Belagavi Sugarcane farmers Protest: ಕಾಳ್ಗಿಚ್ಚಾದ ಕಬ್ಬು ಬೆಳೆಗಾರರ ಪ್ರತಿಭಟನೆ, ನ.7ರಂದು ಬೆಳಗಾವಿಯಲ್ಲಿ ಹೆದ್ದಾರಿ ಬಂದ್
Sugarcane farmers Protest: ಕಬ್ಬು ಬೆಳೆಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆರಂಭವಾಗಿರುವ ಕಬ್ಬು ಬೆಳೆಗಾರರ ಪ್ರತಿಭಟನೆ, ಇದೀಗ ಇಡೀ ಉತ್ತರ ಕರ್ನಾಟಕದ ರೈತರ ಬೃಹತ್ ಚಳವಳಿಯಾಗಿ ಪರಿವರ್ತನೆಯಾಗಿದೆ. ರೈತರ ಅಹೋರಾತ್ರಿ ಧರಣಿಗೆ ಮಂಗಳವಾರ ಬಿಜೆಪಿಯೂ ಕೈಜೋಡಿಸಿದೆ. ಪ್ರತಿ ಟನ್ ಕಬ್ಬಿಗೆ 3,500 ರೂ.ಕನಿಷ್ಠ ಬೆಂಬಲ ದರ ನೀಡಬೇಕೆಂಬ ಬೇಡಿಕೆಗೆ ದಿನೇದಿನೆ ಬಲ ಬರುತ್ತಿದ್ದು, ಸಕ್ಕರೆ ಕಾರ್ಖಾನೆಗಳು ನೀಡುತ್ತಿರುವ 3,200 ರೂ.ಬೆಲೆಗೆ ಕಬ್ಬು ಪೂರೈಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಅಹೋರಾತ್ರಿ ಧರಣಿ ಸತ್ಯಾಗ್ರಹ 6ನೇ ದಿನ ಮತ್ತಷ್ಟು ತೀವ್ರಗೊಂಡಿದ್ದು, ಸಹಸ್ರಾರು ರೈತರು ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ಸರಕಾರದ ವಿರುದ್ಧ ಕಹಳೆ ಊದಿದ್ದಾರೆ.
ಕಬ್ಬಿಗೆ ಬೆಂಬಲ ಬೆಲೆ ಆಗ್ರಹಿಸಿ ಅಥಣಿಯಲ್ಲಿ ರೈತರ ಅರೆಬೆತ್ತಲೆ ಪ್ರತಿಭಟನೆ -
ಹರೀಶ್ ಕೇರ
Nov 5, 2025 8:59 AM
ಬೆಳಗಾವಿ, ನ. 04: ರಾಜ್ಯದ ಕಬ್ಬು ಬೆಳೆಗಾರರು (Sugarcane Farmers) ಸಿಡಿದೆದ್ದಿದ್ದಾರೆ. ತಾವು ಬೆಳೆದ ಪ್ರತಿ ಟನ್ ಕಬ್ಬಿಗೆ 3500 ರೂ. ಕೊಡುವಂತೆ ಆಗ್ರಹಿಸಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವೆಡೆ ಬೀದಿಗೆ ಇಳಿದಿದ್ದಾರೆ. ಈಗಾಗಲೇ ಇಂದು ರೈತರು ಸರ್ಕಾರಕ್ಕೆ ಕೊಟ್ಟ ಡೆಡ್ಲೈನ್ ಸಹ ಮುಗಿದಿದ್ದು, ಪಂಜಾಬ್ ಮಾದರಿಯ ಹೋರಾಟಕ್ಕೂ ಮುಂದಾಗಿದ್ದಾರೆ. ಹೀಗಾಗಿ ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್ಗೆ (highway Bandh) ಕರೆ ನೀಡಿದ್ದಾರೆ.
ಈ ಕುರಿತಾಗಿ ಗುರ್ಲಾಪುರ ಕ್ರಾಸ್ನಲ್ಲಿ ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಪ್ರತಿಕ್ರಿಯಿಸಿದ್ದು, ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ ನಾಲ್ಕು ಬಂದ್ಗೆ ನಿರ್ಧರಿಸಲಾಗಿದೆ. ಬೆಂಗಳೂರು ಪುಣೆ ಹೆದ್ದಾರಿಗುಂಟ, ಜಿಲ್ಲೆ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮಂಡ್ಯ, ಮೈಸೂರು, ಶಿವಮೊಗ್ಗ, ಹಾವೇರಿ, ಧಾರವಾಡದಲ್ಲಿ ಧರಣಿ ಮಾಡಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡಕ್ಕೂ ರೈತರು ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ ಇದ್ದ ಹಳೇ ರಿಕವರಿ ಮಾದರಿಯಲ್ಲಿ ಕಬ್ಬು ಖರೀದಿಸಲು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Laxmi Hebbalkar: ನಾವು ಕೂಡ ರೈತರು; ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗದಂತೆ ಕ್ರಮ ಎಂದ ಹೆಬ್ಬಾಳ್ಕರ್
ಪ್ರತಿ ಟನ್ ಕಬ್ಬಿಗೆ ಕೇಂದ್ರ, ರಾಜ್ಯ ತಲಾ 5 ಸಾವಿರ ರೂ ತೆರಿಗೆ ತೆಗೆದುಕೊಳ್ಳುತ್ತೆ. ರಾಜ್ಯ, ಕೇಂದ್ರ ಸರ್ಕಾರ ತಲಾ ಒಂದು ಸಾವಿರ ರೂ ತೆರಿಗೆ ಹಣ ರೈತರಿಗೆ ನೀಡಲಿ. ಸಕ್ಕರೆ ಕಾರ್ಖಾನೆಯಿಂದ 3,500, ಕೇಂದ್ರ, ರಾಜ್ಯದಿಂದ 2 ಸಾವಿರ ರೂ.ನಂತೆ. ಆ ಮೂಲಕ ಪ್ರತಿ ಟನ್ ಕಬ್ಬಿಗೆ 5500 ರೂ. ನೀಡಬೇಕೆಂದು ಮತ್ತೊಂದು ಡಿಮ್ಯಾಂಡ್ ಮಾಡಿದ್ದಾರೆ.
ರಾಜ್ಯ ಸರ್ಕಾರದ ಪಾತ್ರ ಕಡಿಮೆ: ಸಚಿವ ಶಿವಾನಂದ ಪಾಟೀಲ್
ಇನ್ನು ಈ ವಿಚಾರವಾಗಿ ವಿಜಯಪುರದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದು, ಕೇಂದ್ರ ಸಚಿವ ಅಮಿತ್ ಶಾಗೆ ಮುರುಗೇಶ್ ನಿರಾಣಿ ಪತ್ರ ಬರೆದಿದ್ದಾರೆ. ಸಕ್ಕರೆ ರಫ್ತಾಗುತ್ತಿಲ್ಲ, ಎಥೆನಾಲ್ ಪ್ರೊಡಕ್ಷನ್ ಕಡಿಮೆ ಮಾಡಿದ್ದಾರೆ. ಸರ್ಕಾರ ಕಾರ್ಖಾನೆಗಳು ರೈತರಿಗೆ ಹೆಚ್ಚಿಗೆ ಹಣ ಕೊಡಲು ಕಷ್ಟವಾಗುತ್ತಿದೆ. ಸಕ್ಕರೆ ದರ ಹೆಚ್ಚಳ ಮಾಡುವಂತೆ ಪತ್ರದಲ್ಲಿ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ ಎಂದರು.
ಇದನ್ನೂ ಓದಿ: BY Vijayendra: ಕಬ್ಬು ಬೆಳೆಗಾರರಿಗೆ ನ್ಯಾಯಯುತ ದರ ನಿಗದಿ ಮಾಡಿ: ಬಿ.ವೈ. ವಿಜಯೇಂದ್ರ ಆಗ್ರಹ
ರೈತರು ಎಷ್ಟುಬೇಕಾದರೂ ಬೈಯಲಿ ತಪ್ಪಿಲ್ಲ. ತಪ್ಪು ಕಲ್ಪನೆಯಿಂದ ಬೆಳಗಾವಿ ಜಿಲ್ಲೆಯ ರೈತರಲ್ಲಿ ಗೊಂದಲವಾಗಿದೆ. ಕಬ್ಬು ಬೆಳೆಗಾರರ ಹೋರಾಟದಲ್ಲಿ ವಿಜಯೇಂದ್ರ ಭಾಗಿಯಾಗಿದ್ದು ತಪ್ಪಲ್ಲ. ವಿಜಯೇಂದ್ರ, ನಾವು ಒಟ್ಟಾಗಿ ಕೇಂದ್ರದ ಬಳಿ ಹೋಗಿ ಚರ್ಚೆ ಮಾಡೋಣ. ರೈತರ ಪ್ರತಿಭಟನಾ ಸ್ಥಳಕ್ಕೆ ನಾನು ಬೇಕಾದರೂ ಹೋಗುತ್ತೇನೆ. ಕೇಂದ್ರ ಸರ್ಕಾರದ ಮಾರ್ಗದರ್ಶನದೊಂದಿಗೆ ನಡೆದುಕೊಳ್ಳುತ್ತಿದೆ. ಕಬ್ಬಿಗೆ ದರ ನಿಗದಿಯಲ್ಲಿ ರಾಜ್ಯ ಸರ್ಕಾರದ ಪಾತ್ರ ಕಡಿಮೆಯಿದೆ ಎಂದಿದ್ದಾರೆ.
ಇನ್ನು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ರೈತರ ಪ್ರತಿಭಟನೆ ಮುಂದುವರಿದ್ದು, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆ ಸಚಿವರಿಗೆ ಭಾವಪೂರ್ವಕ ಶ್ರದ್ಧಾಂಜಲಿ ಅಂತಾ ಬ್ಯಾನರ್ ಹಿಡಿದು ಧರಣಿ ಮಾಡಿದ್ದು, ಬಳಿಕ ಫೋಟೋ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬಿನ ಬೆಲೆ ನಿಗದಿ ಆಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.