Development Journalism: ವಿಶೇಷ ಗ್ರಾಮೀಣ ವರದಿಗಳು ರಾಜ್ಯಮಟ್ಟದ ಚಿಂತನೆಗೆ ಪೂರಕ: ರವಿ ಹೆಗಡೆ
Bengaluru News: ಪತ್ರಿಕೋದ್ಯಮವನ್ನು ನಾವು ಅವಸರದ ಸಾಹಿತ್ಯ ಎಂದೇ ಪರಿಗಣಿಸಿದ್ದೇವೆ, ಆದರೆ ಪತ್ರಿಕೆಯ ವಿಶೇಷ ವರದಿಗಳು ಅಂತ್ಯವಲ್ಲದ ಸಾಹಿತ್ಯ ಎಂದು ಅವರು ಹೇಳಿದರು. ಇಂದಿನ ಪತ್ರಿಕೋದ್ಯಮವು ಬದಲಾವಣೆಯ ತಂತ್ರಜ್ಞಾನಕ್ಕೆ ತಕ್ಕಂತೆ ವೇಗವಾಗಿ ಸಾಗುತ್ತಿದೆ. ಹಾಗಾಗಿ ಪತ್ರಕರ್ತರೆಲ್ಲರೂ ವೇಗದ ಆ ಬೆಳವಣಿಗೆಗೆ ತಕ್ಕಂತೆ ವೃತ್ತಿಯಲ್ಲಿ ಹೊಂದಿಕೊಳ್ಳುವ ಅಗತ್ಯವಿದೆ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದ್ದಾರೆ.


ಬೆಂಗಳೂರು: ಸುದ್ದಿ ಗುರುತಿಸುವ ಚಾಕಚಕ್ಯತೆ ವರದಿಗಾರರಲ್ಲಿದ್ದಾಗ ಗ್ರಾಮೀಣ ಪರಿಸರದ ವಿಶೇಷ ವರದಿಗಳು (Development Journalism) ಕೂಡ ಹಲವಾರು ಬಾರಿ ರಾಜ್ಯಮಟ್ಟದ ಚಿಂತನೆಗೆ ಪೂರಕವಾಗುತ್ತದೆ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟರು. ನಗರದಲ್ಲಿ (Bengaluru News) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ) ಆಶ್ರಯದಲ್ಲಿ ನಡೆದ ಪತ್ರಕರ್ತ ಭೀಮಣ್ಣ ಗಜಾಪುರ ಅವರು ರಚಿಸಿದ 'ಕೂಡ್ಲಿಗಿ ವಿಸ್ಮಯ-ಅಭಿವೃದ್ಧಿ ಪತ್ರಿಕೋದ್ಯಮʼ ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪರ್ತಕರ್ತರೂ ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಇವತ್ತಿನ ಕಾಲಘಟ್ಟಕ್ಕೆ ತಮ್ಮ ಬುದ್ದಿಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದರು.
ಪತ್ರಿಕೋದ್ಯಮವನ್ನು ನಾವು ಅವಸರದ ಸಾಹಿತ್ಯ ಎಂದೇ ಪರಿಗಣಿಸಿದ್ದೇವೆ, ಆದರೆ ಪತ್ರಿಕೆಯ ವಿಶೇಷ ವರದಿಗಳು ಅಂತ್ಯವಲ್ಲದ ಸಾಹಿತ್ಯ ಎಂದು ಅವರು ಹೇಳಿದರು. ಇಂದಿನ ಪತ್ರಿಕೋದ್ಯಮವು ಬದಲಾವಣೆಯ ತಂತ್ರಜ್ಞಾನಕ್ಕೆ ತಕ್ಕಂತೆ ವೇಗವಾಗಿ ಸಾಗುತ್ತಿದೆ. ಹಾಗಾಗಿ ಪತ್ರಕರ್ತರೆಲ್ಲರೂ ವೇಗದ ಆ ಬೆಳವಣಿಗೆಗೆ ತಕ್ಕಂತೆ ವೃತ್ತಿಯಲ್ಲಿ ಹೊಂದಿಕೊಳ್ಳುವ ಅಗತ್ಯವಿದೆ ಎಂದರು.
ಗ್ರಾಮೀಣ ಮಟ್ಟದ ಪತ್ರಕರ್ತರ ಸಾಮಥ್ಯ೯ವನ್ನು ಗುರುತಿಸಿ ಮುನ್ನೆಲೆಗೆ ತರುತ್ತಿರುವ ನಿಟ್ಟಿನಲ್ಲಿ ಶಿವಾನಂದ ತಗಡೂರು ಅವರ ನೇತೃತ್ವದ ಕೆ.ಯೂ.ಡಬ್ಲ್ಯೂ.ಜೆ ತಂಡ ಮಾಡುತ್ತಿರುವ ಕಾರ್ಯವು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಗ್ರಾಮೀಣ ಸಮಸ್ಯೆಗಳಿಗೆ ಕನ್ನಡಿಯಂತಿರುವ ವಿಶೇಷ ವರದಿಗಾರಿಕೆ ಕೂಡಾ ಇಂದು ಪತ್ರಿಕೋದ್ಯಮಕ್ಕೆ ಅತ್ಯಗತ್ಯ. ಸುದ್ದಿಯ ವಿವಿಧ ಆಯಾಮಗಳನ್ನು ಕಂಡುಕೊಳ್ಳುವಲ್ಲಿ ಭೀಮಣ್ಣ ಗಜಾಪುರ ಅವರು ನಿಜಕ್ಕೂ ನಿಷ್ಣಾತರು ಎಂಬುದನ್ನು ಅವರ ಈ ಕೃತಿ ತಿಳಿಸಿಕೊಡುತ್ತದೆ ಎಂದರು.
ಭಾರತೀಯ ಕಾರ್ಯನಿರತ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಕರ್ತರಲ್ಲಿ ವಿಷಯಗಳಿಗೆ ಪೂರಕವಾಗಿ ಅಧ್ಯಯನಶೀಲತೆ ಹೆಚ್ಚಾದ್ದಲ್ಲಿ ಮಾತ್ರ ವೃತ್ತಿಯಲ್ಲಿ ಯಶಸ್ಸು ಸಾಧ್ಯ ಎಂದರು.
ಕೃತಿಯ ಕರ್ತೃ ಭೀಮಣ್ಣ ಗಜಾಪುರ ಮಾತನಾಡಿದರು. ಇದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಯೂಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಕಾರ್ಯದರ್ಶಿ ಮತ್ತೀಕೆರೆ ಜಯರಾಮ, ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ಭಾಗವಹಿಸಿದ್ದರು.
ಈ ಸುದ್ದಿಯನ್ನೂ ಓದಿ | BRBNMPL Recruitment 2025: ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ನಲ್ಲಿದೆ 88 ಹುದ್ದೆ; ಐಟಿಐ ಪಾಸಾದವರು ಅಪ್ಲೈ ಮಾಡಿ
ಅಗಲಿದ ಪತ್ರಕರ್ತರಿಗೆ ಶ್ರದ್ದಾಂಜಲಿ
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ಮೈಸೂರುಮಿತ್ರ ಸಂಪಾದಕ ಗಣಪತಿ, ಅರಸೀಕೆರೆಯ ಕನ್ನಡಪ್ರಭ ವರದಿಗಾರ ಶಾಂತಕುಮಾರ್ ಸೇರಿದಂತೆ ಹಲವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ಶ್ರದ್ದಾಂಜಲಿ ಸಲ್ಲಿಸಲಾಯಿತು.