Ebola outbreak: ಎಬೋಲಾ ವೈರಸ್ ಆತಂಕ ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್; ಮಾರ್ಗಸೂಚಿ ಪ್ರಕಟ
ಆಫ್ರಿಕಾದಲ್ಲಿ ಎಬೋಲಾ ಪ್ರಕರಣಗಳು ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಪ್ರಯಾಣ ಮುಗಿಸಿ ಬಂದ 21 ದಿನಗಳ ಒಳಗೆ ಎಬೋಲಾ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಮತ್ತು ನೀವು ವಿದೇಶದಿಂದ ಬಂದಿರುವ ವಿಷಯವನ್ನು ಅವರಿಗೆ ತಪ್ಪದೇ ತಿಳಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಆಫ್ರಿಕಾದಲ್ಲಿ ಎಬೋಲಾ ವೈರಸ್ (Ebola Disease) ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯು ಮಾರ್ಗಸೂಚಿ ಹೊರಡಿಸಿದೆ. ಭಾರತದಲ್ಲಿ ಇದುವರೆಗೆ ಎಬೋಲಾ ಪ್ರಕರಣ ಪತ್ತೆಯಾಗದಿದ್ದರೂ ಸೋಂಕು ಹರಡುವುದನ್ನು ತಡೆಯುವ ದೃಷ್ಟಿಯಿಂದ ಮುಂಜಾಗ್ರತೆ ವಹಿಸಲು ಸೂಚಿಸಲಾಗಿಎ.
ಎಬೋಲಾ ರೋಗದ ಲಕ್ಷಣಗಳಿರುವ ಅಥವಾ ರೋಗ ಬಂದಿರುವ ವ್ಯಕ್ತಿಯ ರಕ್ತ ಹಾಗೂ ದೇಹದ ಯಾವುದೇ ದ್ರವದೊಂದಿಗೆ (ಬೆವರು, ಲಾಲಾರಸ ಇತ್ಯಾದಿ) ನೇರ ಸಂಪರ್ಕಕ್ಕೆ ಬಂದಿರುವ ಪ್ರಯಾಣಿಕರು, ಇಮಿಗ್ರೇಷನ್ ಕ್ಲಿಯರೆನ್ಸ್ಗೆ ಮುನ್ನವೇ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳನ್ನು ಅಥವಾ ಹೆಲ್ತ್ ಡೆಸ್ಕ್ ಅನ್ನು ಭೇಟಿ ಮಾಡಿ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಪ್ರಮುಖ ಸೂಚನೆ
ವಿದೇಶ ಪ್ರಯಾಣ ಮುಗಿಸಿ ಬಂದ 21 ದಿನಗಳ ಒಳಗೆ ಎಬೋಲಾ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಮತ್ತು ನೀವು ವಿದೇಶದಿಂದ ಬಂದಿರುವ ವಿಷಯವನ್ನು ಅವರಿಗೆ ತಪ್ಪದೇ ತಿಳಿಸಬೇಕು.
ಪ್ರಯಾಣಿಕರ ಸುರಕ್ಷತೆ ಮತ್ತು ಅಂತರಾಷ್ಟ್ರೀಯ ಆರೋಗ್ಯ ನಿಯಮಗಳ ಪ್ರಕಾರ ವಿಮಾನ ನಿಲ್ದಾಣದಲ್ಲಿ ಡಿಆರ್ ಕಾಂಗೋ, ಉಗಾಂಡಾ ಹಾಗೂ ದಕ್ಷಿಣ ಸುಡಾನ್ ದೇಶಗಳಿಂದ ಬರುವ ಪ್ರಯಾಣಿಕರು, ಆರೋಗ್ಯ ತಪಾಸಣೆಗೆ ಸಹಕರಿಸಬೇಕು.
ಎಬೋಲಾ ಲಕ್ಷಣಗಳು:
ಜ್ವರ, ಅತಿಯಾದ ಸುಸ್ತು ಅಥವಾ ಆಯಾಸ, ತಲೆನೋವು, ಮೈಕೈ ನೋವು, ವಾಂತಿ, ಭೇದಿ, ಇದ್ದಕ್ಕಿದ್ದಂತೆ ರಕ್ತಸ್ರಾವವಾಗುವುದು, ಗಂಟಲು ಕೆರೆತ/ಗಂಟಲು ನೋವು.
ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿಕಿತ್ಸೆಗೆ ವ್ಯವಸ್ಥೆ
ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರವು ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿಶೇಷ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ಯನ್ನು ಐಸೋಲೇಷನ್ ಕೇಂದ್ರವಾಗಿ ಮತ್ತು ಎಪಿಡೆಮಿಕ್ ಡಿಸೀಸ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವಾಗಿ ನಿಗದಿಪಡಿಸಲಾಗಿದೆ. ಅದೇ ರೀತಿ ಮಂಗಳೂರಿನ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಇನ್ನು ಶಂಕಾಸ್ಪದ ಪ್ರಕರಣಗಳ ಮಾದರಿಗಳನ್ನು ಬೆಂಗಳೂರಿನ ಎನ್.ಐ.ವಿ ಮೂಲಕ ಪುಣೆಯ ಮುಖ್ಯ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಲು ಕ್ರಮ ವಹಿಸಲಾಗಿದೆ.