ಕಾಶ್ಮೀರ ಪ್ರವಾಸಕ್ಕೆ ತೆರಳಿದವರ ನೆರವಿಗಾಗಿ ಕಲಬುರಗಿ, ಯಾದಗಿರಿ ಜಿಲ್ಲಾಡಳಿತದಿಂದ ಸಹಾಯವಾಣಿ
Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ದಾಳಿಯಲ್ಲಿ ಕೆಲವು ಪ್ರವಾಸಿಗರು ಮೃತರಾಗಿ ಹಾಗೂ ಹಲವರು ಗಾಯಗೊಂಡಿದ್ದಾರೆ. ಹೀಗಾಗಿ ಜಿಲ್ಲೆಯಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿ ಸಂಕಷ್ಟದಲ್ಲಿರುವವರ ಮಾಹಿತಿ ತಿಳಿಸುವಂತೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾಡಳಿತ ಮನವಿ ಮಾಡಿದೆ.

ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಯಾದಗಿರಿ ಡಿಸಿ ಡಾ. ಸುಶೀಲ ಬಿ.

ಕಲಬುರಗಿ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ (Pahalgam Terror Attack) ನಡೆಸಿದ್ದು, ದಾಳಿಯಲ್ಲಿ 26ಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಇನ್ನು ಕಲಬುರಗಿ ಜಿಲ್ಲೆಯಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿ ಭಯೋತ್ಪಾದಕರ ದಾಳಿಯಲ್ಲಿ ಸಿಲುಕಿಕೊಂಡಿದಲ್ಲಿ ಅಂತಹವರ ಮಾಹಿತಿಯನ್ನು ಸಂಬಂಧಿಸಿದವರು ಕೂಡಲೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08472-278677 ಹಾಗೂ ಪೊಲೀಸ್ ಕಂಟ್ರೋಲ್ ಸಂಖ್ಯೆ 9480805500, 9480803500, 08472-263604ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.
ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದವರ ಮಾಹಿತಿ ನೀಡಲು ಯಾದಗಿರಿ ಜಿಲ್ಲಾಡಳಿತ ಮನವಿ
ಯಾದಗಿರಿ: ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದವರ ಮಾಹಿತಿ ಕಲೆಹಾಕಲು ಯಾದಗಿರಿ ಜಿಲ್ಲಾಡಳಿತ ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ದಾಳಿಯಲ್ಲಿ ಕೆಲವು ಪ್ರವಾಸಿಗರು ಮೃತರಾಗಿ ಹಾಗೂ ಹಲವರು ಗಾಯಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿ ಭಯೋತ್ಪಾದಕರ ದಾಳಿಯಲ್ಲಿ ಸಿಲುಕಿಕೊಂಡಿದಲ್ಲಿ ಅವರ ಮಾಹಿತಿಯನ್ನು ಸಂಬಂಧಿಸಿದವರು ಕೂಡಲೇ ಜಿಲ್ಲಾ ವಿವತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08473-253700 ಹಾಗೂ ಪೊಲೀಸ್ ಕಂಟ್ರೋಲ್ ಸಂಖ್ಯೆ 9480803600, 08473-253736 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ಕಾಶ್ಮೀರದಿಂದ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ
ಕೊಪ್ಪಳದ 19 ಮಂದಿ ಶ್ರೀನಗರದಲ್ಲಿ ಸೇಫ್; ಕೂದಲೆಳೆ ಅಂತರದಲ್ಲಿ ಪಾರಾದ ಯಾದಗಿರಿ ಕುಟುಂಬ!

ಕೊಪ್ಪಳ/ಯಾದಗಿರಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿ 26 ಜನರು ಮೃತಪಟ್ಟಿದ್ದಾರೆ. ಇನ್ನು ರಾಜ್ಯದಿಂದ ಕೂಡ ಹಲವು ಪ್ರವಾಸಿಗರು ಕಾಶ್ಮೀರಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಇದೀಗ ಕೊಪ್ಪಳದ 4 ಕುಟುಂಬಗಳ 19 ಸದಸ್ಯರು ಹಾಗೂ ಯಾದಗಿರಿಯ ಕುಟುಂಬ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. ಸಚಿವ ಸಂತೋಷ್ ಲಾಡ್ ಅವರು ಬುಧವಾರ ಕೊಪ್ಪಳದ ಪ್ರವಾಸಿಗರನ್ನು ಕಾಶ್ಮೀರದಲ್ಲಿ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.
ಕೊಪ್ಪಳದ ಸಿದ್ದು ಗಣವಾರಿ, ಉದ್ಯಮಿ ಶರಣಪ್ಪ ಸಜ್ಜನ, ಕಾಂಗ್ರೆಸ್ ಮುಖಂಡ ಕಾಟನ್ ಪಾಷಾ ಮತ್ತು ಶಿವಕುಮಾರ ಪಾವಲಿ ಶೆಟ್ಟರ್ ಕುಟುಂಬದ 19 ಸದಸ್ಯರು ಮಂಗಳವಾರ ಶ್ರೀನಗರ ಪ್ರವಾಸಕ್ಕೆ ತೆರಳಿದ್ದರು. ಮುಂಬೈನಿಂದ ಮಂಗಳವಾರ ಸಂಜೆ ವಿಮಾನದ ಮೂಲಕ ಶ್ರೀನಗರಕ್ಕೆ ಹೋಗಿದ್ದರು. ವಿಮಾನ ಶ್ರೀನಗರದಲ್ಲಿ ಭೂ ಸ್ಪರ್ಶ ಮಾಡುವಷ್ಟರಲ್ಲಿ ಭಯೋತ್ಪಾದಕರ ದಾಳಿ ಬಗ್ಗೆ ಮಾಹಿತಿ ತಿಳಿದಿದೆ. ಘಟನೆಯಿಂದ ಆತಂಕಗೊಂಡಿದ್ದ ಇವರು ಪ್ರವಾಸ ಮುಂದುವರಿಸಬೇಕೇ, ವಾಪಸ್ ಬರಬೇಕೇ? ಎನ್ನುವ ಗೊಂದಲದಲ್ಲಿದ್ದಾರೆ. ಭಯೋತ್ಪಾದಕರ ದಾಳಿ ನಡೆದ ಸ್ಥಳದಿಂದ ಶ್ರೀನಗರ 100 ಕಿ.ಮೀ. ದೂರದಲ್ಲಿದೆ.

ಇನ್ನು ಮಂಗಳವಾರ ರಾತ್ರಿಯೇ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಚಿವ ಸಂತೋಷ ಲಾಡ್ಗೆ ಕರೆ ಮಾಡಿ, ಕೊಪ್ಪಳದ ಪ್ರವಾಸಿಗರ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಶ್ರೀನಗರಕ್ಕೆ ಹೋಗಿರುವ ಸಚಿವ ಸಂತೋಷ್ ಲಾಡ್ ಅವರು ಕೊಪ್ಪಳದ ಪ್ರವಾಸಿಗರನ್ನು ಭೇಟಿ ಮಾಡಿ, ಧೈರ್ಯ ಹೇಳಿದ್ದಾರೆ.
ಕೂದಲೆಳೆ ಅಂತರದಲ್ಲಿ ಪಾರಾದ ಯಾದಗಿರಿ ಪ್ರವಾಸಿಗರು

ಯಾದಗಿರಿ: ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ವೇಳೆ ಯಾದಗಿರಿ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆ ನಿವಾಸಿಗಳಾದ ಪ್ರಭಾಕರ್ ಹಾಗೂ ಮಹೇಶ್ವರಿ ದಂಪತಿ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಗುಂಡಿನ ಸದ್ದಿಗೆ ಭಯಭೀತಗೊಂಡು ಇವರ ಸ್ಥಳದಿಂದ ಓಡಿ ಹೋಗಿ ಬಚಾವ್ ಆಗಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯಮಿ ಆಗಿರುವ ಪ್ರಭಾಕರ್ ಜುಜಾರೆ ಅವರು ಬೇಸಿಗೆ ರಜೆ ಹಿನ್ನೆಲೆ ಕುಟುಂಬ ಸಮೇತ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿ ಇದ್ದೆವು. ಕಾರು ಚಾಲಕನ ಸಮಯ ಪ್ರಜ್ಞೆಯಿಂದ ನಾವು ಏಳು ಕಿಲೋಮೀಟರ್ ದೂರ ಬಂದೆವು. ಲಾಡ್ಜ್ನಲ್ಲಿ ಸೇಪ್ ಆಗಿ ಉಳಿದಿದ್ದೆವು. ಸದ್ಯ ಸೇಫ್ ಆಗಿ ಶ್ರೀನಗರ ಕಡೆಗೆ ಹೊರಟ್ಟಿದ್ದೇವೆ. ರಿಟರ್ನ್ ಫ್ಲೈಟ್ ಶುಕ್ರವಾರ ಇದೆ. ಸರ್ಕಾರ ಏರ್ ಲಿಫ್ಟ್ ಮಾಡಿದರೇ ಬೆಂಗಳೂರಿಗೆ ಬರಲು ಅನುಕೂಲ ಆಗುತ್ತೆ ಎಂದು ಜಮ್ಮು ಮತ್ತು ಕಾಶ್ಮೀರದಿಂದ ವಿಡಿಯೋ ಮೂಲಕ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Pahalgam terror attack: ಉಗ್ರರ ಪೈಶಾಚಿಕ ಕೃತ್ಯಕ್ಕೆ ಟೀಮ್ ಇಂಡಿಯಾ ಕ್ರಿಕೆಟಿಗರ ಖಂಡನೆ