Hassan blast: ಹಾಸನದಲ್ಲಿ ನಿಗೂಢ ಸ್ಫೋಟ, ದಂಪತಿ ತೀವ್ರ ಗಾಯ, ಮಕ್ಕಳು ಪಾರು
Blast: ಸ್ಫೋಟದ ತೀವ್ರತೆಗೆ ಇಡೀ ಮನೆಯೇ ಧ್ವಂಸವಾಗಿದೆ. ಮನೆಯ ಹೊರಗಡೆ ಈ ಸ್ಫೋಟ ಆಗಿದ್ದು, ಮನೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕಾಂಪೌಂಡ್ ಕುಸಿದುಬಿದ್ದಿದೆ. ಸ್ಫೋಟದ ತೀವ್ರತೆ ನೋಡಿದರೆ ಇದು ಜಿಲೆಟಿನ್ ಅಥವಾ ಡಿಟೋನೇಟರ್ ಇರಬಹುದೇ ಎಂಬ ಅನುಮಾನ ಮೂಡಿದೆ. ಇಬ್ಬರು ಗಾಯಗೊಂಡಿದ್ದಾರೆ.

-

ಹಾಸನ: ಹಾಸನ (Hassan) ಜಿಲ್ಲೆ ಆಲೂರು ಪಟ್ಟಣದ ಆಲೂರು ಪ್ರದೇಶದಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಊರಿಗೆ ಊರೇ ಬೆಚ್ಚಿಬೀಳುವಂತಹ ಸ್ಫೋಟ (Hassan blast) ಸಂಭವಿಸಿದೆ. ಖಾಸಗಿ ಕಂಪನಿ ಉದ್ಯೋಗಿಯಾದ ಸುದರ್ಶನ್ ಆಚಾರ್ (32)ಮತ್ತು ಪತ್ನಿ ಕಾವ್ಯಾ (27) ತಮ್ಮ ಇಬ್ಬರು ಮಕ್ಕಳ ಜೊತೆ ಮನೆಯಲ್ಲಿದ್ದ ವೇಳೆ ಈ ಘೋರ ದುರಂತ ಸಂಭವಿಸಿದೆ. ಮೇಲ್ನೋಟಕ್ಕೆ ಇದೊಂದು ಸಿಲಿಂಡರ್ ಬ್ಲಾಸ್ಟ್ ಎಂಬ ರೀತಿ ಕಾಣಿಸಿದೆ. ಸ್ಥಳೀಯರು ಆಂಬ್ಯುಲೆನ್ಸ್ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಇಡೀ ಮನೆಯೇ ಧ್ವಂಸವಾಗಿದೆ. ಮನೆಯ ಹೊರಗಡೆ ಈ ಸ್ಫೋಟ ಆಗಿದ್ದು, ಮನೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕಾಂಪೌಂಡ್ ಕುಸಿದುಬಿದ್ದಿದೆ. ಸ್ಫೋಟದ ತೀವ್ರತೆ ನೋಡಿದರೆ ಇದು ಜಿಲೆಟಿನ್ ಅಥವಾ ಡಿಟೋನೇಟರ್ ಇರಬಹುದೇ ಎಂಬ ಅನುಮಾನ ಮೂಡಿದೆ. ಅದೃಷ್ಟವಶಾತ್, ಮನೆ ಒಳಗಿದ್ದ ಮಕ್ಕಳಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಹಾಸನದ ಹಿಮ್ಸ್ನಲ್ಲಿ ಗಾಯಾಳು ದಂಪತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ದೀಪಾವಳಿಗೆ ಪಟಾಕಿ ಏನಾದರೂ ಸಂಗ್ರಹಿಸಿದ್ದರೇ? ಅದರಿಂದ ದುರಂತ ಸಂಭವಿಸಿತಾ ಎಂಬ ಬಗ್ಗೆಯೂ ಆಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮನೆ ಒಂಟಿ ಮನೆಯಾಗಿದ್ದು, ಅಕ್ಕಪಕ್ಕ 50 ಮೀಟರ್ ದೂರದಲ್ಲಿ ಯಾವುದೇ ಮನೆಗಳಿಲ್ಲ. ಹೀಗಾಗಿ ಮತ್ತಷ್ಟು ಅನಾಹುತದ ಸಾಧ್ಯತೆ ತಪ್ಪಿದೆ.
ಗಾಯಾಳುಗಳು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರ
ಗಾಯಾಳುಗಳಾದ ಸುದರ್ಶನ್ ಆಚಾರ್, ಕಾವ್ಯಾ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಂಪತಿಯನ್ನು ಕರೆದೊಯ್ಯಲಾಗಿದೆ. ವಿವಿಧ ಆಯಾಮಗಳಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ. ಸಿಲಿಂಡರ್ ಸ್ಫೋಟವೇ ಸಂಭವಿಸಿದೆಯಾ ಅಥವಾ ಸ್ಫೋಟಕ್ಕೆ ಬೇರೆ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: Vijay's Rally Stampede: ತಮಿಳುನಾಡು ಕಾಲ್ತುಳಿತ: ಕಂಬನಿ ಮಿಡಿದ ಕಮಲ್ ಹಾಸನ್, ರಜನಿಕಾಂತ್