರು 7.13 ಗಂಟೆ ಮಾತನಾಡಿದ್ದಾರೆ. ವಿರೋಧ ಪಕ್ಷದವರಲ್ಲಿ ಬಿಜೆಪಿಯವರು 6.49 ಗಂಟೆ, ಜೆಡಿಎಸ್ನವರು 1.56 ಗಂಟೆ ಮಾತನಾಡಿದ್ದಾರೆ. ಬಸವನ ಗೌಡ ಯತ್ನಾಳ್ ಅವರು 1.04 ಗಂಟೆ ಮಾತನಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ಸರ್ಕಾರ ದೀರ್ಘ ಕಾಲದ ಚರ್ಚೆಗೆ ಸಹಕರಿಸಿರುವುದು ಹೆಚ್ಚೆಚ್ಚು ಸಲಹೆಗಳು ಬರಲಿ ಎಂಬ ಕಾರಣದಿಂದ. ವಿರೋಧ ಪಕ್ಷದ ಸದಸ್ಯರು ಸಲಹೆಗಳನ್ನು ನೀಡುವುದಕ್ಕಿಂತ ಆಕ್ಷೇಪಣೆ ಹಾಗೂ ಬೇಡಿಕೆಯ ಭಾಷೆಯಲ್ಲೆ ಮಾತನಾಡಿದರು. ವಿರೋಧ ಪಕ್ಷವೆಂದರೆ ಎಲ್ಲವನ್ನೂ ವಿರೋಧಿಸುವುದಾಗಲಿ, ಆಡಳಿತ ಪಕ್ಷವೆಂದರೆ ಎಲ್ಲವನ್ನೂ ಸಮರ್ಥಿಸುವುದಷ್ಟೆ ಅಲ್ಲ.
ಅನುದಾನಗಳನ್ನು ಒದಗಿಸಿದರೂ ಅಭಿವೃದ್ಧಿಯಾಗದ ಕಾರಣಗಳೇನು? ಚಾರಿತ್ರಿಕ ಸಂಗತಿಗಳೇನಾದರೂ ಇವೆಯೆ? ಹೇಗೆ ಅಭಿವೃದ್ಧಿ ಸಾಧಿಸುವುದು? ಅನುದಾನಗಳಿಂದ ಮಾತ್ರವೇ ಅಭಿವೃದ್ಧಿ ಸಾಧ್ಯವಾಗುತ್ತದೆಯೆ? ಜನರ ಮನಸ್ಥಿತಿಯಲ್ಲಿ ಉಂಟು ಮಾಡಬೇಕಾದ ಬದಲಾವಣೆಗಳೇನು? ಇವೆಲ್ಲ ವಿಚಾರಗಳ ಕುರಿತು ಚರ್ಚಿಸಬೇಕಾಗಿದೆ.
ತಮಗೆಲ್ಲ ಗೊತ್ತಿರುವ ಹಾಗೆ ಹಿಂದಿನ ಯುಪಿಎ ಸರ್ಕಾರ ನಿರ್ಮಲ ಭಾರತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಉದ್ದೇಶಿಸಿತ್ತು. 2013-14 ರ ಬಜೆಟ್ ನಲ್ಲೆ 4260 ಕೋಟಿ ರೂಗಳನ್ನು ಒದಗಿಸಿತ್ತು. 2013 ರ ವೇಳೆಗೆ ಸುಮಾರು ಶೇ.38-40 ರಷ್ಟು ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಮೋದಿಯವರು ನಿರ್ಮಲ್ ಭಾರತ್ ಯೋಜನೆಯನ್ನು ಸ್ವಚ್ಛ ಭಾರತ್ ಮಿಷನ್ ಎಂದು ಬದಲಾಯಿಸಿದರು. 2019-20 ರ ವೇಳೆಗೆ ಶೇ.90 ರಷ್ಟು ಮನೆಗಳಲ್ಲಿ ಶೌಚಾಲಯಗಳು ನಿರ್ಮಾಣವಾದವೆಂದು ವರದಿ ಹೇಳುತ್ತದೆ.
ಈ ವಿಚಾರದ ಕುರಿತು ವಿಶ್ವಬ್ಯಾಂಕು ಆಸಕ್ತಿಯ ಸಂಗತಿಯೊಂದನ್ನು ಅಧ್ಯಯನಗಳ ಮೂಲಕ ಬಹಿರಂಗಗೊಳಿಸಿದೆ. 2021-21 ರಲ್ಲಿ ಶೇ. 90 ರಷ್ಟು ಶೌಚಾಲಯಗಳಿದ್ದರೂ ಸಹ ಶೌಚಾಲಯಗಳನ್ನು ಬಳಸುವವರ ಪ್ರಮಾಣ ಶೇ. 65 ರಷ್ಟು ಮಾತ್ರ. 2018-19 ರಲ್ಲಿ ಶೇ.74 ರಷ್ಟು ಜನ ಶೌಚಾಲಯ ಬಳಸುತ್ತಿದ್ದರೆ 21 ರ ವೇಳೆಗೆ ಶೇ.9 ರಷ್ಟು ಕಡಿಮೆಯಾಯಿತು. ಇದಕ್ಕೆ ಕಾರಣಗಳೇನು?
ನಗರ ಯೋಜನೆಗಾಗಿ ಪ್ರತ್ಯೇಕ ಕಾಲೇಜು: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
ನಮ್ಮ ಜೇವರ್ಗಿ ಕ್ಷೇತ್ರದ ಶಾಸಕರು, ಮಹಿಳೆಯರ ಬಹಿರ್ದೆಸೆಗೆ ಅಡ್ಡ ಗೋಡೆಗಳನ್ನು ನಿರ್ಮಿಸಬೇಕಾಗಿದೆ ಎಂದು ಕೇಳುತ್ತಿದ್ದಾರೆ. ಶೌಚಾಲಯಗಳಿದ್ದಾವಲ್ಲ ಅಂದೆ ನಾನು. ಜನ ಬಳಸುವುದಿಲ್ಲ ಸಾರ್ ಎನ್ನುತ್ತಿದ್ದಾರೆ. ಇದಕ್ಕೆ ಏನು ಹೇಳುವುದು. ಸರ್ಕಾರ ಅನುದಾನ ನೀಡಿ ಶೌಚಾಲಯ ಕಟ್ಟಿಸಿದೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ನಲ್ಲಿಗಳನ್ನು ಅಳವಡಿಸಿ ನೀರನ್ನೂ ಸರಬರಾಜು ಮಾಡಲಾಗುತ್ತಿದೆ. ಆದರೂ ಜನ ಬಳಸುವುದಿಲ್ಲ ಎನ್ನುತ್ತಾರೆ. ಹೇಗೆ ಈ ಸಮಸ್ಯೆಯನ್ನು ಸರಿ ಪಡಿಸುವುದು? ಇವೆಲ್ಲ ಸರಳವಾದ ಸಂಗತಿಗಳಲ್ಲ. ಇವಕ್ಕೆ ಪರಿಹಾರಗಳನ್ನು ನಾವುಗಳು ಹುಡುಕಬೇಕಾಗಿದೆ. ಬಾಲ್ಯ ವಿವಾಹ ಮಾಡಬಾರದು. ಮಾಡಿದರೆ ಕಠಿಣ ಶಿಕ್ಷೆಗಳಿವೆ ಎಂಬ ಕಾನೂನುಗಳಿವೆ. ಆದರೆ ಇಡೀ ಆಡಳಿತಾಂಗದ ಕಣ್ಣು ತಪ್ಪಿಸಿ ಮದುವೆ ಮಾಡಿ ಬಿಡುತ್ತಾರೆ. ಇದರಿಂದ ಬಾಲ ಗರ್ಭಿಣಿಯರಾಗುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಾಲ ಗರ್ಭಿಣಿಯರ ಹೊಟ್ಟೆಯಲ್ಲಿ ಹುಟ್ಟುವ ಕೂಸುಗಳು ಅಪೌಷ್ಟಿಕತೆಯ ಸಮಸ್ಯೆಯನ್ನು ಎದುರಿಸುತ್ತವೆ. ಜನರಿಗೆ ಎಲ್ಲ ತಿಳುವಳಿಕೆ ಇದ್ದೂ ಈ ರೀತಿ ಮಾಡುತ್ತಾರೆ. ಆದ್ದರಿಂದಲೆ ನಾನು ಪ್ರತಿ ಬಾರಿ ಡಿಸಿ ಸಿಇಓ ಸಭೆ ಮಾಡಿದಾಗಲೂ ನಾನು ಈ ವಿಚಾರವನ್ನು ಪ್ರಸ್ತಾಪಿಸಿ ಕಠಿಣವಾಗಿ ತಡೆಗಟ್ಟಿ ಎಂದು ಹೇಳುತ್ತಲೇ ಇದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.