Lokayukta Raid: ರಾಜ್ಯಾದ್ಯಂತ ಲೋಕಾಯುಕ್ತ ದಾಳಿ, ಭ್ರಷ್ಟ ಅಧಿಕಾರಿಗಳಿಗೆ ಶಾಕ್
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಅರೋಪ ಹಿನ್ನೆಲೆಯಲ್ಲಿ ಗದಗ, ಬಳ್ಳಾರಿ, ಬಾಗಲಕೋಟೆ, ಕಾರ್ಕಳ, ಹಾವೇರಿ ಮೊದಲಾದ ಕಡೆ ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮುಂಜಾನೆಯೇ ದಾಳಿ ನಡೆಸಿ (Lokayukta Raid) ಕಡತಗಳ ಪರಿಶೀಲನೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಗದಗ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Karnataka lokayukta raid) ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಹಲವು ಅಧಿಕಾರಿಗಳ (corrupt officers) ಮನೆ, ಕಚೇರಿಗಳಿಗೆ ದಾಳಿ ನಡೆಸಲಾಗಿದೆ.
ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗಂಗಾಧರ್ ಶಿರೋಳ ಮನೆ, ಕಚೇರಿ ಸೇರಿ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗದಗದ ಹುಡ್ಕೋ ಕಾಲೋನಿಯಲ್ಲಿರುವ ಗಂಗಾಧರ ಶಿರೋಳ ಮನೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಾವೇರಿ ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಹಣಮಂತರಾಯ ನೇತೃತ್ವದಲ್ಲಿ ಗಂಗಾಧರ್ ಮನೆ, ಕಚೇರಿ, ಅಳಿಯ, ಭಾವನ ಮನೆ ಸೇರಿ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳ್ಳಾರಿ PWD ಸುಪರಿಡೆಂಟ್ ಇಂಜಿನಿಯರ್ ಅಮೀನ್ ಮುಕ್ತಾರ್ ಮನೆ ಲೋಕಾಯುಕ್ತ ದಾಳಿ ಮಾಡಿದ್ದು, ಈ ವೇಳೆ ಕೋಟಿ ಕೋಟಿ ರೂ.ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿದೆ. ಕಲಬುರಗಿ ನಗರದ ಹೊರವಲಯದಲ್ಲಿ 25 ಏಕರೆ ಜಮೀನಿನ ಆಸ್ತಿ ಪತ್ರ, ಕಲಬುರಗಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಪೆಟ್ರೋಲ್ ಬಂಕ್, ಒಂದು ಕ್ರಶರ್ ಮಷೀನ್ ಲೈಸನ್ಸ್ ಸೇರಿದಂತೆ ಇತರೆ ಆಸ್ತಿ ಪತ್ರಗಳು ಪತ್ತೆಯಾಗಿವೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಅರೋಪ ಹಿನ್ನೆಲೆಯಲ್ಲಿ ಕಾರ್ಕಳ ಮೆಸ್ಕಾಂ ವಿಭಾಗದ ಅಕೌಂಟ್ ಆಫಿಸರ್ ಗಿರೀಶ್ ರಾವ್ ಮೆನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಲೋಕಾಯುಕ್ತ ಡಿವೈಎಸ್ ಪಿ ಮಂಜಿನಾಥ ನೇತೃತ್ವದಲ್ಲಿ ದಾಳಿ, ಕಾರ್ಕಳದ ಮನೆ, ಕಚೇರಿ, ಸಂಬಂಧಿಕರ ಮನೆ ಸೇರಿದಂತೆ ಐದು ಕಡೆ ದಾಳಿ ಮಾಡಿದ್ದು, ತಲಾಶ್ ನಡೆಸಿದ್ದಾರೆ.
ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನೀಯರ್ ಎಚ್. ಸುರೇಶ ಮನೆ ಹಾಗೂ ಸರಕಾರಿ ಕ್ವಾರ್ಟರ್ಸ್ ಮೇಲೆ ದಾಳಿಯಾಗಿದೆ. ಧಾರವಾಡದ ಡಿಸಿ ಕಾಂಪೌಂಡ್ನಲ್ಲಿರೋ ಕಚೇರಿ, ಕೆಸಿಡಿ ವೃತ್ತದ ಬಳಿಯ ಮನೆ ಮೇಲೆ ದಾಳಿ ಮಾಡಲಾಗಿದ್ದು,ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದ ಗ್ರಾಮ ಪಂಚಾಯತಿ ಪಿಡಿಓ ಕಚೇರಿ ಮತ್ತು ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ. ದಾವಣಗೆರೆ ಮತ್ತು ಹಾವೇರಿ ಲೋಕಾಯುಕ್ತರ ಸಿಬ್ಬಂದಿಗಳಿಂದ ಜಂಟಿ ಕಾರ್ಯಚರಣೆ ನಡೆಸಿದ್ದು, ರಾಮಕೃಷ್ಣಪ್ಪ ಗುಡಗೇರಿ ಗ್ರಾಮ ಪಂಚಾಯತಿ ಅಧಿಕಾರಿ ಕಚೇರಿ ಮತ್ತು ಧಾರವಾಡದ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ ಡಿಸಿ ಕಚೇರಿ ಲೆಕ್ಕಪತ್ರ ವಿಭಾಗದ ಪ್ರಥಮ ದರ್ಜೆ ಸಹಾಯಕ ಶ್ರೀಶೈಲ್ ತತ್ರಾಣಿಗೂ ಲೋಕಾಯುಕ್ತ ಶಾಕ್ ಕೊಟ್ಟಿದೆ. ಅಮೀನಗಢ ಪಟ್ಟಣದಲ್ಲಿರುವ ಶ್ರೀಶೈಲ್ ತತ್ರಾಣಿ ಅವರ ಮನೆ ಹಾಗೂ ಜ್ಯುವೆಲ್ಲರಿ ಶಾಪ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಾಗಲಕೋಟೆ ಲೋಕಾಯುಕ್ತ DySP ನೇತೃತ್ವದಲ್ಲಿ ಸಿದ್ದೇಶ್ವರ ನೇತೃತ್ವದಲ್ಲಿ ದಾಳಿಯಾಗಿದೆ.
ಇದನ್ನೂ ಓದಿ: Sirsi News: ಬೆಳ್ಳಂಬೆಳಿಗ್ಗೆ ಶಿರಸಿಯಲ್ಲಿ ಲೋಕಾಯುಕ್ತರ ಕಾರ್ಯಾಚರಣೆ, ಪ್ರಥಮ ದರ್ಜೆ ಲೆಕ್ಕಾಧಿಕಾರಿ ಬಂಧನ