Dharmasthala Case: ಧರ್ಮಸ್ಥಳಕ್ಕೆ ಕಳಂಕ ಅಂಟಿಸಿದವರನ್ನು ಅಣ್ಣಪ್ಪ ಸರ್ವನಾಶ ಮಾಡುತ್ತಾನೆ: ವಸಂತ್ ಗಿಳಿಯಾರ್
Vasanth Giliyar: ಬೆಂಗಳೂರಿನ ಸಂಜಯ ನಗರದಲ್ಲಿ ಶನಿವಾರ ಆಯೋಜಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್ ಮಾತನಾಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಎಲ್ಲ ಕುತಂತ್ರಗಳನ್ನು ಬಯಲು ಮಾಡುತ್ತಾರೆ ಎಂದು ತಿಳಿಸಿದ್ದಾರೆ.


ಬೆಂಗಳೂರು: ಸೌಜನ್ಯಾ ಎಂಬ ಹೆಣ್ಣು ಮಗುವಿಗೆ ಅನ್ಯಾಯ ಮಾಡಿ, ಆಕೆ ಹೆಸರಲ್ಲಿ ಬದುಕಿನ ಬಟ್ಟಲನ್ನು ತುಂಬಿಸಿಕೊಂಡು, ನಮ್ಮ ಶ್ರದ್ಧಾಕೇಂದ್ರ ಕೇಂದ್ರದ (Dharmasthala Case) ಮೇಲೆ ದೌರ್ಜನ್ಯ ಎಸಗಿದವರು ಜೈಲು ಕಂಬಿ ಎನಿಸುವ ದಿನಗಳು ಹತ್ತಿರದಲ್ಲೇ ಇದೆ. ಸುಳ್ಳು ಪ್ರಚಾರ ಮಾಡುತ್ತಿರುವವರ ನಿಜ ಸ್ವರೂಪ ಬಯಲು ಮಾಡುವ ದಿನ ಬರಲಿದೆ. ಮಂಜುನಾಥ ಸ್ವಾಮಿಯಾದರೂ ಕ್ಷಮಿಸಬಹುದು ಆದರೆ, ಅಣ್ಣಪ್ಪ ಕ್ಷಮಿಸಲ್ಲ. ಅಣ್ಣಪ್ಪ ತನ್ನ ನೆಲಕ್ಕೆ ಅವಮಾನದ ಕಳಂಕ ಅಂಟಿಸಿದ ಎಲ್ಲರನ್ನೂ ಸರ್ವನಾಶ ಮಾಡುತ್ತಾನೆ ಎಂದು ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್ (Vasanth Giliyar) ಹೇಳಿದರು.
ಬೆಂಗಳೂರಿನ ಸಂಜಯ ನಗರದಲ್ಲಿ ಶನಿವಾರ ಆಯೋಜಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಧರ್ಮಸ್ಥಳ ವಿರುದ್ಧದ ಅಜೆಂಡಾದ ಜಯಂತ್ ತಂಗಚ್ಚನ್ ಎಂಬ ವ್ಯಕ್ತಿ, ಚಾಮುಂಡಿ ದೈವಸ್ಥಾನಕ್ಕೆ ಹೋಗಿ ಕಾಯಿ ಒಡೆದು 24 ಗಂಟೆಗೆ ಒಳಗೆ ಸತ್ಯತೋರಿಸಿಕೊಡು ಎಂದು ಮೊರೆ ಇಟ್ಟಿದ್ದ. ಅವನು ದೈವಸ್ಥಾನದಿಂದ ವಾಪಸ್ ಬರುವ ವೇಳೆಗೆ ಮ್ಯಾಜಿಕ್ ಅಜ್ಜಿ (ಸುಜಾತಾ ಭಟ್) ಸಿಕ್ಕಿಹಾಕಿಕೊಂಡರು.
ಮರು ದಿನ ಬುರುಡೆ ಮಾಸ್ಕ್ ಮ್ಯಾನ್ ಸಿಕ್ಕಿಬಿದ್ದ. ಬಳಿಕ ಗಿರೀಶ್ ಮಟ್ಟಣ್ಣನವರ್ ವಿಚಾರಣೆ ನಡೆಯಿತು. ಇನ್ನೊಬ್ಬ ಜೈಲಿಗೆ ಹೋಗಿ ಬಂದಮೇಲೆ ಮೆತ್ತಗೆ ಆಗಿದ್ದಾನೆ. ಮತ್ತೊಬ್ಬನಿಗೆ ಜಾಮೀನು ಸಿಕ್ಕಿದೆ, ಆದರೆ ಅವನಿಗಾಗಿ ಬೆಳ್ತಂಗಡಿ ಪೊಲೀಸರು ಕಾಯುತ್ತಿದ್ದಾರೆ ಎಂದು ಕಿಡಿಕಾರಿದರು.
ಒಬ್ಬಾತ ಶೃಂಗೇರಿ ಬಳಿ ಆದಿವಾಸಿಗಳ ಜಾಗವನ್ನು ಆಕ್ರಮಿಸಿಕೊಂಡು, ರೆಸಾರ್ಟ್ ಮಾಡಿದ್ದಾನೆ. ಸ್ಥಳೀಯರ ಪ್ರಕಾರ ಅಲ್ಲಿ ಆ ಸ್ಥಳ ಷಡ್ಯಂತ್ರಗಳನ್ನು ಮಾಡುವ ತಾಣವಾಗಿದೆ. ಈಗ ಸುಜಾತಾ ಭಟ್ ಅನ್ನು ದಾಳವಾಗಿ ದೆಹಲಿಗೆ ಕರೆದುಕೊಂಡು ಹೋಗಿದ್ದರು. ಮಾಸ್ಕ್ ಮ್ಯಾನ್ನ ಕೂಡ ಕರೆದುಕೊಂಡು ಹೋಗಿದ್ದರು. ಅಲ್ಲಿ ತಮಿಳುನಾಡಿದ ಸಂಸದ ಸಸಿಕಾಂತ್ ಸೆಂಥಿಲ್ ಮತ್ತು ಕೆ.ವಿ. ಧನಂಜಯ ಸೇರಿಕೊಂಡು ಏನೇನು ಮಾಡಬೇಕು ಎಂದು ಇವರಿಗೆ ಟ್ರೈನಿಂಗ್ ನೀಡಿದ್ದಾರೆ ಎಂದು ಆರೋಪಿಸಿದರು.
ಎಸ್ಐಟಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಎಲ್ಲ ಕುತಂತ್ರಗಳನ್ನು ಬಯಲು ಮಾಡುತ್ತಾರೆ. ಧರ್ಮಸ್ಥಳ ಪ್ರಕರಣದ ಬಗ್ಗೆ ವಿದೇಶಿ ಮಾಧ್ಯಮಗಳೂ ವರದಿ ಮಾಡಿವೆ. ಆದರೆ, ಈಗ ಸತ್ಯ ಬಯಲಾಗಿರುವ ಬಗ್ಗೆ ವಿದೇಶಿ ಮಾಧ್ಯಮಗಳು ವರದಿ ಮಾಡಿವೆಯಾ? ಇವೆಲ್ಲವೂ ನಮ್ಮ ಧಾರ್ಮಿಕ ಕ್ಷೇತ್ರಗಳ ಟಾರ್ಗೆಟ್ ಮಾಡಲು ಮಾಡಿರುವ ಸಂಚಾಗಿದೆ ಎಂದು ಹೇಳಿದರು.