HS Venkateshmurthy Passed Away: ತೂಗುಮಂಚದ ಕವಿ ಎಚ್ಎಸ್ ವೆಂಕಟೇಶಮೂರ್ತಿ ಇನ್ನಿಲ್ಲ
HS Venkateshmurthy Passed Away: ಕವಿ, ನಾಟಕಕಾರ, ವಿಮರ್ಶಕ, ಪ್ರಾಧ್ಯಾಪಕ, ಭಾವಗೀತ ರಚನಕಾರ, ಚಲನಚಿತ್ರ ನಿರ್ದೇಶಕ, ಕತೆಗಾರ, ಚಿತ್ರಗೀತ ರಚನೆಕಾರ ಆಗಿದ್ದ ಎಚ್ ಎಸ್ ವೆಂಕಟೇಶಮೂರ್ತಿ ಅವರನ್ನು ಕಲಬುರಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಅರಸಿ ಬಂದಿತ್ತು.

ಕವಿ ಎಚ್ ಎಸ್ ವೆಂಕಟೇಶಮೂರ್ತಿ

ಬೆಂಗಳೂರು: ಕನ್ನಡ ಜನಮಾನಸದ ಪ್ರಿಯ ಕವಿ (poet) ಎಚ್ ಎಸ್ ವೆಂಕಟೇಶಮೂರ್ತಿ (HS Venkateshmurthy Passed Away) ಇನ್ನಿಲ್ಲ. ಕವಿ, ನಾಟಕಕಾರ, ವಿಮರ್ಶಕ, ಪ್ರಾಧ್ಯಾಪಕ, ಭಾವಗೀತ ರಚನಕಾರ, ಚಲನಚಿತ್ರ ನಿರ್ದೇಶಕ, ಕತೆಗಾರ, ಚಿತ್ರಗೀತ ರಚನೆಕಾರ ಆಗಿದ್ದುದರ ಜೊತೆಗೆ ಕಲಬುರಗಿಯಲ್ಲಿ ನಡೆದ 85ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರೂ ಆಗಿದ್ದರು. ಕನ್ನಡದ ಜನಪ್ರಿಯ ಕವಿಯಾಗಿದ್ದ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಇಂದು (ಮೇ 30) ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಅವರು ಇಬ್ಬರು ಮಕ್ಕಳು, ಬಂಧುಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ʼತೂಗುಮಂಚದಲ್ಲಿ ಕೂತುʼ ಇವರ ಇತ್ತೀಚಿನ ಜನಪ್ರಿಯ ಗೀತೆಯಾಗಿದೆ.
ಎಚ್ಎಸ್ವಿ ಅವರು ಪರಂಪರೆ ಹಾಗೂ ಆಧುನಿಕತೆಯೊಂದಿಗೆ ನಡೆಸಿದ ನಿರಂತರವಾದ ಅನುಸಂಧಾನದೊಂದಿಗೆ ಕನ್ನಡ ಕಾವ್ಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಮೊದಲಿಗೆ ನವೋದಯ ಕಾವ್ಯ ಪರಂಪರೆಯಲ್ಲಿ ತಮ್ಮ ಕೃಷಿ ಆರಂಭಿಸಿದ ಅವರು ನಂತರ ಗೋಪಾಲಕೃಷ್ಣ ಅಡಿಗರ ಪ್ರಭಾವದಿಂದ ನವ್ಯ ಕಾವ್ಯದ ಹುದ್ದರಿಯಾದರು. ನವ್ಯದ ಕಾಲದ ಕಳೆದ ನಂತರ ಭಾವಗೀತೆಗಳ ಕೃಷಿ ಆರಂಭಿಸಿದರು. ಚಲನಚಿತ್ರಗಳು, ಟೆಲಿ ಸೀರಿಯಲ್ಗಳಿಗೆ ಗೀತೆಗಳನ್ನು ಬರೆದರು. ನಂತರ ಕುಮಾರವ್ಯಾಸ, ಪಂಪ, ಲಕ್ಷ್ಮೀಶ, ವಾಲ್ಮೀಕಿ ಮೊದಲಾದವರ ಕೃತಿಗಳನ್ನು ತಿಳಿಗನ್ನಡದಲ್ಲಿ ಕಾವ್ಯದಲ್ಲಿ ಬರೆಯುವ ಕೆಲಸ ಮಾಡಿ ಮೇಲ್ಪಂಕ್ತಿ ಹಾಕಿಕೊಟ್ಟರು.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ನಿರಂತರವಾದ ಅನುಸಂಧಾನ ಇವು ಎಚ್.ಎಸ್.ವಿ. ಅವರ ಭಾವಕೋಶ ಮತ್ತು ಕಾವ್ಯವ್ಯಕ್ತಿತ್ವವನ್ನು ನಿರ್ಮಿಸಲು ಕಾರಣವಾದವು. ಇವರು ಅನುವಾದಿಸಿದ ಕಾಲಿದಾಸನ ಋತುಸಂಹಾರ ಕಾವ್ಯಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರವನ್ನು ಪಡೆದಿದೆ.
ಕ್ರಿಯಾಪರ್ವ, ಒಣಮರದ ಗಿಳಿಗಳು, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲುಹಬ್ಬ, ನದೀತೀರದಲ್ಲಿ, ಉತ್ತರಾಯಣ ಮತ್ತು ಕನ್ನಡಿಯ ಸೂರ್ಯ, ವೈದೇಹಿ ಮತ್ತು ಇತರ ಕವನಗಳು-ಮೊದಲಾದುವು ಇವರ ಮುಖ್ಯ ಕಾವ್ಯಕೃತಿಗಳು. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ ಮೊದಲಾದುವು ಮುಖ್ಯ ನಾಟಕಗಳು, ಅಳಿಲು ರಾಮಾಯಣ, ಹಕ್ಕಿಸಾಲು, ಚಿನ್ನಾರಿಮುತ್ತ, ಅಜ್ಜಿ ಕತೆ ಹೇಳು-ಮುಖ್ಯ ಮಕ್ಕಳ ಕೃತಿಗಳು. ಈ ಮುಖೇನ ಇವರ ವೈಚಾರಿಕ ಪ್ರಬಂಧಗಳ ಸಂಪುಟ, ಅನಾತ್ಮಕಥನ, ಅಕ್ಕಚ್ಚುವಿನ ಅರಣ್ಯಪರ್ವ, ಆತ್ಮಕಥನಾತ್ಮಕ ಪ್ರಬಂಧಗಳು, ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ- ಇವರು ಪಡೆದ ಕೆಲವು ಮುಖ್ಯ ಗೌರವ ಪುರಸ್ಕಾರಗಳು.