Operation sindoor: ಆಪರೇಷನ್ ಸಿಂದೂರ್ ಬಗ್ಗೆ ನಾಲಿಗೆ ಹರಿಬಿಟ್ಟ ಶಾಸಕ ಕೊತ್ತೂರು ಮಂಜುನಾಥ್ರನ್ನು ಕಾಂಗ್ರೆಸ್ನಿಂದ ವಜಾ ಮಾಡಿ: ಟಿ.ಎ. ಶರವಣ ಆಗ್ರಹ
Operation sindoor: ಸೈನಿಕರನ್ನು ಹೊತ್ತ ನಾಲ್ಕು ವಿಮಾನ ಹೋಗಿ ಬಾಂಬ್ ಹಾಕಿ ಬಂದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಹೇಗಾಗುತ್ತೆ? ಎಂದು ಕೇಳಿರುವ ಮಂಜುನಾಥ್ ನಿಲುವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತದೆಯೇ? ಇದು ಕಾಂಗ್ರೆಸ್ ಪಕ್ಷದ ನಿಲುವಾಗಿದೆಯೇ? ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ನಾಯಕ ಟಿ.ಎ. ಶರವಣ ಪ್ರಶ್ನಿಸಿದ್ದಾರೆ.


ಬೆಂಗಳೂರು: ದೇಶದ ಸ್ವಾಭಿಮಾನ, ಘನತೆ ಮತ್ತು ಸಾರ್ವಭೌಮತೆಯ ಸಂಕೇತವಾದ ಆಪರೇಷನ್ ಸಿಂದೂರ್ (Operation sindoor) ಕಾರ್ಯಾಚರಣೆ ಬಗ್ಗೆ ಸ್ವಲ್ಪವೂ ಗೌರವ ಇಲ್ಲದೆ ನಾಲಿಗೆ ಹರಿಬಿಟ್ಟಿರುವ ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಅವರನ್ನು ಕಾಂಗ್ರೆಸ್, ತಕ್ಷಣ ಪಕ್ಷದಿಂದ ವಜಾ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ನಾಯಕ ಟಿ.ಎ. ಶರವಣ (T.A. Sharavana) ಆಗ್ರಹಿಸಿದ್ದಾರೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ಭಾರತೀಯ ಮಹಿಳೆಯರ ಕುಂಕುಮ ಅಳಿಸಿದ ಉಗ್ರರ ರಾಕ್ಷಸೀ ಕೃತ್ಯಕ್ಕೆ ತಕ್ಕ ಎದುರೇಟು ನೀಡಲು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಲಾಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಅಂಥದ್ದರಲ್ಲಿ ಈ ಶಾಸಕರು ಸ್ವಲ್ಪವೂ ಮಾನವೀಯತೆಯೇ ಇಲ್ಲದೆ ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟಿದ್ದಾರೆ. ಈ ಕಾಂಗ್ರೆಸ್ ಶಾಸಕರಿಗೆ ಮಾನ ಮರ್ಯಾದೆ ಇದೆಯೇ ಎಂದು ಶರವಣ ಕೆಂಡ ಕಾರಿದ್ದಾರೆ.
ಸೈನಿಕರನ್ನು ಹೊತ್ತ ನಾಲ್ಕು ವಿಮಾನ ಹೋಗಿ ಬಾಂಬ್ ಹಾಕಿ ಬಂದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಹೇಗಾಗುತ್ತೆ? ಎಂದು ಕೇಳಿರುವ ಮಂಜುನಾಥ್ ನಿಲುವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತದೆಯೇ? ಇದು ಕಾಂಗ್ರೆಸ್ ಪಕ್ಷದ ನಿಲುವಾಗಿದೆಯೇ?ಎಂದು ಶರವಣ ಪ್ರಶ್ನಿಸಿದ್ದಾರೆ.
ಉಗ್ರರ ಪೈಶಾಚಿಕ ಕೃತ್ಯದಿಂದ ತಮ್ಮ ಪತಿ, ಅಪ್ಪ, ಇಲ್ಲವೇ ಸಹೋದರರನ್ನು ಕಳೆದುಕೊಂಡ ಕುಟುಂಬಗಳ ನೋವು ಈ ಶಾಸಕರಿಗೆ ಗೊತ್ತಾ? ಅಮೂಲ್ಯ ಜೀವಗಳನ್ನು ಈ ಶಾಸಕ ತಂದುಕೊಡುತ್ತಾರಾ? ಕಾಂಗ್ರೆಸ್ ಪಕ್ಷ ಈ ಬಗ್ಗೆ ಏನು ಹೇಳುತ್ತೆ? ಎಂದು ಶರವಣ ಪ್ರಶ್ನಿಸಿದ್ದಾರೆ.
ಕರಾವಳಿಯಲ್ಲಿ ನಡೆಯುತ್ತಿರುವ ಹಿಂಸಾಚಾರ, ಸರಣಿ ಕೊಲೆಗಳನ್ನು ನೋಡಿದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ತಾಕತ್ತು ಈ ಸರಕಾರಕ್ಕೆ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಇಲ್ಲೇ ಗುಪ್ತಚರ ಇಲಾಖೆ ವಿಫಲವಾಗಿದೆ. ಅಂಥದ್ದರಲ್ಲಿ ಈ ಕಾಂಗ್ರೆಸ್ ಶಾಸಕರು ಸೇನೆಯ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ? ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ | Operation Sindoor: ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನ ಬಳಸುತ್ತಿದ್ದ ಚೀನಾದ ವಾಯು ರಕ್ಷಣಾ ವ್ಯವಸ್ಥೆ ಜಾಮ್
ಸೈನಿಕರಿಗೆ ಅಪಮಾನ ಮಾಡಿರುವ, ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಗೇಲಿ ಮಾಡಿರುವ ಈ ಶಾಸಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.