ದಾವಣಗೆರೆಯಲ್ಲಿ ಉದ್ಯಮಿ ದಂಪತಿ, ಇಬ್ಬರು ಯುವತಿಯರಿಂದ ಜೈನ ಸನ್ಯಾಸ ದೀಕ್ಷೆ ಸ್ವೀಕಾರ
ದಾವಣಗೆರೆಯಲ್ಲಿ ಕೋಟ್ಯಂತರ ರೂಪಾಯಿಯ ಹಣ-ಆಸ್ತಿ ದಾನ ಮಾಡಿ ದಂಪತಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ದಂಪತಿಯ ಇಬ್ಬರು ಪುತ್ರರು ಕೂಡ ಮೂರು ವರ್ಷಗಳ ಹಿಂದೆಯೇ ಸನ್ಯಾಸತ್ವ ಸ್ವೀಕರಿಸಿದ್ದರು. ಇನ್ನು ಇದೇ ವೇಳೆ ಇಬ್ಬರು ಯುವತಿಯರು ಕೂಡ ಲೌಕಿಕ ಜೀವನ ತೊರೆದು ಸನ್ಯಾಸ ಜೀವನ ಆಯ್ಕೆ ಮಾಡಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ಜೈನ ಸನ್ಯಾಸ ದೀಕ್ಷೆ ಪಡೆದವರು. -
ದಾವಣಗೆರೆ: ನಗರದಲ್ಲಿ ಉದ್ಯಮಿ ದಂಪತಿ ಹಾಗೂ ಇಬ್ಬರು ಯುವತಿಯರು ಲೌಕಿಕ ಸುಖ-ಸಂತೋಷಗಳನ್ನು ತ್ಯಜಿಸಿ, ಕಠಿಣ ಜೈನ ಸನ್ಯಾಸ ದೀಕ್ಷೆ (Jain Diksha) ಸ್ವೀಕರಿಸಿದ್ದಾರೆ. ಆಚಾರ್ಯ ಶ್ರೀ ಅಭಯ್ ಶೇಖರ್ ಸುರೀಶ್ವರ ಜೀ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ ಪುಣೆಯ ಸಿಂಬಯೋಸಿಸ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದುಕೊಂಡಿರುವ ಕ್ರುನಾಲ್ ಬೇನ್ (30), ದಾವಣಗೆರೆಯ ಬಿ.ಕಾಂ ಪದವೀಧರೆ ದೀಕ್ಷಿತಾ ಬೇನ್ (28) ಸನ್ಯಾಸತ್ವದ ದೀಕ್ಷೆ ಪಡೆದುಕೊಂಡಿದ್ದಾರೆ. ಅಲ್ಲದೇ ದಾವಣಗೆರೆಯ ಲಲಿತ್ ಗಾರ್ಮೆಂಟ್ಸ್ನ ಮಾಲೀಕರಾದ ಭರತ್ ಜೈನ್ (52), ಪತ್ನಿ ಆರತಿ ಬೇನ್ (50) ಕೂಡ ಸನ್ಯಾಸತ್ವದ ದೀಕ್ಷೆ ಸ್ವೀಕರಿಸಿದ್ದಾರೆ.
ಕ್ರುನಾಲಿ ಜೈನ್ ಅವರು ಕಮಲೇಶ್ ಜೈನ್ ಮತ್ತು ಬಬಿತಾ ಜೈನ್ ಅವರ ಪುತ್ರಿಯಾಗಿದ್ದು, ದೀಕ್ಷಿತಾ ಜೈನ್ ಅವರು ಮೂಲತಃ ದಾವಣಗೆರೆಯವರಾಗಿದ್ದು, ಅರುಣ್ ಕುಮಾರ್ ಜೈನ್ ಹಾಗೂ ಅನ್ನಪೂರ್ಣ ಬಾಯಿ ಅವರ ಪುತ್ರಿಯಾಗಿದ್ದಾರೆ.
ಇನ್ನು ಭರತ್ ಜೈನ್, ಆರತಿ ಬೇನ್ ದಂಪತಿಯ ಇಬ್ಬರು ಪುತ್ರರು ಮೂರು ವರ್ಷಗಳ ಹಿಂದೆಯೇ ಸನ್ಯಾಸತ್ವ ಸ್ವೀಕರಿಸಿದ್ದರು. ಮುನಿ ಶ್ರೀ ಮಗ್ನಶೇಖರ್ ವಿಜಯ್ ಜಿ ಮತ್ತು ಮುನಿ ಶ್ರೀ ಪೂರ್ಣ ಶೇಖರ್ ವಿಜಯ್ ಜಿ ಸನ್ಯಾಸತ್ವ ಸ್ವೀಕರಿಸಿದ್ದರು. ಈಗ ದಂಪತಿ ಕೋಟ್ಯಂತರ ರೂಪಾಯಿಯ ಹಣ-ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.
Astro Tips: ದೇವರ ಪೂಜೆಯಲ್ಲಿ ಹೂವಿನ ಮಹತ್ವ: ಯಾವ ದೇವರಿಗೆ ಯಾವ ಹೂವು ಪ್ರಿಯ?; ಇಲ್ಲಿದೆ ಉತ್ತರ
ಜೈನ ಧರ್ಮದಲ್ಲಿ ಸನ್ಯಾಸತ್ವ ಸ್ವೀಕರಿಸುವುದು ಎಂದರೆ ಸುಲಭದ ಮಾತಲ್ಲ. ಅದು ಕೆಂಡದ ಮೇಲೆ ನಡೆದಂತೆ. ಜೀವನ ಪೂರ್ತಿ ಬರಿಗಾಲಿನ ನಡಿಗೆ, ಅತಿಸೂಕ್ಷ್ಮ ಜೀವಿಗಳಿಗೂ ನೋವಾಗದಂತೆ ಬದುಕುವುದು, ಕೈಯಿಂದಲೇ ಕೂದಲನ್ನು ಕಿತ್ತುಕೊಳ್ಳುವ ಕಠಿಣ ವಿಧಿ ವಿಧಾನ, ಮೊಬೈಲ್, ವಿದ್ಯುತ್, ವಾಹನ ಸೇರಿದಂತೆ ಯಾವುದೇ ಭೌತಿಕ ವಸ್ತುಗಳನ್ನು ಬಳಸುವಂತಿಲ್ಲ. ಇಂತಹ ಕಠಿಣ ದೀಕ್ಷೆ ಪಡೆಯುವ ಮೂಲಕ ದಾವಣಗೆರೆಯ ಈ ನಾಲ್ವರು ಮುಮುಕ್ಷುಗಳು ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ.