ಇಂದಿನಿಂದ ಬೆಂಗಳೂರಿನಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ
2nd Ayurveda World Summit: ಡಿಸೆಂಬರ್ 25ರಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಐತಿಹಾಸಿಕ ಆಯುರ್ವೇದ ವಿಶ್ವ ಸಮ್ಮೇಳನ ನಡೆಯಲಿದೆ. ದಕ್ಷಿಣ ಭಾರತದ ಏಳು ರಾಜ್ಯಗಳನ್ನು ಸಂಚರಿಸಿ ಬಂದಿರುವ ಧನ್ವಂತರಿ ಜ್ಯೋತಿಯನ್ನು ಬೆಳಗುವುದರ ಮೂಲಕ ಐತಿಹಾಸಿಕ ವಿಶ್ವ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ. -
ಬೆಂಗಳೂರು, ಡಿ. 25: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಐತಿಹಾಸಿಕ ಆಯುರ್ವೇದ ವಿಶ್ವ ಸಮ್ಮೇಳನ (2nd Ayurveda World Summit) ನಡೆಯಲಿದ್ದು, ರಾಜ್ಯ ರಾಜಧಾನಿಯಲ್ಲಿ ಪ್ರಾಚೀನ ಆಯುರ್ವೇದದ ಭವ್ಯಲೋಕ ಅನಾವರಣಗೊಳ್ಳಲಿದೆ. ದಕ್ಷಿಣ ಭಾರತದ ಏಳು ರಾಜ್ಯಗಳನ್ನು ಸಂಚರಿಸಿ ಬಂದಿರುವ ಧನ್ವಂತರಿ ಜ್ಯೋತಿಯನ್ನು ಬೆಳಗುವುದರ ಮೂಲಕ ಐತಿಹಾಸಿಕ ವಿಶ್ವ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ, ಬಿಹಾರದ ಶ್ರೀ ಸ್ವಾಮಿ ವೆಂಕಟೇಶ ಪ್ರಪನ್ನಾಚಾರ್ಯ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಲಿದ್ದು, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಶಿವರಾಜ್ ಪಾಟೀಲ್, ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸಿ.ಟಿ. ರವಿ, ಹಿರಿಯ ಪತ್ರಕರ್ತ ರವಿ ಹೆಗಡೆ, ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ, ಕೇಂದ್ರ ಆಯುಷ್ ಮಂತ್ರಾಲಯದ ಸಲಹೆಗಾರ ಡಾ. ಕೌಸ್ತುಭ ಉಪಾಧ್ಯಾಯ, ಹಿಮಾಲಯ ಕಂಪನಿಯ ಸಿ.ಎಫ್.ಒ. ಜಯಶ್ರೀ ಉಳ್ಳಾಲ್ ಉಪಸ್ಥಿತರಿರಲಿದ್ದಾರೆ.
ಅಮೆರಿಕದ ಆಯುರ್ವೇದ ತಜ್ಞೆ ಡಾ. ಭಾಸ್ವತಿ ಭಟ್ಟಾಚಾರ್ಯ ದಿಕ್ಸೂಚಿ ಭಾಷಣ ಮಾಡಲಿದ್ದು, ಶತಾವಧಾನಿ ಆರ್. ಗಣೇಶ್, ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಎಂ. ಪ್ರಸಾದ್, ಲಂಡನ್ನ ಆಯುರ್ವೇದ ತಜ್ಞ ಡಾ. ವಿಜಯ್ ಮೂರ್ತಿ ಸೂರ್ತಿಯ ನುಡಿಗಳನ್ನು ಆಡಲಿದ್ದಾರೆ. ದೆಹಲಿಯ AIIA ನಿರ್ದೇಶಕ ಪ್ರೊಫೆಸರ್ ಪ್ರದೀಪ್ ಕುಮಾರ್ ಪ್ರಜಾಪತಿ, WHOನ ಡಾ. ಪವನ್ ಕುಮಾರ್ ಆಯುರ್ವೇದ ಜಾಗೃತಿಯ ಸಂದೇಶವನ್ನು ನೀಡಲಿದ್ದಾರೆ.
100 ಆಯುರ್ವೇದ ಸಾಧಕರಿಗೆ 'ಆಯುರ್ವೇದ ವಿಶ್ವ ರತ್ನ' ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಡಾ. ಗುರುರಾಜ ಕರ್ಜಗಿ ಸೇರಿದಂತೆ ಗಣ್ಯರು ಈ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಿದ್ದಾರೆ. ಸಂಜೆ ಆಳ್ವಾಸ್ ಸಾಂಸ್ಕೃತಿಕ ಸಂಭ್ರಮದಲ್ಲಿ 350 ವಿದ್ಯಾರ್ಥಿಗಳು ವಿಶಿಷ್ಟ ರೂಪಕವನ್ನು ಪ್ರದರ್ಶಿಸಲಿದ್ದು, ಆಯುರ್ವೇದ ಲೇಸರ್ ಬೀಮ್ ಶೋ ನಡೆಯಲಿದೆ.
ಚರಕ ಸಭಾದಲ್ಲಿ ದೇಶ ವಿದೇಶಗಳ ಹಲವಾರು ಆಯುರ್ವೇದ ತಜ್ಞರು ವೈಜ್ಞಾನಿಕ ಪ್ರಬಂಧ ಮಂಡನೆಯನ್ನು ಮಾಡಲಿದ್ದಾರೆ. ವಿಶ್ವದ ನಾನಾ ಭಾಗಗಳ 6,000+ ಪ್ರತಿನಿಧಿಗಳು ಈಗಾಗಲೇ ರಾಜಧಾನಿಗೆ ಆಗಮಿಸುತ್ತಿದ್ದು, ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ವಸ್ತು ಪ್ರದರ್ಶನ, ಧನ್ವಂತರಿ ರಥೋತ್ಸವ, ಆಯುರ್ವೇದ ಆಹಾರ ಪ್ರದರ್ಶನಿ, ಆಯುರ್ವೇದ ಪಾಕೋತ್ಸವ, ಮೆಗಾ ಆಯುರ್ವೇದ ಎಕ್ಸ್ಪೋ, ಔಷಧೀಯ ಸಸ್ಯಗಳ ಉಚಿತ ವಿತರಣೆ, ಸ್ವದೇಶಿ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ವಿಶಿಷ್ಟವಾದ ಆಯುರ್ವೇದ ಲೋಕವನ್ನು ನಾಡಿನ ಜನತೆಗೆ ತೆರೆದಿಡಲಿವೆ.
ಸಮಾನ ಗೌರವ ಸಂಮ್ಮಾನ
ವಿವಿಧ ವೈದ್ಯಕೀಯ ಪದ್ಧತಿಗಳಲ್ಲಿ ವಿಶೇಷ ಸಾಧನೆ ಮಾಡಿದ ಡಾ. ಸಿ.ಎನ್. ಮಂಜುನಾಥ್, ಡಾ. ಬಿ.ಟಿ. ರುದ್ರೇಶ್, ಡಾ. ಜಿ. ಸೆಂಥೆವಿಲ್, ಡಾ. ವೆಂಕಟರಮಣ ಹೆಗಡೆ, ಡಾ. ಡೂರ್ಜಿ ರಪೆನ್ಟೆನ್ ನೆಶಾರ್, ಡಾ. ಮಂಜುಲಾ ಎಸ್. ಇವರಿಗೆ ಸಮಾನ ಗೌರವ ಸಂಮ್ಮಾನವನ್ನು ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.