ನನಗೆ ಹುಡುಗಿ ಹುಡುಕಿಕೊಡಿ ಎಂದು ಯುವಕ ಮನವಿ; ಲವ್ ಮಾಡಿ ಮದುವೆಯಾಗು ಎಂದು ಸಲಹೆ ಕೊಟ್ಟ ಅರಕಲಗೂಡು ಶಾಸಕ!
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ನಡೆದ ಪ್ರಜಾ ಸೇವೆ ಅಭಿಯಾನ ಸಭೆಯಲ್ಲಿ ಶಾಸಕ ಎ.ಮಂಜು ಅವರ ಮುಂದೆ ಬೇಡಿಕೆ ಇಟ್ಟಿದ್ದಾನೆ. ಪದವೀಧರನಾದರೂ ಹುಡುಗಿ ಸಿಗುತ್ತಿಲ್ಲ. ರೈತನ ಮಗ ಎನ್ನುವ ಕಾರಣಕ್ಕೆ ಯಾರೂ ಮದುವೆಯಾಗಲು ಒಪ್ಪುತ್ತಿಲ್ಲ. ಅಪ್ಪ ಅಮ್ಮ ಇಲ್ಲದ ನನಗೆ ಹುಡುಗಿ ಹುಡುಕಿಕೊಡಿ ಎಂದು ಮೊರೆಯಿಟ್ಟಿದ್ದಾನೆ.
-
ಹಾಸನ: ಪ್ರಜಾ ಸೇವೆ ಅಭಿಯಾನದಲ್ಲಿ ಯುವಕನೊಬ್ಬ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ಶಾಸಕರ ಎದುರು ಅಳಲು ತೋಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು (Arkalgud) ತಾಲೂಕಿನ ಮಲ್ಲಿಪಟ್ಟಣದಲ್ಲಿ ನಡೆದಿದೆ. ಯುವಕನ ಬೇಡಿಕೆಗೆ ಶಾಸಕರು ತಬ್ಬಿಬ್ಬಾಗಿದ್ದಾರೆ.
ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು ಅಧ್ಯಕ್ಷತೆಯಲ್ಲಿ ಸೆ.12 ರ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಲದಹಳ್ಳಿ ಗ್ರಾಮದ ಸಂತೋಷ್ ಎಂಬ ಯುವಕ ಮದುವೆಯಾಗಲು ಹುಡುಗಿ ಕೊಡಿಸಿ ಎಂದು ʻಪ್ರಜಾ ಸೇವೆ ಅಭಿಯಾನದ ಸಭೆಯಲ್ಲಿ ಶಾಸಕರಿಗೆ ಅರ್ಜಿ ಸಲ್ಲಿಸಿದ್ದಾರೆ.
ಎಂಬಿಎ ಪದವೀಧರನಾದರೂ ಹುಡುಗಿ ಸಿಗುತ್ತಿಲ್ಲ. ರೈತನ ಮಗ ಎನ್ನುವ ಕಾರಣಕ್ಕೆ ಯಾರೂ ಮದುವೆಯಾಗಲು ಒಪ್ಪುತ್ತಿಲ್ಲ. ಮನೆ ಇದೆ, ಆಸ್ತಿ ಇದೆ, ದಿನದ ದುಡಿಮೆಗೆ ಅಂಗಡಿ ಇದೆ. ಆದರೂ ಹುಡುಗಿ ಸಿಗುತ್ತಿಲ್ಲ. ಈಗಾಗಲೇ 30ಕ್ಕೂ ಹೆಚ್ಚು ಯುವತಿಯರನ್ನು ನೋಡಿದರೂ ಯಾರೊಬ್ಬರೂ ಓಕೆ ಮಾಡ್ತಿಲ್ಲ. ಅಪ್ಪ ಅಮ್ಮ ಇಲ್ಲದ ನನಗೆ ಹುಡುಗಿ ಹುಡುಕಿಕೊಡಿ ಎಂದು ಮೊರೆಯಿಟ್ಟರು.
ಈ ವೇಳೆ ಮಾತನಾಡಿದ ಶಾಸಕರು, ಹಿಂದೆ ರೈತರ ಮಕ್ಕಳನ್ನು ಹುಡುಕಿ ಮದುವೆ ಮಾಡೋರು. ಈಗ ರೈತರ ಮಕ್ಕಳು ಎಂದರೆ ಯಾರೂ ಹುಡುಗಿ ಕೊಡ್ತಿಲ್ಲ. ಮದುವೆ ಆಗದೆ ಇರುವವರು ಬದುಕ್ತಾ ಇದ್ದಾರೆ ತಲೆ ಕೆಡಿಸಿಕೊಳ್ಳಬೇಡ. ನೀನೇ ಯಾರನ್ನಾದರೂ ಲವ್ ಮಾಡಿ ಮದುವೆಯಾಗು ಎಂದು ಸಲಹೆ ನೀಡಿ ಕಳುಹಿಸಿದ್ದಾರೆ.